Monday, September 5, 2011

ವೆಂಕಟನ ಗಿರಿಯಲ್ಲಿ...

ನಮ್ಮ ತಂಡದಲ್ಲಿದ್ದ ಧರ್ಮೇಂದ್ರ ಆ ಪುಟಾಣಿ ತೊರೆಯನ್ನು ನಾಲ್ಕಾರು ಬಾರಿ ಅತ್ತಿಂದಿತ್ತ ಇತ್ತಿಂದತ್ತ ದಾಟುತ್ತಾ ಬಂಡೆಯಲ್ಲಿ ಕವುಚಿ ಮಲಗಿ ಪ್ರಾಣಿಗಳಂತೆ ನಾಲಗೆಯ ಮೂಲಕ ಬಗ್ಗಿ ನೆಕ್ಕಿ ನೆಕ್ಕಿ ನೀರು ಕುಡಿಯುತ್ತಿದ್ದ. ನಾನು, ಮಹೇಶ್ ಹಾಗೂ ಇನ್ನೂ ಒಂದಿಬ್ಬರು ಆ ಭಾನುವಾರ ಬೆಳಗಾತ ಎದ್ದು ನೀರಿನಲ್ಲಿ ಕಾಲು ಅದ್ದಿ ಮೀನುಗಳು ಕಾಲಿಗೆ ಮುತ್ತಿಕ್ಕುವ ಕಚಕುಳಿ ಅನುಭವಿಸುತ್ತಾ ಕೂತಿದ್ದೆವು. ಧರ್ಮೇಂದ್ರನ ಅವತಾರವೇ ವಿಚಿತ್ರವೆನಿಸಿತು ನನಗೆ. ಹಾಗೇ ನೋಡುತ್ತಾ ಇದ್ದೆ. ಯಾಕೋ ಕುತೂಹಲ ಮೂಡಿತು. ಆತನ ಹಾವಭಾವದಲ್ಲಿ ಕೊಂಚವೂ ನಾಟಕೀಯತೆ ಇರಲಿಲ್ಲ. ಬಹಳ ಹೊತ್ತು ತನ್ಮಯನಾಗಿ ಹಾಗೇ ನೀರು ಕುಡಿಯಲು ಕಷ್ಟಪಟ್ಟು ಕೊನೆಗೂ ಯಶಸ್ವಿಯಾದ. 'ಅಬ್ಬಾ' ಎಂದೆವು ಎಲ್ಲರೂ ಒಟ್ಟಾಗಿ. ಅಷ್ಟರಲ್ಲಿ ಚೆಂಚು ಓಡಿ ಬಂದ. ಬನ್ನಿ ಬನ್ನಿ ಹೋಗೋಣ, ಸಾಕು ಸಾಕು ಎಂದ. ಎಲ್ಲರೂ ಗಂಟು ಮೂಟೆ ಕಟ್ಟಿ ಹೊರಡಲು ಸನ್ನದ್ಧರಾದೆವು.

ಚೆನ್ನೈಗೆ ಬಂದ ಹೊಸತರಲ್ಲಿ ನನಗೆ ಜೀವ ಚೈತನ್ಯ ನೀಡಿದ್ದು ಈ ವೆಂಕಟಗಿರಿ. ಬೆಂಗಳೂರಿನ ಚುಮುಚುಮು ಚಳಿ ಬಿಟ್ಟು ಬಿಸಿಲೂರಿಗೆ ಬಂದಿದ್ದೆ. ಅದೇ ಸಮಯಕ್ಕೆ ಮಹೇಶ್ ಈ ವೆಂಕಟಗಿರಿ ಚಾರಣದ ಬಗ್ಗೆ ವಿಷಯ ಅರಹಿದ. ಮರುಭೂಮಿಯ ನಟ್ಟ ನಡುವೆ ಜೀವಜಲ ಕಂಡ ಹಾಗಿತ್ತು ನನ್ನ ಪರಿಸ್ಥಿತಿ. ಛಕ್ಕನೆ ಹೋಗೋಣ ಎಂದು ಹೊರಟಿದ್ದೂ ಆಗಿತ್ತು ಇಬ್ಬರೂ.

ಅಂದಹಾಗೆ, ಈ ವೆಂಕಟಗಿರಿ ಪರ್ವತ ತಿರುಪತಿಗೆ ತೀರ ಹತ್ತಿರವಾದದ್ದು. ತಿರುಮಲ ಪರ್ವತಕ್ಕೆ ಸಮಾಂತರವಾಗಿದೆ ಈ ಪರ್ವತ. ಹೀಗಾಗಿ ಎತ್ತ ನೋಡಿದರತ್ತ ಹಸಿರು ಹಸಿರು ಹಸಿರು. ಅಲ್ಲಲ್ಲಿ ಪುಟ್ಟ ತೊರೆಗಳು. ಮುಗಿಯದ ದಂಡಕಾರಣ್ಯದ ಹಾದಿ... ಎರಡು ದಿನಗಳು ಹಾಗೇ ಕಳೆದು ಹೋಗಿದ್ದವು.

