Sunday, July 17, 2016

ಮಾತು ಸುರಿಯಿತು... ಮಾತು ಮುರಿಯಿತು...

ಆಕೆ ವಸಂತದಲ್ಲಿ ಚಿಗುರಿದ ಮಾವಿನೆಲೆಯ ಹಾಗೆ ಕೆಂಪಗೆ ತೆಳ್ಳಗೆ ಇದ್ದಳು. ಕಿರಿ ಕಣ್ಣು, ಇಸ್ತ್ರಿ ಮಾಡಿದ ಗರಿ ಗರಿ ನೇರ ಕೂದಲು, ಚೂರೇ ಚೂರೂ ಕಲೆಗಳೇ ಇಲ್ಲದ ನುಣುಪಾದ ಚರ್ಮವಯಸ್ಸು ಖಂಡಿತ 20 ದಾಟಿರದು. ಈವರೆಗೆ ಪಾರ್ಲರಿನಲ್ಲಿ ಮೊಗ ಕಂಡಿಲ್ಲವಲ್ಲ ಎಂದು ಯೋಚಿಸುತ್ತಾ ಅವಳನ್ನೇ ನೋಡುತ್ತಿದ್ದಾಗ, ನಾನು ಬಂದಿದ್ದೇಕೆಂಬಂತೆ ನನ್ನೆಡೆಗೆ ನೋಡಿ ಶುದ್ಧ ತಮಿಳಿನಲ್ಲಿ ನನಗೇನು ಬೇಕೆಂಬಂತೆ ಕೇಳಿದಳು. ‘ಹೇರ್ ಕಟ್ ಎಂದೆ.

ಮನೆಯೆದುರಿನ ಪಾರ್ಲರಿಗೆ ಕೆಲಸ ಮಾಡಲು ಬಂದ ಹೊಸ ಹುಡುಗಿ. ಹೆಸರು ಮಂಜರಿ ಅಂತೆ. ವಾಹ್ಮುದ್ದಾದ ಹೆಸರು. ಹೆಸರಿಗೆ ತಕ್ಕಂತೆ ಮಾವಿನ ಚಿಗುರಿನಂತೆಯೇ  ಚುರುಕು ಚುರುಕಾಗಿ ಕಂಡಳು. ಊರು ದೂರದ ಡಾರ್ಜಿಲಿಂಗ್. ಮುಖ ನೋಡಿಯೇ ಈಶಾನ್ಯ ರಾಜ್ಯದವಳೆಂದು ಥಟ್ಟನೆ ಹೇಳಬಹುದಾದರೂ, ಚೆಂದಕ್ಕೆ ತಮಿಳು ಮಾತಾಡುತ್ತಿದ್ದಳು.

ಯಾವ ಹೆರ್ ಕಟ್ ಬೇಕು ನಿಮಗೆ?’ ಕೇಳಿದಳು. ‘ಸ್ಟೆಪ್ ಕಟ್ ಅಂದೆ. ನನ್ನನ್ನು ಅಲ್ಲೇ ಇದ್ದ ಎತ್ತರದ ಕುಳ್ಳಿರಿಸಿ, ಕೂದಲ ಸಿಕ್ಕು ಬಿಡಿಸಿ ಕೆಳಭಾಗವನ್ನು ಪ್ರತ್ಯೇಕಿಸಿ ಮೇಲ್ಭಾಗದ ಕೂದಲನ್ನು ಎತ್ತಿ ಅದನ್ನು ಕ್ಲಿಪ್ನಲ್ಲಿ ಬಂಧಿಸುತ್ತಾ, ಹಿಂದಿಯಲ್ಲಿ ಕೇಳಿದಳು, ‘ನೀವು ಹಿಂದಿಯಾ?’. ‘ಅಲ್ಲ, ಕನ್ನಡ ಅಂದೆ. ‘ಓಹ್ ಬೆಂಗಳೂರು ಅಂದಳು.

