Tuesday, April 14, 2009

ಒಂದು ಬಹಿರಂಗ ಪತ್ರ

ಪ್ರಿಯ...

'ರೇಡಿಯೋ ಸಿಟಿ ೯೧.೧... ಬೆಂಗಳೂರಿನ..' ಅಂತ ಕಿವಿಗಡಚಿಕ್ಕುವ ಸ್ವರ ಹಾಲ್ ನಿಂದ ಬೆಡ್ ರೂಂಗೆ ಬಂದಾಗಲೇ ನಾನು ಹಾಗೆ ಮೆತ್ತಗೆ ಮಗ್ಗುಲು ಬದಲಾಯಿಸುತ್ತಿದ್ದೆ. ಹೋ ಗಂಟೆ ಒಂಬತ್ತಾಯಿತೇ. 10ಕ್ಕೆ ಅಸೈನ್ಮೈಂಟ್ ಇದೆ. ಹೆಚ್ಚೆಂದರೆ ಮನೆಯಿಂದ ಆಫೀಸಿಗೆ ಅರ್ಧ ಗಂಟೆಯಿಲ್ಲದಿದ್ದರೆ ೧೩ ಕಿ.ಮೀ ದೂರಕ್ಕೆ ಜಪ್ಪಯ್ಯ ಅಂದರೂ ಹೋಗಲು ಸಾಧ್ಯವಿಲ್ಲ ಅನ್ನುತ್ತಲೇ, ನಾಳೆಯಿಂದ ಸ್ವಲ್ಪ ಬೇಗ ಏಳಬೇಕು. ಇಲ್ಲವಾದರೆ ಗಡಿಬಿಡಿಯಾಗುತ್ತದೆ. ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ಮುಗೀತು ಅಂತ ನಾನೇ ನನಗೆ ಹೇಳುತ್ತಾ ಹಾಲ್ಗೆ ಬರುತ್ತಿದ್ದೆ. ಆದರೆ, ಪ್ರತಿಸಲವೂ ಬೇಗ ಏಳಬೇಕು ಅನ್ನುತ್ತಲೇ ಇದ್ದರೂ ದಿನಚರಿ ಮಾತ್ರ ಬದಲಾವಣೆ ಕಂಡಿರಲಿಲ್ಲ. ಒಮ್ಮೊಮ್ಮೆ ನೀನು ಫೋನ್ ಮಾಡಿದಾಗ 'ಮಲಗಿದ್ದೀಯಾ' ಅಂತಲೇ ಮಾತು ಆರಂಭಿಸುತ್ತಿದ್ದೆ. ಆದರೇನು ಮಾಡೋಣ, ಮನೆಗೆ ಬರುತ್ತಿದ್ದುದೇ ೧೧, ೧೧.೩೦ ರಾತ್ರಿಗೆ. ಹಾಗಾಗಿ ಇದೆಲ್ಲ ಮಾಮೂಲು ಅಂತ ನಿನಗೂ ಗೊತ್ತು, ನನಗೂ ಗೊತ್ತು.

ಇರಲಿ ಬಿಡು. ಆಗೆಲ್ಲಾ ರಾತ್ರಿ ೧೧ ಗಂಟೆಗೆ ಮನೆಗೆ ಬಂದು ಬಾತ್ರೂಂನಲ್ಲಿ ಬೆಂಗಳೂರಿನ ಚಳಿಗೆ ಬಿಸಿನೀರು ಹೊಯ್ಯುತ್ತಿದ್ದರೆ, ಆಹಾ ಎಂಥಾ ಸುಖ. ಇಡೀ ದಿನದ ಸುಸ್ತೆಲ್ಲ ಬಸಿದುಹೋದ ಅನುಭವ. ಆಮೇಲೆ ಊಟ, ನಂತರ ಯಾವುದೋ ಪುಸ್ತಕವೋ, ಟಿವಿ ನ್ಯೂಸೋ ಆವಾಹನೆಯಾದರೆ ಮುಗೀತು. ರಾತ್ರಿ ಒಂದೋ, ಎರಡೋ ಗಂಟೆ ಗ್ಯಾರೆಂಟಿ. ಹೀಗಾಗಿ ರೇಡಿಯೋಸಿಟಿಗೆ ಬೆಳಗಾದರೂ ನನಗೆ ಬೆಳಗಾಗುತ್ತಿರಲಿಲ್ಲ. ತಮ್ಮ ತಿಂಡಿ ಮುಗಿಸಿ ಆಫೀಸಿಗೆ ಹೊರಡುವ ಸಂದರ್ಭ ಶಿಸ್ತಾಗಿ ಶೂಲೇಸ್ ಕಟ್ಟುವಾಗ ರೇಡಿಯೋ ಸಿಟಿಯ ಗುಂಡಿ ಅಮುಕುತ್ತಿದ್ದ. ಹೀಗಾಗಿ, ಆಗೆಲ್ಲಾ ನನಗೆ ರೇಡಿಯೋ ಸಿಟಿಯೇ ನಿತ್ಯವೂ ಸುಪ್ರಭಾತ ಹಾಡುತ್ತಿತ್ತು. ನಿಧಾನಕ್ಕೆ ಪೇಪರ್ ಮೇಲೆ ಕಣ್ಣಾಡಿಸಿ ನನ್ನ ಪ್ರತಿಸ್ಪರ್ಧಿಗಳ ಬೈಲೈನ್ ಏನಾದರೂ ಇದೆಯೇ, ನನ್ನ ಸ್ಟೋರಿ ಅವರಿಗೆ ಸಿಕ್ಕಿಲ್ಲ ಅಂತ ಖಾತ್ರಿಪಡಿಸಿ ಏನೋ ಘನಾಂದಾರಿ ತೃಪ್ತಿಯಿಂದ ಆಫೀಸಿಗೆ ಹೊರಡುತ್ತಿದ್ದೆ.

