Tuesday, April 14, 2009

ಒಂದು ಬಹಿರಂಗ ಪತ್ರ

ಪ್ರಿಯ...

'ರೇಡಿಯೋ ಸಿಟಿ ೯೧.೧... ಬೆಂಗಳೂರಿನ..' ಅಂತ ಕಿವಿಗಡಚಿಕ್ಕುವ ಸ್ವರ ಹಾಲ್ ನಿಂದ ಬೆಡ್ ರೂಂಗೆ ಬಂದಾಗಲೇ ನಾನು ಹಾಗೆ ಮೆತ್ತಗೆ ಮಗ್ಗುಲು ಬದಲಾಯಿಸುತ್ತಿದ್ದೆ. ಹೋ ಗಂಟೆ ಒಂಬತ್ತಾಯಿತೇ. 10ಕ್ಕೆ ಅಸೈನ್ಮೈಂಟ್ ಇದೆ. ಹೆಚ್ಚೆಂದರೆ ಮನೆಯಿಂದ ಆಫೀಸಿಗೆ ಅರ್ಧ ಗಂಟೆಯಿಲ್ಲದಿದ್ದರೆ ೧೩ ಕಿ.ಮೀ ದೂರಕ್ಕೆ ಜಪ್ಪಯ್ಯ ಅಂದರೂ ಹೋಗಲು ಸಾಧ್ಯವಿಲ್ಲ ಅನ್ನುತ್ತಲೇ, ನಾಳೆಯಿಂದ ಸ್ವಲ್ಪ ಬೇಗ ಏಳಬೇಕು. ಇಲ್ಲವಾದರೆ ಗಡಿಬಿಡಿಯಾಗುತ್ತದೆ. ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ಮುಗೀತು ಅಂತ ನಾನೇ ನನಗೆ ಹೇಳುತ್ತಾ ಹಾಲ್ಗೆ ಬರುತ್ತಿದ್ದೆ. ಆದರೆ, ಪ್ರತಿಸಲವೂ ಬೇಗ ಏಳಬೇಕು ಅನ್ನುತ್ತಲೇ ಇದ್ದರೂ ದಿನಚರಿ ಮಾತ್ರ ಬದಲಾವಣೆ ಕಂಡಿರಲಿಲ್ಲ. ಒಮ್ಮೊಮ್ಮೆ ನೀನು ಫೋನ್ ಮಾಡಿದಾಗ 'ಮಲಗಿದ್ದೀಯಾ' ಅಂತಲೇ ಮಾತು ಆರಂಭಿಸುತ್ತಿದ್ದೆ. ಆದರೇನು ಮಾಡೋಣ, ಮನೆಗೆ ಬರುತ್ತಿದ್ದುದೇ ೧೧, ೧೧.೩೦ ರಾತ್ರಿಗೆ. ಹಾಗಾಗಿ ಇದೆಲ್ಲ ಮಾಮೂಲು ಅಂತ ನಿನಗೂ ಗೊತ್ತು, ನನಗೂ ಗೊತ್ತು.

ಇರಲಿ ಬಿಡು. ಆಗೆಲ್ಲಾ ರಾತ್ರಿ ೧೧ ಗಂಟೆಗೆ ಮನೆಗೆ ಬಂದು ಬಾತ್ರೂಂನಲ್ಲಿ ಬೆಂಗಳೂರಿನ ಚಳಿಗೆ ಬಿಸಿನೀರು ಹೊಯ್ಯುತ್ತಿದ್ದರೆ, ಆಹಾ ಎಂಥಾ ಸುಖ. ಇಡೀ ದಿನದ ಸುಸ್ತೆಲ್ಲ ಬಸಿದುಹೋದ ಅನುಭವ. ಆಮೇಲೆ ಊಟ, ನಂತರ ಯಾವುದೋ ಪುಸ್ತಕವೋ, ಟಿವಿ ನ್ಯೂಸೋ ಆವಾಹನೆಯಾದರೆ ಮುಗೀತು. ರಾತ್ರಿ ಒಂದೋ, ಎರಡೋ ಗಂಟೆ ಗ್ಯಾರೆಂಟಿ. ಹೀಗಾಗಿ ರೇಡಿಯೋಸಿಟಿಗೆ ಬೆಳಗಾದರೂ ನನಗೆ ಬೆಳಗಾಗುತ್ತಿರಲಿಲ್ಲ. ತಮ್ಮ ತಿಂಡಿ ಮುಗಿಸಿ ಆಫೀಸಿಗೆ ಹೊರಡುವ ಸಂದರ್ಭ ಶಿಸ್ತಾಗಿ ಶೂಲೇಸ್ ಕಟ್ಟುವಾಗ ರೇಡಿಯೋ ಸಿಟಿಯ ಗುಂಡಿ ಅಮುಕುತ್ತಿದ್ದ. ಹೀಗಾಗಿ, ಆಗೆಲ್ಲಾ ನನಗೆ ರೇಡಿಯೋ ಸಿಟಿಯೇ ನಿತ್ಯವೂ ಸುಪ್ರಭಾತ ಹಾಡುತ್ತಿತ್ತು. ನಿಧಾನಕ್ಕೆ ಪೇಪರ್ ಮೇಲೆ ಕಣ್ಣಾಡಿಸಿ ನನ್ನ ಪ್ರತಿಸ್ಪರ್ಧಿಗಳ ಬೈಲೈನ್ ಏನಾದರೂ ಇದೆಯೇ, ನನ್ನ ಸ್ಟೋರಿ ಅವರಿಗೆ ಸಿಕ್ಕಿಲ್ಲ ಅಂತ ಖಾತ್ರಿಪಡಿಸಿ ಏನೋ ಘನಾಂದಾರಿ ತೃಪ್ತಿಯಿಂದ ಆಫೀಸಿಗೆ ಹೊರಡುತ್ತಿದ್ದೆ.

ಆದರೆ ಈಗ ಹಾಗಿಲ್ಲ. ಚೆನ್ನೈಯಲ್ಲಿ ಹಾಯಾಗಿದ್ದೇನೆ. 'ಬೆಂಗಳೂರಿನ...' ಅಂತ ರಾಗ ಹಾಡುತ್ತಿದ್ದ ರೇಡಿಯೋ ಸಿಟಿ ಇಲ್ಲಿ ಬೆಳಗಾತ ಎದ್ದು 'ಚೆನ್ನೈಯೋಡ...' ಅಂತ ರಾಗ ಹಾಡುತ್ತದೆ. ವ್ಯತ್ಯಾಸವೇನೂ ಇಲ್ಲ. 'ಅಣ್ಬೇ ಅಣ್ಬೇ ಕೊಲ್ಲಾದೇ..' ಅಂತ ಎಲ್ಲಿಂದಲೋ ತೇಲಿ ಬರುವ ಲಹರಿಯಿಂದ ನಾನು ಎಲ್ಲಿಗೋ ತಪ್ಪಿ ಬಂದಿಳಿದಂತೇನೂ ಅನಿಸುವುದಿಲ್ಲ. ಭಾಷೆ ಯಾವುದಾದರೇನು.. ಕಿವಿ ತಂಪಾದರೆ ಮನಸ್ಸು ಕುಣಿಯುತ್ತದೆ. ಆದರೆ, ವಿಚಿತ್ರವೋ, ವಿಷಾದವೋ ಗೊತ್ತಿಲ್ಲ. ಯಾವ ಚಾನಲ್ ಗುಂಡಿ ಒತ್ತಿದರೂ ಕೇಳುವ ಹಾಡು ನಮ್ಮ ಕನ್ನಡ ನೆಲದ್ದೇ ಅನಿಸುತ್ತದೆ. ಯಾಕೆಂದರೆ, ತಮಿಳಿನ ಪ್ರಸಾದವನ್ನೇ ತಾನೇ ಕನ್ನಡದ ಜನ ಥಿಯೇಟರ್ನಲ್ಲಿ ರಿಮೇಕ್ ಹೆಸರಲ್ಲಿ ನೋಡಿ ಪಾವನರಾಗುತ್ತಿರುವುದು.

ಇದೆಲ್ಲ ನಮ್ಮ ಕನ್ನಡದ ಈಗಿನ ವ್ಯಥೆ, ಹೇಳಿ ಏನು ಪ್ರಯೋಜನ ಅಂತೀಯಾ. ಸರಿ ಬಿಡು. ಆ ವಿಷಯ ಅಲ್ಲಿಗೇ ಬಿಡೋಣ. ಏನೇ ಆದರೂ, ಇಲ್ಲಿ ಎಷ್ಟೇ ಅಡ್ಡಾಡಿದರೂ ನಾನು ದಿನಸಿ ಅಂಗಡಿ ಮುಂದೆ ನಿಂತರೆ ಮಾತ್ರ ಬಾಯಿ ಕಟ್ಟಿದಂತಾಗುತ್ತದೆ. ಅವನಿಗೋ ಇಂಗ್ಲೀಷು, ಹಿಂದಿ ಬರುವುದಿಲ್ಲ. ನನಗೋ ತಮಿಳು ಬರುವುದಿಲ್ಲ. 'ತಮಿಳ್ ತೆರಿಯಾದಾ' ಅಂತ ಆತ ಕೇಳಿದರೆ ಬಾಯಿಯಿಂದ ಪೆಚ್ಚುಮೋರೆಯ ನನ್ನ ಉತ್ತರ ಅವನಿಗೆ ಕಾದಿರುತ್ತದೆ. ಏನೋ ಅಲ್ಪಸ್ವಲ್ಪ ತುಳು ಮಿಕ್ಸ್ ಮಾಡಿ ಕರ್ನಾಟಕದ ಗಡಿಭಾಗದಲ್ಲಿದ್ದುದರಿಂದ ಮಲಯಾಳವನ್ನೂ ಮಿಕ್ಸ್ ಮಾಡಿದರೆ ಮುಗೀತು. ತಮಿಳೇ ಅಲ್ಲದಿದ್ದರೂ, ಅವನಿಗೆ ಅರ್ಥವಾಗುವ ಒಂದು ಭಾಷೆಯಂತೂ ರೆಡಿಯಾಗುತ್ತದೆ.