ಚೆಂಚು ನಮ್ಮ ತಂಡದ ನಾಯಕ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆತನ ಊರು ವೆಂಕಟಗಿರಿ. ನನಗೆ ನನ್ನೂರಿನ ಕಳಂಜಿಮಲೆ ಹೇಗೋ ಹಾಗೆಯೇ ಚೆಂಚುಗೆ ವೆಂಕಟಗಿರಿ. ಅದೆಷ್ಟೋ ಬಾರಿ ಆತ ವೆಂಕಟಗಿರಿಯಲ್ಲಿ ಅಲೆದಾಡಿದ್ದನೋ ಲೆಕ್ಕವಿಲ್ಲ. ಹೀಗಾಗಿ ಚೈನ್ನೈ ಟ್ರೆಕ್ಕಿಂಗ್ ಕ್ಲಬ್ಬಿನ ಹೆಸರಿನಲ್ಲಿ ಚೆಂಚು ಜೊತೆಗೆ ನಾವೂ ಸೇರಿದಂತೆ ಚೆನ್ನೈ ತಮಿಳರ ಒಂದು ಪುಟ್ಟ ಗುಂಪು ಸೇರಿತ್ತು. ಚೆನ್ನೈಯಿಂದ ಸುಮಾರು 170 ಕಿಮೀ ದೂರದ ವೆಂಕಟಗಿರಿಯೆಡೆಗೆ ನಮ್ಮ ತಂಡದ ಪ್ರಯಾಣ ಶನಿವಾರ ಮುಂಜಾವಿನಲ್ಲೇ ಹೊರಟಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆಲ್ಲಾ ವೆಂಕಟಗಿರಿಯಲ್ಲಿದ್ದೆವು. ಅಲ್ಲಿಂದ ಹೊರಟ ನಮ್ಮ ಚಾರಣ ಸುಮಾರು 4 ಗಂಟೆಗೆ ಮಲ್ಲೇಶ್ವರ ಕೋಣ ಎಂಬಲ್ಲಿಗೆ ಅಂತ್ಯವಾಗಿತ್ತು. ಅಲ್ಲೊಂದು ಪುಟ್ಟ ಶಿವ ದೇಗುಲ. ಶುದ್ಧ ತಮಿಳುನಾಡು ಶೈಲಿಯಲ್ಲಿ ಕೆಂಪು- ಬಿಳಿ ಪಟ್ಟೆ ಬಳಿದ ದೇಗುಲ ನಮ್ಮೂರಿನ ಪುಟ್ಟ ಮದುವೆ ಮಂಟಪದಂತಿತ್ತು. ವರ್ಷದಲ್ಲೊಮ್ಮೆ ಹರಕೆ ತೀರಿಸಲು ಬೆಟ್ಟದ ಸಮೀಪದ ಹಳ್ಳಿ ಜನರು ಈ ದೇಗುಲಕ್ಕೆ ಭೇಟಿ ಕೊಡುತ್ತಾರಂತೆ.

ಗಂಟೆ ಕೇವಲ ನಾಲ್ಕಾಗಿದ್ದರೂ, ದಟ್ಟಕಾನನದ ನಡುವೆ ಕತ್ತಲಾದ ಅನುಭವ. ಬೆವರಿಳಿದರೂ ಸುತ್ತಲಿನ ಸಮೃದ್ಧ ಗಾಢ-ಕಪ್ಪು ಹಸುರು, ದೇಗುಲದ ಹಿಂಬದಿಯಿಂದ ಕೇಳಿಬರುತ್ತಿದ್ದ ಝರಿಯ ನಿನಾದ, ಹರಿವ ತೊರೆಯ ಜುಳುಜುಳು. ಅಲ್ಲೇ ಒಂದರ್ಧ ತಾಸು ನೀರಿನಲ್ಲಿ ಮುಳುಗೆದ್ದು ಆಯಾಸ ಪರಿಹರಿಸಿ ನಮ್ಮ ಸಾಮಾನುಗಳನ್ನೆಲ್ಲಾ ಶಿವ ದೇಗುಲದಲ್ಲಿ ಬಿಟ್ಟು ಮತ್ತೆ ಬೆಟ್ಟ ಹತ್ತಲು ಅಣಿಯಾದೆವು. ಸಂಜೆಯ ವೇಳೆಗೆ ಬೆಟ್ಟದ ತುದಿ ಮುಟ್ಟಿ, ರಾತ್ರಿ 8 ಗಂಟೆಯ ಹೊತ್ತಿಗೆ ಮರಳಿ ದೇಗುಲಕ್ಕೆ ಬಂದೆವು. ಜೀರುಂಡೆಗಳ ಝೇಂಕಾರ, ದೂರದಲ್ಲೆಲ್ಲೋ ಊಳಿಡುತ್ತಿರ ನರಿ, ಎಲ್ಲವುಗಳ ನಡುವೆ ಗಾಢಾಂಧಕಾರದ ಮೌನದಲ್ಲಿ ಕೊರೆವ ಚಳಿಯಲ್ಲಿ ಲೋಕದ ಪರಿವೆಯಿಲ್ಲದೆ ನಿದ್ದೆ ಹೋಗಿದ್ದೆವು. ಮುಂಜಾನೆ ಎದ್ದ ಹಾಗೆ ಮತ್ತೆ ತೊರೆಯ ಬಳಿ ಕಾಲು ಇಳಿ ಬಿಟ್ಟು ಚಳಂಪಳ ಮಾಡುತ್ತಾ ಕೂತಿದ್ದೆವು.