ಆದರೆ ಈಗ ಹಾಗಿಲ್ಲ. ಚೆನ್ನೈಯಲ್ಲಿ ಹಾಯಾಗಿದ್ದೇನೆ. 'ಬೆಂಗಳೂರಿನ...' ಅಂತ ರಾಗ ಹಾಡುತ್ತಿದ್ದ ರೇಡಿಯೋ ಸಿಟಿ ಇಲ್ಲಿ ಬೆಳಗಾತ ಎದ್ದು 'ಚೆನ್ನೈಯೋಡ...' ಅಂತ ರಾಗ ಹಾಡುತ್ತದೆ. ವ್ಯತ್ಯಾಸವೇನೂ ಇಲ್ಲ. 'ಅಣ್ಬೇ ಅಣ್ಬೇ ಕೊಲ್ಲಾದೇ..' ಅಂತ ಎಲ್ಲಿಂದಲೋ ತೇಲಿ ಬರುವ ಲಹರಿಯಿಂದ ನಾನು ಎಲ್ಲಿಗೋ ತಪ್ಪಿ ಬಂದಿಳಿದಂತೇನೂ ಅನಿಸುವುದಿಲ್ಲ. ಭಾಷೆ ಯಾವುದಾದರೇನು.. ಕಿವಿ ತಂಪಾದರೆ ಮನಸ್ಸು ಕುಣಿಯುತ್ತದೆ. ಆದರೆ, ವಿಚಿತ್ರವೋ, ವಿಷಾದವೋ ಗೊತ್ತಿಲ್ಲ. ಯಾವ ಚಾನಲ್ ಗುಂಡಿ ಒತ್ತಿದರೂ ಕೇಳುವ ಹಾಡು ನಮ್ಮ ಕನ್ನಡ ನೆಲದ್ದೇ ಅನಿಸುತ್ತದೆ. ಯಾಕೆಂದರೆ, ತಮಿಳಿನ ಪ್ರಸಾದವನ್ನೇ ತಾನೇ ಕನ್ನಡದ ಜನ ಥಿಯೇಟರ್ನಲ್ಲಿ ರಿಮೇಕ್ ಹೆಸರಲ್ಲಿ ನೋಡಿ ಪಾವನರಾಗುತ್ತಿರುವುದು.

ಇದೆಲ್ಲ ನಮ್ಮ ಕನ್ನಡದ ಈಗಿನ ವ್ಯಥೆ, ಹೇಳಿ ಏನು ಪ್ರಯೋಜನ ಅಂತೀಯಾ. ಸರಿ ಬಿಡು. ಆ ವಿಷಯ ಅಲ್ಲಿಗೇ ಬಿಡೋಣ. ಏನೇ ಆದರೂ, ಇಲ್ಲಿ ಎಷ್ಟೇ ಅಡ್ಡಾಡಿದರೂ ನಾನು ದಿನಸಿ ಅಂಗಡಿ ಮುಂದೆ ನಿಂತರೆ ಮಾತ್ರ ಬಾಯಿ ಕಟ್ಟಿದಂತಾಗುತ್ತದೆ. ಅವನಿಗೋ ಇಂಗ್ಲೀಷು, ಹಿಂದಿ ಬರುವುದಿಲ್ಲ. ನನಗೋ ತಮಿಳು ಬರುವುದಿಲ್ಲ. 'ತಮಿಳ್ ತೆರಿಯಾದಾ' ಅಂತ ಆತ ಕೇಳಿದರೆ ಬಾಯಿಯಿಂದ ಪೆಚ್ಚುಮೋರೆಯ ನನ್ನ ಉತ್ತರ ಅವನಿಗೆ ಕಾದಿರುತ್ತದೆ. ಏನೋ ಅಲ್ಪಸ್ವಲ್ಪ ತುಳು ಮಿಕ್ಸ್ ಮಾಡಿ ಕರ್ನಾಟಕದ ಗಡಿಭಾಗದಲ್ಲಿದ್ದುದರಿಂದ ಮಲಯಾಳವನ್ನೂ ಮಿಕ್ಸ್ ಮಾಡಿದರೆ ಮುಗೀತು. ತಮಿಳೇ ಅಲ್ಲದಿದ್ದರೂ, ಅವನಿಗೆ ಅರ್ಥವಾಗುವ ಒಂದು ಭಾಷೆಯಂತೂ ರೆಡಿಯಾಗುತ್ತದೆ.