ಆದರೆ, ಜೇಪಿನಗರ, ಜಯನಗರ, ವಸಂತನಗರ, ಶಿವಾಜಿನಗರ ಅಂತೆಲ್ಲ ಹೊರಳುತ್ತಿದ್ದ ನಾಲಿಗೆ ಮಾತ್ರ ಯಾಕೋ ನನ್ನ ಜತೆ ಇಲ್ಲಿ ಸಹಕರಿಸುತ್ತಿಲ್ಲ ಪ್ರಿಯ. ವಡಪಳನಿ, ಅಂಜಿಗೆರೆ, ಎಗ್ಮೋರ್, ಮಾಂಬಳಂ, ನುಂಗಂಬಾಕಂ, ಪರಶುವಾಕಂ, ಚೂಲೆಮೇಡು, ಕೋಡಂಬಾಕಂ ಅನ್ನುವಾಗ ಹೋಟೆಲ್ಲಿನ ಮೆನು ಲಿಸ್ಟಿನಂತೆ ನನ್ನನ್ನು ಸಿಕ್ಕಾಪಟ್ಟೆ ಕನ್ಫ್ಯೂಸ್ ಮಾಡಿ ಹಾಕುತ್ತದೆ. ಮಾಂಬಳದ ನೆನಪೂ ಎಲ್ಲೋ ಕಾಡಿದಂತಾಗಿ ಬಾಯಲ್ಲೂ ನೀರೂರುತ್ತದೆ. ನುಂಗಂಬಾಕಂ ಅನ್ನಲು ಹೋಗಿ ಗಡಿಬಿಡಿಯಲ್ಲಿ ನುಂಬಂಗಾಪಂ ಅಂದುಬಿಟ್ಟು ನನ್ನ ನಾಲಿಗೆಯೇ ಕಚ್ಚಿಕೊಳ್ಳಬೇಕಾಗುತ್ತದೆ.

ಇನ್ನು ಬೆಳಗ್ಗೆ ಆಫೀಸಿಗೆ ನನ್ನ ಕರ್ನಾಟಕ ನೋಂದಣಿಯ ಗಾಡಿಯಲ್ಲಿ ಹೋಗುವ ಮಜಾವೇ ಬೇರೆ ಪ್ರಿಯ. ಎಲ್ಲ ಟಿಎನ್ ಗಾಡಿಗಳ ಮಧ್ಯೆ ನನ್ನದೊಂದು ಕೆಎ. ಬೆಂಗಳೂರಿನ ತಂಪಿನಲ್ಲಿ ಕಿವಿಯನ್ನೂ ಮುಚ್ಚಿ ಹೆಲ್ಮೆಟ್ ಏರಿಸಿ ಹೋಗುತ್ತಿದ್ದರೆ ಏನೋ ಖುಷಿ. ಇಲ್ಲಿ ಬೆಳ್ಳಂಬೆಳಗ್ಗೆಯೇ ಹಣೆಯಿಂದ ತೊಟ್ಟಿಕ್ಕುವ ಬೆವರ ಜಲಧಾರೆಯ ತಂಪಿನಲ್ಲಿ ಹೆಲ್ಮೆಟ್ ಮುಚ್ಚಿ ಆಫೀಸು ಬಂದಾಗ ತೆಗೆಯುವಾಗ ಆಹಾ ಅನ್ನುವ ಖುಷಿಯ ಉದ್ಗಾರವೇ ಇನ್ನೊಂದು ಖುಷಿ. ಒಂದಕ್ಕೊಂದು ತುಂಬಾ ಸಾಮ್ಯತೆ ಅಂತೀಯಾ.

ಸರಿ ಬಿಡು. ಆದರೂ ಮುರುಗನ್ ಇಡ್ಲಿ ಶಾಪಿನಲ್ಲಿ ಕೂತು ತಿನ್ನುತ್ತಿದ್ದರೆ, ಮಲ್ಲೇಶ್ವರದ ಹಳ್ಳಿಮನೆಯಲ್ಲಿ ಕೂತಂತೇ ಹೊಟ್ಟೆ ತುಂಬುತ್ತದೆ. ನೀಲಾಂಗರೆಯ ಬೀಚಿನಲ್ಲಿ ಬಿಸಿಲ ಮಧ್ಯಾಹ್ನಗಳಲ್ಲಿ ಅಡ್ಡಾಡಿದರೆ, ಥೇಟ್ ಅದೇ ಪಣಂಬೂರು ಮೈತೆರೆದಂತೆ ಅನಿಸುತ್ತದೆ. ಸುತ್ತಲ ಕರಿಮುಖಗಳ ನಡುವಲ್ಲಿ ಮಿಂಚುಗಣ್ಣುಗಳು ನನ್ನ ನಿಟ್ಟಿಸುವಾಗ, ಊರಿನಲ್ಲಿ ಅಕ್ಕಪಕ್ಕದ ಮನೆಮಂದಿ ಬಹಳ ಸಮಯದ ನಂತರ ಕಾಣಸಿಕ್ಕಿದರೆ ಅಡಿಯಿಂದ ಮುಡಿಯವರೆಗೆ ನಿಲುಕಿಸಿದಂತೆ ಆಪ್ತತೆ ಕಾಣುತ್ತದೆ.

ಆದರೂ.. ಯಾಕೋ...

...ಮಳೆಯ ಹನಿಯಲ್ಲೇ ನೆನೆಯುತ್ತಾ ಆಫೀಸಿನ ಬ್ಯುಸಿಯಲ್ಲೇ ಪುರುಸೊತ್ತು ಮಾಡಿ ಹೋಟೆಲ್ ಕ್ಯಾಪಿಟಲ್ ಪಕ್ಕದಿಂದಾಗಿ ರಾಜಭವನವನ್ನು ಬಳಸಿ ನಾವು ಹೋಗುತ್ತಿದ್ದ ಸಂಜೆಯ ಪುಟ್ಟ ವಾಕ್, ಕೆಲಸ ಮುಗಿಸಿ ಮನೆಗೆ ಹೊರಡುವ ಅಪರಾತ್ರಿಯಲ್ಲೂ ಒಂದರ್ಧ ಗಂಟೆ ಕೂತು ಹರಟುತ್ತಿದ್ದ ಆಪ್ತಘಳಿಗೆ, ವಿಧಾನಸೌಧದ ಎದುರಲ್ಲೇ ಮೆಲ್ಲುತ್ತಿದ್ದ ಮಸಾಲೆಪುರಿ, ಚಳಿಮಳೆಯಲ್ಲೂ ತಡರಾತ್ರಿಯಲ್ಲಿ ನಡುಗುತ್ತಾ ಒದ್ದೆಯಾಗಿ ಮನೆಗೆ ಹೋಗುವ ರಾತ್ರಿಗಳು... ಇವೆಲ್ಲಾ ಮಾತ್ರ ಯಾಕೋ ತುಂಬ ಕಾಡುತ್ತವೆ. ನೆನಪಾಗುತ್ತದೆ.

ಸರಿ, ಹೊತ್ತಾಯಿತು. ಇನ್ನೊಮ್ಮೆ ಬರುತ್ತೇನೆ ಪತ್ರದಲ್ಲಿ.
ರಾಧಿಕಾ

Thursday, January 29, 2009

ಸುಮ್ಮನೆ, ಒಂದು ಕ್ಷಣದ ಮೌನ...

