Friday, November 16, 2012

ಅಪ್ಪನಿಗಿಂದು ಅರುವತ್ತು..!

''ಒಂದಾನೊಂದು ಊರಿಲಿ ಒಂದು ಅಜ್ಜಿ ಇತ್ತಡ್ಡ''
''ಹುಂ''
''ಆ ಅಜ್ಜಿಗೆ ಮೂರು ಗೆಜ್ಜೆ ಇತ್ತಡ್ಡ''
''ಹುಂ''
''ಎಷ್ಟು ಗೆಜ್ಜೆ ಇತ್ತಡ್ಡ? ಹೇಳು ನೋಡುವಾ''
''ಮೂರು ಗೆಜ್ಜೆ''
''ನೀನು ಸರಿ ಕಥೆ ಕೇಳ್ತಾ ಇಲ್ಲೆ, ಆನು ಹೇಳ್ತಿಲ್ಲೆ''
''ನಿಂಗ ಹೇಳಿದ್ದು ಮೂರು ಹೇಳಿಯೇ. ಆನು ಕೇಳ್ತಾ ಇದ್ದೆ''
''ಸರಿ, ಶುರುವಿಂದ ಹೇಳ್ತೆ, ಕೇಳು''
''ಹುಂ, ಸರಿ''
''ಒಂದಾನೊಂದು ಊರಿಲಿ ಒಂದು ಅಜ್ಜಿ ಇತ್ತಡ್ದ''
 ''ಹುಂ''
''ಆ ಅಜ್ಜಿಗೆ ಮೂರು ಗೆಜ್ಜೆ ಇತ್ತಡ್ಡ. ಎಷ್ಟು ಗೆಜ್ಜೆ ಇತ್ತಡ್ಡ?''
''ಮೂರು ಗೆಜ್ಜೆ''
''ಎಲ ಕತೆಯೇ, ನೀನು ಸರಿ ಕಥೆ ಕೇಳಿದ್ದೇ ಇಲ್ಲೆ''
''ಇಲ್ಲೆ ಅಪ್ಪಾ, ಆನು ಕೇಳಿದ್ದೆ. ನಿಂಗ ಹೇಳಿದ್ದು ಮೂರು ಗೆಜ್ಜೆ ಹೇಳಿಯೇ. ಅದು ಸರಿ, ಮೂರು ಗೆಜ್ಜೆ ಎಂತಕ್ಕೆ ಅಪ್ಪಾ? ಎರಡು ಸಾಲದಾ?''
''ಅದಕ್ಕೇ ಹೇಳಿದ್ದು, ನೀನು ಸರಿ ಕಥೆ ಕೇಳ್ತಾ ಇಲ್ಲೆ ಹೇಳಿ, ಸರಿ ಮತ್ತೆ ಶುರುವಿಂದ ಹೇಳ್ತೆ, ಒಂದಾನೊಂದು ಊರಿಲಿ.....''
''ಅಯ್ಯೋ ಅಪ್ಪಾ, ಒಂದರಿ ನಿಲ್ಸುತ್ತಿರಾ ನಿಂಗಳ ಕಥೆಯ, ಎನಗೆ ನಿಂಗಳ ಕಥೆಯೂ ಬೇಡ ಎಂತದೂ ಬೇಡ''
ನಾನು ಸಿಟ್ಟು ಬಂದು ಓಡುತ್ತಿದ್ದೆ. ಅಪ್ಪ ಜೋರಾಗಿ ಬಾಯ್ತೆರೆದು ನಗುತ್ತಿದ್ದರು.

ಇವೆಲ್ಲ ನಿನ್ನೆ ಮೊನ್ನೆ ನಡೆದಂತಿದೆ. ಇನ್ನೂ ಆ ಚಿತ್ರಗಳು ಮಾಸಿಲ್ಲ. ಅಪ್ಪನ ತರಲೆಗಳೂ ಹಾಗೇ ಇವೆ. ತಲೆಯ ಕೆಂಚುಗೂದಲು ಇನ್ನೂ ಬಿಳಿಯಾಗಿಲ್ಲ, ಮೀಸೆಯಲ್ಲಿ ಅಲ್ಲಲ್ಲಿ ಬೆಳ್ಳಿರೇಖೆ. ಬಿಳಿ-ಕಪ್ಪಿನ ಮೂಲ ಹುಡುಕೋದು ಸಾಧ್ಯವೇ ಇಲ್ಲವೆಂಬಂತೆ ನೀಟಾಗಿ ಶೇವ್ ಮಾಡಿದ ಗಡ್ಡ; ಮೀಸೆಯಂಚಿನಲ್ಲಿ ಮಾತ್ರ ಅದೇ ಹಳೆಯ ತುಂಟ ತರಲೆ ನಗು. ಆದರೆ, ಅವರಿಗಿಂದಿಗೆ ಸರಿಯಾಗಿ ಅರುವತ್ತು!

ನನ್ನ ಅಪ್ಪ..!

ಒಂದು ಪುಟ್ಟ ಮರದ ರೀಪಿಗೆ ಬಣ್ಣ ಬಳಿದು ಅದರ ಮುಂತುದಿಗೆ ಕಣ್ಣು ಬಾಯಿಗಳಂತೆ ಹೆಡ್ ಲೈಟಿನ ಚಿತ್ರ ಬಿಡಿಸಿ ಬದಿಗಳುದ್ದಕ್ಕೂ ಕಿಟಕಿಯಂತೆ ಬರೆದು, ಕೆಳಗೆ ಎರಡು ತೂತು ಕೊರೆದು ಅದಕ್ಕೆ ಕುಟ್ಟಿಕೂರ ಪೌಡರ್ ಡಬ್ಬಿಯ ಮುಚ್ಚಳವನ್ನು ಮುರಿದ ಕೊಡೆ ಕಡ್ಡಿಗೆ ಜೋಡಿಸಿ ಚಕ್ರ ಮಾಡಿ ಬಸ್ಸು ಮಾಡಿ, ಎದುರಿಗೆ ಒಂದು ಹಗ್ಗ ಕಟ್ಟಿ ನನ್ನ ಪುಟ್ಟ ಕೈಗಿತ್ತು ನಾನು ಅದರಲ್ಲೇ ಆಡಿ ದೊಡ್ದವಳಾಗುವುದನ್ನು ಸಂಭ್ರಮದಿಂದ ನೋಡಿದ ಅಪ್ಪ! ಅದ್ಯಾವುದೋ ತಾಳೆಮರದ ಗೊರಟಿಗೆ ಕಣ್ಣು ಮೂಗು ಬಾಯಿಗಳನ್ನು ಬಿಡಿಸಿ ದೊಡ್ಡ ಮೀಸೆ ಇಟ್ಟು,  ಆ ಮುಖಕ್ಕೆ ಜೋಡುವಂತೆ ಹಳೇ ಬಾಟಲಿ ಜೋಡಿಸಿ ಹಳೇ ಬಟ್ಟೆ ಸುತ್ತಿ ಕೈಕಾಲು ಮಾಡಿ ಅಮ್ಮ ನಮಗೆ ಹೊಲಿದ ಅಂಗಿಗಳಲ್ಲಿ ಉಳಿದ ಚೂರು ಪಾರು ಬಣ್ಣದ ಬಟ್ಟೆಗಳಿಗೆ ಜರತಾರಿ ಜೋಡಿಸಿ ನೆರಿಗೆಗಳ ಅಂಗಿ ಮಾಡಿ, ರಟ್ಟಿನ ಕಿರೀಟ ಮಾಡಿ ಥೇಟ್ ಈಗಷ್ಟೇ ರಂಗಸ್ಥಳಕ್ಕೆ ಇಳಿದ ಬಣ್ಣದ ವೇಷವನ್ನೂ ನಾಚಿಸುವಂತೆ ಯಕ್ಷಗಾನ ಕಲಾವಿದನನ್ನು ಮನೆಯಲ್ಲೇ ರೂಪಿಸಿ ನಮ್ಮ ಪುಟ್ಟ ಕಣ್ಣುಗಳಲ್ಲಿ ಆಗಲೇ ಬೆರಗು ಮೂಡಿಸಿದ ನಮಗೂ ಅದೇ ರಕ್ತ ಹಂಚಿದ ಅಪ್ಪ! ಬೇಸಿಗೆ ರಜೆ ಬಂತೆಂದರೆ ಹಳೇ ಬಾಲಮಂಗಳ, ಚಂಪಕ, ಚಂದಮಾಮಗಳನ್ನೆಲ್ಲ ಮತ್ತೆ ಗುಡ್ದೆಹಾಕಿ ಓದಿದ್ದನ್ನೇ ಮತ್ತೆ ಮತ್ತೆ ಓದುವಾಗ 'ಅದೇ ಡಿಂಗ, ಫಕ್ರುಗಳನ್ನೇ ಯಾಕೆ ಬಾಯಿಪಾಠ ಮಾಡ್ತಿ?.. ಇದನ್ನೂ ಓದು' ಎಂದು ಒಳ್ಳೊಳ್ಳೆ ಪುಸ್ತಕಗಳನ್ನು ತಂದು ಕೊಟ್ಟು ನನಗೆ ಓದಿನ ರುಚಿ ಹತ್ತಿಸಿದ ಅಪ್ಪ! ನನ್ನ ಹಾಗೂ ಅಕ್ಕನ ಏಕಪಾತ್ರಾಭಿನಯ ಸ್ಪರ್ಧೆಗಳಿಗೆ ತಾನೇ ಪ್ರಸಂಗಗಳನ್ನು ಬರೆದು ಕೊಟ್ಟು ಅಭಿನಯಿಸಿ ತೋರಿಸಿ ಕಲಿಸಿಕೊಟ್ಟ ಅಪ್ಪ! ಛದ್ಮವೇಷ, ನಾಟಕ ಏನೇ ಇರಲಿ ಭಿನ್ನವಾದ ಐಡಿಯಾಗಳನ್ನು ಕೊಟ್ಟು ನಮ್ಮಿಬ್ಬರ ಕೈಯಲ್ಲೂ ಬಹುಮಾನ ಗೆಲ್ಲಿಸಿದ ಅಪ್ಪ! ಆ ಪುಟ್ಟ ಬಾಡಿಗೆ ಮನೆಯ ಕತ್ತಲ ರಾತ್ರಿಗಳಲ್ಲಿ ಗೋಡೆಯ ಮೇಲೆ ಬಿದ್ದ ಸೀಮೆ ಎಣ್ಣೆ ಬುಡ್ಡಿಯ ಮಂದ ಬೆಳಕಿನಲ್ಲಿ ವಿಧವಿಧ ಪ್ರಾಣಿಪಕ್ಷಿ ಸಂಕುಲವನ್ನು ತನ್ನ ಕೈಯ ನೆರಳಿನಲ್ಲಿ ಮಾಡಿ ತೋರಿಸಿ ಹಿನ್ನೆಲೆಯಾಗಿ ತಾನೇ ಆ ಪ್ರಾಣಿಪಕ್ಷಿಗಳ ಸ್ವರವನ್ನು ಅನುಕರಣೆ ಮಾಡಿ ಆ ದಿನಗಳನ್ನು ಪ್ರಜ್ವಲವಾಗಿಸಿದ ಅಪ್ಪ! ಅಜಕ್ಕಳದ ಕಾಡಿನಲ್ಲಿ ನಡೆವಾಗ ಹೆಗಲ ಮೇಲೆ ಹೊತ್ತು, ತಮ್ಮ ಕಾಲದ ಕಾಡಿನ ಕೌತುಕಕ ಕಥೆಗಳನ್ನು ಹೇಳುತ್ತಾ ಕಾಡಿನ ಬಗೆಗೆ ಅಚ್ಚರಿ-ಆಕರ್ಷಣೆಯನ್ನು ಮೂಡಿಸಿದ ಅಪ್ಪ! ತಾನೇ ಮಕ್ಕಳ ಪದ್ಯಗಳನ್ನು ಬರೆದು ಅದಕ್ಕೆ ರಾಗ ಜೋಡಿಸಿ ನಮ್ಮ ಕೈಯಲ್ಲಿ ಮನೆಯಲ್ಲಿ ಹಾಡಿಸಿ ಖುಷಿಪಟ್ಟು ನಮ್ಮ ಚಿಕ್ಕಂದಿನ ಹಾಡಿನ ಸರಕಿಗೆ ಇನ್ನಷ್ಟೂ ಮತ್ತಷ್ಟೂ ಸೇರಿಸಿದ ಅಪ್ಪ!

ಈಗ, ಥೇಟ್ ಥೇಟ್ ಅದೇ ಅಪ್ಪ, ಅಲ್ಲಲ್ಲ ಅಜ್ಜ! ಅಕ್ಕನ ಮಗಳ ಬೇಸಿಗೆ ರಜೆಯನ್ನು ಯಾವ ಬೇಸಿಗೆ ಶಿಬಿರಕ್ಕೂ ಕಮ್ಮಿಯಾಗದಂತೆ ಕಲರ್ ಫುಲ್ ಆಗಿಸುವ ಅದೇ ಹಳೆಯ ನಮ್ಮ ಅಪ್ಪ! ಒಟ್ಟಾರೆ ಅಪ್ಪನೆಂದರೆ ಈಗಲೂ ಅಚ್ಚರಿಯ ಕಣಜ!