ಬೆಂಗಳೂರು ಚೆನ್ನಾಗಿ ಗೊತ್ತಾ?’ ಅಂದೆ. ‘ಕೋರ್ಸ್ ಮುಗಿಸಿದ ತಕ್ಷಣ ಮೊದಲು ನಂಗೆ ಕೆಲಸ ಸಿಕ್ಕಿದ್ದು ಬೆಂಗಳೂರಲ್ಲಿ. ವೈಟ್ಫೀಲ್ಡಿನಲ್ಲಿ ಒಂದು ವರ್ಷ ಕೆಲಸ ಮಾಡಿದೆ. ಅದು ಯುನಿಸೆಕ್ಸ್ ಸಲೂನ್. ಕೆಲವೊಮ್ಮೆ ಗಂಡಸರಿಗೂ ಪೆಡಿಕ್ಯೂರ್ ಮಾಡಬೇಕಾಗುತ್ತಿತ್ತು. ಅದು ಅಷ್ಟು ಸರಿಯಾಗುತ್ತಿರಲಿಲ್ಲ. ಅದಕ್ಕೆ ಅಲ್ಲಿ ಕೆಲಸ ಬಿಟ್ಟು ಬಂದೆ. ಅಲ್ಲಿ ಕಮಿಷನ್ ಸೇರಿ ಹೆಚ್ಚು ಸಂಬಳ, ಜೊತೆಗೆ ಉಳಿದುಕೊಳ್ಳಲು ಉಚಿತ ಹಾಸ್ಟೆಲ್ ನೀಡ್ತಾ ಇದ್ದರು. ಇಲ್ಲಿ ಅದೆಲ್ಲಾ ಇಲ್ಲ. ಕೇವಲ ಸಂಬಳ ಮಾತ್ರ. ಆದ್ರೂ ನೆಮ್ಮದಿ ಇದೆ ಅಂದಳು.

ಜೀವನ ಅನ್ನೋದು ಎಷ್ಟು ಕಷ್ಟ ಅಲ್ವಾ ಮೇಡಂ ಅನ್ನುತ್ತಾಇಷ್ಟು ಕಟ್ ಮಾಡ್ಲಾಎಂದು ನನ್ನ ಕೂದಲನ್ನು ಬೆರಳ ನಡುವಿರಿಸಿ ತೋರಿಸಿದಳು. ‘ಹುಂ ಅಂದೆ. ‘ಮೊದಲು ದುಡ್ದಿನ ಬೆಲೆ ಏನು ಅಂತ ಗೊತ್ತಿರ್ಲಿಲ್ಲ. ಇಲ್ಲಿ ಬಂದು ಒಂದು ರೂಪಾಯಿಗೂ ಎಷ್ಟು ಬೆಲೆ ಇದೆ ಅಂತ ಗೊತ್ತಾಯ್ತು ಎಂದು ದೊಡ್ಡವರ ಥರ ಮಾತಾಡಿದಳು.

ನಾನು ಅಪ್ಪ ಅಮ್ಮನನ್ನು ಬಿಟ್ಟು ಯಾರ ಕಾಲೂ ಮುಟ್ಟಿದವಳಲ್ಲ. ದುಡ್ಡು ಮಾಡಿ ನನ್ನ ಕಾಲ ಮೇಲೆ ನಿಲ್ಲಬೇಕೆಂದು ಊರಿಂದ ಇಲ್ಲಿಗೆ ಬಂದು ಬ್ಯೂಟೀಶಿಯನ್ ಕೋರ್ಸ್ ಸೇರಿದೆ. ಮೊದಲ ಬಾರಿಗೆ ಪೆಡಿಕ್ಯೂರ್ ಮಾಡಲು ಬೇರೆಯವರ ಕಾಲನ್ನು ನನ್ನ ಮಡಿಲಿನಲ್ಲಿರಿಸಿದಾಗ ಯಾಕೋ ದುಃಖ ಉಮ್ಮಳಿಸಿ ಬಂತು. ಏನು ಬೇಕಾದರೂ ಮಾಡುವೆ. ಆದ್ರೆ ಪೆಡಿಕ್ಯೂರ್ ಮಾತ್ರ ಮಾಡಲಾರೆ ಅಂತೆಲ್ಲ ಹೇಳಿದ್ದೆ. ಯಾಕಾದರೂ ಕೋರ್ಸಿಗೆ ಸೇರಿದೆನೋ ಎಂದು ತುಂಬ ಬೇಜಾರಾಗಿತ್ತು. ಬರಬರುತ್ತಾ ಅಭ್ಯಾಸವಾಗಿ ಹೋಯ್ತು. ಈಗ ನಾನು ಇಲ್ಲಿ ಹೆಚ್ಚು ಮಾಡೋದೇ ಪೆಡಿಕ್ಯೂರ್ ಎಂದು ನಗುತ್ತಾ ನುಡಿದಳಾಕೆ.