ಊರಿಗೆ ಬಂದು ಭರ್ತಿ ಮೂರು ದಿನಗಳಾಗಿದ್ದವು. ಅಮ್ಮನ ಜತೆ ಹಾಳುಮೂಳು ಹರಟೆ, ಲೊಟ್ಟೆ ಪಟ್ಟಾಂಗ ಹೊಡೆಯದೆ ಬಹಳ ದಿನಗಳಾಗಿದ್ದವು. ಇನ್ನೂ ಬಹಳ ಇದೆ ಮಾತಾಡೋದಿಕ್ಕೆ ಅಂದುಕೊಳ್ಳುತ್ತಿರುವಾಗಲೇ ಹೊರಡುವ ದಿನ ಬಂದುಬಿಟ್ಟಿತ್ತು. ಹೊರಡುವಾಗ ಯಾಕೋ ಮನಸ್ಸು ಖಾಲಿ ಖಾಲಿ. ಅಮ್ಮನ ಚಕ್ಕುಲಿ, ಉಂಡ್ಲಕಾಳು, ನೇಂದ್ರ ಬಾಳೆಕಾಯಿ ಚಿಪ್ಸು... ಇನ್ನೂ ಏನೇನೋ, ಜತೆಗೆ ಒಂದಿಷ್ಟು ಅಮ್ಮನ ಪ್ರೀತಿ, ಅಪ್ಪನ ನೇವರಿಕೆಗಳೆಲ್ಲವೂ ಸೇರಿ ಇದ್ದ ನಾಲ್ಕು ಬ್ಯಾಗುಗಳೂ ಮಣಭಾರವಾಗಿಬಿಟ್ಟಿದ್ದವು. ವಿಟ್ಲ ಬಸ್‌ಸ್ಟಾಂಡಿನಲ್ಲಿ ಆಟೋದಿಂದ ಇಳಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ದೂರದ ಚೆನ್ನೈಗೆ ಇದನ್ನು ಸಾಗಿಸುವಷ್ಟರಲ್ಲಿ.. ಅಂತ ನನ್ನ ಹೈರಾಣುತನದ ಕಲ್ಪನೆಯಲ್ಲೇ ನಿಂತಿದ್ದೆ. ಅಪ್ಪ ಅದೇನೋ ಕೆಲಸಕ್ಕೆಂದು ಆಚೆ ಹೋಗಿದ್ದರು. ಇಷ್ಟಾದಾಗ ಅದೆಲ್ಲಿಂದಲೋ ಆ ಸಣಕಲು ಪೇಪರ್‌ ಮನುಷ್ಯ ನನಗೆ ತಗುಲಿ ಹಾಕಿಕೊಂಡು ಬಿಟ್ಟ.
‘ಪೇಪರ್‌ ಬೇಕಾ? ಉದಯವಾಣಿ, ವಿಜಯ ಕರ್ನಾಟಕ, ಡೆಕ್ಕನ್‌ ಹೆರಾಲ್ಡ್‌..’ ಎಮ್ಮೆ ಉಚ್ಚೆ ಹೊಯ್ದಂತೆ ತನ್ನ ರಾಗ ದಾಟಿಸಿದ ನನ್ನತ್ತ. ಬೇಡ ಅಂದೆ. ನನ್ನ ಕಣ್ಣೋ ಪಕ್ಕದಲ್ಲಿ ನಾನಿಟ್ಟಿದ್ದ ನಾಲ್ಕು ಬ್ಯಾಗುಗಳನ್ನು ಬಿಟ್ಟು ಕದಲುತ್ತಿರಲಿಲ್ಲ. ಮುಖದ ಮೇಲೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತಿತ್ತು. ಇದನ್ನೇ ಗಮನಿಸಿದಂತೆ, ಪೇಪರ್ ಮನುಷ್ಯ, ‘ಆ ಕಡೆ ನೆರಳಿನಲ್ಲಿ ನಿಲ್ಲಿ’ ಅಂದ. ನಾನು ಮಾತನಾಡಲಿಲ್ಲ. ‘ಬ್ಯಾಗು ಇದೆ ಅಂತ ತಲೆ ಬಿಸಿ ಮಾಡಬೇಡಿ. ನಾನಿದ್ದೇನೆ. ಬ್ಯಾಗು ಇಲ್ಲಿ ಏನೂ ಆಗುವುದಿಲ್ಲ’ ಅಂದ. ನನಗೆ ಸಿಟ್ಟು ಬರಲು ಶುರುವಾಗಿತ್ತು. ‘ಅರೆ, ನಾನು ನನ್ನ ಪಾಡಿಗೆ ನನ್ನ ಬ್ಯಾಗಿನ ಜತೆ ನಿಂತರೆ ಇವನ್ಯಾರು ತಲೆಹರಟೆ? ಸಿಟಿ ರೋಗ ಇಲ್ಲಿಗೂ ತಗುಲಿರ್‍ಬೇಕು. ಇಲ್ಲದಿದ್ದರೆ, ನಾನು ಬಿಸಿಲಿನಲ್ಲಿ ಒಣಗಿಹೋದರೆ ಇವನಿಗೇನು ತಲೆಬಿಸಿ. ಸುಮ್ಮನೆ ಕೊನೆಗೆ ದುಡ್ಡು ಕೇಳುವ ವರಸೆಯನ್ನು ಇಲ್ಲಿಂದಲೇ ಆರಂಭಿಸುತ್ತಿದ್ದಾನೆ...’ ಅಂದುಕೊಂಡೆ. ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಪ್ಪ ಬರುತ್ತಿರುವುದು ಕಾಣಿಸಿತು. ಅಷ್ಟಾಗಲೇ ಮಂಗಳೂರು ಬಸ್ಸೂ ಸರಿಯಾಗಿ ಹಾಜರಿತ್ತು. ಈಗ ನಾಲ್ಕು ಮಣಭಾರದ ಬ್ಯಾಗನ್ನು ಮಂಗಳೂರು ಬಸ್ಸಿನ ಮಡಿಲಿಗೆ ಹಾಕುವ ನೇತೃತ್ವ ಅಪ್ಪ ವಹಿಸುವ ಮೊದಲೇ.. ಪೇಪರ್‌ ಮನುಷ್ಯ, ‘ ಓ ಈರೆನ ಮಗಳಾ.. ’ ಅನ್ನುತ್ತಾ ತಾನೇ ಆ ಕಾರ್ಯಕ್ರಮದ ನೇತೃತ್ವ ವಹಿಸಿದ. ಓಹೋ ನಾನು ಊಹಿಸಿದಂತೆಯೇ ಈತ ದುಡ್ಡು ಮಾಡಲು ಇಷ್ಟೆಲ್ಲ ಹೆಲ್ಪ್‌ ಮಾಡ್ತಾ ಇದ್ದಾನೆ ಅಂತ ನಾನು ಮೊದಲು ಊಹಿಸಿದ್ದು ಸರಿಯಾಗೇ ಇದೆ ಇದೆ ಅಂದುಕೊಂಡೆ. ಎಷ್ಟು ಬೇಗ ಸಿಟಿ ಸಂಸ್ಕೃತಿಯನ್ನು ಊರಲ್ಲೂ ಕಲಿತುಬಿಟ್ಟರು ಅಂದುಕೊಳ್ಳುತ್ತಲೇ ಬಸ್ಸೇರಿದೆ.
ಪೇಪರ್‌ ಮನುಷ್ಯ ನಗುತ್ತಾ ಅಪ್ಪನ ಜತೆ ಮಾತನಾಡುತ್ತಾ ನಿಂತಿದ್ದ. ನಾನು ೨೦ರ ನೋಟೊಂದನ್ನು ಪರ್ಸಿನಿಂದ ತೆಗೆದು ಅಪ್ಪನ ಕೈಗೆ ದಾಟಿಸಿದೆ. ಪ್ರಶ್ನಾರ್ಥಕವಾಗಿ ಅಪ್ಪ ನನ್ನನ್ನೇ ನೋಡುತ್ತಾ, ‘ನಿನ್ನ ಬೆಂಗ್ಳೂರು ಬುದ್ಧಿ ಇಲ್ಲಿ ತೋರಿಸಬೇಡ’ ಅಂದರು. ಅಪ್ಪನಿಗೆ ಈ ಪೇಪರ್‌ ಮನುಷ್ಯ ಇಷ್ಟು ಸಹಾಯ ಮಾಡಿದ್ದು ಯಾಕೆ ಅಂತ ಅರ್ಥವೇ ಆಗಿಲ್ಲ ಅಂದುಕೊಳ್ಳುತ್ತಲೇ ಆ ೨೦ರ ನೋಟನ್ನು ನಾನೇ ಪೇಪರ್‌ ಮನುಷ್ಯನ ಕೈಗೆ ದಾಟಿಸಿದೆ. ನನ್ನ ಕೈಯ ೨೦ರ ನೋಟು ಅವನ ಕಣ್ಣಿಗೆ ಬೀಳುತ್ತಲೇ ಸರಕ್ಕನೆ ಹಿಂದೆ ಸರಿದ. ಆತನ ಮುಖದಲ್ಲಾದ ಬದಲಾವಣೆ ನನಗೆ ಮುಜುಗರ ತರಿಸಿತ್ತು. ‘ಅಯ್ಯೋ, ಯಾನ್‌ ಇಂದೆಕ್ಕ್ ಅತ್ತ್‌ ಬ್ಯಾಗ್‌ ಬಸ್ಸ್‌ಗ್‌ ಪಾಡ್ದ್‌ನ. ಇಂಚಿನ ಬೇಲೆ ಮಾತ ಎಂಕ್ಲ್‌ ಮನ್‌ಪುಜ್ಯ (ಅಯ್ಯೋ, ನಾನು ಇದಕ್ಕಲ್ಲ ಬ್ಯಾಗ್‌ ಬಸ್ಸಿಗೆ ತಂದು ಹೆಲ್ಪ್‌ ಮಾಡಿದ್ದು. ಇಂಥ ಕೆಲಸ ಎಲ್ಲ ನಾನು ಮಾಡೋದಿಲ್ಲ.)’ ಅಂದು ಬಿಟ್ಟ. ನನಗೆ ನಾಚಿಕೆಯಾಗಿತ್ತು ಅನ್ನೋದಕ್ಕಿಂತಲೂ ನನ್ನ ಅಪ್ಪನ ಮುಖ ನನಗೆ ನೋಡೋದಕ್ಕೆ ಕಷ್ಟವಾಯಿತು. ‘ನಾನು ಮೊದಲೇ ಹೇಳಲಿಲ್ಲವಾ’ ಅಂದರು ಅಪ್ಪ. ನನಗೆ ಮಾತನಾಡಲು ಏನೂ ಉಳಿದಿರಲಿಲ್ಲ.
‘....ಛೇ. ಹೇಗಾಗಿಬಿಟ್ಟೆನಲ್ಲ’ ಅಂತನಿಸಿತು. ಆದರೂ, ಇಂಥ ಮುಗ್ಥ ಜಗತ್ತಿನಲ್ಲಿ ೨೦ ವರ್ಷ ಇದ್ದುದಕ್ಕೆ ಖುಷಿ ಪಡುತ್ತಾ, ನಗರ ನಾಲ್ಕು ಗೋಡೆಗಳ ವ್ಯಾವಹಾರಿಕ ಜಗತ್ತಿನೊಳಗೆ ಹುಟ್ಟುವ ಮುಗ್ಧ ಹಸುಳೆಗಳನ್ನು ನೆನೆಯುತ್ತಾ ಸುಮ್ಮನಾದೆ. ಸುಮ್ಮನೆ ಹೀಗೆ ಒಂದು ಕ್ಷಣ ನಮ್ಮ ಮೂವರೊಳಗೆ ದಾಟಿದ್ದು ಗೊತ್ತೇ ಆಗಲಿಲ್ಲ.
ಬಸ್ಸು ಹೊರಟಿತು. ಪೇಪರ್‌ ಮನುಷ್ಯನೆಡೆಗೆ ಒಂದು ಕೃತಜ್ಞತೆಗೆ ನಗು ದಾಟಿಸುವ ಧೈರ್ಯ ನನ್ನಲ್ಲಿರಲಿಲ್ಲ. ಆತ ಸುಮ್ಮನೆ ಬಸ್ಸಿಳಿದು ಹೋದ.

Friday, January 2, 2009

ಆ ಹೆಬ್ಬಂಡೆ...