ಮುಂಜಾನೆ ಮತ್ತೆ ಬೆಟ್ಟ ಹತ್ತಿಳಿದು, ಗಂಜಿ ಉಂಡು ನಿಧಾನಕ್ಕೆ ವೆಂಕಟಗಿರಿ ಪಟ್ಟಣದತ್ತ ಹೆಜ್ಜೆ ಹಾಕತೊಡಗಿದೆವು. ಬರೋಬ್ಬರಿ ಐದಾರು ಗಂಟೆಯ ಬಳಿಕ ಮುಸ್ಸಂಜೆಯ ಹೊತ್ತಿಗೆ ವೆಂಕಟಗಿರಿಗೆ ತಲುಪಿದೆವು. ಹಾದಿಯುದ್ದಕ್ಕೂ ನನಗೆ ಮಾತ್ರ ದಕ್ಕಿದ ಅದೃಷ್ಟವೇ ಬೇರೆ. ಕಂಡಕಂಡ ಪೊದೆಗಳಲ್ಲಿ ಮುಳ್ಳಂಕಾಯಿ, ಚೀರುಮುಳ್ಳು, ಕರಂಡೆ ಕಾಯಿ, ಕೇಪುಳಹಣ್ಣು... ಸಿಕ್ಕಿದ್ದೆಲ್ಲಾ ಬಾಯಿಗೆ ತುರುಕುತ್ತಿದ್ದ ನನ್ನನ್ನು ಕಂಡು ಉಳಿದವರು ವಿಚಿತ್ರವಾಗಿ ನೋಡುತ್ತಿದ್ದರು. ಪುಣ್ಯಕ್ಕೆ ಅವರು ರುಚಿ ನೋಡುವ ಧೈರ್ಯ ಮಾಡಲಿಲ್ಲ. ನಾನೂ ಒತ್ತಾಯಿಸಲಿಲ್ಲ, ನನ್ನ ಅದೃಷ್ಟಕ್ಕೆ ನಾನೇ ವಂದಿಸುತ್ತಾ ಪೂರ್ತಿ ಒಬ್ಬಳೇ ಗುಳುಂ ಮಾಡಿದೆ.

ಆದರೆ.., ಈಗಲೂ ಬೇಸರವಿದೆ. ವೆಂಕಟಗಿರಿ ಪರ್ವತ ಹತ್ತಿದರೂ ದುರ್ಗಂಗೆ ಹತ್ತಲಾಗದಿದ್ದುದು. 'ದುರ್ಗಂ' ಸುಂದರ ಹಾಗೂ ಕಠಿಣ ಚಾರಣ. ವೆಂಕಟಗಿರಿ ಚಾರಣಕ್ಕೆ ಹೊರಟಾಗಲೂ ನನ್ನ ಮನಸ್ಸಿನ ತುಂಬಾ ಈ ದುರ್ಗಂ ತುಂಬಿತ್ತು. ವೆಂಕಟಗಿರಿ ಪರ್ವತದ ತುತ್ತ ತುದಿಯಲ್ಲಿರುವ ಕೋಟೆಯಂಥ ರಚನೆಯೇ ಈ ದುರ್ಗಂ. ಹಿಂದೆ ಕಳ್ಳಕಾಕರು ಲೂಟಿ ಮಾಡಿದ ಒಡವೆಗಳನ್ನು ಇಲ್ಲಿ ಅಡಗಿಸಿಡುತ್ತಿದ್ದರೆಂಬ ರಸವತ್ತಾದ ಕಥೆಗಳು ಈ ಭಾಗದ ಜನರ ದಿನನಿತ್ಯದ ಅಜ್ಜಿಕಥೆಗಳಾಗಿ ಹೋಗಿವೆ. ಅದಕ್ಕೆ ಸಾಕಷ್ಟು ಆಧಾರಗಳೂ ಸಿಕ್ಕಿವೆಯಂತೆ. ಈಗಲೂ ಕೋಟೆಯ ಅಳಿದುಳಿದ ಭಾಗ ಬೆಟ್ಟದ ತುತ್ತ ತುದಿಯಲ್ಲಿದೆ. ಇನ್ನೂ ಚಾರಣಿಗರಿಂದ ಅಷ್ಟಾಗಿ ಪರಿಚಯಿಸಲ್ಪಡದ ಈ ದುರ್ಗಂ ಸೊಬಗು ಈಗಲೂ ನನ್ನನ್ನು ಸೆಳೆಯುತ್ತಿದೆ. ಹೋಗುವೆನೆಂಬ ವಿಶ್ವಾಸವೂ ಇದೆ.