ಇಷ್ಟು ಚೆಂದಕ್ಕೆ ತಮಿಳು ಕಲ್ತಿದೀಯಲ್ಲಾಒಂದು ವರ್ಷ ಬೆಂಗಳೂರಿನಲ್ಲಿದ್ದು ಕನ್ನಡ ಕಲಿತಿಲ್ವಾ ಅಂದೆ. ‘ಬೆಂಗಳೂರಲ್ಲಿ ಯಾರು ಕನ್ನಡ ಮಾತಾಡ್ತಾರೆ ಮೇಡಂ, ಅಲ್ಲೆಲ್ಲಾ ಹಿಂದಿನೇ ಚೆನ್ನಾಗಿ ನಡೀತಿತ್ತು. ಹಾಗಾಗಿ ಕನ್ನಡ ಕಲಿಯುವ ಅನಿವಾರ್ಯತೆ ಬರಲಿಲ್ಲ. ಆದ್ರೂ ಮಾತಾಡಿದ್ರೆ ಅರ್ಥ ಆಗೋವಷ್ಟು ಕನ್ನಡ ಗೊತ್ತು ಅಂದಳು. ‘ಇಲ್ಲಿ ಬಂದು ಎರಡೇ ವರ್ಷ ಮೇಡಂ, ಅಷ್ಟರಲ್ಲಿ ತಮಿಳು ಬಂತು. ಇದಕ್ಕೂ ಮೊದಲು 6 ತಿಂಗಳು ಮಧುರೈನಲ್ಲಿದ್ದೆ, ಅಲ್ಲಿ ತಮಿಳು ಕಲಿಯದೆ ವಿಧಿ ಇರಲಿಲ್ಲ ಅಂದಳು.

ಹುಂ, ಅದೂ ಹೌದು ಅಂತ ನಾನು ಭಾರವಾದ ನಿಟ್ಟುಸಿರು ಬಿಡುವುದರೊಳಗಾಗಿ, ಇದ್ದಕ್ಕಿದ್ದಂತೆ, ಮೇಡಂ ಲವ್ ಮ್ಯಾರೇಜ್ ಒಳ್ಳೆಯದೋ ಅರೇಂಜ್ ಮ್ಯಾರೇಜೋ?’ ಎಂದಳು. ಥಟ್ಟನೆ ಬಂದ ಪ್ರಶ್ನೆಗೆ ಗಲಿಬಿಲಿಗೊಂಡೆ. ‘ಆಯ್ಕೆ ಸರಿಯಾಗಿದ್ದರೆ ಎರಡೂ ಒಕೆನೇ ಎಂದೆ. ‘ಯಾಕೆ ಧಿಡೀರ್ ಪ್ರಶ್ನೆ?’ ನಾನು ಮರುಪ್ರಶ್ನೆ ಹಾಕಿದೆ. ‘ನಾನು ಮದುವೆಯಾಗಿ ಹತ್ತು ದಿನವಷ್ಟೆ ಆಯ್ತು ಮೇಡಂ. ಲವ್ ಮ್ಯಾರೇಜ್ ಅನ್ನುತ್ತಾ ನಾಚಿದಳು. ‘ಓಹ್, ಹುಡುಗ ಯಾರು?’ ಎಂದೆ. ‘ಇಲ್ಲಿಯ ತಮಿಳಿನವರೇ. ಹೋಟೇಲ್ ಬ್ಯುಸಿನೆಸ್ ಇದೆ. ನಾವು ಓಡಿ ಹೋಗಿ ಮದುವೆಯಾದ್ವಿ ಅಂತ ಬೆರಳು ಕಚ್ಚಿದಳು.ಓಡಿಹೋಗಿಯಾ? ಹೇಗೂ ಇರೋದೇ ಮನೆಯಿಂದ ದೂರ. ಇನ್ನು ಓಡಿ ಹೋಗೋದೇನು ಬಂತು ಅಂದೆ. ‘ಮನೆಯವರಿಗೆ ಗೊತ್ತಾಗಬಾರದೆಂದು ಫೋನ್ ಸ್ವಿಚ್ ಆಫ್ ಮಾಡಿ, ಓಡಿ ಹೋಗಿ ಮದುವೆಯಾದ್ವಿ ಅಂದಳು.