ಆ ಗುಡ್ಡದ ತುದಿಯಲ್ಲಿ ರಾಜನಂತೆ ಕಂಗೊಳಿಸುತಿತ್ತು ಆ ಕಲ್ಲುಬಂಡೆ. ಅದರದೇ ಆದ ಹೊಳೆವ ಮೈಬಣ್ಣ; ಬೃಹದಾಕಾರ ತಾಳಿ ಅದೆಷ್ಟೋ ದೂರದಿಂದ ತನ್ನ ಅಸ್ತಿತ್ವ ಪ್ರತಿನಿಧಿಸುತಿತ್ತು. ಸುತ್ತಲ ಪರಿಸರವೂ ಹಾಗೆಯೇ.. ಬಂಡೆಯ ಅಸ್ತಿತ್ವಕ್ಕೆ ಪೂರಕ ವಾತಾವರಣವನ್ನೂ ನಿರ್ಮಾಣ ಮಾಡಿತ್ತು. ಬೆಳಗಿನ ಹಿತವಾದ ಮುಂಜಾವಿಗೆ ಮೈಯೊಡ್ಡಿ, ಮಂಜಿನ ಹನಿಗಳು ಮುತ್ತಿನಂತೆ ತನ್ನ ಮೇಲೆ ಉರುಳುವುದನ್ನು ತಾಯ ಮಮತೆಯಿಂದ ಕಣ್ತುಂಬಿಕೊಂಡು ನೋಡುತಿತ್ತು. ಬಿಸಿಲಿಗೆ ಕಾದು ಕೆಂಪಾದರೂ ಬಳಲಿ ಬೆಂಡಾಗದ ಆ ಧೀಮಂತ ಸ್ವರೂಪ ಲಕಲಕನೆ ಹೊಳೆಯುತ್ತಿತ್ತು. ಎಷ್ಟೋ ಜೀವಗಳ ಪುಟಾಣಿ ಕನಸುಗಳಿಗೆ ಚಿಗುರು ನೀಡುವ ನವಿರು ಸಮಯದಲ್ಲಿ ಮಂಜಿನಂತೆ ಕರಗುವ ತಾಕತ್ತೂ ಆ ಬಂಡೆಗಿತ್ತು. ಕೆಂಪು ಸಂಜೆಯಲ್ಲಿ ಪಶ್ಚಿಮ ದಿಗಂತದಲ್ಲಿ ಸೂರ್ಯ ದಿಗಂತಕ್ಕೆ ಚುಂಬಿಸುವ ರಸ ಸಮಯದಲ್ಲೂ ಬೆಂದು ಬಂದ ಬಾಡಿದ ಮನಗಳಿಗೆ ಆಸರೆ ನೀಡುವ ಹೃದಯ ವೈಶಾಲ್ಯತೆಯನ್ನೂ ಹೊಂದಿತ್ತು...
............... ................... ................
...... ಹೌದು. ಶಾಸ್ತ್ರಿಗಳು ಹಾಗೆಯೇ.. ಅವರದೇ ಆದ ಘನತೆ.. ಗಾಂಭೀರ್ಯ.. ಕಾಠಿಣ್ಯ. ವಯಸ್ಸು ೬೦ ದಾಟಿದರೂ ತುಂಬು ಸಂಸಾರ ನಡೆಸುವ ಮರ್ಜಿ ಇನ್ನೂ ಇಳಿದಿರಲಿಲ್ಲ. ಚಿಣ್ಣರ ಗುಸು ಗುಸು.. ಕಿಲ ಕಿಲ... ಪಿಸಿ ಪಿಸಿ ಶಬ್ದಗಳಿಂದ ಮನೆಯ ಗಲಗಲ ಸೌಂದರ್ಯ ಆ ಊರಿನಲ್ಲಿ ಎಲ್ಲರ ಹೊಟ್ಟೆ ಉರಿದುಹೋಗುವಂತೆ ಇತ್ತು. ಆದರೆ ನಿಧಾನವಾಗಿ ಆ ದೃಢತೆ.. ವಾತ್ಸಲ್ಯ... ಕಾಠಿಣ್ಯದ ಪ್ರತಿರೂಪಕ್ಕೂ ಸವಾಲಿನ ದಿನಗಳು ಬಂದೀತೆಂದು ಯಾರೂ ಭಾವಿಸಿರಲಿಲ್ಲ. ಹಾಗೇ ಒಂದು ದಿನ ಎಲ್ಲರ ಎಣಿಕೆ ತಪ್ಪಾಗಿ ಹೋಗಿತ್ತು...
................... ..................... ..................
ಅದೊಂದು ದಿನ ಎಲ್ಲಿಂದಲೋ ಒಂದು ದಂಡು ಬಂದಿತ್ತು; ಆ ಹೆಬ್ಬಂಡೆಯ ಬಳಿಗೆ. ಏನೋ ಮಾತುಕತೆಗಳು ನಡೆದವು. ವಿನಿಮಯಗಳೂ ಆದವು. ಇದಾಗಿ ಕೆಲದಿನಗಳ ನಂತರ ಕೆಲಸವೂ ಶುರುವಾಯ್ತು. ದೊಡ್ಡ ದೊಡ್ಡ ಲಾರಿ ಟ್ರಕ್ಕುಗಳು ತಮ್ಮ ರಕ್ಕಸಗಾಲನ್ನು ಇಟ್ಟವು. ಇದ್ದಕ್ಕಿದ್ದಂತೆ ತನ್ನ ಪಾಡಿಗೆ ಹಾಯಾಗಿದ್ದ ಶಾಂತ ಪರಿಸರ ಒಮ್ಮೆಲೇ ಬುಸುಗುಟ್ಟಿತು. ಆ ದಿನಗಳಲ್ಲಿ ಹೆಣೆದಿದ್ದ ಕನಸುಗಳು.. ಬರೆದಿದ್ದ ಬಯಕೆಗಳು.. ಎಲ್ಲವೂ ನಿಮಿಷದಲ್ಲಿ ಚೂರುಚೂರಾದವು. ಹೆಬ್ಬಂಡೆಗೆ ಒರಗಿ ದುಗುಡ.. ಬೇಸರ ಕಳೆಯುತ್ತಿದ್ದ ಜೀವಗಳ ಬಯಕೆಗಳೂ ಹಾಗೆಯೇ ಬಿರಿದು ಬರಡಾದವು. ಜತೆಗೆ ಕಿರಿಯ ಜೀವಗಳ ಪುಟ್ಟ ಪುಟ್ಟ ಕನಸುಗಳೂ...
....... ಕೊನೆಗೆ ಇವೆಲ್ಲವೂ ಇತಿಹಾಸವಾಗಿ ಹೋಯಿತು.

................... .................... ...................
ಇನ್ನು......., ನಮ್ಮೂರಿನಲ್ಲಿ ಈಗ ಕನಸುಗಳೇ ಇರುವುದಿಲ್ಲ. ಕಾರಣ, ಕನಸು ಕಾಣಲು ಕೂರಲು ಬಂಡೆಯೇ ಇಲ್ಲವಲ್ಲ?..

Thursday, October 30, 2008

ಕೆಂಪುದೀಪದ ಆ ಸರದಾರರು..

ಇನ್ನೂ ೧೨೦ ಸೆಕೆಂಡುಗಳಿವೆ. ಉಫ್‌.. ಕೀಲಿಯನ್ನು ಎಡಕ್ಕೆ ತಿರುಗಿಸಿ ಆಫ್‌ ಮಾಡಿದೆ. ಅತ್ತಿತ್ತ ಕಣ್ಣು ತಿರುಗಿಸಿದರೆ ಎಲ್ಲರೂ ನನ್ನಂತೆ ಹೊರಟವರು. ವಾಚು ನೋಡಿದೆ. ಇನ್ನು ೧೫ ನಿಮಿಷ ಮಾತ್ರ ಇದೆ. ವಿಧಾನಸೌಧದವರೆಗಿನ ಸಿಗ್ನಲ್‌ ದಾಟಲು ೧೫ ನಿಮಿಷ ಸಾಕು. ಅಲ್ಲಿಂದ ಆಫೀಸಿಗೆ ಒಂದೇ ಸಿಗ್ನಲ್‌ ಇದ್ದರೂ ದಾಟಲು ಮಾತ್ರ ಈ ಹೊತ್ತಿನಲ್ಲಿ ಅಬ್ಬಬ್ಬಾ ಅಂದರೂ ೧೦ ನಿಮಿಷವಾದ್ರೂ ಬೇಕು. ಛೇ.. ಅಂತ ಮನಸ್ಸಲ್ಲೇ ಲೆಕ್ಕ ಹಾಕುತ್ತಾ ಕಣ್ಣುಮುಚ್ಚಿದೆ. ತೆರೆದಾಗ ಚಾಚಿದ ಕೈಯೊಂದು ನನ್ನ ಮುಂದೆ ದಯನೀಯ ದೃಷ್ಠಿ ನೇಯುತ್ತಿತ್ತು. ತಿದ್ದದೆ ತೀಡದೆ ಇದ್ದರೂ ಸ್ಟ್ರೈಟನಿಂಗ್‌ ಮಾಡಿಸಿಟ್ಟಂತಹ ನೇರ ಕೆಂಚು ಕೂದಲ ಆ ಹುಡುಗಿ ಅಳುಕಿಲ್ಲದೆ ಕೈಯನ್ನು ಮುಂದಕ್ಕೆ ಚಾಚಿದ್ದಳು. ಪಾಪ.. ಅಂತ ಒಂದು ಕ್ಷಣ ಅನಿಸಿದರೂ ಅಷ್ಟಾಗಲೇ ಕೆಂಪುದೀಪ ಮಾಯವಾಗಿತ್ತು. ಹಸಿರುದಾರಿ ಮುಂದಿತ್ತು. ಛೂ ಬಿಟ್ಟ ನಾಯಿಯಂತೆ ಒಂದೇ ಉಸಿರಿಗೆ ಓಡಿದ ವಾಹನಗಳಂತೆ ನಾನೂ ಅನಾಯಾಸವಾಗಿ ಮುಂದೆ ಚಲಿಸಿದೆ. ನೇರ ಕೆಂಚು ಕೂದಲ ಆ ಹುಡುಗಿ ಮನದಿಂದ ಮರೆಯಾದಳು.