ಅಂದಹಾಗೆ, ವೆಂಕಟಗಿರಿ ಹಾದಿಯಲ್ಲಿ ರಾಶಿರಾಶಿಯಾಗಿ ಸಿಕ್ಕ ಮುಳ್ಳುಹಂದಿಯ ಮುಳ್ಳು ಈಗ ಮನೆಯಲ್ಲಿದೆ. ಅದಕ್ಕೀಗ ಹೀಗೆ ಹೊಸ ರೂಪ ಕೊಟ್ಟಿದ್ದೇನೆ.

Tuesday, July 26, 2011

ಶಿವಮೊಗ್ಗೆಯ ಮಳೆ, ಒಂದು ಆಕ್ಸಿಡೆಂಟ್ ಹಾಗೂ ಆ ಸಜ್ಜನ


ಅಂದು ಮಳೆಯಲ್ಲಿ ಅದೆಷ್ಟು ಒದ್ದೆ ಮುದ್ದೆಯಾಗಿ ಮನಸೋ ಇಚ್ಛೆ ಮಿಂದಿದ್ದೆನೋ... ಹೇಳಲೊಲ್ಲೆ. ಎಷ್ಟೋ ಸಮಯದ ನಂತರ ಮಳೆಯಲ್ಲಿ ಮಳೆಯಾಗುವ ಮುಳುಗೇಳುವ ಭಾಗ್ಯ ಒದಗಿತ್ತು. ಶಿವಮೊಗ್ಗೆ, ಕುಂದಾದ್ರಿಯ ಆ ಉತ್ತುಂಗದಲ್ಲಿ ಕೊಚ್ಚಿಹೋಗುವಂಥ ಗಾಳಿ-ಮಳೆ, ನಮ್ಮನ್ನೇ ಹೊತ್ತೊಯ್ಯುವಂತೆ ಬೀಸುವ ಚಳಿಗಾಳಿ, ಅಡಿಮೇಲಾಗುವ ಕೊಡೆಗಳು, ಮಂಜು ಕವಿದ ಹಾದಿಯಲ್ಲಿ ಒಂಟಿ ಕಾರಿನ ಪಯಣ, ಚೂರೂ ಕಾಣದಂತೆ ಮಂಜಿನಲ್ಲಿ ಇನ್ನಿಲ್ಲದಂತೆ ಮುಚ್ಚಿ ಹೋದ ಜೋಗ, ಮಂಜಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಾ ದಿಡೀರ್ ಪ್ರತ್ಯಕ್ಷವಾಗುವ ರಾಜ- ರಾಣಿ ಧಾರೆಗಳು, ಕೆನ್ನೀರಿನಲ್ಲಿ ಮುಳುಗೆದ್ದ ಹಸಿರುಗದ್ದೆಗಳು, ಕಣ್ತೆರೆದಲ್ಲೆಲ್ಲಾ ಹರಿವ ಝರಿಗಳು... ಅಬ್ಬಬ್ಬಾ, ಒಂದೊಂದು ಚಿತ್ರಗಳೂ ಸಾಲಾಗಿ ಫ್ರೇಮು ಹಾಕಿ ಜೋಡಿಸಿಟ್ಟಂತೆ ಮನಸ್ಸಿನಲ್ಲಿ ದಾಖಲಾಗಿವೆ. ಬೆಂಗಳೂರು/ಚೆನ್ನೈಯ ತುಂತುರು ಮಳೆಗೆ ಕಪ್ಪೆದ್ದು ಹೋಗುವ ರಸ್ತೆಗಳನ್ನು ಕಂಡೂ ಕಂಡೂ ರಾಡಿಯಾಗಿದ್ದ ಮನಸ್ಸು ಕ್ಷಣದಲ್ಲಿ ಪ್ರಫುಲ್ಲವಾಗಿತ್ತು. ಅದೆಷ್ಟು ಬಾರಿ ಶಿವಮೊಗ್ಗ/ಜೋಗ/ಆಗುಂಬೆಯಲ್ಲಿ ಅಲೆದಾಡಿದ್ದರೂ, ಮಳೆಯಲ್ಲಿ ನೋಡುವ ಸೊಬಗೇ ಬೇರೆ. ಅಂತೂ ಸಮಯ ಕೂಡಿ ಬಂದಿತ್ತು. ಮನಸೋ ಇಚ್ಛೆ ಆ ಕ್ಷಣಗಳನ್ನು ಮೊಗೆಮೊಗೆದು ಅನುಭವಿಸಿದ್ದೂ ಆಗಿತ್ತು.

ಆದರೆ,

ಮರಳುವಾಗ..., ಆ ಎರಡು ದಿನಗಳು ಜೀವನದಲ್ಲಿ ಎಂದೂ ಮರೆಯಲಾಗದ ವೈರುಧ್ಯಗಳ ಪ್ರಯಾಣವಾಗಿತ್ತೆಂದು ಮುಂಚಿತವಾಗಿ ಹೇಗೆ ತಿಳಿದೀತು ಹೇಳಿ. ಹಾದಿಯಲ್ಲಿ ನಾವಿದ್ದ ಕಾರು ಬಸ್ಸಿಗೆ ಮುಖಾಮುಖಿ ಢಿಕ್ಕಿಯಾಗಿತ್ತು. ಅದೃಷ್ಟವೆಂದೇ ಹೇಳಬೇಕೇನೋ, ನಾವೆಲ್ಲ ಐದೂ ಮಂದಿ ಹೆಚ್ಚೇನೂ ಆಗದೆ, ಬದುಕುಳಿದಿದ್ದೆವು.