ಇಂದಿಗೆ ಅಪ್ಪನಿಗೆ ಅರುವತ್ತು ತುಂಬಿತು ಎಂದರೆ ನನಗೇ ಆಶ್ಚರ್ಯ! ಈಗಲೂ ಥೇಟ್ ಅಂದಿನಂತೆ, ತಾನೇ ರಟ್ಟು/ಮರದ ತುಂಡಿನಿಂದ ಕತ್ತಿ ಗುರಾಣಿ ಮಾಡಿ ಕೊಟ್ಟು ಅಕ್ಕನ ಮಗಳೊಂದಿಗೆ ಯುದ್ಧ ಮಾಡುತ್ತಾ, ಅದೇ ಅಜ್ಜಿ ಕಥೆ ಹೇಳುತ್ತಾ, ಸ್ಕೂಟರಿನಲ್ಲಿ ಅವಳನ್ನು ಜಾತ್ರೆ, ಹುಲಿವೇಷ, ಆಟಿಕಳಂಜ ಎಂದೆಲ್ಲ ತೋರಿಸುತ್ತಾ ಬೆಂಗಳೂರಿನ ಕಾಂಕ್ರೀಟು ಕಾಡಿನಲ್ಲೂ ಅವಳ ಬಾಲ್ಯಕ್ಕೆ ಹಳ್ಳಿಯ ಸೊಗಡಿನ ಜೀವಂತಿಕೆಯನ್ನು ನೀಡುತ್ತಿರುವ ಅಪ್ಪನ ಈ ಜೀವನಪ್ರೀತಿಗೆ ಏನೆನ್ನಲಿ?

ಕೊನೆಯಲ್ಲಿ,

ಅಂದು ನಾನು ಒಂದನೇ ಕ್ಲಾಸಿನಲ್ಲಿರುವಾಗ ಅಪ್ಪನೇ ಬರೆದ ಹಲವು ಮಕ್ಕಳ ಕವನಗಳಲ್ಲಿ, ನನಗೆ ಅಂದಿಗೂ ಇಂದಿಗೂ ಇಷ್ಟವಾದ ಒಂದು ಕವನ ಈ ಹೊತ್ತಿನಲ್ಲಿ ಅಪ್ಪನಿಗಾಗಿ,

ಪೋಕರಿ ಕಿಟ್ಟ

ಸಂಜೆಯ ಹೊತ್ತಿಗೆ ಕಾಫಿಯ ಕುಡಿದು
ಪೇಟೆಗೆ ಹೋದನು ಪೋಕರಿ ಕಿಟ್ಟ

ಸಿಡಿಯುವ ಗುಂಡನು ಕೊಂಡನು ಕಿಟ್ಟ
ಹೊಳೆಯಿತು ಯೋಚನೆ ಬಲು ಕೆಟ್ಟ

ಮೆಲ್ಲಗೆ ಬೀದಿಯಲಿ ನಡೆಯುತ್ತ
ಇದ್ದಿತು ಬಳಿಯಲಿ ರಿಕ್ಷವು ಒಂದು

ರಿಕ್ಷದ ಚಕ್ರಕೆ ಸಿಡಿಗುಂಡಿಟ್ಟು
ಮೆಲ್ಲಗೆ ಅಡಗಿದ ಕಿರುಪೊದೆಯಲ್ಲಿ

ಚಾಲಕ ಬಂದು ನಡೆಸುತ ರಿಕ್ಷವ
ಹೊಟ್ಟಿತು ಕೆಳಗೆ ಸಿಡಿ ಗುಂಡೊಂದು

ಚಾಲಕ ಹೆದರಿ ಕೈಯನು ಬಿಟ್ಟು
ಹೊರಳಿತು ರಿಕ್ಷವು ಹೊಂಡದಲಿ

ಎದ್ದನು ಕೂಡಲೆ ಪೋಕರಿ ಕಿಟ್ಟ
ಮನೆಗೆ ಬೇಗನೆ ಕಾಲು ಕೊಟ್ಟ

ಚಾಪೆಗೆ ಕೂಡಲೆ ಕೈಕೊಟ್ಟ
ನಿದ್ದೆಯ ಹೊಡೆಯುತ ಬಾಯಿ ಬಿಟ್ಟ

Thursday, October 11, 2012

ಪಳೆಯುಳಿಕೆಗಳ ಸಾಗರ ಲಾಂಗ್ಝಾ


ಆ ಇಬ್ಬರು ಮಹಿಳೆಯರು ತಮ್ಮ ಮಡಿಲಲ್ಲಿ ಐದಾರು ಬಸವನಹುಳುವಿನಂಥ ರಚನೆಯಿದ್ದ ಪಳೆಯುಳಿಕೆಯನ್ನು (ಫಾಸಿಲ್) ತಂದು ಆ ಬೌದ್ಧ ವಿಹಾರದ ಗೋಡೆಯ ಬಳಿ ಹರವಿದರು. ಅವರ ಮುಖದಲ್ಲಿ ಆವತ್ತಿಗೆ ಎಷ್ಟು ದುಡ್ಡು ಸಿಗಬಹುದೆಂಬ ಆಶಾಭಾವನೆಯಿತ್ತು. ನನಗೋ, ಒಬ್ಬಾಕೆಯ ಮುಖದ ನಿರಿಗೆಗಳಲ್ಲಿ ಇಣುಕುತ್ತಿದ್ದ ಮುಗ್ಧತೆಯನ್ನು ನನ್ನ ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ತವಕ. ಕ್ಯಾಮರಾಗಳ ಕ್ಲಿಕ್ಕುಗಳು ಇತ್ತೀಚೆಗೆ ಸಾಮಾನ್ಯವಾದರೂ ಆಕೆಯ ಮೊಗದಲ್ಲಿ ನಾಚಿಕೆ.

ಅದು ಲಾಂಗ್ಝಾ. ಹಿಮಾಲಯದ ತಪ್ಪಲಿನ ಪುಟ್ಟ ಹಳ್ಳಿ. ಹಿಮಾಚಲ ಪ್ರದೇಶದ ಮೂಲೆಯ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯ ಹಳ್ಳಿಯಿದು. ಕೇವಲ 148 ಮಂದಿ ಜನಸಂಖ್ಯೆ ಇರುವ, ಹೆಚ್ಚೆಂದರೆ ಹತ್ತಿಪ್ಪತ್ತು ಸಂಸಾರಗಳಿರುವ ಹಳ್ಳಿಯೆಂದರೆ ತೀರಾ ಹಳ್ಳಿ. ಬೆನ್ನಿಗೆ ವರ್ಷಪೂರ್ತಿ ಹಿಮದಿಂದ ಆವೃತವಾಗಿರುವ ಚೌ ಚೌ ಕಂಗ್ ನೀಲ್ಡಾ ಹಾಗೂ ಶಿಲಾ ಬೆಟ್ಟಗಳ ಕಣ್ಗಾವಲು. ಜೊತೆಗೆ, ಕಾಪಾಡಲು ಆಕಾಶಕ್ಕೇ ಮೊಗವೆತ್ತಿ ನಿಂತ ವರ್ಣಮಯ 22 ಅಡಿ ಎತ್ತರದ ಬೃಹತ್ ಮೆಡಿಸಿನ್ ಬುದ್ಧನ ವಿಗ್ರಹ. ಸದಾ ಹಬ್ಬದ ಸಂಕೇತದಂತೆ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುವ ಬಣ್ಣ ಬಣ್ಣದ ಪತಾಕೆಗಳ ಮೆರುಗು.

ನಮ್ಮ 10 ದಿನಗಳ ಸ್ಪಿತಿ ಕಣಿವೆ ಪ್ರವಾಸದಲ್ಲಿ, ಹೊತ್ತಿಗೊಮ್ಮೆ ಬಣ್ಣ ಬದಲಾಯಿಸುವ ಮೈನವಿರೇಳಿಸುವ ಚಂದ್ರತಾಲ್ ಸರೋವರದ ನಡುಗುವ ಚಳಿಯ ರಾತ್ರಿ, ಕೀ, ಢಂಕರ್, ಟಾಬೋ ಬೌದ್ಧ ವಿಹಾರಗಳು, ಪಿನ್ ಕಣಿವೆಯ ಬೌದ್ಧ ಉತ್ಸವಗಳಿಗಿಂತಲೂ ನನ್ನನ್ನು ತೀವ್ರವಾಗಿ ಕಾಡಿದ್ದು, ಲಾಂಗ್ಝಾವೆಂಬ ಈ ಪುಟ್ಟ ಹಳ್ಳಿ. ಆ ಹಳ್ಳಿಯ ಜನರ ಮುಖದ ನಿರಿಗೆಗಳಲ್ಲಿ ಕಾಣುವ ಅಕ್ಕರೆ, ಜೀವನ ಪ್ರೀತಿ, ಬಿಸಿಲಿನ ಝಳಕ್ಕೆ ಸುಟ್ಟ ಎಳಸು ಚರ್ಮಗಳ ಪುಟ್ಟ ಮಕ್ಕಳ ದುಂಡು ಮುಖಗಳು, ಅಪರಿಚಿತರನ್ನು ಕಂಡಾಗ ಕೈಯಲ್ಲಿ ಫಾಸಿಲ್ ಹಿಡಿದು ಓಡೋಡಿ ಬಂದು ತೋರಿಸುವ ಮಕ್ಕಳು- ಮುದುಕಿಯರು...

ಸ್ಪಿತಿ ಕಣಿವೆಯ ಕಾಝಾ ಪಟ್ಟಣದಿಂದ ಈ ಹಳ್ಳಿಗೆ 10 ಕಿಮೀ ದೂರವಾದರೂ, ಪರ್ವತ ಶಿಖರಗಳನ್ನು ಸುತ್ತಿ ಬಳಸಿ ಕಿರಿದಾದ ದುರ್ಗಮ ರಸ್ತೆಯ ಮೂಲಕ ಅಲ್ಲಿಗೆ ತಲುಪಲು ಕನಿಷ್ಟ ಒಂದು ಗಂಟೆಯಾದರೂ ಬೇಕು. ಕಾಝಾದಿಂದ ಮೇಲೇರುತ್ತಿದ್ದಂತೆಯೇ ಸಾಲು ಬೆಟ್ಟಗಳ ನಡುವೆ ಬಣ್ಣದ ಚುಕ್ಕಿಯಂತೆ ಗೋಚರಿಸುವ ಬೃಹತ್ ಬುದ್ಧನ ವಿಗ್ರಹ ನಾವು ಕ್ರಮಿಸಬೇಕಾದ ದೂರವನ್ನು ಸಾರಿ ಹೇಳಿದಂತಿತ್ತು. ಗಂಟೆ ಐದಕ್ಕೇ ನೆತ್ತಿಯ ಮೇಲೆ ಸುಡುವಂಥ ಸೂರ್ಯನ ಪ್ರಖರ ಬೆಳಕು, ರಾತ್ರಿ ಗಂಟೆ ಎಂಟಾದರೂ ಮುಳುಗದ ಸೂರ್ಯ... ಹೀಗೆ ಸೂರ್ಯನೇ ದಿನವಿಡೀ ನೆತ್ತಿಯ ಮೇಲಿರುವುದರಿಂದಲೇ ಆಡುವ ಮಕ್ಕಳ ಕೆನ್ನೆ, ಮೂಗಿನಲ್ಲಿ ಕಿತ್ತು ಹೋದ ಚರ್ಮ ನೋಡುವಾಗ ಏನೋ ವೇದನೆ.