............ ................ ............
ರಾತ್ರಿ ಗಂಟೆ ಹನ್ನೊಂದು ದಾಟಿರಬೇಕು. ಪುಟ್ಟ ಪುಟ್ಟ ಆಡುವ ಕೈಗಳಲ್ಲಿ ಬಣ್ಣಬಣ್ಣದ ಬಲೂನುಗಳು. ಆದರೆ, ಆಡಲಿಕ್ಕಲ್ಲ. ನಿಮಿಷಕ್ಕೊಂದು ಬಾರಿ ಹರಿದುಹೋಗುವ ವಾಹನಗಳು ಆ ಕೆಂಪು ದೀಪವನ್ನು ನೋಡಿ ನಿಂತುಬಿಡುತ್ತವಲ್ಲ.. ಆಗ ಮಾರಲಿಕ್ಕೆ. ನನ್ನಂತೆ ಕಚೇರಿಯ ಕೆಲಸ ಮುಗಿಸಿಯೋ.. ಅಥವಾ ಷಾಪಿಂಗು ಮುಗಿಸಿಯೋ.. ಇಲ್ಲವೇ, ಇನ್ನಾವುದೋ ಪಾರ್ಟಿಯಲ್ಲಿ ಮಿಂಚಿ ತಿಂದು ತೇಗಿಯೋ ಬರುತ್ತಿರುವ ಸಾವಿರಾರು ಮಂದಿಯೆದುರು ಬಲೂನು ಹಿಡಿದರೆ ಎರಡೋ, ನಾಲ್ಕೋ ಮಾರಾಟವಾಗುತ್ತವೆ. ಹೊಟ್ಟೆಯ ಬಲೂನೂ ತುಂಬುತ್ತದೆ. ಆಡುವ ಬಲೂನು ಹೊಟ್ಟೆಗೆ ಮಾತ್ರ ಹಿಟ್ಟು! ಆದರೆ... ಒಮ್ಮೊಮ್ಮೆ, ಅದೇ ಕೆಂಪುದೀಪ ದಾಟಿಯೇ ಹೋಗುವ ನನಗೆ ಆಡುವ ಕೈಗಳು ಮಾತ್ರವಲ್ಲ. ದಿನಗಳುರುಳಿ ತಿಂಗಳಾದರೂ ‘ಮಾಸದ ಗಾಯದ’ ಚಾಚುವ ಕೈಗಳೂ ಎದುರಾಗುತ್ತವೆ. ಹಣೆಗೊಂದು ಬಿಳಿಯ ಪಟ್ಟಿ. ಆ ಬಿಳಿ ಪಟ್ಟಿಯ ಮಧ್ಯದಲ್ಲೊಂದು ಕೆಂಪು ರಕ್ತದ ಕಲೆ. ಕೈಯಲ್ಲೊಂದು ಚೀಲ. ದಣಿದು ಎರಡು ದಿನಗಳಿಂದ ಹೊಟ್ಟೆಗೆ ಹಿಟ್ಟಿಲ್ಲದ ಮುಖಭಾವ. ಇವಿಷ್ಟಿದ್ದರೆ ಸಾಕು. ಆ ಕೆಂಪುದೀಪ ಆಶ್ರಯ ನೀಡುತ್ತದೆ. ವಿಚಿತ್ರವೆಂದರೆ.. ಆ ಕೆಂಪು ರಕ್ತದ ಕಲೆಯ ಬಿಳಿಪಟ್ಟಿ ವಾರಗಳೇ ಕಳೆದರೂ ಮಾಸುವುದಿಲ್ಲ. ಗಾಯವೂ ಗುಣವಾಗುವುದಿಲ್ಲ! ಪಾಪ...
............... ................. ...........
ಅದೊಂದು ದಿನ, ಸಮಾಜ ಕಲ್ಯಾಣ ಇಲಾಖೆ ಈ ಕೆಂಪುದೀಪದ ಸರದಾರರ ಬೇಟೆಗೆ ಹೊರಟಿತ್ತು. ಆ ದಿನ ಬೆಳ್ಳಂಬೆಳಗ್ಗೆಯೇ ಪತ್ರಕರ್ತರಾದ ನಮಗೂ ಆ ದೆಸೆ. ಇಲಾಖೆಯ ಜೀಪಿನಲ್ಲಿ ಹೊರಟೆವು. ನಗರವಿಡೀ ಸುತ್ತಿ ಹತ್ತಿಪ್ಪತ್ತು ಮಂದಿಯನ್ನು ಒಳಗೆ ಹಾಕಿದ್ದೂ ಆಯಿತು. ನಡು ಮಧ್ಯಾಹ್ನವಾಗುವ ಹೊತ್ತಿಗೆ ಕಮರ್ಶಿಯಲ್‌ ರಸ್ತೆಯ ಆ ಸಂದಿಗೆ ತಲುಪಿದೆವು. ಆ ಕೆಂಪುದೀಪದಡಿಯಲ್ಲಿ ಆಕೆಯ ಕಂಕುಳಲ್ಲಿ ತಿಂಗಳ ಮಗು ಒರಗಿತ್ತು. ಇಲಾಖೆಯ ಜೀಪಿ ಕಂಡಿದ್ದೇ ತಡ ತಿಂಗಳ ಮಗುವೂ ಆಕೆಗೆ ಬೇಡವಾಗಿತ್ತು. ರಸ್ತೆಗೆಸೆದು ಓಡಿಹೋದ ಆಕೆಯೇನೋ ಇಲಾಖೆಯ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಂಡಳು. ಮಗು ಟಾರುರಸ್ತೆಗೆ ಬಿದ್ದ ರಭಸಕ್ಕೆ ರಕ್ತ ಒಸರುತ್ತಿತ್ತು. ಎಲ್ಲರ ಜತೆಗೆ ಈ ಮಗುವೂ ಇಲಾಖೆ ಪಾಲಾಯಿತು. ಅಷ್ಟರಲ್ಲಿ ಪಕ್ಕದ ಪೋಲೀಸ್‌ಠಾಣೆಗೆ ಕಣ್ಣೀರು ಸುರಿಸುತ್ತಾ ಮತ್ತೊಬ್ಬ ಪ್ರತ್ಯಕ್ಷ. ‘ಸಾರ್‌, ನನ್ನ ಮಗು ಎತ್ತಿಕೊಂಡು ಹೋದ್ರು ಸಾರ್‌’ ಅಂತ ಗೋಳಿಟ್ಟ. ಪಕ್ಕದಲ್ಲಿ ಆತನ ಹೆಂಡತಿಯಂತೆ. ಜೋರಾಗಿ ಅಳುತ್ತಿದ್ದಳು. ಇಲಾಖೆಯವರಿಗೆ ಫಚೀತಿ. ಮಗೂನ ಆ ರೀತಿ ರಸ್ತೆಗೆಸೆದು ಹೋದೋರು ಬೇರೇನೇ. ಈಗ ನನ್ನ ಮಗುವೆಂದು ಹೇಳುತ್ತಾ ಬಂದಿರುವ ಇಬ್ಬರು ಬೇರೇನೇ. ಪೋಲೀಸರು, ‘ಆ ಮಗು ನಿಮ್ಮದೆಂದು ಹೇಳಲು ನಿಮ್ಮಲ್ಲಿ ಯಾವ ದಾಖಲೆಯಿದೆ?’ ಅಂದರು. ‘ದಾಖಲೆ ಸಮೇತ ಇಲಾಖೆಯ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಹೋಗಿ. ನಿಮ್ಮ ಮಗು ನಿಮಗೇ ಕೊಡುತ್ತಾರೆ’ ಅಂದರು. ಅಳುತ್ತಾ ಆ ದಂಪತಿಗಳೆಂದು ಹೇಳಿಕೊಂಡವರು (ದಂಪತಿಗಳಂತೆ ಕಾಣಲಿಲ್ಲ ಬಿಡಿ) ಹೋದರು. ಅವರಿಗೆ ಬೆಂಬಲ ನೀಡಿ ಗಲಾಟೆ ಮಾಡಿದ ಹತ್ತಾರು ಮಂದಿಯೂ ಹಿಂದೆ ಸರಿದರು. ಹಸಿದ ಮಗುವಿಗೆ ಪ್ರೆಸ್‌ಕ್ಲಬ್‌ನಲ್ಲಿ ನಾನು, ರಶ್ಮಿ ಬಿಸ್ಕೆಟ್‌ ತಿನ್ನಿಸಿ ಹಾಲು ಕುಡಿಸಿದೆವು. ಆ ಮಗುವಿನತ್ತ ಎನ್‌ಜಿಒ ಬಾಸ್ಕೋದ ಮಂದಿ ತೋರಿದ ತಾಯಿಯ ಮಮತೆ ಮಾತ್ರ ಇನ್ನೂ ಕಣ್ಣಿಂದ ಮಾಯವಾಗೋದಿಲ್ಲ. ಅದೇನೇ ಇರಲಿ, ಆಮೇಲೆ ಯಾರೂ ಆ ನಿರಾಶ್ರಿತರ ಪುನರ್ವಸತಿ ತಾಣಕ್ಕೆ ಅದು ನನ್ನ ಮಗುವೆಂದು ಹೇಳಿಕೊಂಡು ಬರಲಿಲ್ಲವಂತೆ!
.......... ........... .........
ಆಮೇಲೆ.....ಯಾಕೋ..
... ಎರಡು ರುಪಾಯಿಯೇನು ಮಹಾ.. ಅಂತ ದಯನೀಯ ಕೈಗೆ ಹಾಕುತ್ತಿದ್ದ ನನ್ನ ಕೈಯೂ ಈಗ ಬರಿದಾಗಿವೆ.