ಇದಾಗಿ, ವಾರ ಕಳೆದಿದೆ. ಈಗ ಮತ್ತೆ ಬಿಸಿಲೂರಿನಲ್ಲಿ ಬಂದು ಕೂತಿದ್ದೇನೆ. ಇಲ್ಲೂ ಆಗಾಗ ಮಳೆ ಸುರಿಯುತ್ತದೆ, ಹಠಾತ್ ಬರುವ ಅತಿಥಿಗಳಂತೆ! ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ಬೇಸರ. ಆದರೆ.., ಈಗ ಮಳೆ ಬರುವಾಗಲೆಲ್ಲ, ಶಿವಮೊಗ್ಗೆ ನೆನಪಾಗುತ್ತದೆ. ಆ ನೆನಪಿನ ಹಿಂದೆಯೇ ಆ ಬಸ್ಸು- ಕಾರು, ಧಡಾರ್, ಚೀರಾಟಗಳು ಮತ್ತೆ ಮತ್ತೆ ಕೇಳಿಸುತ್ತವೆ. ಕೊನೆಗೆ ಉಳಿಯುವುದು ಒಂದು ನಿಟ್ಟುಸಿರು, ಗಾಢ ಮೌನ.

ಇವಿಷ್ಟೇ ಅಲ್ಲ, ಇವೆಲ್ಲವುಗಳ ಜೊತೆಗೆ ಆ ಮುಖವೂ ಮತ್ತೆ ಮತ್ತೆ ಕಾಡುತ್ತದೆ. ಆ ಅಫಘಾತದ ಮುಂಜಾವಿನಲ್ಲಿ ನಮಗೆ ಮದ್ಯಾಹ್ನದವರೆಗೂ ಸಹಾಯದ ಮಳೆಯನ್ನೇ ಸುರಿಸಿದ ಬೆಂಗಳೂರಿನ ರಜನೀಶ್. ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬರು ಹಾದಿ ಮಧ್ಯೆ ತಮ್ಮ ಕುಟುಂಬ ಸಮೇತರಾಗಿ ನಮಗೆ ನೀಡಿದ ಸಹಾಯದ ಮುಂದೆ ಇಲ್ಲಿ ಅಕ್ಷರಗಳು ಜೀವಕಳೆದುಕೊಳ್ಳುತ್ತದೆ. ರಜನೀಶ್ ಕುಟುಂಬ ಚೆನ್ನಾಗಿರಲಿ. ಗೆಳತಿ ಸುಷ್ಮಾ ಬೇಗ ಚೇತರಿಸಿಕೊಳ್ಳಲಿ...

Tuesday, July 12, 2011

ಕಾಡುವ ನಾಯಿಗಳು...

ಮೊನ್ನೆ ಮೊನ್ನೆ ತೇಜಸ್ವಿ ಅವರ 'ಅಣ್ಣನ ನೆನಪು' ಓದುತ್ತಿದ್ದೆ. ಕಂಟ್ರಿ ನಾಯಿಯ ಬಾಲ ಕತ್ತರಿಸಿ ಜಾತಿ ನಾಯಿ ಮಾಡುವ ಸಾಹಸ ಓದುತ್ತಾ ಹೋದಂತೆ, ಕುಪ್ಪಳ್ಳಿಯಲ್ಲಿ ಒಂದು ದಿನ ನಮ್ಮ ಜೊತೆಗಿದ್ದ ನಾಯಿಮರಿಯ ಚಿತ್ರವೇ ಪದೇ ಪದೇ ಕಣ್ಣ ಮುಂದೆ ತೇಲಿ ಬಂತು...

ಹೌದು. ನಾವು ನೋಡಿದ ಪರಿಸರ, ಅಲ್ಲಿ ನಡೆದ ಘಟನೆಗಳಿಗೂ ಪುಸ್ತಕದಲ್ಲಿ ಓದುವ ಕಥೆಗಳಿಗೂ ನಮಗರಿವಿಲ್ಲದೆ ಸಂಬಂಧ ಕಲ್ಪಿಸಿ ಅವುಗಳೇ ನಮ್ಮ ಮನಃಪಟಲದಲ್ಲಿ ಓದುತ್ತಿದ್ದ ಹಾಗೆ ಸಿನಿಮಾದಂತೆ ಚಿತ್ರಿಸಿಕೊಳ್ಳುವುದು ಎಷ್ಟೋ ಬಾರಿ ನಮಗೆ ರೂಢಿಯಾಗಿಬಿಟ್ಟಿರುತ್ತದೆ. ನಮಗೇ ಅರಿವಿಲ್ಲದ ಹಾಗೆ ನಾವು ಅನುಭವಿಸಿದ/ಕಂಡ ಸನ್ನಿವೇಶಗಳು ಯಾವುದೋ ಕಥೆಗಳ ಪಾತ್ರಧಾರಿಗಳಾಗಿ ಜೀವತಳೆದು ಬಿಡುತ್ತವೆ. ಹಾಗಾಗಿಯೇ ಆ ಪಾತ್ರಗಳು ನಮಗೆ ಮತ್ತೆ ಮತ್ತೆ ಕಾಡುತ್ತವೆ. ಹೀಗೆ, ಅಣ್ಣನ ನೆನಪೂ ಕೂಡಾ ನನಗೆ ಇತ್ತೀಚೆಗೆ ತೀವ್ರವಾಗಿ ಕಾಡಿಸತೊಡಗಿತು. ಕಾರಣ ಆ ಜಾತಿ ನಾಯಿ.