ಆದರೆ, ಜೇಪಿನಗರ, ಜಯನಗರ, ವಸಂತನಗರ, ಶಿವಾಜಿನಗರ ಅಂತೆಲ್ಲ ಹೊರಳುತ್ತಿದ್ದ ನಾಲಿಗೆ ಮಾತ್ರ ಯಾಕೋ ನನ್ನ ಜತೆ ಇಲ್ಲಿ ಸಹಕರಿಸುತ್ತಿಲ್ಲ ಪ್ರಿಯ. ವಡಪಳನಿ, ಅಂಜಿಗೆರೆ, ಎಗ್ಮೋರ್, ಮಾಂಬಳಂ, ನುಂಗಂಬಾಕಂ, ಪರಶುವಾಕಂ, ಚೂಲೆಮೇಡು, ಕೋಡಂಬಾಕಂ ಅನ್ನುವಾಗ ಹೋಟೆಲ್ಲಿನ ಮೆನು ಲಿಸ್ಟಿನಂತೆ ನನ್ನನ್ನು ಸಿಕ್ಕಾಪಟ್ಟೆ ಕನ್ಫ್ಯೂಸ್ ಮಾಡಿ ಹಾಕುತ್ತದೆ. ಮಾಂಬಳದ ನೆನಪೂ ಎಲ್ಲೋ ಕಾಡಿದಂತಾಗಿ ಬಾಯಲ್ಲೂ ನೀರೂರುತ್ತದೆ. ನುಂಗಂಬಾಕಂ ಅನ್ನಲು ಹೋಗಿ ಗಡಿಬಿಡಿಯಲ್ಲಿ ನುಂಬಂಗಾಪಂ ಅಂದುಬಿಟ್ಟು ನನ್ನ ನಾಲಿಗೆಯೇ ಕಚ್ಚಿಕೊಳ್ಳಬೇಕಾಗುತ್ತದೆ.

ಇನ್ನು ಬೆಳಗ್ಗೆ ಆಫೀಸಿಗೆ ನನ್ನ ಕರ್ನಾಟಕ ನೋಂದಣಿಯ ಗಾಡಿಯಲ್ಲಿ ಹೋಗುವ ಮಜಾವೇ ಬೇರೆ ಪ್ರಿಯ. ಎಲ್ಲ ಟಿಎನ್ ಗಾಡಿಗಳ ಮಧ್ಯೆ ನನ್ನದೊಂದು ಕೆಎ. ಬೆಂಗಳೂರಿನ ತಂಪಿನಲ್ಲಿ ಕಿವಿಯನ್ನೂ ಮುಚ್ಚಿ ಹೆಲ್ಮೆಟ್ ಏರಿಸಿ ಹೋಗುತ್ತಿದ್ದರೆ ಏನೋ ಖುಷಿ. ಇಲ್ಲಿ ಬೆಳ್ಳಂಬೆಳಗ್ಗೆಯೇ ಹಣೆಯಿಂದ ತೊಟ್ಟಿಕ್ಕುವ ಬೆವರ ಜಲಧಾರೆಯ ತಂಪಿನಲ್ಲಿ ಹೆಲ್ಮೆಟ್ ಮುಚ್ಚಿ ಆಫೀಸು ಬಂದಾಗ ತೆಗೆಯುವಾಗ ಆಹಾ ಅನ್ನುವ ಖುಷಿಯ ಉದ್ಗಾರವೇ ಇನ್ನೊಂದು ಖುಷಿ. ಒಂದಕ್ಕೊಂದು ತುಂಬಾ ಸಾಮ್ಯತೆ ಅಂತೀಯಾ.