ಎಲಾ ಇವಳಾ, ಇದೊಳ್ಳೆ ತಮಾಷೆಯಾಯಿತಲ್ಲ ಅಂತ ನನಗೆ ಜೋರು ನಗು ಬಂತು,’ ಸರಿ, ಓಡಿ ಹೋಗಿದ್ದಾದರೂ ಎಲ್ಲಿಗೆ?’ ಅಂದೆ. ‘ರಾಯಪೇಟಕ್ಕೆ ಅಂದಳು. ‘ಇಲ್ಲಿ 10-12 ಕಿ.ಮೀ ಓಡಿದ್ದಾ..?’ ಅನ್ನುತ್ತಾ ನಗತೊಡಗಿದೆ. ‘ಹೋಗಲಿ, ಈಗಲಾದರೂಮನೆಯವರಿಗೆ ಗೊತ್ತಾ?’ ಕೇಳಿದೆ. ‘ಹುಂ ನಿನ್ನೆಯಷ್ಟೆ ಹೇಳಿದೆ. ಮುಂದಿನ ಬಾರಿ ಬರೋವಾಗ ಕರೆದುಕೊಂಡು ಬಾ ಅಂದಿದ್ದಾರೆ ಅಂದಳು. ‘ಏನೇ ಆಗಲಿ ಒಳ್ಳೇದಾದ್ರೆ ಸಾಕು ಅಂದೆ. ‘ನಾವು ಆರು ತಿಂಗಳು ಲವ್ ಮಾಡಿದೀವಿ ಗೊತ್ತಾ ಒಳ್ಳೆ ಹುಡುಗ ಅಂದಳು. ಕಿರಿದಾದ ಕಣ್ಣಾದರೂ ಆ ಕಣ್ಣ ಸಂದಿಯಲ್ಲಿ ಹೆಮ್ಮೆಭರಿತ ನಾಚಿಕೆ ಭರ್ಜರಿಯಾಗಿಯೇ ಇಣುಕಿತು. ‘ಮದುವೆಯಾಗಿ ಅವನು ಅವನ ಮನೆಗೆ ಹೋದ, ನಾನು ನನ್ನ ಹಾಸ್ಟೆಲಿಗೆ ಬಂದೆ. ಮನೆ ಮಾಡಲು ಇನ್ನೊಂದು ವರ್ಷವಾದರೂ ಬೇಕು. ಹಾಸ್ಟೆಲಿನಲ್ಲಿ ಹೇಗೆ ಜೊತೆಗೆ ಇರೋಕಾಗುತ್ತೆ ಹೇಳಿ…’ ಅಂತ ಇನ್ನೂ ಹೇಳುತ್ತಲೇ ಇದ್ದಳು. ನಾವು ಬಾಲ್ಯದಲ್ಲಿ ಸೀಮೆಸುಣ್ಣದಲ್ಲಿ ನಾಲ್ಕು ಗೆರೆ ಎಳೆದು ಆಡುತ್ತಿದ್ದ ಮದುವೆಯಾಟ ನೆನಪಿಗೆ ಬಂತು. ಎಷ್ಟು ಸುಲಭವಾಗಿ ಹೇಳಿಬಿಟ್ಟಳಲ್ಲ, ಮದುವೆ ಕಥೆಯನ್ನು. …ಯಾಕೋ ಅವಳ ಭವಿಷ್ಯ ನೆನೆದು ಒಮ್ಮೆ ಸಣ್ಣಗೆ ಭಯವೆನಿಸಿತು.