ಎಷ್ಟೋ ಬಾರಿ ನನಗೆ ಅನಿಸುವುದಿದೆ, ನಾಯಿಯಷ್ಟು ತೀವ್ರವಾಗಿ ಪ್ರೀತಿಯ ಭಾವನೆಗಳನ್ನು ಕಣ್ಣಿನಿಂದ ಹಾಗೂ ತನ್ನ ಆಂಗಿಕ ಭಾಷೆಯಿಂದ ವ್ಯಕ್ತಪಡಿಸುವ ಪ್ರಾಣಿ ಬೇರೊಂದಿಲ್ಲ. ಬಾಲವಲ್ಲಾಡಿಸಿ, ಮೂಸಿ, ನೆಕ್ಕಿ, ಕಾಲಿನ ಸುತ್ತ ಸುತ್ತು ಹಾಕಿ, ಕೈಗಳನ್ನು ಎತ್ತಿ, ಕುಸ್ ಕುಸ್ ಕುಂಯ್ ಕುಂಯ್ ಎಂಬ ಸ್ವರ ಹೊರಡಿಸಿ... ಆಹ್... ಈ ಎಲ್ಲವೂ ಮಿಳಿತವಾದ ಆ ಪ್ರೀತಿಯ ಜಗತ್ತು ಮಾತ್ರ ಇನ್ನೊಂದಿಲ್ಲ! ಕುಪ್ಪಳ್ಳಿಗೆ ಹೋಗಿದ್ದಾಗಲೂ ಹೀಗೇ ಆಯಿತು. ಆ ಒಂದು ಪುಟಾಣಿ ನಾಯಿ ಮರಿ ಕುವೆಂಪು ಮನೆಯೆದುರು ಅತ್ತಿಂದಿತ್ತ ಇತ್ತಿಂದತ್ತ ಚುರುಕಾಗಿ ಓಡಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನಮಗೆ ಪ್ರೀತಿ ಬಂತು. ಒಂದೆರಡು ಬಿಸ್ಕತ್ತು ಹಾಕಿದೆವು. ಆಮೇಲೆ, ಮಾರನೇ ದಿನವೂ ಹೋಗುವರೆಗೂ ನಮ್ಮನ್ನು ಬಿಡಲಿಲ್ಲ. ನಮ್ಮ ಎಲ್ಲ ಫೋಟೋಗಳಿಗೂ ಭಾರೀ ಚೆನ್ನಾಗಿ ಪೋಸು ಕೊಟ್ಟ ಆ ನಾಯಿ ನಾವು ಹೊರಡುವ ದಿನ ನಮ್ಮ ಜೊತೆಗೆ ಹಿಂಬಾಲಿಸಿ ಬಲು ದೂರ ಬಂದು ಸೋತು ವಾಪಸ್ಸಾಯಿತು. ಮೊನ್ನೆಯೂ ಅಣ್ಣನ ನೆನಪಿನ ಜೊತೆ ಬಹಳವಾಗಿ ಕಾಡಿದ ಈ ನಾಯಿಯ ಪ್ರೀತಿಯನ್ನು ವಿವರಿಸುವಲ್ಲಿ ಮಾತ್ರ ನಾನು ಸೋಲೊಪ್ಪಿಕೊಳ್ಳುತ್ತೇನೆ.