ಸರಿ ಬಿಡು. ಆದರೂ ಮುರುಗನ್ ಇಡ್ಲಿ ಶಾಪಿನಲ್ಲಿ ಕೂತು ತಿನ್ನುತ್ತಿದ್ದರೆ, ಮಲ್ಲೇಶ್ವರದ ಹಳ್ಳಿಮನೆಯಲ್ಲಿ ಕೂತಂತೇ ಹೊಟ್ಟೆ ತುಂಬುತ್ತದೆ. ನೀಲಾಂಗರೆಯ ಬೀಚಿನಲ್ಲಿ ಬಿಸಿಲ ಮಧ್ಯಾಹ್ನಗಳಲ್ಲಿ ಅಡ್ಡಾಡಿದರೆ, ಥೇಟ್ ಅದೇ ಪಣಂಬೂರು ಮೈತೆರೆದಂತೆ ಅನಿಸುತ್ತದೆ. ಸುತ್ತಲ ಕರಿಮುಖಗಳ ನಡುವಲ್ಲಿ ಮಿಂಚುಗಣ್ಣುಗಳು ನನ್ನ ನಿಟ್ಟಿಸುವಾಗ, ಊರಿನಲ್ಲಿ ಅಕ್ಕಪಕ್ಕದ ಮನೆಮಂದಿ ಬಹಳ ಸಮಯದ ನಂತರ ಕಾಣಸಿಕ್ಕಿದರೆ ಅಡಿಯಿಂದ ಮುಡಿಯವರೆಗೆ ನಿಲುಕಿಸಿದಂತೆ ಆಪ್ತತೆ ಕಾಣುತ್ತದೆ.

ಆದರೂ.. ಯಾಕೋ...

...ಮಳೆಯ ಹನಿಯಲ್ಲೇ ನೆನೆಯುತ್ತಾ ಆಫೀಸಿನ ಬ್ಯುಸಿಯಲ್ಲೇ ಪುರುಸೊತ್ತು ಮಾಡಿ ಹೋಟೆಲ್ ಕ್ಯಾಪಿಟಲ್ ಪಕ್ಕದಿಂದಾಗಿ ರಾಜಭವನವನ್ನು ಬಳಸಿ ನಾವು ಹೋಗುತ್ತಿದ್ದ ಸಂಜೆಯ ಪುಟ್ಟ ವಾಕ್, ಕೆಲಸ ಮುಗಿಸಿ ಮನೆಗೆ ಹೊರಡುವ ಅಪರಾತ್ರಿಯಲ್ಲೂ ಒಂದರ್ಧ ಗಂಟೆ ಕೂತು ಹರಟುತ್ತಿದ್ದ ಆಪ್ತಘಳಿಗೆ, ವಿಧಾನಸೌಧದ ಎದುರಲ್ಲೇ ಮೆಲ್ಲುತ್ತಿದ್ದ ಮಸಾಲೆಪುರಿ, ಚಳಿಮಳೆಯಲ್ಲೂ ತಡರಾತ್ರಿಯಲ್ಲಿ ನಡುಗುತ್ತಾ ಒದ್ದೆಯಾಗಿ ಮನೆಗೆ ಹೋಗುವ ರಾತ್ರಿಗಳು... ಇವೆಲ್ಲಾ ಮಾತ್ರ ಯಾಕೋ ತುಂಬ ಕಾಡುತ್ತವೆ. ನೆನಪಾಗುತ್ತದೆ.

ಸರಿ, ಹೊತ್ತಾಯಿತು. ಇನ್ನೊಮ್ಮೆ ಬರುತ್ತೇನೆ ಪತ್ರದಲ್ಲಿ.
ರಾಧಿಕಾ

Thursday, January 29, 2009

ಸುಮ್ಮನೆ, ಒಂದು ಕ್ಷಣದ ಮೌನ...