Tuesday, September 23, 2008

ಮಗು ಕಂಡ ನಕ್ಷತ್ರ

.....ಆ ಮಗು ತನ್ನ ಸೂಕ್ಷ್ಮ ಮುದ್ದು ಕಣ್ಣುಗಳನ್ನು ಅಷ್ಟಗಲ ಮಾಡಿ ಆಗಸ ನಿಟ್ಟಿಸುತ್ತಿತ್ತು. ಅಮ್ಮ ಒಂದೊಂದೇ ತುತ್ತು ಉಂಡೆಕಟ್ಟಿ ಬಾಯಿಗಿಡುತ್ತಿದ್ದಳು. ಯಾವುದೋ ವಿಷಯ ಹೇಳಿ ಗಮನ ಬೇರೆಡೆಗೆ ಸೆಳೆದು ಉಣಿಸುವ ಕಷ್ಟ ಆ ಅಮ್ಮನಿಗೆ ಬಿಟ್ಟರೆ ಉಳಿದವರಿಗೆ ಗೊತ್ತಾಗಲಿಕ್ಕಿಲ್ಲ. ಮಗು ಕಣ್ಣಲ್ಲಿ ಆಗಸದ ತುಂಬ ನಕ್ಷತ್ರ. ಅಮ್ಮನಿಗೆ ಒಂದೊಂದು ತುತ್ತೂ ನಕ್ಷತ್ರದ ಮಿಂಚೇ. ಪಟಕ್ಕನೆ ಬಿಟ್ಟ ಬಾಯನ್ನು ಇಷ್ಟಗಲ ಮಾಡುತ್ತಾ ಮಗು ತನ್ನ ಹೊಳಹನ್ನು ಅಮ್ಮನಿಗೆ ಹಸ್ತಾಂತರಿಸಿತು...
‘ಅಮ್ಮಾ.., ಆ ನಕ್ಷತ್ರ ಎಷ್ಟು ಚೆಂದ ಅಲ್ವಾ...’
‘ಹೂಂ ಚೆಂದ... , ನಮ್ಮಂಥವರಿಗಲ್ವೇ...’ ಅನ್ನುತ್ತಾ ಮೆತ್ತಗೆ, ‘ಆ.... ದೊಡ್ಡ ಬಾಯಿ’ ಅನ್ನುತ್ತಾ ತಿನ್ನಿಸಿದ ತುತ್ತಿನೊಂದಿಗೆ ಅಮ್ಮನ ಬಾಯಿಂದ ಹೊರಬಿದ್ದ ‘ನಮ್ಮಂಥವರಿಗಲ್ಲ’ ಅನ್ನೋ ಮಾತು ಮಗುವಿನ ಸೂಕ್ಷ್ಮ ಕಿವಿಗೆ ಕೇಳಿಸದಿರಲಿಲ್ಲ.
ಅಮ್ಮನ ನಿಟ್ಟುಸಿರಿಗೆ ಉತ್ತರವಾಗಿ ಮಗುವಿಂದ ಪ್ರತಿ ಪ್ರಶ್ನೆ, ‘ಯಾಕಮ್ಮಾ...?’
‘ಚುಮ್ಮನೆ ಹೇಳ್ದೆ ಪುಟ್ಟಾ... ನಕ್ಷತ್ರಗಳೇ ಇಲ್ಲದ ಆಕಾಶ ಕೂಡಾ ಹೀಗೆ ಚೆಂದ ಅಂದೆ ಅಷ್ಟೇ..’ ಯಾಕೋ ಅಮ್ಮನಿಂದ ಸ್ಪರ್ಧಾತ್ಮಕ ಉತ್ತರ.
‘ಅದ್ಯಾಕಮ್ಮಾ...’
‘ನೋಡು ಪುಟ್ಟಾ.. ನಕ್ಷತ್ರಗಳೇ ಇಲ್ಲದ ಆಕಾಶ ಕಪ್ಪಗಿರುತ್ತೆ. ಕಪ್ಪು ಚೆಂದ ಅಲ್ವಾ. ಕಾಣೋದಕ್ಕಿಂತ ಏನೂ ಕಾಣಿಸದೇ ಇದ್ರೆ ಇನ್ನೂ ಚೆಂದ ಅಲ್ವಾ? ಅದಕ್ಕೆ ಹಾಗಂದೆ. ಬಿಡು, ಈ ತುತ್ತು ತಿನ್ನು. ನಿಂಗೆ ಅದೆಲ್ಲಾ ಈಗ ಅರ್ಥವಾಗಲ್ಲ..’
‘ಇಲ್ಲಮ್ಮಾ.. ನಕ್ಷತ್ರವಿದ್ರೆ ಆಕಾಶ ನೀಲಿಯಾಲಿ ಚೆಂದ ಕಾಣುತ್ತೆ. ಚಿಗಿಮಿಗಿ ಅಂತ ಮಿಂಚುತ್ತೆ. ಮೊನ್ನೆ ಅತ್ತೆ ಮದುವೆಗೆ ಜಿಗಿಮಿಗಿ ನಕ್ಷತ್ರಗಳನ್ನೆಲ್ಲಾ ಮಾಲೆ ಕಟ್ಟಿದ್ರಲ್ಲಮ್ಮಾ... ಎಷ್ಟು ಚೆಂದ ಕಾಣ್ತಿತ್ತು ಅಲ್ವಮ್ಮಾ...’ ಕೊಂಚವೂ ಸ್ಪರ್ಧೆಯಿಲ್ಲದ ಕುತೂಹಲಿ ಮಗುವಿನ ಉತ್ತರ ಅಷ್ಟೇ ಸರಾಗವಾಗಿ.
ಮಗುವಿನ ಉತ್ಸಾಹಕ್ಕೆ ಅಮ್ಮನಿಂದ ಹೂಂ ಎಂಬ ಉತ್ತರ.
‘ಅಮ್ಮಾ.. ನಾವು ಹಾಗೆ ನಕ್ಷತ್ರ ಮಾಲೆ ಕಟ್ಟಿ ನೇತಾಡಿಸೋದು ಯಾವಾಗ?’
‘ಅವೆಲ್ಲ ನಮ್ಮಂಥೋರಿಗೆ ಆಗಲ್ಲ ಪುಟ್ಟಾ... ಅದಕ್ಕೆಲ್ಲ ತುಂಬ ದುಡ್ಡು ಬೇಕು. ನೀನು ದೊಡ್ಡೋನಾದಾಗ ಮಾಡುವಿಯಂತೆ. ’ ಉತ್ತರ.
‘ಹಾಂ.. ಅಮ್ಮಾ ನಾವು ಆ ಮೇಲಿರೋ ನಕ್ಷತ್ರಗಳನ್ನೇ ತಂದು ಮನೇಲಿಟ್ರೆ? ನಮ್ಮನೇ ದೀಪಕ್ಕಿಂತ ಅದೇ ಚೆಂದ ಅಲ್ವಮ್ಮಾ..
ಇಲ್ಲ ಪುಟ್ಟಾ.. ದೀಪಾನೇ ಚೆಂದ. ದೀಪಾನಾದ್ರೆ ನಂದಿಸೋದಕ್ಕಾಗುತ್ತೆ. ನಕ್ಷತ್ರ ನಂದಿಸೋಕಾಗಲ್ವಲ್ಲ. ನಂದದ ದೀಪಕ್ಕಿಂತ ನಂದೋ ದೀಪಾನೇ ಚೆಂದ. ನೀನು ಓದಿ ದೊಡ್ಡೋನಾಗಬೇಕಂದ್ರೆ ದೀಪಾನೇ ಬೇಕು. ನಕ್ಷತ್ರ ಬೇಕಾಗಲ್ಲ ಪುಟ್ಟ...’ ಅಮ್ಮನ
ಮಾತಿನಲ್ಲಿ ಕೊಂಚ ಉತ್ಸಾಹ.
ತುತ್ತು ಮುಗಿದಿತ್ತು. ಮಗು ಇನ್ನೂ ಯೋಚಿಸುತ್ತಿತ್ತು.
‘ಅಮ್ಮಾ ನಿಂಗೆ ಹಾಗಾದ್ರೆ ನಂದಿಸೋ ದೀಪಾನೇ ಇಷ್ಟಾನಾ?’
‘ಹೂಂ ಪುಟ್ಟಾ.. ಯಾಕೆ..?’
‘ಮತ್ತೆ..., ನೀನು ಅಲ್ಲಿ ಒಳಗೆ ಫೋಟೋ ಮುಂದೆ ದೀಪಾ ಉರಿಸಿದ್ಯಲ್ಲಮ್ಮಾ.. ಯಾಕಮ್ಮಾ ಅದನ್ನ ನಂದಿಸೋದೇ ಇಲ್ಲ?’
‘ಅದು ಅಪ್ಪನ ಫೋಟೋ ಪುಟ್ಟ. ಅಪ್ಪ ಅಲ್ಲಿ ನಕ್ಷತ್ರ ಇರೋವಲ್ಲಿಗೆ ಹೋಗಿದ್ದಾರಲ್ಲಾ? ಅದಕ್ಕೆ ಅಪ್ಪನ ನೆನಪಿಗೆ ಆ ದೀಪ ನಂದಿಸೋದೇ ಇಲ್ಲ ಪುಟ್ಟ.’
‘ಅಮ್ಮಾ, ಹಾಗಾದ್ರೆ ನಿಂಗೆ ಅಪ್ಪ ಅಂದ್ರೆ ಇಷ್ಟ ಇಲ್ವಾ?’
‘ಯಾಕೆ ಪುಟ್ಟಾ..?’ ಬಾಣದಂತೆ ಬಂದೆರಗಿದ ಪ್ರಶ್ನೆಗೆ ಅಮ್ಮ ಕಂಗಾಲು.
‘ಯಾಕಂದ್ರೆ ನೀನು ಹೇಳಿದ್ಯಲ್ಲಮ್ಮಾ ಆಗ. ನಂದದ ದೀಪಕ್ಕಿಂತ ನಂದೋ ದೀಪಾನೇ ಚೆಂದ ಅಂತ.’
................................
ಮಗುವಿನ ಪ್ರಶ್ನೆಗೆ ಒಂದು ಕ್ಷಣ ಆಕೆಯಿಂದ ನಿರುತ್ತರ. ಎಂಜಲು ತಟ್ಟೆ ಅಲ್ಲೇ ಉಳಿದಿತ್ತು. ಒಂದು ಕ್ಷಣ ಯೋಚಿಸಿ ಒಳಹೋದ ಆಕೆ ಮತ್ತೆ ಹೊರ ಬಂದಳು. ಮಗು ಕಣ್ಣಲ್ಲಿ ಅದೇ ಆಕಾಶದ ನಕ್ಷತ್ರದ ಜಿನುಗು ಮಳೆ. ಒಳಮನೆಯ ನಂದಾದೀಪ ಕಣ್ಮುಚ್ಚಿತ್ತು. ಒಳಗೆ ಕತ್ತಲು. ಹೊರಬಂದ ಅಮ್ಮನ ಕಣ್ಣಲ್ಲಿ ನಂದಾದೀಪ...


Thursday, August 14, 2008

ಎರಡು ಮುಖ

.... ಸುಮಾರು ೧೦ ವರ್ಷದ ಹಿಂದಿನ ನೆನಪು.
ಅದೊಂದು ದಿನ ಜೋರಾಗಿ ಮಳೆ ಸುರಿಯುತ್ತಿತ್ತು. ನಾನು ಆಗಿನ್ನೂ ಹೈಸ್ಕೂಲಿನಲ್ಲಿದ್ದಿರಬಹುದು. ಹೊರಗೇನು ನಡೆಯುತ್ತಿದೆ ಎಂಬುದೂ ಕೇಳಿಸದಷ್ಟು ಜೋರಾಗಿ ಮಳೆ ಬರುತ್ತಿತ್ತು. ನಾನು ವಿಟ್ಲದ ನಮ್ಮ ಮನೆಯ ಜಗಲಿಯಲ್ಲಿ ಸುಮ್ಮನೆ ನಿಂತು ಎಲ್ಲೋ ನೋಡುತ್ತಿದೆ. ಅಮ್ಮ ಅದೇನೋ ಕೆಲಸದಲ್ಲಿದ್ದರು. ಇದ್ದಕ್ಕಿದ್ದಂತೆ, ಮಳೆಯ ಧೋ ಸದ್ದಿನಲ್ಲೂ ದೂರದಲ್ಲೆಲ್ಲೋ ಜೋರಾಗಿ ಅರಚುವ ಸದ್ದು ಕೇಳಿ ಬಂತು. ನಾನು, ಅಮ್ಮ ಇಬ್ಬರೂ ಕಿವಿಗೊಟ್ಟು ಕೇಳಿದಾಗ ಗೊತ್ತಾಗಿದ್ದು ಮೇಲಿನ ಮನೆಯಿಂದ ಅಂತ. ತಕ್ಷಣ ಇಬ್ಬರೂ ಛತ್ರಿ ಹಿಡಿದು ಓಡಿದೆವು. ಆಗ ಕಂಡ ದೃಶ್ಯ ಮಾತ್ರ ಎಂಥ ಕಟುಕನಲ್ಲೂ ವೇದನೆ ಹುಟ್ಟಿಸುವಂಥದ್ದು. ಹೆಣ್ಣುನಾಯಿಯೊಂದು ಮಳೆಯಲ್ಲೇ ಮೇಲಿನ ಮನೆಯ ತೆಂಗಿನ ಮರದ ಬುಡದಲ್ಲಿ ಮರಿ ಹಾಕುವ ಗಳಿಗೆಯಲ್ಲಿತ್ತು. ಪಕ್ಕದಲ್ಲೇ ಮೇಲಿನ ಮನೆಯ ಹುಡುಗರು ನಾಯಿಗೆ ಜೋರಾಗಿ ಹೊಡೆಯುತ್ತಿದ್ದರು. ದೂರದಿಂದಲ್ಲೇ ಇನ್ನಿಬ್ಬರು ನಾಯಿಯತ್ತ ಕಲ್ಲೆಸೆಯುತ್ತಿದ್ದರು. ಆ ನಾಯಿ ಅತ್ತ ಹೆರುವ ನೋವೂ ತಾಳಲಾರದೆ, ಇತ್ತ ಈ ಹುಡುಗರ ಕಾಟವೂ ತಾಳಲಾರದೆ ಒದ್ದಾಡುತ್ತಿತ್ತು. ನನ್ನಮ್ಮ ಹುಡುಗರನ್ನು ಎಷ್ಟು ಕೇಳಿಕೊಂಡರೂ ಅವರು ಹೊಡೆಯುವುದನ್ನು ನಿಲ್ಲಿಸಲಿಲ್ಲ. ನಾಯಿ ಒಂದು ಮರದ ಬುಡದಿಂದ ಮತ್ತೊಂದು ಮರದ ಬುಡಕ್ಕೆ ಕಷ್ಟಪಟ್ಟು ಓಡಿ ಹೋಗಿ ಕೂತಿತು. ಅಲ್ಲಿಗೂ ಬಿಡದ ಹುಡುಗರು, ಒಟ್ಟಾರೆ ಅವರ ಮನೆಯ ಕಾಂಪೌಂಡಿನಿಂದಲೇ ಓಡಿಸುವ ಶತ ಪ್ರಯತ್ನ ನಡೆಸುತ್ತಿದ್ದರು. ಯಾಕೆ ಹೀಗೆ ಹೋಡೀತಾ ಇದ್ದೀರಿ ಎಂದಾಗ ಅವರಿಂದ ಬಂದ ಉತ್ತರ, ‘ಅದು ಇಲ್ಲಿ ಮರಿ ಹಾಕಿದ್ರೆ, ಆ ಮರಿಗಳು ಇಲ್ಲಿಂದ ಎಷ್ಟು ದಿನವಾದ್ರೂ ಹೋಗಲ್ಲ. ಆಗ ನಮಗೆ ಕಷ್ಟವಾಗುತ್ತೆ’ ಎಂದು. (ಹಳ್ಳಿಗಳಲ್ಲಿ ಇದು ಸಾಮಾನ್ಯ. ಬೀದಿ ಹೆಣ್ಣು ನಾಯಿ ತಮ್ಮ ಮನೆ ಕಾಂಪೌಂಡಿನಲ್ಲಿ ಮರಿ ಹಾಕದಿದ್ದರೆ ಸಾಕು ಎಂದು ಎಲ್ಲರೂ ದೇವರಲ್ಲಿ ಪ್ರಾರ್ಥಿಸುತ್ತಲೇ ಇರುತ್ತಾರೆ.) ‘ಆದ್ರೂ ಇಂಥ ಸಂದರ್ಭ ನೀವು ಕಾಟ ಕೊಟ್ರೆ ನಿಮಗೆ ಅದರ ಶಾಪ ತಟ್ಟದಿರದು. ನೀವು ಅಂಥ ಸಂದರ್ಭದಲ್ಲಿದ್ದರೆ ನಿಮಗೆ ಗೊತ್ತಾಗುತ್ತೆ ಆ ನೋವು ಎಂಥಾದ್ದು ಅಂತ’ ಎಂದು ಅಮ್ಮ ಜೋರಾಗಿ ಅವರಿಗೆ ಬೈದಾಗ ಕೊನೆಗೂ ಕಲ್ಲು ಹೊಡೆಯೋದು ನಿಲ್ಲಿಸಿದ್ರು. ನಾಯಿ ಕೊನೆಗೂ ೩ ಮರಿಗಳನ್ನೂ ಹಾಕಿತು.