ತಿಂಗಳ ಮೊದಲು ಚೆನ್ನೈನಿಂದ ಸುಮಾರು ಐವತ್ತು ಕಿಮೀ ದೂರದ ಮುದಲಿಯಾರ್ ಕುಪ್ಪಂಗೆ ಹೋಗಿದ್ದೆವು. ಉರಿ ಬಿಸಿಲಿನ ಮಧ್ಯಾಹ್ನ, ಹಾಗೆ ಕೂತು ಜ್ಯೂಸು ಹೀರುತ್ತಿದ್ದಾಗ ಪುಟಾಣಿ ನಾಯಿಮರಿ ಕಾಲೆಳೆಯುತ್ತಾ ಬಂತು. ಅದರ ಹಿಂಬದಿಯ ಎರಡೂ ಕಾಲುಗಳು ನಜ್ಜುಗುಜ್ಜಾಗಿದ್ದವು. ಪಾಪ, ಬಹುಶಃ ಯಾವುದೇ ವಾಹನದ ಅಡಿಗೆ ಸಿಕ್ಕಿ ಹಾಗಾಗಿದ್ದಿರಬೇಕು. ಆದರೆ ಗಾಯ ಗುಣವಾಗಿದ್ದರೂ, ಕಾಲು ಜೋಡಿರಲಿಲ್ಲವೆನಿಸುತ್ತದೆ. ನಡೆಯಲು ಅದಕ್ಕೆ ಆಧಾರ ಕೇವಲ ಮುಂಬದಿಯ ಕಾಲುಗಳು. ಭಾರೀ ಆತ್ಮವಿಶ್ವಾಸದ ಆ ಎರಡು ಕಾಲಿನ ನಾಯಿಮರಿ ನಮ್ಮತ್ತ ಬಂತು. ಎಂದಿನಂತೆ ಬಿಸ್ಕತ್ತು ಪ್ಯಾಕೆಟ್ಟುಗಳು ಖಾಲಿಯಾದವು. ತನ್ನ ದೇಹದ ಹಿಂಬದಿಯ ಶಕ್ತಿ ಕಳೆದುಕೊಂಡಿದ್ದ ಅದಕ್ಕೆ ಬಾಲವಾಡಿಸಲೂ ಆಗುತ್ತಿರಲಿಲ್ಲ. ಆದರೇನಂತೆ, ತಿಂದ ಮೇಲೆ ಕೊನೆಗೊಮ್ಮೆ ಪ್ರೀತಿಯಿಂದ ನೋಡಿ ತೃಪ್ತಿಯಿಂದ ಕಾಲೆಳೆಯುತ್ತ ಅಲ್ಲೆಲ್ಲೋ ಮರೆಯಾಯಿತು.

ಅದಿರಲಿ, ಇತ್ತೀಚೆಗೆ ಮೊನ್ನೆ ನಮ್ಮ ಅಪಾರ್ಟ್‌ಮೆಂಟಿಗೆ ಒಂದು ದಿನ ಬೆಳ್ಳಂಬೆಳಗ್ಗೆ ನಾಯಿ ಬಂದಿತ್ತು. ಪಕ್ಕಾ ಕಂಟ್ರಿ ನಾಯಿಯಾದರೇನಂತೆ, ಕೊರಳಲ್ಲಿ ಚೆಂದದ ಬೆಲ್ಟು. ಸ್ನಾನ ಮಾಡಿಸಿ ನುಣುಪಾಗಿದ್ದ ಕೂದಲು. ದಾರಿ ತಪ್ಪಿ ಬಂದಿದ್ದ ಅದು ಯಾರದೋ ಮನೆಯ ಸಿಕ್ಕಾಪಟ್ಟೆ ಮುದ್ದು ಮಾಡಿಸಿಕೊಳ್ಳುತ್ತಿದ್ದ ಸಾಕು ನಾಯಿ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ, ನಮ್ಮ ಅಪಾರ್ಟ್‌ಮೆಂಟಿನ ಮುಂದೆ ಪ್ರತ್ಯಕ್ಷವಾದಾಗಿನಿಂದ ಅದನ್ನು ಯಾವ ಮನೆಯವರೂ ಅವರವರ ಮನೆಯ ಮುಂದೆ ಮಲಗಲು ಅದನ್ನು ಬಿಡುತ್ತಿರಲಿಲ್ಲ. ಎಲ್ಲರೂ ಓಡಿಸುತ್ತಿದ್ದರು. ಸುಸ್ತಾದ ಅದು ಕೊನೆಗೆ ನಮ್ಮ ಮನೆಯ ಮೆಟ್ಟಿಲ ಕೆಳಗೆ ಬಂದು ಮಲಗಿತು. ದಯನೀಯವಾಗಿ ನೋಡುತ್ತಿದ್ದ ಅದಕ್ಕೆ ಬಿಸ್ಕತ್ತು, ಅನ್ನ- ಸಾಂಬಾರು ಹಾಕಿದೆವು, ಮಾರನೇ ದಿನ ಪಕ್ಕದ ಮನೆಯವರಿಂದ 'ಇನ್ನು ಅದು ಇಲ್ಲಿಂದ ಏಳಲ್ಲ ಬಿಡಿ, ಈ ಫ್ಲಾಟಿನಲ್ಲಿದ್ದೋರ ಕಥೆ ಮುಗೀತು' ಎಂಬರ್ಥದ ಕುಹಕದ ಮಾತುಗಳೂ ತೂರಿ ಬಂದವು. ಹಾಗೆ ಇದ್ದ ಅದು, ನಾಲ್ಕೈದು ದಿನ ಇದ್ದು ಚೆನ್ನಾಗಿ ತಿಂದುಂಡು ಒಮ್ಮೆ ಹೊರಟು ಹೋಯಿತು. ಹೇಗೆ, ಅದಕ್ಕೆ ಮತ್ತೆ ತನ್ನ ಮನೆ ಸಿಕ್ಕಿದೆ ಎಂದು ಗೊತ್ತಾಗಲಿಲ್ಲ.ಇರಲಿ, ಅಂತೂ ಅದಕ್ಕೆ ಅದರ ಮನೆಯ ದಾರಿ ಸಿಕ್ಕಿತ್ತು. ಇದಾಗಿ ವಾರದ ನಂತರ ಒಂದು ದಿನ ನಮ್ಮ ಮನೆಯ ಎರಡನೇ ಕ್ರಾಸಿನಲ್ಲಿ ರಾಜಗಾಂಭೀರ್ಯದಲ್ಲಿ ತನ್ನೊಡೆಯನ ಜೊತೆ ವಾಕಿಂಗ್ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು. ಈಗ ದಿನವೂ ಮನೆಯ ಹತ್ತಿರವಿರುವ ಪಾರ್ಕಿಗೆ ತನ್ನೊಡೆಯನ ಜೊತೆ ಬರುತ್ತದೆ. ಕಂಡಾಗ ಪ್ರೀತಿಯಿಂದ ಕಣ್ಣು ಮಿಟುಕಿಸಿ ಬಾಲವಲ್ಲಾಡಿಸುತ್ತದೆ. ಕಾಡುವ ಇವುಗಳ ಪ್ರೀತಿಗಿಂತ ಇನ್ನೇನು ಬೇಕು ಹೇಳಿ???