ಜೊತೆಗೇ ಇದ್ದ ಇನ್ನೊಬ್ಬಾಕೆ ನಮ್ಮನ್ನು ತನ್ನ ಮನೆಗೆ ಸ್ವಾಗತಿಸಿದಳು. ಬಣ್ಣಬಣ್ಣದ ಪತಾಕೆಗಳಿರುವ ದೂರದಿಂದ ನೋಡಿದರೆ ಬೆಂಕಿಪೊಟ್ಟಣಗಳಂಥ ಒಂದೇ ಥರದ ಈ ಮನೆಗಳು ಮೊದಲಿನಿಂದಲೂ ನನ್ನ ಕುತೂಹಲ ಕೆರಳಿಸಿದ್ದವು. ಹೊರಗಿನಿಂದ ದೊಡ್ಡ ಮನೆಯಂತೆ ಕಂಡರೂ ಒಳಗೆ ಹೋಗಲು ಪುಟ್ಟ ಗೂಡಿನಂಥ ಬಾಗಿಲು. ಬಾಗಿಲು ದಾಟಿ ಒಳ ಹೊಕ್ಕರೆ, ಮೇಲಕ್ಕೇರಲು ಏಣಿ. ನನಗೋ ಸಣ್ಣವಳಾಗಿದ್ದಾಗ ಕಾಗಕ್ಕ- ಗುಬ್ಬಕ್ಕನ ಕಥೆಗಳಲ್ಲಿ ನಾನೇ ಚಿತ್ರಿಸಿಕೊಂಡ ಮನೆಯೊಂದು ಹಠಾತ್ತನೆ ಪ್ರತ್ಯಕ್ಷವಾದಂತೆ ಪುಳಕಗೊಂಡೆ. ಏಣಿ ಹತ್ತಿ ಮೇಲಕ್ಕೇರಿದರೆ, ಆಕೆ ಆಗಲೇ ಚಹಾ ತಯಾರಿಸಲು ಆರಂಭಿಸಿದ್ದಳು. ನಮಗೆ ಅಲ್ಲೇ ಹಾಸಿದ್ದ ಬೆಚ್ಚನೆಯ ದಪ್ಪದ ನೆಲಹಾಸಿನ ಮೇಲೆ ಕೂರಲು ಹೇಳಿದಳು. ಅವಳ ಉಪಚಾರಕ್ಕೆ ಮಂತ್ರಮುಗ್ಧರಾದವರಂತೆ ನಾವು ನೋಡುತ್ತಲೇ ಇದ್ದೆವು. ಅಷ್ಟರಲ್ಲಿ ಟೀ ರೆಡಿ. ಅದೂ ದೊಡ್ಡ ದೊಡ್ಡ ಕಪ್ಪುಗಳಲ್ಲಿ! ಈಗೆಲ್ಲಾ ಬೈಟೂನಲ್ಲೇ ದಿನವಿಡೀ ಕಳೆದುಹೋಗುವ ನಮಗೆ ಮತ್ತೆ ನಮ್ಮೂರಿನ ಮಳೆಗಾಲದ ದಿನಗಳು ನೆನಪಾಗತೊಡಗಿತ್ತು.

ಟೀ ಕಪ್ಪು ಬಾಯಿಗಿಡುವಷ್ಟರಲ್ಲಿ, ನಮ್ಮ ಮುಂದೆ ‘ತಿರಿ’ ಇತ್ತು. ದಕ್ಷಿಣ ಭಾರತೀಯರಾದ ನಮಗೆ ದೋಸೆ-ಇಡ್ಲಿ ಹೇಗೆ ಬೆಳಗ್ಗಿನ ಆರಾಧ್ಯ ದೈವವೋ ಹಾಗೇ ಅವರಿಗೆ ತಿರಿ. ಅದು ಹೆಚ್ಚು ಕಡಿಮೆ ನಾನ್ ನಂತಿದೆ. ಆದರೆ ಅದಕ್ಕಿಂತಲೂ ಮೆತ್ತಗೆ. ಅಷ್ಟರಲ್ಲಿ ಆಟವಾಡಿ ಓಡಿಬಂದ ಆಕೆಯ ಮಕ್ಕಳೂ ಕೂಡಾ ನಮ್ಮ ಪಕ್ಕದಲ್ಲೇ ಕೂತು ಮೊಸರಿನಲ್ಲಿ ಅದ್ದಿ ಅದ್ದಿ ತಿರಿ ತಿನ್ನತೊಡಗಿದರು.

ತಿಂದಾದ ಮೇಲೆ ಆಕೆ ನಮ್ಮನ್ನು ತುಂಬು ಮೊಗದಿಂದ ಬೀಳ್ಕೊಟ್ಟಳು. ಹೊರ ಬಂದಾಗ ನೆತ್ತಿ ಸುಡುತ್ತಿತ್ತು. ಆಮೇಲೆ ನಮ್ಮ ಗೈಡ್ ತಶಿ ಮೂಲಕ ತಿಳಿಯಿತು, ಪ್ರತಿ ಮನೆಯ ಮೇಲಿರುವ ಬಣ್ಣದ ಪತಾಕೆಗಳೂ ಕೂಡಾ ಆ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆಂಬುದರ ಸಂಕೇತವಂತೆ. ಆರು ಬಣ್ಣದ ಬಾವುಟಗಳಿದ್ದರೆ, ಆ ಮನೆಯಲ್ಲಿ ಆರು ಮಂದಿಯಿದ್ದಾರೆಂದು ಅರ್ಥ. ಮನೆಯ ಪ್ರತಿ ಸದಸ್ಯನಿಗೂ ಒಂದೊಂದು ಬಣ್ಣ. ಇವೆಲ್ಲವನ್ನೂ ಬೌದ್ಧ ಗುರುಗಳು ಮನೆಯ ಯಜಮಾನನಿಗೆ ನೀಡುತ್ತಾರೆ. ಈ ಬಣ್ಣಗಳೆಂದರೆ ಅವರಿಗೆ ಅದೃಷ್ಟದ ಸಂಕೇತ.

ನಾವು ಸೀದಾ ಬೌದ್ಧ ವಿಹಾರದೊಳಗೆ ಹೋದೆವು. ಪುಟ್ಟ ಗೂಡಿನಂತಿದ್ದ ಆ ಬೌದ್ಧ ವಿಹಾರ ತನ್ನ ವಿಶಿಷ್ಟವಾದ ಬಣ್ಣಗಳಿಂದ ಬೇರೆಯವುಗಳಿಗಿಂತ ಭಿನ್ನವಾಗಿ ಕಾಣುತ್ತಿತ್ತು. ಲಾಂಗ್ಝಾ ಬೌದ್ಧ ವಿಹಾರ ಮೆಡಿಸಿನ್ ಬುದ್ಧನ ವಿಗ್ರಹದ ಪಕ್ಕದಲ್ಲೇ ಇದೆ. 22-25 ಅಡಿ ಎತ್ತರದ ಬುದ್ಧನ ವಿಗ್ರಹ ಕಾಝಾದ ಕಡೆಗಿನ ಕಣಿವೆಗಳನ್ನು ಎವೆಯಿಕ್ಕದೆ ದೃಷ್ಟಿಸುವಂತಿದೆ. ಬುದ್ಧನ ಎಡಗೈಯು ಧ್ಯಾನಮುದ್ರೆಯಲ್ಲಿದ್ದು, ಒಂದು ಬೋಗುಣಿ ತುಂಬಾ ಅಮೃತವನ್ನು ಹಿಡಿದಿರುವಂತೆ ಕೆತ್ತಲಾಗಿದೆ. ಪ್ರಪಂಚವಿಡೀ ಆರೋಗ್ಯದಿಂದಿರಲಿ ಎಂಬುದು ಇದರ ಒಳಾರ್ಥವಂತೆ. ಈ ಮೆಡಿಸಿನ್ ಬುದ್ಧನ ಬಳಿಯಲ್ಲಿ ಧ್ಯಾನ ಮಾಡಿದರೆ, ಮಾನಸಿಕ ದೈಹಿಕ ಆರೋಗ್ಯ ಪ್ರಾಪ್ತಿಯಾಗುವುದೆಂದು ನಂಬಿಕೆಯಿದೆ.

ಪಳೆಯುಳಿಕೆಗಳ ಸಾಗರ!: ಸಮುದ್ರಮಟ್ಟದಿಂದ 4,200 ಮೀಟರ್ (ಸುಮಾರು 14,000 ಅಡಿ) ಎತ್ತರದಲ್ಲಿರುವ ಲಾಂಗ್ಝಾ ಎಂಬ ಈ ಹಳ್ಳಿ ಒಂದು ವಿಚಿತ್ರವಾದ ಭೌಗೋಳಿಕ ಪ್ರದೇಶ. ಇಡೀ ಸ್ಪಿತಿ ಕಣಿವೆ ಪ್ರದೇಶದಲ್ಲಿಯೇ ಅತ್ಯಂತ ಸುಂದರವಾದದ್ದೂ ಕೂಡಾ. ಹಾಗೆ ನೋಡಿದರೆ ಈ ಪುಟ್ಟ ಹಳ್ಳಿಯೇ, ಇಡೀ ಹಿಮಾಲಯದ ಜೀವವಿಕಾಸಕ್ಕೊಂದು ಕಿಟಕಿಯಿದ್ದಂತೆ. ಭೂಗರ್ಭ ಶಾಸ್ತ್ರಜ್ಞರ ಪ್ರಕಾರ, ಮಿಲಿಯಗಟ್ಟಲೆ ವರುಷಗಳ ಹಿಂದೆ, ನಮ್ಮ ಭೂಮಿ ಎರಡೇ ಎರಡು ಬೃಹತ್ ಖಂಡಗಳನ್ನು ಹೊಂದಿದ್ದಾಗ, ಅವುಗಳ ಘರ್ಷಣೆಯಿಂದ ಹಿಮಾಲಯ ಪರ್ವತ ಶ್ರೇಣಿಯೇ ಉಗಮವಾದ ಕಥೆ ಬಹುತೇಕರಿಗೆ ತಿಳಿದಿರಬಹುದು. ಹೀಗೆ ಹಿಮಾಲಯ ಉಗಮವಾದ ಸಂದರ್ಭ, ಅದಕ್ಕೂ ಮೊದಲು ಸಾಗರದಡಿಯಲ್ಲಿದ್ದ ಭೂಭಾಗವೇ ಈ ಸುತ್ತಮುತ್ತಲ ಪ್ರದೇಶ. ಇಂತಹ ಸಂದರ್ಭ, ಇದ್ದಂತಹ ಜೀವಿಗಳೇ ಇಂದು ಪಳೆಯುಳಿಕೆಗಳಾಗಿವೆ. ಯಥೇಚ್ಛವಾಗಿ ಪಳೆಯುಳಿಕೆಗಳು ಕಂಡು ಬರುವ ಲಾಂಗ್ಝಾವೆಂಬ ಈ ಪುಟ್ಟ ಹಳ್ಳಿ, ನಾವು ಓದಿ-ಕೇಳಿ ಅರಿತುಕೊಂಡ ಜೀವವಿಕಾಸದ ಹಾದಿಗೊಂದು ಜ್ವಲಂತ ಸಾಕ್ಷಿಯೆಂಬಂತೆ ಕಂಡರೆ ಆಶ್ಚರ್ಯವಿಲ್ಲ. ಹಾಗಾಗಿಯೇ, ಇದು ಭೂಗರ್ಭಶಾಸ್ತ್ರ ವಿದ್ಯಾರ್ಥಿಗಳಿಗೂ ಸಂಶೋಧನಾಸಕ್ತರಿಗೂ ಸ್ವರ್ಗ. ಈ ಹಳ್ಳಿಯಲ್ಲಿ ಈಗಲೂ ಸಾಕಷ್ಟು ಪಳೆಯುಳಿಕೆಗಳು ಸಿಗುತ್ತಲೇ ಇರುತ್ತವೆ. ಬಸವನಹುಳು, ಆಮೆ... ಹೀಗೆ ಇನ್ನೇನೋ ಬಗೆಬಗೆಯ ಆಕಾರಗಳಲ್ಲಿ ಪಳೆಯುಳಿಕೆಗಳನ್ನು ಇಲ್ಲಿ ಕಾಣಬಹುದು. ನಮ್ಮ ಗೈಡ್ ತಶಿ ಪ್ರಕಾರ, ಮೊದಲೆಲ್ಲ ನಡೆದಲ್ಲೆಲ್ಲ ಕಾಣಸಿಗುತ್ತಿದ್ದ ಪಳೆಯುಳಿಕೆಗಳು ಈಗ ಪ್ರವಾಸಿಗರು ಹೊತ್ತೊಯ್ಯುತ್ತಿರುವ ಕಾರಣದಿಂದ ಕಡಿಮೆಯಾಗುತ್ತಿವೆ ಎಂದರು.