ಊರಿಗೆ ಬಂದು ಭರ್ತಿ ಮೂರು ದಿನಗಳಾಗಿದ್ದವು. ಅಮ್ಮನ ಜತೆ ಹಾಳುಮೂಳು ಹರಟೆ, ಲೊಟ್ಟೆ ಪಟ್ಟಾಂಗ ಹೊಡೆಯದೆ ಬಹಳ ದಿನಗಳಾಗಿದ್ದವು. ಇನ್ನೂ ಬಹಳ ಇದೆ ಮಾತಾಡೋದಿಕ್ಕೆ ಅಂದುಕೊಳ್ಳುತ್ತಿರುವಾಗಲೇ ಹೊರಡುವ ದಿನ ಬಂದುಬಿಟ್ಟಿತ್ತು. ಹೊರಡುವಾಗ ಯಾಕೋ ಮನಸ್ಸು ಖಾಲಿ ಖಾಲಿ. ಅಮ್ಮನ ಚಕ್ಕುಲಿ, ಉಂಡ್ಲಕಾಳು, ನೇಂದ್ರ ಬಾಳೆಕಾಯಿ ಚಿಪ್ಸು... ಇನ್ನೂ ಏನೇನೋ, ಜತೆಗೆ ಒಂದಿಷ್ಟು ಅಮ್ಮನ ಪ್ರೀತಿ, ಅಪ್ಪನ ನೇವರಿಕೆಗಳೆಲ್ಲವೂ ಸೇರಿ ಇದ್ದ ನಾಲ್ಕು ಬ್ಯಾಗುಗಳೂ ಮಣಭಾರವಾಗಿಬಿಟ್ಟಿದ್ದವು. ವಿಟ್ಲ ಬಸ್‌ಸ್ಟಾಂಡಿನಲ್ಲಿ ಆಟೋದಿಂದ ಇಳಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ದೂರದ ಚೆನ್ನೈಗೆ ಇದನ್ನು ಸಾಗಿಸುವಷ್ಟರಲ್ಲಿ.. ಅಂತ ನನ್ನ ಹೈರಾಣುತನದ ಕಲ್ಪನೆಯಲ್ಲೇ ನಿಂತಿದ್ದೆ. ಅಪ್ಪ ಅದೇನೋ ಕೆಲಸಕ್ಕೆಂದು ಆಚೆ ಹೋಗಿದ್ದರು. ಇಷ್ಟಾದಾಗ ಅದೆಲ್ಲಿಂದಲೋ ಆ ಸಣಕಲು ಪೇಪರ್‌ ಮನುಷ್ಯ ನನಗೆ ತಗುಲಿ ಹಾಕಿಕೊಂಡು ಬಿಟ್ಟ.
‘ಪೇಪರ್‌ ಬೇಕಾ? ಉದಯವಾಣಿ, ವಿಜಯ ಕರ್ನಾಟಕ, ಡೆಕ್ಕನ್‌ ಹೆರಾಲ್ಡ್‌..’ ಎಮ್ಮೆ ಉಚ್ಚೆ ಹೊಯ್ದಂತೆ ತನ್ನ ರಾಗ ದಾಟಿಸಿದ ನನ್ನತ್ತ. ಬೇಡ ಅಂದೆ. ನನ್ನ ಕಣ್ಣೋ ಪಕ್ಕದಲ್ಲಿ ನಾನಿಟ್ಟಿದ್ದ ನಾಲ್ಕು ಬ್ಯಾಗುಗಳನ್ನು ಬಿಟ್ಟು ಕದಲುತ್ತಿರಲಿಲ್ಲ. ಮುಖದ ಮೇಲೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತಿತ್ತು. ಇದನ್ನೇ ಗಮನಿಸಿದಂತೆ, ಪೇಪರ್ ಮನುಷ್ಯ, ‘ಆ ಕಡೆ ನೆರಳಿನಲ್ಲಿ ನಿಲ್ಲಿ’ ಅಂದ. ನಾನು