...... ಇದು ಮೊನ್ನೆ ಮೊನ್ನೆ ನಡೆದ ಘಟನೆ. ಅದ್ಯಾವುದೋ ಸುದ್ದಿಯ ಬೆನ್ನೇರಿ ಯಶವಂತಪುರಕ್ಕೆ ಹೋಗಿದ್ದೆ. ಹಿಂತಿರುಗಿ ಬರುತ್ತಿದ್ದಾಗ ರಸ್ತೆಯಲ್ಲಿ ಅದ್ಯಾಕೋ ಎಲ್ಲ ವಾಹನಗಳು ರಸ್ತೆಯ ಮಧ್ಯಭಾಗವನ್ನು ಹೊರತು ಪಡಿಸಿ ಬದಿಯಿಂದಲೇ ಸಾಗುತ್ತಿದ್ದವು. ಹೀಗಾಗಿ ಸಂಚಾರ ಸಹಜವಾಗಿಯೇ ಅಸ್ತವ್ಯಸ್ತವಾಗಿತ್ತು. ದೂರದಿಂದಲೇ ಸಂಚಾರದ ತೊಂದರೆ ಅನುಭವಕ್ಕೆ ಬಂದರೂ ಯಾಕೆ ಅಂತ ಗೊತ್ತಾಗಲಿಲ್ಲ. ಬೆಂಗಳೂರಲ್ಲಿ ಇದು ಸಾಮಾನ್ಯವಾದ್ದರಿಂದ ಸುಮ್ಮನೆ ಕಾರಲ್ಲಿ ಕೂತಿದ್ದೆವು. ಆದರೆ, ಹತ್ತಿರ ಹೋದಾಗಲೇ ಗೊತ್ತಾಗಿದ್ದು, ರಸ್ತೆಯ ಮಧ್ಯದಲ್ಲೇ ನಾಯಿಯೊಂದು ಮಲಗಿದೆ ಎಂದು. ಅದಕ್ಕೆ ಗಾಯವಾಗಿತ್ತು. ಏಳಲೂ ಆಗುತ್ತಿರಲಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಅದು ರಸ್ತೆ ಮಧ್ಯದಲ್ಲೇ ಮಲಗಿ ಬಿಟ್ಟಿತು. ಪರಿಸ್ಥಿತಿ ಏನೆಂದು ಅರ್ತವಾಗುತ್ತಿರುವ ಕ್ಷಣದಲ್ಲೇ ನಾಲ್ಕೈದು ಮಂದಿ ಬೈಕ್‌ ಸವಾರ ಯುವಕರು ರಸ್ತೆ ಬದಿಯಲ್ಲಿ ಬೈಕ್‌ ನಿಲ್ಲಿಸಿ ನಾಯಿಯನ್ನು ಅಲ್ಲಿಂದ ಎತ್ತಿದರು.
....... ಇದು ಎರಡು ಮುಖ.

Wednesday, July 2, 2008

ಹತ್ನಿಮಿಷ ಇಳಿದ್ರೆ ತಲೆ ಮೇಲೇ ನೀರು...!