ಲಾಂಗ್ಝಾದ ಹಳ್ಳಿಗರು ಬೇಸಗೆಯಲ್ಲಿ ಗೋಧಿ, ಆಲೂಗಡ್ಡೆ, ಬಟಾಣಿ ಬೆಳೆಯನ್ನು ಬೆಳೆಯುತ್ತಾರೆ. ಉಳಿದಂತೆ, ಹೈನುಗಾರಿಗೆ, ವ್ಯಾಪಾರ, ನೇಯ್ಗೆ ಇವರ ಇತರ ಕಸುಬುಗಳು. ಸುತ್ತಲೂ ಕಾವಲಿರುವ ಹಿಮಬೆಟ್ಟಗಳು ಕರಗಿ ಬರುವ ನೀರನ್ನು ನಾಲೆಯ ಮೂಲಕ ತಮ್ಮ ಗದ್ದೆಗಳಿಗೆ ಹರಿಸಿ ಬೆವರು ಸುರಿಸಿ ಬೇಸಾಯ ಮಾಡುತ್ತಾರೆ. ಯಾಕ್ ಗಳ ಜೊತೆಗೆ, ಹಸು ಹಾಗೂ ಯಾಕ್ ಗಳೆರಡರ ಹೈಬ್ರಿಡ್ ತಳಿಯಾದ ಝೋ ಎಂಬ ಜಾನುವಾರುಗಳು ಇಲ್ಲಿನ ಜನರಿಗೆ ಕೃಷಿ ಚಟುವಟಿಕೆಗಳಿಗೆ ನೆರವಾಗುತ್ತವೆ. ಚಳಿಗಾಲದಲ್ಲಿ ಈ ಹಳ್ಳಿ ತನ್ನ ಸುತ್ತಮುತ್ತಲಿನ ಎಲ್ಲಾ ಹಳ್ಳಿಪಟ್ಟಣಗಳಿಂದಲೂ ವಾಹನ ಸಂಪರ್ಕವನ್ನು ಕಳೆದುಕೊಳ್ಳುತ್ತದೆ. ಏನೇ ಆದರೂ ದಟ್ಟ ಹಿಮದ ನಡುವೆ ಕಾಲುದಾರಿ ಮಾಡಿಕೊಂಡು ನಡೆದೇ ಸಾಗಬೇಕಾದ ಕಷ್ಟ.

ಪರ್ವತ ರಾಜಕುಮಾರಿಯ ಕಥೆ!: ಲಾಂಗ್ಝಾದಿಂದ ಕತ್ತೆತ್ತಿ ನೋಡಿದರೆ ಪ್ರಮುಖವಾಗಿ ಕಾಣುವ ಬೆಟ್ಟ ಚೌಚೌ ಕಂಗ್ ನೀಲ್ಡಾ. ಈ ಬೆಟ್ಟದ ಮೇಲೆ ಅಲ್ಲಿನ ನಿವಾಸಿಗಳಿಗೆ ಭಯ ಭಕ್ತಿ. ಈ ಬೆಟ್ಟದ ಚಾರಣ ತುಂಬ ಕ್ಲಿಷ್ಟಕರವಾದದ್ದಂತೆ. ಅಲ್ಲಿಯ ನಿವಾಸಿಗಳು ಹೇಳುವಂತೆ, ಅಲ್ಲಿನ ಬೋಟಿ ಭಾಷೆಯಲ್ಲಿ, ಚೌ ಚೌ ಎಂದರೆ ಪುಟ್ಟ ಹುಡುಗಿ ಅಥವಾ ರಾಜಕುಮಾರಿ ಎಂದರ್ಥ. ಕಂಗ್ ಎಂದರೆ ಹಿಮ ಮುಚ್ಚಿದ ಪರ್ವತಗಳು. ನೀ ಅಥವಾ ನೀಮಾ ಎಂದರೆ ಸೂರ್ಯ ಹಾಗೂ, ದಾ ಅಥವಾ ದಾವಾ ಎಂದರೆ ಚಂದ್ರ. ಹಾಗಾಗಿ ಇದರರ್ಥ, ಸದಾ ಸೂರ್ಯಚಂದ್ರರ ಬೆಳಕಿನಲ್ಲಿ ಹೊಳೆಯುವ ಹಿಮ ಮುಚ್ಚಿದ ಪರ್ವತ ರಾಜಕುಮಾರಿ!

ಇದರ ಹಿನ್ನೆಲೆಗೊಂದು ಜಾನಪದ ಕಥೆಯೂ ಇದೆ. ಲಾಂಗ್ಝಾದ ಹಳ್ಳಿಗನೊಬ್ಬ ಕೆಲಸ ಮಾಡಿ ಹೊಟ್ಟೆ ಹೊರೆದುಕೊಳ್ಳುದಕ್ಕಿಂತ ಹೆಚ್ಚು, ತನ್ನ ಪ್ರಿಯ ಸಂಗೀತವಾದ್ಯವಾದ ಲೂಟ್ ನುಡಿಸುವುದರಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದ. ಸ್ವಲ್ಪ ಹೆಚ್ಚೇ ಎನ್ನುವಷ್ಟು ಸೋಮಾರಿ ಆತ. ಲಾಂಗ್ಝಾ ಹಳ್ಳಿಗೆ ನೀರು ಹಿಮ ಪರ್ವತಗಳಿಂದ ಹರಿದು ಬರಬೇಕು. ಪ್ರತಿ ಬೇಸಿಗೆ ಹತ್ತಿರ ಬರುತ್ತಿದ್ದಂತೆಯೇ ಹಳ್ಳಿಗರು ಪರ್ವತಗಳಿಗೆ ಹೋಗಿ ನೀರು ಹರಿದು ಬರಲು ಅಡೆತಡೆಗಳಿದ್ದರೆ ಅದನ್ನು ಸರಿಸಿ ಬರಬೇಕು. ಈ ಹಳ್ಳಿಗ ಆ ಕೆಲಸವನ್ನು ಮಾಡಬೇಕಿತ್ತು. ಈತ ಪರ್ವತವೇರಿ ಒಂದು ಕಡೆ ಕೂತು ತನ್ನ ವಾದ್ಯ ಬಾರಿಸಲು ಶುರು ಮಾಡಿದ. ಎಷ್ಟು ತನ್ಮಯವಾಗಿ ಕಣ್ಣು ಮುಚ್ಚಿ ಬಾರಿಸಿದನೆಂದರೆ ತಾನು ಇರುವುದೆಲ್ಲಿ ಎಂಬುದೇ ಆತನಿಗೆ ಮರೆತು ಹೋಗಿತ್ತು. ಬಾರಿಸಿ ಎಚ್ಚೆತ್ತು ನೋಡಿದಾಗ ಆತನೆದುರಿಗೆ ಸುಂದರ ರಾಜಕುಮಾರಿ ನಿಂತಿದ್ದಳು. ಈತ ಬಿಟ್ಟ ಕಣ್ಣು ಹಾಗೇ ಬಿಡಲು, ಆಕೆ ‘ಮತ್ತೊಮ್ಮೆ ನುಡಿಸುವೆಯಾ?’ ಎಂದಳು. ಈತ ತನ್ಮಯನಾಗಿ ನುಡಿಸಿದ. ಆಕೆ, ತಾನು ಚೌ ಚೌ ಕಂಗ್ ನೀಲ್ಡಾ ದೇವತೆಯೆಂದೂ, ತನ್ನ ವಿಚಾರವನ್ನು ಯಾರಿಗೂ ಹೇಳಬೇಡವೆಂದೂ ಹೇಳಿದಳು. ಮತ್ತೆ ಬಂದು ತನಗಾಗಿ ವಾದ್ಯ ನುಡಿಸಬೇಕೆಂದೂ ಕೇಳಿಕೊಂಡಳು. ಒಪ್ಪಿ ಮರಳಿದ ಹಳ್ಳಿಗ ಪ್ರತೀ ಬೇಸಿಗೆಯಲ್ಲೂ ಆಕೆಯೆದುರು ವಾದ್ಯ ನುಡಿಸುತ್ತಿದ್ದ. ಹೀಗೆ ವರುಷಗಳು ಉರುಳಿದವು. ಒಮ್ಮೆ, ಈ ಮೈಗಳ್ಳ ಪತಿಯಿಂದ ರೋಸಿ ಹೋದ ಪತ್ನಿ ಗಂಡನನ್ನು ತರಾಟೆಗೆ ತೆಗೆದುಕೊಂಡಳು. ಕುಡಿದು ಮತ್ತೇರಿದ್ದ ಈತ, ನಿನಗಿಂತ ಚೌ ಚೌ ಕಂಗ್ ನೀಲ್ಡಾಳೇ ವಾಸಿ, ಆಕೆ ನನಗೆ ಕೆಲಸ ಮಾಡೆಂದು ಎಂದೂ ಹೇಳಿಲ್ಲ ಎಂದ. ಮರುದಿನ ಹಾಸಿಗೆಯಿಂದ ಏಳುವಾಗ ಮೈತುಂಬಾ ಗುಳ್ಳೆಗಳು. ಆಗ ಕುಡಿದ ಮತ್ತು ಇಳಿದಿತ್ತು. ಚೌಚೌ ಬಗ್ಗೆ ಯಾರಿಗೂ ಹೇಳಬಾರದೆಂದುಕೊಂಡದ್ದನ್ನೇ ಆತ ಅಮಲಿನಲ್ಲಿ ಹೇಳಿಬಿಟ್ಟಿದ್ದ. ಅದಕ್ಕಾಗಿಯೇ ಹೀಗೆ ಬೊಬ್ಬೆಗಳು ಬಂದಿವೆಯೆಂದು ಆತನಿಗೆ ಅರಿವಾಯಿತು. ಬೊಬ್ಬೆಗಳು ಉಲ್ಬಣಗೊಂಡವು, ಸುಂದರವಾಗಿದ್ದ ಮುಖ ವಿಕಾರವಾಯಿತು. ಆತ ಹಿಮ ಪರ್ವತದ ಕಡೆಗೆ ನಡೆದ. ಆದರೆ, ವಾತಾವರಣದಲ್ಲಿ ತಕ್ಷಣ ಬದಲಾವಣೆಗಳಾಗಿ ಪರ್ವತವೇರಲಾಗಲಿಲ್ಲ. ಆಕೆಯ ದರ್ಶನವೂ ಆಗಲಿಲ್ಲ. ಮರಳಿದ ಆತ ಅದೆಷ್ಟೋ ಬಾರಿ ಮತ್ತೆ ಮತ್ತೆ ಏರಲು ಪ್ರಯತ್ನಿಸಿದ, ಆದರೆ ಆಗಲಿಲ್ಲ. ಚೌ ಚೌ ಮುನಿದಿದ್ದಳು. ಈಗಲೂ, ಆಕೆ ಮುನಿದೇ ಇದ್ದಾಳೆಂಬುದು, ಇಂದಿಗೂ ಇಲ್ಲಿನ ಜನರ ನಂಬಿಕೆ. ಹಾಗಾಗಿ, ಯಾರೇ ಈ ಪರ್ವತವೇರಲು ಪ್ರಯತ್ನಿಸಿದರೂ ಏನಾದರೂ ತೊಂದರೆ ಕಟ್ಟಿಟ್ಟ ಬುತ್ತಿ. ಹಾದಿಯಲ್ಲಿ ವಾತಾವರಣದಲ್ಲಿ ಹಠಾತ್ ಬದಲಾವಣೆಗಳು ಕಟ್ಟಿಟ್ಟ ಬುತ್ತಿಯಂತೆ. ಹಾಗಾಗಿ ಸಾಮಾನ್ಯರಿಗೆ ಈ ಪರ್ವತಕ್ಕೆ ಕಾಲಿಡಲು ಸಾಧ್ಯವಿಲ್ಲವೆಂದು ಹಳ್ಳಿಗರು ಈಗಲೂ ನಂಬುತ್ತಾರೆ.

ಹೋಗೋದು ಹೇಗೆ?: ಹಿಮಾಚಲ ಪ್ರದೇಶದ ಒಂದು ಜಿಲ್ಲೆ ಲಾಹೋಲ್ ಮತ್ತು ಸ್ಪಿತಿ. ಇದು ಹಿಮಾಚಲ ಪ್ರದೇಶದಲ್ಲೇ ಅತೀ ದೊಡ್ಡ ಜಿಲ್ಲೆ ಕೂಡಾ. ಹಿಂದಿದ್ದ ಲಾಹೋಲ್ ಹಾಗೂ ಸ್ಪಿತಿ ಎಂಬ ಎರಡು ಜಿಲ್ಲೆಗಳು ಅಧಿಕೃತವಾಗಿ ಒಂದಾಗಿ ಒಂದೇ ಜಿಲ್ಲೆಯೆನಿಸಿದೆ. ಲಾಹೋಲಿನ ಕೇಲಾಂಗ್ ಎಂಬ ನಗರವೇ ಈ ಜಿಲ್ಲೆಯ ಪ್ರಮುಖ ಆಡಳಿತ ಪ್ರದೇಶವಾಗಿದೆ. ಕುಂಝುಮ್ ಪಾಸ್ ಅಥವಾ ಕುಂಝುಮ್ ಲಾ (ಸಮುದ್ರ ಮಟ್ಟದಿಂದ 4,551 ಮೀ ಅಥವಾ 14,931 ಅಡಿ ಎತ್ತರ) ಸ್ಪಿತಿ ಕಣಿವೆಗೆ ಮಹಾದ್ವಾರವಿದ್ದಂತೆ. ಈ ಕಣಿವೆ ಮನಾಲಿಯಿಂದ ರೋಹ್ತಂಗ್ ಪಾಸ್ ಮೂಲಕ ಸಂಪರ್ಕ ಹೊಂದಿದೆ. ಚಳಿಗಾಲದಲ್ಲಿ ರೋಹ್ತಂಗ್ ಪಾಸ್ ಸೇರಿದಂತೆ ರಸ್ತೆಯೇ ಹಿಮದಿಂದ ಮುಚ್ಚಿಹೋಗುವುದರಿಂದ, ಸ್ಪಿತಿಗೆ ಹೋಗಬೇಕಾದರೆ ಶಿಮ್ಲಾದಿಂದ ಸುತ್ತಿ ಬಳಸಿ ಸಾಗಿ ಇಲ್ಲಿಗೆ ತಲುಪಬಹುದು.

ಸ್ಪಿತಿ ಹಾಗೂ ಲಾಹೋಲ್ ಕಣಿವೆಗಳೆರಡೂ ಬಹಳ ವಿಶಿಷ್ಟವಾದದ್ದು, ಹಾಗೆಗೇ ವಿಭಿನ್ನವಾದದ್ದು ಕೂಡಾ. ಸ್ಪಿತಿ ಕಣಿವೆ ಶೀತ ಮರುಭೂಮಿಯಾಗಿದ್ದು, ಬರಡು ಹಾಗೂ ಕ್ಲಿಷ್ಟಕರವಾದದ್ದು. ಸ್ಪಿತಿ ನದಿ ಹಾಗೂ ಹಿಮ ಕರಗಿ ಇಳಿಯುವ ತೊರೆಗಳೇ ಇಲ್ಲಿಯ ಜೀವಜಲ. ಇಂತಹ ವಿಚಿತ್ರ, ಕ್ಲಿಷ್ಟ ಹಾಗೂ ಅಪರೂಪದ ಪ್ರದೇಶದಲ್ಲಿ ಜೀವನವೂ ಅಷ್ಟೇ ಕಷ್ಟಕರವಾದದ್ದು. ಹಾಗಾಗಿಯೇ ಇದು ಇಡೀ ಭಾರತದಲ್ಲೇ ಮೂರನೇ ಅತಿ ಕಡಿಮೆ ಜನಸಂಖ್ಯೆಯಿರುವ ಜಿಲ್ಲೆ. ಸ್ಪಿತಿಯ ಕೀ, ಟಾಬೋ, ಢಂಕರ್ ಬೌದ್ಧ ವಿಹಾರಗಳು ಸಾವಿರಾರು ವರ್ಷಗಳು ಹಳೆಯವುಗಳು ಹಾಗೂ ಅತಿ ಪುರಾತನವಾದವು.

ಹಿಮಾಚಲ ಪ್ರದೇಶದ ಮನಾಲಿಯಿಂದ ಸ್ಪಿತಿ ಕಣಿವೆಯ ಪ್ರಮುಖ ಪಟ್ಟಣ ಕಾಝಾಕ್ಕೆ ಇರುವ ದೂರ ಸುಮಾರು 210 ಕಿ.ಮೀ.ಗಳು. ಆದರೆ, ಹೈವೇನಲ್ಲಿ ಸಾಗಿದಂತೆ 3-4 ಗಂಟೆಯಲ್ಲಿ ಕಾಝಾ ತಲುಪಬಹುದೆಂದು ಲೆಕ್ಕಾಚಾರ ಹಾಕಿದರೆ, ಅದು ತಲೆಕೆಳಗಾಗುವುದು ಗ್ಯಾರೆಂಟಿ. ಕುಲುವಿನಿಂದ ಬೆಳಗ್ಗಿನ ಜಾವ ದಿನವೂ 3.30ಗೆ ಸರ್ಕಾರಿ ಬಸ್ಸು ಹೊರಡುತ್ತದೆ. ಅದು ಮನಾಲಿಯಿಂದ ಬೆಳಗ್ಗೆ 5ಕ್ಕೆ ಕಾಝಾ ಕಡೆಗೆ ರೋಹ್ತಂಗ್ ಪಾಸ್ ಮೂಲಕ ಸಾಗುತ್ತದೆ. ಹಾದಿ ಅತೀ ದುರ್ಗಮ. ರುದ್ರ ರಮಣೀಯ. ದೈತ್ಯ ಪರ್ವತಗಳಲ್ಲಿ ಹೆಬ್ಬಾವಿನಂತೆ ಸುರುಳಿ ಸುತ್ತಿ ಮಲಗಿರುವ ಏರು ತಗ್ಗಿನ ಕಲ್ಲು ಮುಳ್ಳಿನ ರಾಜ್ಯ ಹೆದ್ದಾರಿ(?!)ಯಲ್ಲಿ ಬಸ್ಸು ಸಾಗುತ್ತದೆ. ಹಾದಿ ಮಧ್ಯೆ ಏನೇ ತೊಂದರೆಗಳಾಗದೆ, ರೋಹ್ತಂಗ್ ಪಾಸ್ ನ ಟ್ರಾಫಿಕ್ಕಿನಲ್ಲಿ ಸಿಕ್ಕಿಹಾಕದಿದ್ದರೆ, ಬಸ್ಸು ಸರಿಯಾಗಿ ಕಾಝಾವನ್ನು ಸಂಜೆ 5ಕ್ಕೆ ತಲುಪುತ್ತದೆ, ಅಂದರೆ, 200 ಕಿ.ಮೀ ಸಾಗಲು ಬರೋಬ್ಬರಿ 12 ಗಂಟೆಗಳು ಬೇಕಾಗುತ್ತವೆ! ಈ ಲಾಂಗ್ಝಾ ಹಳ್ಳಿಯು ಕಾಝಾದಿಂದ ಸುಮಾರು 10 ಕಿ.ಮೀ ದೂರದಲ್ಲಿದೆ.

(ಅಕ್ಟೋಬರ್ 11, 2012ರ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾದ ಬರಹ)

Tuesday, June 26, 2012

ಆ 7.30ರ ಮುಸ್ಸಂಜೆ...



ಕೈಯಲ್ಲೊಂದು ಹಳದಿ ಬುಲ್ಡೋಜರ್! ಗಂಟೆ ಮುಸ್ಸಂಜೆ 7.30 ದಾಟಿದೆ. ಆ ಪುಟ್ಟ ಹುಡುಗ ತೂಕಡಿಸಿ ತೂಕಡಿಸಿ, ಆಗಷ್ಟೇ ಬಂದು ಆ ಸೀಟಿನಲ್ಲಿ ಕೂತ ನನ್ನ ಮೇಲೆ ಬಿದ್ದ.
ಮೆಲ್ಲನೆ ತಟ್ಟಿ ಎಬ್ಬಿಸಿದೆ. ಹಠಾತ್ತನೆ ಎಚ್ಚೆತ್ತು, ನನ್ನ ಮುಖವನ್ನೊಮ್ಮೆ ದಿಟ್ಟಿಸಿದ, ಆ ಕಡೆ ಕಂಡಕ್ಟರ್ ಬಂದು 'ಟಿಕೆಟ್' ಎಂದ, 'ಮಿಲಾಗ್ರಿಸ್ ಸರ್ಕಲ್ - ಒಂದು' ನಾನು ಟಿಕೆಟ್ ತೆಗೆದುಕೊಂಡೆ.
ಹುಡುಗನಿಗೆ ಟಿಕೆಟ್ ಸಿಗಲಿಲ್ಲ, ಆತ ಕೊಟ್ಟ ಎರಡು ರೂ ನಾಣ್ಯ ಕಿಸೆಗೆ ಹಾಕಿ ಕಂಡಕ್ಟರು ಹಿಂದಿನ ಸೀಟಿಗೆ ಹೋಗಿ ಕೂತ. ಹುಡುಗ ಟಿಕೆಟು ಸಿಗದ ಬೇಸರದಲ್ಲಿ, 'ಇವರು ಹೀಗೆಯೇ, ನಮಗೆ ಟಿಕೆಟ್ಟೇ ಕೊಡುವುದಿಲ್ಲ, ಮೊನ್ನೆಯೂ ಹೀಗೆಯೇ ಮಾಡಿದ್ದರು, ಚೆಕ್ಕಿಂಗಿನವ್ರು ಬಂದ್ರೆ, ನಮಗೆ ಬಯ್ತಾರೆ' ಎಂದ. ನಾನು ನಕ್ಕೆ.
'ಎಷ್ಟನೇ ಕ್ಲಾಸು?' ನಾನು ಕೇಳಿದೆ
'ನಾಲ್ಕನೇ ಕ್ಲಾಸು'
'ಯಾವ ಶಾಲೆ?'
'ಕೆಲಿಂಜ'
'ಹೆಸರು?'
'ಖಾದರ್'
'ಇಷ್ಟೊತ್ತಲ್ಲಿ ಯಾಕೆ ಒಬ್ಬನೇ ಬಸ್ಸಿನಲ್ಲಿ?'
'ಬುಲ್ಡೋಜರ್ ತೆಗೀಲಿಕ್ಕೆ ಪೇಟೆಗೆ ಬಂದಿದ್ದೆ'
'ಮನೇಲಿ ಹೇಳಿದ್ದೀಯಾ?'
'ಇಲ್ಲ'
'ಅವರು ಹುಡುಕಲ್ವಾ? ಅವರಿಗೆ ಭಯ ಆದ್ರೆ?'
'ಇಲ್ಲ, ಅವರಿಗೆ ಭಯ ಆಗಲ್ಲ. ಗಂಡು ಹುಡುಗ ಅಲ್ವಾ ನಾನು'
ಎಲಾ ಇವನಾ! ನಾನು ಅವಾಕ್ಕಾದೆ, ಚೋಟುದ್ದದ ಹುಡುಗನ ಪೌರುಷಕ್ಕೆ!
'ದುಡ್ಡು ಯಾರು ಕೊಟ್ರು?' ನಾನು ತಿರುಗಿ ಪ್ರಶ್ನೆ ಹಾಕಿದೆ.
ತಾಯಿ ಮೊನ್ನೆ ಕೊಟ್ಟಿದ್ರು, ಅದನ್ನು ಎತ್ತಿ ಇಟ್ಟಿದ್ದೆ. ನಮ್ಮ ಶಾಲೆಯಲ್ಲಿ ಎಲ್ಲ ಮಕ್ಕಳ ಹತ್ರನೂ ಬುಲ್ಡೋಜರ್ ಇದೆ'
ನಾನು ಮತ್ತೆ ಪ್ರಶ್ನಿಸಲಿಲ್ಲ. ಅಂಗಡಿಗಳ ಬೆಳಕಿನ ಸಾಲನ್ನು ಆಗಷ್ಟೇ ಮುಗಿಸಿ, ಕತ್ತಲನ್ನು ಸೀಳುತ್ತಾ ಬಸ್ಸು ಸಾಗುತ್ತಿತ್ತು.
'ನೀವು ಯಾವ ಕ್ಲಾಸು?' ಆತನೇ ಕೇಳಿದ.
'ನಾನು ಶಾಲೆಗೆ ಹೋಗಲ್ಲ'
'ಯಾಕೆ?'
'ಶಾಲೆಗೆ ಹೋಗಿ ಮುಗಿದಾಗಿದೆ'
'ಹೌದಾ? ಹಾಗಾದರೆ ಈಗ ಏನು ಮಾಡ್ತಾ ಇದ್ದೀರಿ?'
'ಕೆಲಸ ಮಾಡ್ತಾ ಇದ್ದೀನಿ'
'ಏನು? ಟೀಚರ್ ಕೆಲಸವಾ?'
'ಹೆಂಗಪ್ಪಾ ಹೇಳೋದು ಇವನಿಗೆ?' ಅಂತ ತಲೆಬಿಸಿಯಾಯ್ತು. 'ಟೀಚರ್ ಅಲ್ಲಪ್ಪಾ. ಟಿವಿ ನೋಡ್ತೀಯಾ, ಪೇಪರ್ ಓದ್ತೀಯಾ?' ನಾನು ಮರು ಪ್ರಶ್ನೆ ಹಾಕಿದೆ.
'ಹುಂ, ನೋಡ್ತೀನಿ'
'ನಾನು ಟಿವಿ/ ನ್ಯೂಸ್ ಪೇಪರಿಗೆ ಕೆಲಸ ಮಾಡೋದು'
'ಬಿಜೆಪಿ, ಕಾಂಗ್ರೆಸ್  ಅಂತೆಲ್ಲಾ ಪೇಪರಲ್ಲಿ ದಿನಾ ಬರುತ್ತಲ್ವಾ? ಅದೆಲ್ಲಾ ನೀವೇ ಬರೆಯೋದಾ?'
'...... ಹುಂ, ಹೌದು. ಅದೇ ಕೆಲಸ. ನಿನಗೆ ಇಂಟ್ರೆಸ್ಟ್ ಇದೆಯಾ ರಾಜಕೀಯ ಓದೋದಕ್ಕೆ?', ನಾನು ಕೇಳಿದೆ.
'ಇಲ್ಲ, ನಾನು ಓದಲ್ಲ. ತಂದೆ ಕಾಂಗ್ರೆಸ್ ಬಗ್ಗೆ ಓದ್ತಾರೆ. ನಮ್ಮ ಮನೆಯಲ್ಲಿ ಎಲ್ಲರೂ ಕಾಂಗ್ರೆಸ್'
ನಾನು ನಕ್ಕೆ.
ಅಷ್ಟರಲ್ಲಿ, ಬಸ್ಸು ಮಂಗಲಪದವು ದಾಟಿ ಮುಂದೆ ಸಾಗುತ್ತಿತ್ತು. ನಾನು ಬದಿಯ ಕಿಟಕಿಯಿಂದ, ವಿರುದ್ಧ ದಿಕ್ಕಿಗೆ ಚಲಿಸುತ್ತಿದ್ದ ಕಪ್ಪು ಮರಗಳನ್ನು ನೋಡುವುದನ್ನು ಮುಂದುವರಿಸಿದೆ. ಕತ್ತಲ ಹಿತವಾದ ಗಾಳಿಗೆ ಹಾರುತ್ತಿದ್ದ ಕೂದಲನ್ನು ಕಿವಿಯ ಹಿಂದಕ್ಕೆ ಅನಾಯಾಸವಾಗಿ ತಳ್ಳುತ್ತಲೇ ಇದ್ದೆ.
'ನೀವು ಎಲ್ಲಿ ಹೋಗ್ತಾ ಇದ್ದೀರಿ?' ಆತ ತನ್ನ ಪ್ರಶ್ನಾ ಸರಣಿಯನ್ನು ಮುಂದುವರಿಸಿದ.
'ಚೆನ್ನೈಗೆ'
ಚೈನ್ನೈ ಎಲ್ಲಿರೋದು? ಎಷ್ಟು ದೂರ ಇಲ್ಲಿಂದ?'
ತಮಿಳುನಾಡಲ್ಲಿ. ಇಲ್ಲಿಂದ ರೈಲಲ್ಲಿ ಸುಮಾರು  800 -900 ಕಿಮೀ ಆಗ್ಬಹುದು'
'ಭಯ ಆಗಲ್ವಾ? ರಾತ್ರಿ ಒಬ್ಬರೇ ಹೇಗೆ ಹೋಗ್ತೀರಿ?'
'ಚೋಟುದ್ದ ಇರೋ ನಿಂಗೇ ಭಯ ಆಗಲ್ಲ, ಇನ್ನು ನಂಗ್ಯಾಕಪ್ಪಾ ಭಯ?' ಎಂದೆ. ಇಬ್ಬರೂ ಮನಸಾರೆ ನಕ್ಕೆವು.
ಆಮೇಲೆ  ನಾನೇ, 'ಭಯ ಏನೂ ಇಲ್ಲ. ಮಂಗಳೂರಲ್ಲಿ ಇಳಿದು, ರೈಲು ಹತ್ತಿ ಹೋಗ್ತೀನಿ, ನಾಳೆ ಮಧ್ಯಾಹ್ನ ಚೆನ್ನೈ ತಲುಪುತ್ತೆ'
'ಚೆನ್ನೈ ದೊಡ್ಡ ಸಿಟಿ ಅಲ್ವಾ? ಅಲ್ಲಿ ದೊಡ್ಡ ದೊಡ್ಡ ಸಿನಿಮಾ ಟಾಕೀಸ್  ಇರುತ್ತದೆ ಅಲ್ವಾ?'
'ಹೌದು. ನೀನು ಹೋಗಿದ್ದೀಯಾ?'
'ಚೆನ್ನೈಗೆ ಹೋಗಿಲ್ಲ. ಆದ್ರೆ, ಅಲ್ಲೆಲ್ಲ ಇರುವ ಸಿನಿಮಾ ಟಾಕೀಸ್ ಥರಾನೇ ಮಂಗಳೂರಲ್ಲೂ ಈಗ ಶುರುವಾಗಿದೆ. ಒಮ್ಮೆ ನಾನು- ನನ್ನ ಫ್ರೆಂಡು ಅವತ್ತೊಮ್ಮೆ ಮಂಗಳೂರಿಗೆ ಹೋಗಿ ಪಿಕ್ಚರ್ ನೋಡಿ ಬಂದಿದ್ದೇವೆ'
'ಆಗ್ಲೂ ಮನೆಯಲ್ಲಿ ಹೇಳದೆ ಹೋಗಿದ್ದಾ?' ನಾನು ಕಣ್ಣು ಮಿಟುಕಿಸುತ್ತಾ ಕಾಲೆಳೆದೆ.
'ಹೌದು' ಎಂದು ಆತ ನಕ್ಕ. ಹಿಂದೆಯೇ ಇದ್ದ ಕಂಡಕ್ಟರ್ ಮೀಸೆಯಂಚಿನಲ್ಲೂ ನಗು.
ಅಷ್ಟರಲ್ಲಿ ಕೆಲಿಂಜ ಸ್ಟಾಪು ಬಂತು. ತನ್ನ ಹಳದಿ ಬುಲ್ಡೋಜರಿನ ಜೊತೆ ಎದ್ದ ಹುಡುಗ ಮೆಟ್ಟಲ ಬಳಿ ನಿಂತು ನನ್ನೆಡೆಗೆ ತಿರುಗಿ ನೋಡಿದ.
ನಾನು ಕಂಡಕ್ಟರ್ ಕಡೆಗೆ ತಿರುಗಿ, 'ಇನ್ನೊಮ್ಮೆ ಇವನು ಈ ಬಸ್ಸಿನಲ್ಲಿ ಬಂದ್ರೆ ಅವನಿಗೆ ಟಿಕೇಟು ಕೊಡಿ ಆಯ್ತಾ' ಎಂದು ನಕ್ಕೆ
ಕಂಡಕ್ಟರು ನಗುತ್ತಾ ಸೀಟಿ ಊದಿದರು.
ಖಾದರ್ ನಕ್ಕು ಟಾಟಾ ಮಾಡಿ ಕೆಳಗಿಳಿದ.
ಬಸ್ಸು ಅದೇ ವೇಗದಲ್ಲಿ ಮತ್ತೆ ಹೊರಟಿತು. ನಾನು ಕಿಟಕಿಯೆಡೆಗೆ ತಿರುಗಿದೆ. ಕಪ್ಪು ಮರಗಳು ಅದೇ ರಭಸದಲ್ಲಿ ಹಿಂದಕ್ಕೆ ಸಾಗುತ್ತಲೇ ಇದ್ದವು, ಯಾಕೋ ಬಸ್ಸು ನಿಧಾನ ಅನಿಸಿತು...