ಮಾತನಾಡಲಿಲ್ಲ. ‘ಬ್ಯಾಗು ಇದೆ ಅಂತ ತಲೆ ಬಿಸಿ ಮಾಡಬೇಡಿ. ನಾನಿದ್ದೇನೆ. ಬ್ಯಾಗು ಇಲ್ಲಿ ಏನೂ ಆಗುವುದಿಲ್ಲ’ ಅಂದ. ನನಗೆ ಸಿಟ್ಟು ಬರಲು ಶುರುವಾಗಿತ್ತು. ‘ಅರೆ, ನಾನು ನನ್ನ ಪಾಡಿಗೆ ನನ್ನ ಬ್ಯಾಗಿನ ಜತೆ ನಿಂತರೆ ಇವನ್ಯಾರು ತಲೆಹರಟೆ? ಸಿಟಿ ರೋಗ ಇಲ್ಲಿಗೂ ತಗುಲಿರ್‍ಬೇಕು. ಇಲ್ಲದಿದ್ದರೆ, ನಾನು ಬಿಸಿಲಿನಲ್ಲಿ ಒಣಗಿಹೋದರೆ ಇವನಿಗೇನು ತಲೆಬಿಸಿ. ಸುಮ್ಮನೆ ಕೊನೆಗೆ ದುಡ್ಡು ಕೇಳುವ ವರಸೆಯನ್ನು ಇಲ್ಲಿಂದಲೇ ಆರಂಭಿಸುತ್ತಿದ್ದಾನೆ...’ ಅಂದುಕೊಂಡೆ. ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಪ್ಪ ಬರುತ್ತಿರುವುದು ಕಾಣಿಸಿತು. ಅಷ್ಟಾಗಲೇ ಮಂಗಳೂರು ಬಸ್ಸೂ ಸರಿಯಾಗಿ ಹಾಜರಿತ್ತು. ಈಗ ನಾಲ್ಕು ಮಣಭಾರದ ಬ್ಯಾಗನ್ನು ಮಂಗಳೂರು ಬಸ್ಸಿನ ಮಡಿಲಿಗೆ ಹಾಕುವ ನೇತೃತ್ವ ಅಪ್ಪ ವಹಿಸುವ ಮೊದಲೇ.. ಪೇಪರ್‌ ಮನುಷ್ಯ, ‘ ಓ ಈರೆನ ಮಗಳಾ.. ’ ಅನ್ನುತ್ತಾ ತಾನೇ ಆ ಕಾರ್ಯಕ್ರಮದ ನೇತೃತ್ವ ವಹಿಸಿದ. ಓಹೋ ನಾನು ಊಹಿಸಿದಂತೆಯೇ ಈತ ದುಡ್ಡು ಮಾಡಲು ಇಷ್ಟೆಲ್ಲ ಹೆಲ್ಪ್‌ ಮಾಡ್ತಾ ಇದ್ದಾನೆ ಅಂತ ನಾನು ಮೊದಲು ಊಹಿಸಿದ್ದು ಸರಿಯಾಗೇ ಇದೆ ಇದೆ ಅಂದುಕೊಂಡೆ. ಎಷ್ಟು ಬೇಗ ಸಿಟಿ ಸಂಸ್ಕೃತಿಯನ್ನು ಊರಲ್ಲೂ ಕಲಿತುಬಿಟ್ಟರು ಅಂದುಕೊಳ್ಳುತ್ತಲೇ ಬಸ್ಸೇರಿದೆ.
ಪೇಪರ್‌ ಮನುಷ್ಯ ನಗುತ್ತಾ ಅಪ್ಪನ ಜತೆ ಮಾತನಾಡುತ್ತಾ ನಿಂತಿದ್ದ. ನಾನು ೨೦ರ ನೋಟೊಂದನ್ನು ಪರ್ಸಿನಿಂದ ತೆಗೆದು ಅಪ್ಪನ ಕೈಗೆ ದಾಟಿಸಿದೆ. ಪ್ರಶ್ನಾರ್ಥಕವಾಗಿ ಅಪ್ಪ ನನ್ನನ್ನೇ ನೋಡುತ್ತಾ, ‘ನಿನ್ನ ಬೆಂಗ್ಳೂರು ಬುದ್ಧಿ ಇಲ್ಲಿ ತೋರಿಸಬೇಡ’ ಅಂದರು. ಅಪ್ಪನಿಗೆ ಈ ಪೇಪರ್‌ ಮನುಷ್ಯ ಇಷ್ಟು ಸಹಾಯ ಮಾಡಿದ್ದು ಯಾಕೆ ಅಂತ ಅರ್ಥವೇ ಆಗಿಲ್ಲ ಅಂದುಕೊಳ್ಳುತ್ತಲೇ ಆ ೨೦ರ ನೋಟನ್ನು ನಾನೇ ಪೇಪರ್‌ ಮನುಷ್ಯನ ಕೈಗೆ ದಾಟಿಸಿದೆ. ನನ್ನ ಕೈಯ ೨೦ರ ನೋಟು ಅವನ ಕಣ್ಣಿಗೆ ಬೀಳುತ್ತಲೇ ಸರಕ್ಕನೆ ಹಿಂದೆ ಸರಿದ. ಆತನ ಮುಖದಲ್ಲಾದ ಬದಲಾವಣೆ ನನಗೆ ಮುಜುಗರ ತರಿಸಿತ್ತು. ‘ಅಯ್ಯೋ, ಯಾನ್‌ ಇಂದೆಕ್ಕ್ ಅತ್ತ್‌ ಬ್ಯಾಗ್‌ ಬಸ್ಸ್‌ಗ್‌ ಪಾಡ್ದ್‌ನ. ಇಂಚಿನ ಬೇಲೆ ಮಾತ ಎಂಕ್ಲ್‌ ಮನ್‌ಪುಜ್ಯ (ಅಯ್ಯೋ, ನಾನು ಇದಕ್ಕಲ್ಲ ಬ್ಯಾಗ್‌ ಬಸ್ಸಿಗೆ ತಂದು ಹೆಲ್ಪ್‌ ಮಾಡಿದ್ದು. ಇಂಥ ಕೆಲಸ ಎಲ್ಲ ನಾನು ಮಾಡೋದಿಲ್ಲ.)’ ಅಂದು ಬಿಟ್ಟ. ನನಗೆ ನಾಚಿಕೆಯಾಗಿತ್ತು ಅನ್ನೋದಕ್ಕಿಂತಲೂ ನನ್ನ ಅಪ್ಪನ ಮುಖ ನನಗೆ ನೋಡೋದಕ್ಕೆ ಕಷ್ಟವಾಯಿತು. ‘ನಾನು ಮೊದಲೇ ಹೇಳಲಿಲ್ಲವಾ’ ಅಂದರು ಅಪ್ಪ. ನನಗೆ ಮಾತನಾಡಲು ಏನೂ ಉಳಿದಿರಲಿಲ್ಲ.
‘....ಛೇ. ಹೇಗಾಗಿಬಿಟ್ಟೆನಲ್ಲ’ ಅಂತನಿಸಿತು. ಆದರೂ, ಇಂಥ ಮುಗ್ಥ ಜಗತ್ತಿನಲ್ಲಿ ೨೦ ವರ್ಷ ಇದ್ದುದಕ್ಕೆ ಖುಷಿ ಪಡುತ್ತಾ, ನಗರ ನಾಲ್ಕು ಗೋಡೆಗಳ ವ್ಯಾವಹಾರಿಕ ಜಗತ್ತಿನೊಳಗೆ ಹುಟ್ಟುವ ಮುಗ್ಧ ಹಸುಳೆಗಳನ್ನು ನೆನೆಯುತ್ತಾ ಸುಮ್ಮನಾದೆ. ಸುಮ್ಮನೆ ಹೀಗೆ ಒಂದು ಕ್ಷಣ ನಮ್ಮ ಮೂವರೊಳಗೆ ದಾಟಿದ್ದು ಗೊತ್ತೇ ಆಗಲಿಲ್ಲ.
ಬಸ್ಸು ಹೊರಟಿತು. ಪೇಪರ್‌ ಮನುಷ್ಯನೆಡೆಗೆ ಒಂದು ಕೃತಜ್ಞತೆಗೆ ನಗು ದಾಟಿಸುವ ಧೈರ್ಯ ನನ್ನಲ್ಲಿರಲಿಲ್ಲ. ಆತ ಸುಮ್ಮನೆ ಬಸ್ಸಿಳಿದು ಹೋದ.