ಎಲೆಕ್ಷನ್‌ ಸಮಯದ ಬಿಡುವಿರದ ಕೆಲಸ ಮುಗಿಸಿದ ಮೇಲೆ ಎಲ್ಲ ಮರೆತು ಬೆಟ್ಟ ಹತ್ತಲು ಮೊನ್ನೆ ಮೊನ್ನೆ ಅನಿರೀಕ್ಷಿತವಾಗಿ ಸಮಯ ದೊರೆಯಿತು. ಆಗ ಹೋಗಿದ್ದು ಚಾಮರಾಜನಗರದ ಹಿಮಗಿರಿಗಾದರೂ, ಪ್ರತಿ ಬೆಟ್ಟ ಹತ್ತುವಾಗಲೂ ನನ್ನ ನೆನಪಿನ ಕಟ್ಟೆಗೆ ದಸಕ್ಕೆಂದು ಬಂದು ಬೀಳೋದು ಅದೇ ಹಳೆಯ ಕಥೆ. ಅದ್ಯಾಕೋ ಅದನ್ನೇ ಬರೆಯೋಣ ಅನ್ನಿಸಿದ್ದಕ್ಕೆ ಈಗ ಆ ನೆನಪಿನ ಬೆನ್ನತ್ತಿ...
ಅದೊಂದು ದಿನ ನಾನು, ಪ್ರಿಯ ನಮ್ಮ ರೂಂಮೇಟ್‌ ಹಾಗೂ ಗೆಳತಿ ಶ್ರೀ ಮನೆಗೆ ಸಾಗರಕ್ಕೆ ಲಗ್ಗೆಯಿಟ್ಟಿದ್ದೆವು. ಇದು ನಾಲ್ಕೈದು ವರ್ಷದ ಹಿಂದಿನ ಮಾತು. ಆಗಿನ್ನೂ ದ್ವಿತೀಯ ಪದವಿ. ಆಗೆಲ್ಲಾ ಚಾರಣದ ಹುಚ್ಚು ಇನ್ನೂ ಹತ್ತಿರಲಿಲ್ಲ. ಎಲ್ಲೋ ಆಗೊಮ್ಮೆ ಈಗೊಮ್ಮೆ ನಮ್ಮ ಮನೆಗೆ ಒತ್ತಿಕೊಂಡಂತೆಯೇ ಇರುವ ಕಳಂಜಿಮಲೆಗೆ ಅಪ್ಪನ ಜತೆಗೆ ಹೋಗಿ ಅದೇ ಬಕಾಸುರನ ಗುಹೆಯನ್ನೇ ಕುತೂಹಲದಿಂದ ನೋಡುತ್ತಿದ್ದೆ. ಶ್ರೀ ಮನೆಯಲ್ಲಿ ಮಾರನೇ ದಿನವೇ ನಮ್ಮ ಪುಟ್ಟ ದಂಡು ಜೋಗಕ್ಕೆ ಹೊರಟಿತು. ನಾನು, ಶ್ರೀ, ಪ್ರಿಯ, ಶ್ರೀಯ ಅಮ್ಮ, ಜತೆಗೆ ಜೀಪಿನ ಪ್ರಕಾಶಣ್ಣ. ಬೆಳಗ್ಗೆ ಬೇಗನೇ ಹೊರಟಿದ್ದರಿಂದ ಮಧ್ಯಾಹ್ನ ೧೨ರ ಹೊತ್ತಿಗಾಗಲೇ ಜೋಗ ನೋಡಿಯಾಗಿತ್ತು. ಆಗ ಪ್ರಕಾಶಣ್ಣ ಒಂದು ಹೊಸ ಜಾಗದ ಬಗ್ಗೆ ಕುತೂಹಲ ಕೆರಳಿಸಿದ. ಪ್ರಕಾಶಣ್ಣ ಹೇಳಿದ್ದು ಇಷ್ಟೇ, ‘ಇಲ್ಲಿಂದ ಕೇವಲ ೧೫ ಕಿ.ಮೀ ದೂರದಲ್ಲಿ ಕೊಂಜವಳ್ಳಿ ಎಂಬಲ್ಲಿ ಜಲಪಾತ ಇದೆ. ಹತ್ತು ನಿಮಿಷ ಬೆಟ್ಟದಿಂದ ಇಳಿದ್ರೆ ನೀರು ತಲೆ ಮೇಲೇನೇ ಬೀಳುತ್ತೆ.’ ಎಲ್ಲದಕ್ಕೂ ಸೈ ಅನ್ನುವ ನಾವು ಇದಕ್ಕೂ ಒಕೆ ಅಂದೆವು.
೧೨.೩೦ರ ಹೊತ್ತಿಗಾಗಲೇ ನಾವು ಊಟ ಮುಗಿಸಿ ಕೊಂಜವಳ್ಳಿ ಕಡೆಗೆ ಹೊರಟಿದ್ದೆವು. ಸ್ವಲ್ಪ ದೂರ ಹೋದಾಗಲೇ ತಿಳೀತು ಇದು ಪ್ರಕಾಶಣ್ಣ ಹೇಳಿದಷ್ಟು ಸಮೀಪ ಇಲ್ಲ ಎಂದು. ಅಂತೂ ನಮ್ಮ ಜೀಪು ಸುಮಾರು ೨೫ ಕಿ.ಮೀ ದೂರದ ಕೊಂಜವಳ್ಳಿ (ಸಾಗರ- ಭಟ್ಕಳ ಹೆದ್ದಾರಿ) ತಲುಪಿತು. ಕೊಂಜವಳ್ಳಿಯಿಂದ ಐದಾರು ಕಿ.ಮೀ ನಿರ್ಜನ ಪ್ರದೇಶದಲ್ಲಿ ಮುಂದೆ ಹೋದಾಗ ಹೊಳೆ ಅಡ್ಡಲಾಗಿತ್ತು. ಮುಂದೆ ಜೀಪು ಸಾಗಲ್ಲ ಅಂತ ಗೊತ್ತಾದಾಗ ನಡೆಯಲು ಶುರು ಮಾಡಿದೆವು. ಆಗಲೇ ಕಾಡಿನ ಮಧ್ಯದ ಕಿರು ರಸ್ತೆಯುದ್ದಕ್ಕೂ ತಣ್ಣಗೆ ಮಲಗಿದ್ದ ಇಂಬಳಗಳು ಕತ್ತೆತ್ತಿ ಬಳುಕುತ್ತಾ ನಮ್ಮ ಕಾಲಿಗೆ ತಲೆಯಾನಿಸಲು ಶುರು ಮಾಡಿದವು.
ವಿಚಿತ್ರವೆಂದರೆ, ನಾವು ಇವಕ್ಕೆಲ್ಲ ತಯಾರಾಗೇ ಬಂದಿರಲಿಲ್ಲ. ಇಂಬಳದ ಜಗತ್ತೂ ನನಗೆ ಹೊಸದು. ಪಿಯುಸಿಯಲ್ಲಿ ಬಯಾಲಜಿ ಪ್ರಾಕ್ಟಿಕಲ್‌ ಮಾಡುವಾಗ ಮಾತ್ರ ಇಂಬಳವನ್ನು ದೂರದಿಂದಲೇ ನೋಡಿದ್ದೆ. ಇಂಬಳ ನೋಡಿ ಭಯ ಬೀಳದಂಥ ಪುಣ್ಯಾತ್ಮರು ನಮ್ಮ ಗುಂಪಿನಲ್ಲಿ ಇರಲಿಲ್ಲ. ಇಂತಿಪ್ಪ ನಮ್ಮ ತಂಡ ಸುಮಾರು ಎರಡು ಕಿ.ಮೀ ನಡೆಯುವಷ್ಟರಲ್ಲಿ ಎಲ್ಲರ ಕಾಲುಗಳಲ್ಲೂ ಇಂಬಳಗಳು ತಮ್ಮ ಸಾಮ್ರಾಜ್ಯ ಸ್ಥಾಪಿಸಿದ್ದವು. ಅಂತೂ ಇಂತೂ ಒಂದೆರಡು ಮನೆಗಳಿದ್ದ ಆ ಪ್ರದೇಶಕ್ಕೆ ತಲುಪಿ ಪ್ರಕಾಶಣ್ಣ ಹೇಳಿದ ತಲೆ ಮೇಲೆ ನೀರು ಬೀಳುವ ಜಲಪಾತದ ಹಾದಿ ಹಿಡಿದೆವು. ನಂತರ ಶುರುವಾಯಿತು ಇಳಿಯುವ ಹಾದಿ.
‘ಕೇವಲ ಹತ್ತೇ ನಿಮಿಷ. ಬೇರು ಹಿಡಿದು ಇಳಿದ್ರೆ ಮುಗೀತು, ಜಲಪಾತದ ನೀರು ನೇರ ತಲೆ ಮೇಲೆ’ ಎಂದಿದ್ದ ಪ್ರಕಾಶಣ್ಣನ ಮಾತು ಸುಳ್ಳು ಅಂತ ಗೊತ್ತಾಗಲು ಹೆಚ್ಚು ಹೊತ್ತು ಬೇಕಿರಲಿಲ್ಲ. ಮುಕ್ಕಾಲು ಗಂಟೆ ಇಳಿದ್ರೂ ಜಲಪಾತದ ಒಂದು ಹನಿಯೂ ನಮ್ಮ ತಲೆ ಮೇಲೆ ಬೀಳಲಿಲ್ಲ! ಬೆವರಹನಿ ಮಾತ್ರ ಧಾರೆದಾರೆಯಾಗಿ ಇಳಿಯುತ್ತಿತ್ತು. ಗಂಟೆ ಆಗಲೇ ನಾಲ್ಕು ತೋರಿಸುತ್ತಿತ್ತು. ಶ್ರೀಯ ಅಮ್ಮನಿಗೆ ಸಣ್ಣಗೆ ಭಯವಾಗಲು ಶುರುವಾಗಿತ್ತು. ಕಾಲಲ್ಲಿದ್ದ ಚಪ್ಪಲಿ ಕೈಗೆ ಬಂದಿತ್ತು. ಆಮೇಲೆ ಆ ಚಪ್ಪಲಿಯೂ ಅಲ್ಲೇ ಉಳೀತು. ನಾಲ್ಕೂ ಕಾಲಿನಲ್ಲಿ ಹಿಮ್ಮುಖವಾಗಿ ಬೇರುಗಳನ್ನು ಹಿಡಿಯುತ್ತಾ ಇಳಿದ ನಮಗೆ ಜಲಪಾತ ಮರಗಳೆಡೆಯಿಂದ ಗೋಚರಿಸುವಷ್ಟೇ ಸ್ಪಷ್ಟವಾಗಿ ಕೇಳಿಸುತ್ತಲೂ ಇತ್ತು. ಆದರೆ ಅಲ್ಲಿಗೆ ಹೋಗಲು ಬೇರು ಮಾತ್ರ ಅಲ್ಲ. ಹಗ್ಗವೇ ವೇಕಾಗಿತ್ತು. ಬಾವಿಗಿಳಿಯುವುದಕ್ಕೂ ಅಲ್ಲಿಗೆ ಇಳಿಯುವುದಕ್ಕೂ ಯಾವುದೇ ವ್ಯತ್ಯಾಸ ನಮಗೆ ಕಾಣಲಿಲ್ಲ. ಆದರೂ, ನಾನು, ಶ್ರೀ, ಪ್ರಿಯ ಇಳಿಯಹೊರಟೆವು. ಸೀರೆ ಉಟ್ಟಿದ್ದ ಶ್ರೀಯ ಅಮ್ಮ ಅಲ್ಲೇ ನಿಲ್ಲಬೇಕಾಯ್ತು. ಹತ್ತು ನಿಮಿಷ ಹಾಗೆ ನಾವು ಇಳಿದಾಗ ನೋಡಿದ್ದು ಮಾತ್ರ ಮರೆಯಲಾಗದ ದೃಶ್ಯ. ಆ ಜೋಗವೂ ಇದರ ಮುಂದೆ ಸಪ್ಪೆ ಎನಿಸುತ್ತಿತ್ತು. ಸುಳ್ಳು ಹೇಳಿ ಕರಕೊಂಡು ಬಂದ ಪ್ರಕಾಶಣ್ಣಗೆ ಥ್ಯಾಂಕ್ಸೂ ಹೇಳದೆ ನೀರಲ್ಲಿ ಮನಸೋ ಇಚ್ಚೆ ಕುಣಿದೆವು. ಪ್ರಕಾಶಣ್ಣ ಹೇಳಿದಂತೆ ಜಲಪಾತದಿಂದ ಎಷ್ಟು ದೂರ ನಿಂತರೂ ತಲೆ ಮೇಲೆ ನೀರು ಬೀಳುತ್ತಿತ್ತು ಅನ್ನೋದು ಮಾತ್ರ ಸತ್ಯ.
ಆಗ ಗಂಟೆ ಐದು ದಾಟಿ ಹೊತ್ತಾಗಿತ್ತು. ಮನಸೇ ಇಲ್ಲದಿದ್ದರೂ ಹತ್ತಲು ಶುರುಮಾಡಿದೆವು. ಶ್ರೀಯ ಅಮ್ಮನ ತಲೆಗಂತೂ ನೀರು ಬೀಳುವ ಭಾಗ್ಯ ದೊರೆಯಲಿಲ್ಲ. ಆದರೂ, ಇಳಿದುದಕ್ಕಿಂತಲೂ ವೇಗವಾಗಿ ಸುಲಭವಾಗೇ ಮೇಲೆ ಹತ್ತಿ ಆರುವರೆಯ ಹೊತ್ತಿಗೆ ಮೇಲೆ ತಲುಪಿದ್ದೆವು. ಇಳಿಯುವಾಗ ಏನೇನೂ ಮಾಹಿತಿ ತಿಳಿಯದ ಎಡಬಿಡಂಗಿಗಳು ನಾವು. ಅಲ್ಲೇ ಇದ್ದ ಮನೆಯಲ್ಲೂ ಮಾಹಿತಿ ಕೇಳದೆ ಹಾಗೇ ಬಂದಿದ್ದೆವು. ಆಮೇಲೆ ವಿಚಾರಿಸಿದ್ರೆ ಗೊತ್ತಾಯ್ತು, ಇದಕ್ಕೆ ಕೆಪ್ಪಜೋಗ ಅಂತ ಕರೀತಾರಂತೆ. ದಬ್ಬೆ ಅಂತಾನೂ ಕರೀತಾರಂತೆ. ಆ ಜೋಗಕ್ಕಿಂತನೂ ಇದು ಎತ್ತರವಂತೆ. ಆದರೆ, ನನಗ ಮಾತ್ರ ಹಾಗನಿಸಿರಲಿಲ್ಲ. ಎತ್ತರದಲ್ಲಿ ಜೋಗಕ್ಕೆ ತೀರಾ ಸಮೀಪವಿದೆ ಅಂತ ಅನ್ನಿಸಿದ್ರೂ, ಜೋಗಕ್ಕಿಂತ ಮುದ್ದಾಗಿದೆ ಈ ಕೆಪ್ಪಜೋಗ. ರಾತ್ರಿಯಾದರೆ, ಕಾಡುಪ್ರಾಣಿಗಳ ಭಯವಿದೆಯಂತೆ. ಚಾರಣಕ್ಕೆ ಬಹಳ ಮಂದಿ ಇಲ್ಲಿ ಬರೋದಿಲ್ವಂತೆ. ಆ ಮನೆಯಲ್ಲಿ ಹೀಗೆ ಅಂತೆ ಕಂತೆ ಕೇಳುತ್ತಾ ತಣ್ಣನೆ ನೀರು ಕುಡಿದು ಮತ್ತೆ ಮನೆಕಡೆ ಹೊರಟೆವು. ಶ್ರೀಯ ಅಮ್ಮ ಮಾತ್ರ ದಾರಿಯುದ್ದಕ್ಕೂ ಪ್ರಕಾಶಣ್ಣನ ಈ ಸಾಹಸಕ್ಕೆ ಚೆನ್ನಾಗಿ ಮಂಗಳಾರತಿ ಎತ್ತಿದರೂ, ನಮ್ಮ ತಂಡದ ಚಾರಣ ಪೂಜೆ ಮಾತ್ರ ಅಲ್ಲಿಂದಲೇ ಆರಂಭವಾಯ್ತು. ಈಗಲೂ ಆಗೊಮ್ಮೆ ಈಗೊಮ್ಮೆ.. ಹೀಗೆಯೇ...