Tuesday, April 10, 2012

ಕಾಡಿನ ಕಿಟ್ಟ

ಒಂದು ಕಾಲಲ್ಲಿ ನಾಲ್ಕೇ ಬೆರಳು! ಒಂದನೇ ಕ್ಲಾಸಿನಲ್ಲಿ 'ಕಾಲಲ್ಲಿ ಓಟ್ಟೆಷ್ಟು ಬೆರಳು, ಲೆಕ್ಕ ಹಾಕಿ' ಎಂದು ಟೀಚರ್ ಕೇಳಿದ್ದಾಗ ಒಂಭತ್ತು ಎಂದು ಹೇಳಿ ಹೊಡೆತ ತಿಂದಿದ್ದ ಈತ, ಸಣ್ಣವನಿದ್ದಾಗ ಮೊಣಕಾಲಲ್ಲಿ ಯಾವಾಗ್ಲೂ ಗಾಯದ ಗುರುತು ಮಾಸಲು ಬಿಡುತ್ತಿರಲಿಲ್ಲ. ಅರ್ಥಾತ್ ಅಷ್ಟು ಸಾರಿ ಬೀಳುತ್ತಿದ್ದ, ಬಿದ್ದರೂ, ಏನೂ ಆಗಿಲ್ಲವೆಂಬಂತೆ ಫೀನಿಕ್ಸಿನಂತೆ ಎದ್ದು ಬರುತ್ತಿದ್ದ. ಕಾಡಿನ ಮಧ್ಯದಲ್ಲಿದ್ದ ಜೋಪಡಿಯಲ್ಲಿ ಹಾಯಾಗಿರುತ್ತಿದ್ದ ಈತ ನನ್ನ ಅಂದಿನ ಮುಗ್ಧ ಕಣ್ಣಿನಲ್ಲಿ ಹೀರೋ. ಆಗ ನನ್ನ ಪಾಲಿಗೆ ಈತ ಸಾಕ್ಷಾತ್ 'ಕಾಡಿನ ಕಿಟ್ಟ'.

ತಿಂಗಳಿಗೆರಡು ಬಾರಿ ಬರುವ ಬಾಲಮಂಗಳದಲ್ಲಿ ಕಳೆದು ಹೋಗುತ್ತಿದ್ದ ದಿನಗಳಲ್ಲಿ, ಅದರಲ್ಲಿ ಬರುತ್ತಿದ್ದ 'ಕಾಡಿನ ಕಿಟ್ಟ' ಸರಣಿ ಚಿತ್ರಕಥೆಯಲ್ಲಿ ನನಗೆ ಮಾತ್ರ ಕಾಡಿನ ಕಿಟ್ಟನಾಗಿ ಕಣ್ಮುಂದೆ ಕಟ್ಟುತ್ತಿದ್ದ ಚಿತ್ರಗಳೆಲ್ಲವೂ ಈತನದೇ. ಅವನೇ ನನ್ನ ತಮ್ಮ ವಿಗ್ಗು. ನಮ್ಮಿಬ್ಬರ ವಯಸ್ಸು ಹೆಚ್ಚು ಕಡಿಮೆ ಒಂದೇ. ನನ್ನಿಂದ ಆರೇಳು ತಿಂಗಳು ಚಿಕ್ಕವ. ದೊಡ್ಡಪ್ಪನ ಮಗ. ಹೆಸರು ವಿಘ್ನರಾಜ. ಆದರೆ ಎಲ್ಲರಿಗೂ ವಿಗ್ಗುವೇ.

ಮೊನ್ನೆ ಫೇಸ್ ಬುಕ್ಕಿನಲ್ಲಿ ಹೊಕ್ಕು ಕೂತಿದ್ದೆ. ನನ್ನ ಈ ಕಾಡಿನ ಕಿಟ್ಟ ಹೇಗೆಲ್ಲ ಬದಲಾಗಿ ಬಿಟ್ಟಿದ್ದಾನಲ್ಲ ಅಂತ ಆಶ್ಚರ್ಯಾವಾಗ್ತಾ ಇತ್ತು. ಬೆಂಗಳೂರಿನ ಮಾಯೆಯೇ ಅದು. ಆಗೆಲ್ಲ ಫೋನು ನಮ್ಮನೆಗೆಲ್ಲ ಇನ್ನೂ ಬಾರದ ಕಾಲದಲ್ಲಿ ''ಅಕ್ಕ, ಮರದಲ್ಲಿ ಅಬ್ಳುಕ ಬಿಟ್ಟಿದೆ, ನಾಣಿಲು ಕೂಡಾ ಹಣ್ಣಾಗುತ್ತಿದೆ, ಪುನರ್ಪುಳಿ ಉದುರಲು ಶುರುವಾಗಿದೆ, ಕಾಟು ಮಾವಿನಣ್ಣು ಸಿಕ್ಕಪಟ್ಟೆ ಗಾಳಿಗೆ ಬೀಳುತ್ತಿದೆ, ಆಚೆ ಕಡೆ ಚೋಮುವಿನ ಗಲಾಟೆ ಜೋರಾಗಿದೆ. ನೀನು ಬೇಗನೆ ಬಾ, ಇಲ್ಲದಿದ್ದರೆ ಮಂಗಗಳು ತಿಂದು ಹಾಕುತ್ತವೆ'' ಎಂದು ಚಿಕ್ಕದಾಗಿ ಚೊಕ್ಕವಾಗಿ ಅಂಚೆಕಾರ್ಡೊಂದನ್ನು ಹಾಕುತ್ತಿದ್ದ. ನಾನು ಗಂಟು ಮೂಟೆ ಕಟ್ಟಿ ಅಜಕ್ಕಳವೆಂಬ ಆ ಗೊಂಢಾರಣ್ಯಕ್ಕೆ ಧಾವಿಸುತ್ತಿದ್ದೆ.