Friday, January 2, 2009

ಆ ಹೆಬ್ಬಂಡೆ...

ಆ ಗುಡ್ಡದ ತುದಿಯಲ್ಲಿ ರಾಜನಂತೆ ಕಂಗೊಳಿಸುತಿತ್ತು ಆ ಕಲ್ಲುಬಂಡೆ. ಅದರದೇ ಆದ ಹೊಳೆವ ಮೈಬಣ್ಣ; ಬೃಹದಾಕಾರ ತಾಳಿ ಅದೆಷ್ಟೋ ದೂರದಿಂದ ತನ್ನ ಅಸ್ತಿತ್ವ ಪ್ರತಿನಿಧಿಸುತಿತ್ತು. ಸುತ್ತಲ ಪರಿಸರವೂ ಹಾಗೆಯೇ.. ಬಂಡೆಯ ಅಸ್ತಿತ್ವಕ್ಕೆ ಪೂರಕ ವಾತಾವರಣವನ್ನೂ ನಿರ್ಮಾಣ ಮಾಡಿತ್ತು. ಬೆಳಗಿನ ಹಿತವಾದ ಮುಂಜಾವಿಗೆ ಮೈಯೊಡ್ಡಿ, ಮಂಜಿನ ಹನಿಗಳು ಮುತ್ತಿನಂತೆ ತನ್ನ ಮೇಲೆ ಉರುಳುವುದನ್ನು ತಾಯ ಮಮತೆಯಿಂದ ಕಣ್ತುಂಬಿಕೊಂಡು ನೋಡುತಿತ್ತು. ಬಿಸಿಲಿಗೆ ಕಾದು ಕೆಂಪಾದರೂ ಬಳಲಿ ಬೆಂಡಾಗದ ಆ ಧೀಮಂತ ಸ್ವರೂಪ ಲಕಲಕನೆ ಹೊಳೆಯುತ್ತಿತ್ತು. ಎಷ್ಟೋ ಜೀವಗಳ ಪುಟಾಣಿ ಕನಸುಗಳಿಗೆ ಚಿಗುರು ನೀಡುವ ನವಿರು ಸಮಯದಲ್ಲಿ ಮಂಜಿನಂತೆ ಕರಗುವ ತಾಕತ್ತೂ ಆ ಬಂಡೆಗಿತ್ತು. ಕೆಂಪು ಸಂಜೆಯಲ್ಲಿ ಪಶ್ಚಿಮ ದಿಗಂತದಲ್ಲಿ ಸೂರ್ಯ ದಿಗಂತಕ್ಕೆ ಚುಂಬಿಸುವ ರಸ ಸಮಯದಲ್ಲೂ ಬೆಂದು ಬಂದ ಬಾಡಿದ ಮನಗಳಿಗೆ ಆಸರೆ ನೀಡುವ ಹೃದಯ ವೈಶಾಲ್ಯತೆಯನ್ನೂ ಹೊಂದಿತ್ತು...
............... ................... ................
...... ಹೌದು. ಶಾಸ್ತ್ರಿಗಳು ಹಾಗೆಯೇ.. ಅವರದೇ ಆದ ಘನತೆ.. ಗಾಂಭೀರ್ಯ.. ಕಾಠಿಣ್ಯ. ವಯಸ್ಸು ೬೦ ದಾಟಿದರೂ ತುಂಬು ಸಂಸಾರ ನಡೆಸುವ ಮರ್ಜಿ ಇನ್ನೂ ಇಳಿದಿರಲಿಲ್ಲ. ಚಿಣ್ಣರ ಗುಸು ಗುಸು.. ಕಿಲ ಕಿಲ... ಪಿಸಿ ಪಿಸಿ ಶಬ್ದಗಳಿಂದ ಮನೆಯ ಗಲಗಲ ಸೌಂದರ್ಯ ಆ ಊರಿನಲ್ಲಿ ಎಲ್ಲರ ಹೊಟ್ಟೆ ಉರಿದುಹೋಗುವಂತೆ ಇತ್ತು. ಆದರೆ ನಿಧಾನವಾಗಿ ಆ ದೃಢತೆ.. ವಾತ್ಸಲ್ಯ... ಕಾಠಿಣ್ಯದ ಪ್ರತಿರೂಪಕ್ಕೂ ಸವಾಲಿನ ದಿನಗಳು ಬಂದೀತೆಂದು ಯಾರೂ ಭಾವಿಸಿರಲಿಲ್ಲ. ಹಾಗೇ ಒಂದು ದಿನ ಎಲ್ಲರ ಎಣಿಕೆ ತಪ್ಪಾಗಿ ಹೋಗಿತ್ತು...
................... ..................... ..................
ಅದೊಂದು ದಿನ ಎಲ್ಲಿಂದಲೋ ಒಂದು ದಂಡು ಬಂದಿತ್ತು; ಆ ಹೆಬ್ಬಂಡೆಯ ಬಳಿಗೆ. ಏನೋ ಮಾತುಕತೆಗಳು ನಡೆದವು. ವಿನಿಮಯಗಳೂ ಆದವು. ಇದಾಗಿ ಕೆಲದಿನಗಳ ನಂತರ ಕೆಲಸವೂ ಶುರುವಾಯ್ತು. ದೊಡ್ಡ ದೊಡ್ಡ ಲಾರಿ ಟ್ರಕ್ಕುಗಳು ತಮ್ಮ ರಕ್ಕಸಗಾಲನ್ನು ಇಟ್ಟವು. ಇದ್ದಕ್ಕಿದ್ದಂತೆ ತನ್ನ ಪಾಡಿಗೆ ಹಾಯಾಗಿದ್ದ ಶಾಂತ ಪರಿಸರ ಒಮ್ಮೆಲೇ ಬುಸುಗುಟ್ಟಿತು. ಆ ದಿನಗಳಲ್ಲಿ ಹೆಣೆದಿದ್ದ ಕನಸುಗಳು.. ಬರೆದಿದ್ದ ಬಯಕೆಗಳು.. ಎಲ್ಲವೂ ನಿಮಿಷದಲ್ಲಿ ಚೂರುಚೂರಾದವು. ಹೆಬ್ಬಂಡೆಗೆ ಒರಗಿ ದುಗುಡ.. ಬೇಸರ ಕಳೆಯುತ್ತಿದ್ದ ಜೀವಗಳ ಬಯಕೆಗಳೂ ಹಾಗೆಯೇ ಬಿರಿದು ಬರಡಾದವು. ಜತೆಗೆ ಕಿರಿಯ ಜೀವಗಳ ಪುಟ್ಟ ಪುಟ್ಟ ಕನಸುಗಳೂ...
....... ಕೊನೆಗೆ ಇವೆಲ್ಲವೂ ಇತಿಹಾಸವಾಗಿ ಹೋಯಿತು.

................... .................... ...................
ಇನ್ನು......., ನಮ್ಮೂರಿನಲ್ಲಿ ಈಗ ಕನಸುಗಳೇ ಇರುವುದಿಲ್ಲ. ಕಾರಣ, ಕನಸು ಕಾಣಲು ಕೂರಲು ಬಂಡೆಯೇ ಇಲ್ಲವಲ್ಲ?..