Monday, June 20, 2011

ಮತ್ತೆ ಮರಳಿ...

ಓಹ್ . . .

ನನ್ನ ಈ ಮಧುಬನದಿ ಸುಳಿಯದೆ 2 ವರುಷಗಳೇ ಕಳೆದವು. ಅದು ಹೇಗೆ ಎರಡು ವರುಷಗಳು ಕಳೆದುಹೋದವೆಂದೇ ಅರಿಯೆನು. ಛೇ, ಬರೆಯಲಾಗುತ್ತಿಲ್ಲವಲ್ಲ ಎಂಬ ಬೇಸರ ಎರಡು ವರ್ಷಗಳಲ್ಲಿ ಅನೇಕ ಬಾರಿ ಆಗಿದ್ದೂ ಇದೆ. ಸಮಯ ಸಿಗಲಿಲ್ಲ ಎಂದರೆ ಹೆಚ್ಚಾದೀತು, ಬರೆಯಲು ಮನಸ್ಸು ಮಾಡಲಿಲ್ಲ ಎಂದರೂ... ಊಹೂಂ ಒಪ್ಪಲು ಮನಸ್ಸಾಗುತ್ತಿಲ್ಲ. ಒಟ್ಟಾರೆ ಮತ್ತೆ ಬರೆಯಬೇಕೆಂದು ತೀರ್ಮಾನಿಸಿದ್ದೇನೆ, ಅಷ್ಟೆ.


ಕಳೆದ ಎರಡು ವರುಷಗಳಿಂದ ದಿನಗಳು ಬಹಳ ಮುದ್ದು ಮುದ್ದಾಗಿ ಕಳೆಯುತ್ತಿವೆ. ಹಾಗೆಯೇ, ನಾನೆಲ್ಲಿ ಕಳೆದು ಹೋದೇನೋ ಎಂಬ ಭಯದಿಂದ ಮತ್ತೆ ಮೈಕೊಡವಿ ಕೂತಿದ್ದೇನೆ. ಈಗ್ಗೆ ನಾಲ್ಕೈದು ತಿಂಗಳಿಂದ ಮತ್ತೊಂದು ಬ್ಲಾಗನ್ನೂ ( http://radhika-mahesh.blogspot.com/ ) ಶುರುವಿಟ್ಟುಕೊಂಡಿದ್ದೇನೆ, ನನ್ನ ಬಾಳಗೆಳೆಯ ಮಹೇಶ್ ಜೊತೆಸೇರಿ. ಆಗೀಗೊಮ್ಮೆ ನಮ್ಮೆದುರು ಪ್ರತ್ಯಕ್ಷವಾಗುವ ಫ್ರೇಮುಗಳಿಗೇ ಬ್ಲಾಗು ರೂಪ ಕೊಡುವ ಪ್ರಯತ್ನವದು.

. . . ಹಾಗೆಂದು ಎರಡು ವರುಷಗಳಲ್ಲಿ ಬರೆಯಲೇ ಇಲ್ಲ ಎಂದಲ್ಲ, ಕಾರ್ಯನಿಮಿತ್ತ ಬರೆದಿದ್ದೇನೆ, ಬರೆಯುತ್ತಲೂ ಇದ್ದೇನೆ. ಆದರೆ ನನ್ನದೆಂದೇ ಇರುವ ಇಲ್ಲಿ ಬರೆದರೆ ಅದರಿಂದ ಸಿಗುವ ಸಂತೃಪ್ತಿ ಬೇರೆಯೇ ಬಿಡಿ. ಹಾಗಾಗಿ ಮತ್ತೆ ಮರಳಿದ್ದೇನೆ . . .

ರಾಧಿಕಾ