ಸಂಜೆಯ ಹೊತ್ತಲ್ಲಿ ಹೊಳೆಗೆ ಹೊರಟರೆ, ಸೀರೆಹೊಳೆಯ ಬೇಲಿಯಲ್ಲಿ ಆಕಾಶದೆತ್ತರಕ್ಕೆ ಬೆಳೆದ ಕಾಟು, ಹೊಳೆಮಾವಿಗೆ ಕಲ್ಲೆಸೆದರೆ, ಒಂದೇ ಏಟಿಗೆ ಹಣ್ಣು, ಕಾಯಿ ಎಲ್ಲವೂ ಪಟ ಪಟನೆ ಉದುರುತ್ತಿದ್ದವು. ನನಗಿದು ಆಗ ಭಾರೀ ಸೋಜಿಗದ ವಿಚಾರ. ನಾನೆಷ್ಟೇ ಪ್ರಯತ್ನಿಸಿದರೂ ನನ್ನ ಕಲ್ಲಿಗೆ ಅಪ್ಪಿ ತಪ್ಪಿ ಮಾವು ಬಿದ್ದರೂ, ಎಲ್ಲೋ ಒಂದೆರಡು. ಇನ್ನು, ಅಲ್ಲೇ ಹೊಳೆಯ ಬದಿ ಇರುವ ನಾಣಿಲು ಮರದ ಚಿಕ್ಕು ಹಣ್ಣಿನಷ್ಟೇ ಪರಿಮಳ ಭರಿತ, ಸಿಹಿಯಿರುವ ಹಣ್ಣುಗಳನ್ನು ತಿಂದು ಕಾಯಿಗಳನ್ನು ಅಕ್ಕಿ ಡಬ್ಬಿಯಲ್ಲಿ ಬೇಗನೆ ಹಣ್ಣಾಗಲು ಇಡುತ್ತಿದ್ದೆವು. ಮಂಗನನ್ನೂ ನಾಚಿಸುವಂತೆ ಚಕಚಕನೆ ಮರ ಹತ್ತುತ್ತಿದ್ದ ವಿಗ್ಗುವಿನ ಕೃಪೆಯಿಂದ ಅಬ್ಳುಕ, ಪುನರ್ಪುಳಿ, ಚಿಕ್ಕು... ಎಲ್ಲವೂ ಧಾರಾಳವಾಗಿ ದಕ್ಕುತ್ತಿತ್ತು. ಒಟ್ಟಾರೆ, ಅವನು ನನ್ನ ಜೊತೆಗಿದ್ದರೆ, ಆಸೆಪಟ್ಟಿದ್ದೆಲ್ಲ ತಕ್ಷಣ ಕೈಗೆ ನಿಲುಕುತ್ತಿದ್ದವು!

ಇನ್ನು ಸಂಜೆ ಲಗೋರಿ ಆಡಲು ಹೊರಟರೆ, ಊರಿನಲ್ಲಿದ್ದ ಮಕ್ಕಳೆಲ್ಲ ಒಂದು ತಂಡವಾದರೆ, ಈತನೊಬ್ಬನದೇ ಒಂದು ತಂಡ. ಆದರೆ, ಗೆಲ್ಲುತ್ತಿದ್ದುದೂ ಅವನೇ. ರಾತ್ರಿ ಅಶೋಕಣ್ಣನ ಮನೆಯಿಂದ ಅಪರೂಪಕ್ಕೊಮ್ಮೆ ಅನಂತನಾಗ್-ಲಕ್ಷ್ಮಿ ಅಭಿನಯದ 'ನಾ ನಿನ್ನ ಬಿಡಲಾರೆ' ಚಿತ್ರ ನೋಡಿ ಹೆದರಿ ಗುಡ್ಡ ಹತ್ತಿ ಮನೆಗೆ ಮರಳುತ್ತಿದ್ದಾಗ, ರಾತ್ರಿ ಹತ್ತರ ಗಾಢಾಂಧಕಾರದಲ್ಲಿ ಬರೀ ಚಂದ್ರನ ಬೆಳಕಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದೆವು. ನಾನು ಹಿಂದಿನಿಂದ ಭೂತ-ಗೀತ ಬಂದೀತೋ ಎಂದು ಹೆದರಿ, ನಮ್ಮದೇ ಕಾಲಿನಿಂದ ಹೊರಟ ತರಗೆಲೆ ಶಬ್ದಕ್ಕೂ ನಾನು ಹೆದರುತ್ತಿದ್ದರೆ, ಈ ತಮ್ಮ ಧೈರ್ಯದಿಂದ ಕತ್ತಲಲ್ಲಿ ಹೆಜ್ಜೆ ಹಾಕುತ್ತಿದ್ದ! ಹೀಗಾಗಿಯೇ ಆಗೆಲ್ಲ ನನಗೆ ಈತ ಹೀರೋ ಆಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಮಳೆಗಾಲದಲ್ಲಿ ಸೀರೆ ಹೊಳೆಯನ್ನು ದೋಣಿಯಲ್ಲಿ ದಾಟಿ ನಾಲ್ಕಾರು ಮೈಲಿ ದೂರದ ಶಾಲೆಗೆ ಹೋಗುತ್ತಿದ್ದ ಈ ವಿಗ್ಗು, ಊಟಕ್ಕೆ ಕೂತರೂ ನನ್ನನ್ನು ಮೀರಿಸುತ್ತಿದ್ದ. ದೊಡ್ಡಮ್ಮ ಒಲೆ ಮುಂದೆ ಕೂತು ಮಾಡುತ್ತಿದ್ದ ಒಂದೊಂದೇ ನೀರುದೋಸೆಯನ್ನು ನಾನು ಎರಡು ತಿನ್ನುವಷ್ಟರಲ್ಲಿ ನಾಲ್ಕು ಮುಗಿಸುತ್ತಿದ್ದ. ಆಗ ಮಾತ್ರ ನನಗೆ ಈತ ಬಾಲಮಂಗಳದ ಶಕ್ತಿಮದ್ದಿನ ಸಾಕ್ಷಾತ್ ಲಂಬೋದರನ ಥರ ಕಾಣುತ್ತಿದ್ದ. ಇನ್ನು ರಾತ್ರಿಯಾದರೆ ಸಾಕು, ದೊಡ್ದಪ್ಪನ 'ನಿಂಗ ಅಟ್ಟಕ್ಕೆ ಕಿಚ್ಚು ಹಿಡುಸುತ್ತಿ ನೋಡಿ' ಎಂಬ ಬೈಗುಳಕ್ಕೂ ಬಗ್ಗದೇ, ಸೀಮೆಎಣ್ಣೆ ದೀಪ ಹಿಡಿದು, ಅಡಿಕೆ ಮರದ ಸಲಾಕೆಯ ಏಣಿ ಹತ್ತಿ ಅಟ್ಟ ಸೇರಿ ಹಳೆಯ ಬಾಲ ಮಂಗಳ, ಚಂಪಕ, ದೊಡ್ಡಮ್ಮನ ಕರ್ಮವೀರ ಎಲ್ಲ ಓದಿ ಮುಗಿಸುತ್ತಿದ್ದೆವು. 

ಆಗೆಲ್ಲಾ ಜೊತೆಯಾಗಿ ಸೇರಿ ಸ್ಪರ್ಧೆಗಿಳಿದಂತೆ, ಡ್ರಾಯಿಂಗು ಪುಸ್ತಕದಲ್ಲಿ ಡಿಂಗನ ಚಿತ್ರಗಳನ್ನು ಬರೆದದ್ದೇ ಬರೆದದ್ದು. ಈಗ ಈ ಡಿಂಗ ಚಿತ್ರಕಲಾ ಪರಿಷತ್ತಿನಲ್ಲಿ ಓದಿ ತನ್ನ ಕನಸನ್ನು ನನಸಾಗಿಸಿದ್ದಾನೆ. ಜೊತೆಗೆ ನನ್ನ ಕನಸನ್ನೂ ಕೂಡಾ!

ಈಗ ಆ ಅಜಕ್ಕಳದ ಜೋಪಡಿ ಇಲ್ಲ. ಕದಿಯಲು ಕಾಟು ಮಾವಿನ ಮರವೂ ಅಲ್ಲಿಂದ ಕಾಣೆಯಾಗಿದೆ. ಹಿನ್ನೆಲೆಯಾಗಿ ಬರುತ್ತಿದ್ದ ಚೋಮುವಿನ ಗದರಿಕೆ ಕೇಳಲು ಚೋಮು ಕೂಡಾ ಇಹಲೋಕದಲ್ಲಿಲ್ಲ. ಆದರೆ, ಸೀರೆ ಹೊಳೆ ಅಲ್ಲೇ ಇದೆ. ಬೇಸಿಗೆಯಲ್ಲಿ ಬರಿದಾಗಿ, ಮಳೆಗಾಲದಲ್ಲಿ ಅಂದಿನ ಹಾಗೆ ತುಂಬಿ ಹರಿಯುತ್ತದೆ. ತೀರದಲ್ಲಿ ನಾಣಿಲು, ಹೊಳೆಮಾವು ಖಂಡಿತ ಈಗಲೂ ಇದೆ. ಕಾಡಿನಲ್ಲಿ ಅಬ್ಳುಕವೂ ನಮ್ಮ ಪುಣ್ಯಕ್ಕೆ ಹುಡುಕಿದರೆ ಸಿಗಬಹುದು. ಒಮ್ಮೆ ಹಾಗೆಯೇ ಮತ್ತೆ ಈ ಎಲ್ಲ ಕೆಲಸದ ಜಂಜಡ ಬಿಟ್ಟು ಅಂದಿನ ಹಾಗೆ ತಿರುಗಾಡುವಾಸೆ. ಹೇ ವಿಗ್ಗು, ನೀ ಮತ್ತೆ ನನ್ನ 'ಕಾಡಿನ ಕಿಟ್ಟ' ಆಗ್ತೀಯಾ…?

(ಫೋಟೋ ಕೃಪೆ- wallcoo.net)

Sunday, March 18, 2012

ಫ್ಲ್ಯಾಶ್ ಬ್ಯಾಕ್...

ಚಿಂವ್ ಚಿಂವ್ ಎಂದು ಕೂಗಿ ಕರೆದಾಗ ಆ ಅಳಿಲು ಕತ್ತೆತ್ತಿ ನೋಡಿತು. ನಾವಿದ್ದಿದ್ದು, ಚೆನ್ನೈಯಿಂದ ಸುಮಾರು 80 ಕಿಮೀ ದೂರದಲ್ಲಿರುವ ವೇಡಂತಂಗಳ್ ಎಂಬ ಸುಂದರ ಪಕ್ಷಿಧಾಮದ 4-5 ಅಡಿ ಎತ್ತರದ ವಾಚ್ ಟವರ್ ಮೇಲೆ. ನಾವು ಕರೆದ ಸದ್ದು ಬಂದ ಕಡೆ ಕತ್ತೆತ್ತಿ ನೋಡಿದ ಅದು ಒಂದರೆ ಕ್ಷಣ ಅವಕ್ಕಾದಂತೆ ದಿಟ್ಟಿಸಿ ಮತ್ತೆ ತನ್ನ ಕೆಲಸದಲ್ಲಿ ನಿರತವಾಯಿತು, ಆದರೆ ಅದರ ತೀಕ್ಷ್ಣ ನೋಟ ಥೇಟ್ ನನ್ನ ಅಳಿಲಿನ ನೋಟದಂತೆಯೇ ಅನಿಸಿ, ಸಿನಿಮಾದಂತೆ ನನ್ನ ನೆನಪಿನ ರೀಲು ಹಿಂದಕ್ಕೋಡಿತು.

ನಮ್ಮ ಮನೆಯಲ್ಲಿ ನಾನು ಸಣ್ಣವಳಿದ್ದಾಗಿನಿಂದಲೂ ಅಳಿಲಿನ ಜೊತೆಗೇ ಬೆಳೆದವಳು. ಎರಡನೇ ತರಗತಿಯಲ್ಲಿದ್ದಾಗ ಅಪ್ಪ ತಂದ ಅಳಿಲು, ನಾನು ಪಿಯುಸಿಯಲ್ಲಿರುವರೆಗೂ 8-9 ವರ್ಷ ನಮ್ಮ ಜೊತೆ ಇದ್ದಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಮೂರನೇ ತರಗತಿಯಲ್ಲಿದ್ದಾಗ ಅದೊಂದು ದಿನ ಅಪ್ಪ ರಾತ್ರಿ ಮನೆಗೆ ಬಂದಾಗ ಇನ್ನೂ ಕಣ್ಣು ಬಿಡದಿದ್ದ ಗಾಯಗೊಂಡಿದ್ದ ಅಳಿಲನ್ನು ತಂದಿದ್ದರು. ಅಪ್ಪನ ಕ್ಲಿನಿಕ್ಕಿನಲ್ಲಿ ಬೆಕ್ಕಿನ ಗಲಾಟೆಯಿಂದ ಮಾಡಿನ ಸಂದಿಯಿಂದ ಬಿದ್ದ ಅಳಿಲ ಮರಿಯದು. ಅಪ್ಪನೇ ಮಾಡಿದ ಒಂದು ವಿಶಾಲ ಗೂಡಿನಲ್ಲಿ ಅದನ್ನು ಹಾಕಿ ಹಾಲು ಕುಡಿಸಿ ಅದನ್ನು ಮುದ್ದಿನಿಂದ ಸಾಕಿದ್ದೆವು. ಮೂರ್ನಾಲ್ಕು ತಿಂಗಳು ನಮ್ಮ ಜೊತೆಯಲ್ಲಿ ಬೆಳೆದ ಅಳಿಲನ್ನು ಅಪ್ಪ ಗೂಡಿನಿಂದ ಹರಬಿಡಲು ನಿಶ್ಚಯಿಸಿದ್ದು ನನಗೂ ಅಕ್ಕನಿಗೂ ನುಂಗಲಾರದ ತುತ್ತಾಗಿತ್ತು. ಆದರೆ ಅಪ್ಪ ಅಮ್ಮ ನಿಶ್ಚಯಿಸಿಬಿಟ್ಟಿದ್ದರು. ಮರದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರುವ ಅಳಿಲನ್ನು ಮನೆಯಲ್ಲಿ ಗೂಡಿನಲ್ಲಿ ಸಾಕೋದು ಅಪ್ಪನಿಗೆ ಇಷ್ಟವಿರಲಿಲ್ಲ. ಒಂದು ದಿನ ಬೆಳಗ್ಗೆ ಹೀಗೆ ಸ್ವತಂತ್ರಗೊಂಡ ಮರಿ ಎಲ್ಲಿಗೆ ಓಡುವುದೆಂದು ತೋಚದೆ ಕೊನೆಗೂ ಓಡಿ ಹೋಯಿತು. ಬೇಸರದಲ್ಲಿ ಆ ದಿನವಿಡೀ ಕಳೆದಿದ್ದು ನನಗಿನ್ನೂ ನೆನಪಿದೆ. ಆದರೆ ಮರುದಿನ ನಮಗೊಂದು ಆಶ್ಚರ್ಯ ಕಾದಿತ್ತು. ನಾವು ಏಳುವ ಹೊತ್ತಿಗಾಗಲೇ ಅಳಿಲು ನಮ್ಮ ಮನೆಯ ಹೊರಗಿನ ಕಂಬದ ಮೇಲೆ ಹಾಜರ್!