ಆಯ್ತು ನೋಡಿ ಅನ್ನುತ್ತಾ, ಕೂದಲನ್ನು ಸೆಟ್ ಮಾಡತೊಡಗಿದಳು. ‘ಈಗ ನೋಡಿ ಹೇಗಾಯ್ತು?’ ಕನ್ನಡಿಯೊಂದನ್ನು ನನಗೆ ಕೊಡುತ್ತಾ ಹಿಂದಿನ ಕನ್ನಡಿಯಲ್ಲಿ ಚಿಕ್ಕದಾಗಿದ್ದ ಕತ್ತರಿಸಿ ಸೆಟ್ ಮಾಡಿದ್ದನ್ನು ನೊಡಲು ಹೇಳಿದಳು. ಅವಳ ಕಣ್ಣಲ್ಲಿ, ಹಿಡಿದ ಕೆಲಸವನ್ನು ಚೆಂದಕ್ಕೆ ಮುಗಿಸಿದ್ದ ಧನ್ಯತೆಯಿತ್ತು. ಧನ್ಯತೆ ನನ್ನ ಮೆಚ್ಚುಗೆಯನ್ನೂ ಬಯಸಿತ್ತು. ಯಾಕೋ ಯಾಂತ್ರಿಕವಾಗಿ ಮೆಚ್ಚುಗೆ ಸೂಚಿಸಿ ಹೊರಬಂದೆ.

ಇದಾಗಿ ಬಹುಷಃ ಆರೇಳು ತಿಂಗಳೇ ಆಗಿ ಹೋಯಿತೇನೋಮರೆತೇ ಬಿಟ್ಟಿದ್ದೆ. ಮೊನ್ನೆ ಮೊನ್ನೆ, ಹುಬ್ಬು ತೀಡಲು ಪಾರ್ಲರಿಗೆ ಕಾಲಿಟ್ಟೆ. ಅಂದಿನ ಆ ಚಿಗರೆಯಂಥಾ ಹುಡುಗಿ ಇವಳೇನಾ ಅನ್ನಿಸಿತು, ಅಂದು ಮಾತನಾಡಿದ ಸಲುಗೆಯಲ್ಲಿ, ‘ಹೇಗಿದೆ ಮ್ಯಾರೀಡ್ ಲೈಫು? ಎಂದು ಕೇಳೋಣವೆನೋ ಅಂದುಕೊಂಡರೂ, ಅವಳ ಗಂಭೀರವದನ ನೋಡಿ ನನ್ನ ಸ್ವರ ಬಾಯಿಗೆ ಬರಲಿಲ್ಲ. ಆಸಕ್ತಿಯಿಂದ ಕೆಲಸವನ್ನು ಮಾಡುತ್ತಿದ್ದ ಆಕೆಯ ಕೈಯಾಕೋ ಯಾಂತ್ರಿಕವಾದಂತೆ ಅನಿಸಿತು. ಹೀಗೆ ಅಂದುಕೊಳ್ಳುತ್ತಿದ್ದಾಗಲೇ ನನ್ನ ಹುಬ್ಬು ಮುಗಿಸಿ, ಬಾಯಲ್ಲಿ ಕಚ್ಚಿ ಹಿಡಿದಿದ್ದ ನೂಲನ್ನು ಕತ್ತರಿಸಿ ಎಸೆದು, ಆಯ್ತು ಮೆಡಂ ಎಂದು ಅವಸರದಲ್ಲಿ ಒಳನಡೆದಳು. ಅಂದು, ಓತಪ್ರೋತವಾಗಿ ಮಾತನಾಡಿದ್ದು ಈಕೆಯೇನಾ? ಇವಳ ದನಿಯೆಲ್ಲಿ ಅಡಗಿ ಹೋಯಿತು? ಮಾತಿರಲಿ, ನಗುವೂ ಬತ್ತಿ ಹೋಯಿತೇ? ಎಂಬ ಪ್ರಶ್ನೆಗಳು ನನ್ನ ಮನದಲ್ಲಿ ಸಾಲುಗಟ್ಟಿ ನಿಂತವು. ಯಾಂತ್ರಿಕವಾಗಿ ಕೈ ಪರ್ಸಿನತ್ತ ಹೋಯಿತು. ದುಡ್ಡು ಕೊಟ್ಟು ಹೊರಬಂದಾಗ, ರಸ್ತೆ ದಾಟಲಾಗದಷ್ಟು ಸಾಲುಗಟ್ಟಿ ನಿಂತ ವಾಹನಗಳು. ಹಸಿರು ಸಿಗ್ನಲ್ಲಿಗಾಗಿ ಕಾಯುತ್ತಿದ್ದವು.
('ಉದಯವಾಣಿ'ಯ 'ಅವಳು' ಪುರವಣಿಯಲ್ಲಿ ಪ್ರಕಟಿತ ಬರಹ)