ವಿಚಿತ್ರವೆಂದರೆ, ಗೂಡಿನಲ್ಲಿದ್ದಾಗ ನಮ್ಮಂತೆ 7 ಗಂಟೆಗೆ ಪುಟ್ಟ ಬಟ್ಟಲಲ್ಲಿ ಟೀ ಕುಡಿಯೋದನ್ನು ಅಭ್ಯಾಸ ಮಾಡಿಕೊಂಡಿದ್ದ ಈ ಅಳಿಲು ಕರೆಕ್ಟಾಗಿ 7ಕ್ಕೇ ನಮ್ಮ ಮನೆಯ ಕಂಬದಲ್ಲಿ ಕುಳಿತಿತ್ತು. ಟೀ ಕುಡಿದ ಮೇಲೆ ಮರದೆಡೆಯಲ್ಲಿ ಮರೆಯಾಗುವ ಅದು ಮತ್ತೆ 9.30-10ರ ಸುಮಾರಿಗೆ ಅನ್ನ-ಹಾಲು ತಿನ್ನಲು ಬರುತ್ತಿತ್ತು, ಆಮೇಲೆ ಮಧ್ಯಾಹ್ನ 2ಕ್ಕೆ, ಸಂಜೆ ಆರರ ಮೊದಲು ಬಂದು ಅನ್ನ ಹಾಲು ತಿಂದು ಹೋಗುತ್ತಿತ್ತು. ನೀವು ನಂಬುತ್ತೀರೋ ಇಲ್ಲವೋ, ಈ ನಂಟು ಹಾಗೆಯೇ ಒಂದು ವರ್ಷ ನಿರಂತರವಾಗಿ ಸಾಗಿತು.

ಆದರೆ ನಾಲ್ಕೂ ಮಂದಿಗೆ ವಿಚಿತ್ರ ಸಂಕಟವಾಗಿದ್ದು ನಾವು ಆ ಮನೆ ಖಾಲಿ ಮಾಡಬೇಕಾಗಿ ಬಂದಾಗ! ನೆಲ್ಲಿಗುಡ್ಡೆ ಎಂಬ ಹಳ್ಳಿಯ ಆ ಒಂಟಿ ಮನೆಯನ್ನು ಖಾಲಿ ಮಾಡಿ ಅಪ್ಪ ಆಗ ತಾನೇ ಖರೀದಿಸಿದ್ದ ವಿಟ್ಲದ ಹೊಸ ಮನೆಗೆ ಹೋಗುವ ಖುಷಿ ಒಂದೆಡೆಯಾದರೆ, ಈ ಅಳಿಲಿಗೆ ಏನು ಮಾಡೋಣ ಎಂಬ ಚಿಂತೆ ಮತ್ತೊಂದೆಡೆ. ನಮ್ಮ ಸಾಮಾನು ಸರಂಜಾಮುಗಳನ್ನು ಲಾರಿಗೆ ಏರಿಸುವ ಮುನ್ನಾ ದಿನವೇ ಅಳಿಲನ್ನೂ ಗೂಡಿನಲ್ಲಿ ಕೂಡಿ ಹಾಕಿದ್ದೆವು. ತನ್ನನ್ನು ಯಾಕೆ ಕೂಡಿ ಹಾಕಿದ್ದೆಂದು ಮೂಕವಾಗಿ ನೋಡುತ್ತಾ, ಬೋನಿಗೆ ಬಿದ್ದ ಇಲಿಯಂತೆ ವಿಚಿತ್ರ ಸಂಕಟ ಅನುಭವಿಸುತಿತ್ತು. ಅಂತೂ ಹೊಸ ಮನೆಗೆ ಬಂದೆವು. ನನಗೆ, ಅಕ್ಕನಿಗೆ ಹೊಸ ಶಾಲೆಯಂತೆ, ಅದಕ್ಕೂ ಹೊಸ ಪರಿಸರ. ಗೂಡಿನಿಂದ ಹೊರ ಬಿಟ್ಟರೆ, ಹೊಸ ಪರಿಸರದಲ್ಲಿ ಎಲ್ಲಿ ಕಳೆದುಹೋಗುವುದೋ ಎಂಬ ಚಿಂತೆ ಅಪ್ಪ ಅಮ್ಮನಿಗೆ. ಹತ್ತಾರು ದಿನ ಗೂಡಿನಲ್ಲೇ ಕಳೆದ ನಂತರ ಅದನ್ನು ಹೊರ ಬಿಟ್ಟವು. ದಿಕ್ಕು ತಪ್ಪಿದಂತೆ ಒಮ್ಮೆ ಅತ್ತಿತ್ತ ಓಡಾಡಿ ಆಮೇಲೆ ಮರದೆಡೆಯಲ್ಲಿ ಮರೆಯಾಯಿತು ನಮ್ಮ ಅಳಿಲು.

ತಿಂಗಳೊಂದಾಯಿತು, ಎರಡಾಯಿತು... ಅಳಿಲಿನ ಪತ್ತೆಯೇ ಇಲ್ಲ. ಬಹುಶಃ ಅದಕ್ಕೆ ದಾರಿ ತಪ್ಪಿದೆ, ಅಪ್ಪ ಅಂದರು. ಏನು ಮಾಡೋಣ, ನಮ್ಮ ತೆಂಗಿನ ತೋಟದ ನಡುವಿನ ಗೇರು ಮರದಲ್ಲೆಲ್ಲಾ ಕಂಡ ಕಂಡ ಅಳಿಲನ್ನೆಲ್ಲಾ ನಮ್ಮದಿರಬಹುದೇ ಎಂದು  ಚಿಂವ್ ಚಿಂವ್ ಎಂದು ಕೂಗುತ್ತಾ ಕರೆಯುತ್ತಿದ್ದೆವು, ಆದರೆ ಆ ಬೇರೆ ಅಳಿಲುಗಳೆಲ್ಲವೂ ನಮ್ಮ ಸ್ವರಕ್ಕೆ ಏನೂ ಪ್ರತಿಕ್ರಿಯಿಸದೆ ಓಡಿ ಮರೆಯಾಗುತ್ತಿದ್ದವು. ಆದರೆ ಅದೊಂದು ದಿನ ಸಂಜೆ ಅಮ್ಮನ ದನಿಗೆ ಓಡೋಡಿ ಮರದಿಂದಿಳಿದು ಬಂದ ನಮ್ಮ ಅಳಿಲು ಅಮ್ಮನ ಹಿಂದೆಯೇ ಮನೆಯವರೆಗೂ ಬಂತು. ಅನ್ನ- ಹಾಲು ಕುಡಿದು ಮರೆಯಾಯಿತು. ಆಮೇಲೆ ಆರಂಭವಾಯಿತು, ನಿತ್ಯದ ಭೇಟಿ, ಬರೋಬ್ಬರಿ 8-9 ವರ್ಷ!

ಬಟ್ಟೆ ತೊಳೆಯುವ ಕಲ್ಲಿನಲ್ಲಿ ಬಂದು ಕೂತು ಹಾಲಲ್ಲಿ ಮುಳುಗಿರುವ ಅನ್ನದ ಅಗುಳನ್ನು ಎರಡೂ ಕೈಯಲ್ಲಿ ಎತ್ತಿ ತಿನ್ನುವ ಅದರ ಶೈಲಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅದರ ಮೂರ್ನಾಲ್ಕು ಮರಿಗಳನ್ನು ದೂರದಲ್ಲಿ ನಿಲ್ಲಿಸಿ ಒಂದೊಂದೇ ಅಗುಳನ್ನು ತೆಗೆದುಕೊಂಡು ಹೋಗಿ ತಿನ್ನಿಸುವ ಪರಿ ಹೇಗೆ ಮರೆತೀತು. ವಿಚಿತ್ರವೆಂದರೆ, ನಮ್ಮ ತೊಡೆಯ ಮೇಲೆ ಕೂತು, ಮೈಮೇಲೆ ಹರಿದಾಡಿ ನಮ್ಮ ಕೈಯಿಂದ ಅನ್ನ ತಿನ್ನುತ್ತಿದ್ದ ಅದು, ಮರಿಗಳನ್ನು ದೂರದಲ್ಲೇ ನಿಲ್ಲಿಸುತ್ತಿತ್ತು. ಮರಿಗಳು ಬಂದರೂ ನಾವು ಹತ್ತಿರ ಹೋದರೆ ತಟ್ಟೆ ಬಿಟ್ಟು ಓಡಿ ಹೋಗುತ್ತಿದ್ದವು. ನಾನು ಪ್ರಥಮ ಪಿಯುಸಿವರೆಗೂ ದಿನವೂ ಬರುತ್ತಿದ್ದ ಅದು ಆಮೇಲೆ ಬರಲಿಲ್ಲ. ಸತ್ತು ಹೋಯಿತೆಂದು ನಾವು ನಂಬಿದೆವು. ಯಾಕೆಂದರೆ, ಆಗಲೇ ಅದಕ್ಕೆ 9 ವರ್ಷವಾಗಿತ್ತು.

ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ಬಿನ ಮೂಲೆಗಳಲ್ಲಿ ಕಡ್ಲೆಪುರಿಯ ಕಡಲೇಕಾಳನ್ನು ತಿನ್ನಲು ಬರುತ್ತಿದ್ದ ಅಳಿಲುಗಳು, ಈಗ ನಮ್ಮ ಚೆನ್ನೈ ಮನೆಯ ಕಿಟಕಿ ಸಂದಿಯಲ್ಲಿ ನಾವು ಆಗಾಗ ಹಾಕುವ ಅಕ್ಕಿ ಕಾಳನ್ನು ನಾವಿಲ್ಲದಾಗ ಸಂತೃಪ್ತಿಯಿಂದ ತಿನ್ನುವ ಅಳಿಲನ್ನು ಮರೆಯಿಂದ ನೋಡುವಾಗ ಅಂದು ನಮ್ಮ ತೊಡೆಯ ಮೇಲೆ ಆರಾಮವಾಗಿ ಯಾವ ಭಯವೂ ಇಲ್ಲದೆ ಕುಳಿತು ತಿನ್ನುತ್ತಿದ್ದ ಅಳಿಲಿನ ನೆನಪಾಗುತ್ತದೆ. ಜೊತೆಜೊತೆಗೇ ಈ ಅಳಿಲನ್ನು ನಮ್ಮ ಜೊಂತೆ ಕಂಡು ಹೊಟ್ತೆಉರಿ ಪಟ್ಟು ಕುಂಯ್ ಕುಂಯ್ ರಾಗವೆಳೆಯುತ್ತಿದ್ದ ನಮ್ಮ ರೂಬಿ ನಾಯಿಯೂ ನೆನಪಾಗುತ್ತಾನೆ. ಆದರೆ, ಈಗ ಆ ಅದ್ಭುತ ಕ್ಷಣಗಳ ಒಂದು ಫೋಟೋವೂ ಇಲ್ಲದಿರುವುದು ನೆನೆಸಿ ಒಮ್ಮೊಂಮ್ಮೆ ಬೇಸರವೂ ಆಗುತ್ತದೆ. ಹಾಗಾಗಿ ಆ ಹಳೆಯ ನೆನಪಿಗೊಂದು ಈ ಹೊಸ ಫೋಟೋ-ಬರಹದ ಚೌಕಟ್ಟು.