Tuesday, July 26, 2011

ಶಿವಮೊಗ್ಗೆಯ ಮಳೆ, ಒಂದು ಆಕ್ಸಿಡೆಂಟ್ ಹಾಗೂ ಆ ಸಜ್ಜನ


ಅಂದು ಮಳೆಯಲ್ಲಿ ಅದೆಷ್ಟು ಒದ್ದೆ ಮುದ್ದೆಯಾಗಿ ಮನಸೋ ಇಚ್ಛೆ ಮಿಂದಿದ್ದೆನೋ... ಹೇಳಲೊಲ್ಲೆ. ಎಷ್ಟೋ ಸಮಯದ ನಂತರ ಮಳೆಯಲ್ಲಿ ಮಳೆಯಾಗುವ ಮುಳುಗೇಳುವ ಭಾಗ್ಯ ಒದಗಿತ್ತು. ಶಿವಮೊಗ್ಗೆ, ಕುಂದಾದ್ರಿಯ ಆ ಉತ್ತುಂಗದಲ್ಲಿ ಕೊಚ್ಚಿಹೋಗುವಂಥ ಗಾಳಿ-ಮಳೆ, ನಮ್ಮನ್ನೇ ಹೊತ್ತೊಯ್ಯುವಂತೆ ಬೀಸುವ ಚಳಿಗಾಳಿ, ಅಡಿಮೇಲಾಗುವ ಕೊಡೆಗಳು, ಮಂಜು ಕವಿದ ಹಾದಿಯಲ್ಲಿ ಒಂಟಿ ಕಾರಿನ ಪಯಣ, ಚೂರೂ ಕಾಣದಂತೆ ಮಂಜಿನಲ್ಲಿ ಇನ್ನಿಲ್ಲದಂತೆ ಮುಚ್ಚಿ ಹೋದ ಜೋಗ, ಮಂಜಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಾ ದಿಡೀರ್ ಪ್ರತ್ಯಕ್ಷವಾಗುವ ರಾಜ- ರಾಣಿ ಧಾರೆಗಳು, ಕೆನ್ನೀರಿನಲ್ಲಿ ಮುಳುಗೆದ್ದ ಹಸಿರುಗದ್ದೆಗಳು, ಕಣ್ತೆರೆದಲ್ಲೆಲ್ಲಾ ಹರಿವ ಝರಿಗಳು... ಅಬ್ಬಬ್ಬಾ, ಒಂದೊಂದು ಚಿತ್ರಗಳೂ ಸಾಲಾಗಿ ಫ್ರೇಮು ಹಾಕಿ ಜೋಡಿಸಿಟ್ಟಂತೆ ಮನಸ್ಸಿನಲ್ಲಿ ದಾಖಲಾಗಿವೆ. ಬೆಂಗಳೂರು/ಚೆನ್ನೈಯ ತುಂತುರು ಮಳೆಗೆ ಕಪ್ಪೆದ್ದು ಹೋಗುವ ರಸ್ತೆಗಳನ್ನು ಕಂಡೂ ಕಂಡೂ ರಾಡಿಯಾಗಿದ್ದ ಮನಸ್ಸು ಕ್ಷಣದಲ್ಲಿ ಪ್ರಫುಲ್ಲವಾಗಿತ್ತು. ಅದೆಷ್ಟು ಬಾರಿ ಶಿವಮೊಗ್ಗ/ಜೋಗ/ಆಗುಂಬೆಯಲ್ಲಿ ಅಲೆದಾಡಿದ್ದರೂ, ಮಳೆಯಲ್ಲಿ ನೋಡುವ ಸೊಬಗೇ ಬೇರೆ. ಅಂತೂ ಸಮಯ ಕೂಡಿ ಬಂದಿತ್ತು. ಮನಸೋ ಇಚ್ಛೆ ಆ ಕ್ಷಣಗಳನ್ನು ಮೊಗೆಮೊಗೆದು ಅನುಭವಿಸಿದ್ದೂ ಆಗಿತ್ತು.

ಆದರೆ,

ಮರಳುವಾಗ..., ಆ ಎರಡು ದಿನಗಳು ಜೀವನದಲ್ಲಿ ಎಂದೂ ಮರೆಯಲಾಗದ ವೈರುಧ್ಯಗಳ ಪ್ರಯಾಣವಾಗಿತ್ತೆಂದು ಮುಂಚಿತವಾಗಿ ಹೇಗೆ ತಿಳಿದೀತು ಹೇಳಿ. ಹಾದಿಯಲ್ಲಿ ನಾವಿದ್ದ ಕಾರು ಬಸ್ಸಿಗೆ ಮುಖಾಮುಖಿ ಢಿಕ್ಕಿಯಾಗಿತ್ತು. ಅದೃಷ್ಟವೆಂದೇ ಹೇಳಬೇಕೇನೋ, ನಾವೆಲ್ಲ ಐದೂ ಮಂದಿ ಹೆಚ್ಚೇನೂ ಆಗದೆ, ಬದುಕುಳಿದಿದ್ದೆವು.

ಇದಾಗಿ, ವಾರ ಕಳೆದಿದೆ. ಈಗ ಮತ್ತೆ ಬಿಸಿಲೂರಿನಲ್ಲಿ ಬಂದು ಕೂತಿದ್ದೇನೆ. ಇಲ್ಲೂ ಆಗಾಗ ಮಳೆ ಸುರಿಯುತ್ತದೆ, ಹಠಾತ್ ಬರುವ ಅತಿಥಿಗಳಂತೆ! ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ಬೇಸರ. ಆದರೆ.., ಈಗ ಮಳೆ ಬರುವಾಗಲೆಲ್ಲ, ಶಿವಮೊಗ್ಗೆ ನೆನಪಾಗುತ್ತದೆ. ಆ ನೆನಪಿನ ಹಿಂದೆಯೇ ಆ ಬಸ್ಸು- ಕಾರು, ಧಡಾರ್, ಚೀರಾಟಗಳು ಮತ್ತೆ ಮತ್ತೆ ಕೇಳಿಸುತ್ತವೆ. ಕೊನೆಗೆ ಉಳಿಯುವುದು ಒಂದು ನಿಟ್ಟುಸಿರು, ಗಾಢ ಮೌನ.

ಇವಿಷ್ಟೇ ಅಲ್ಲ, ಇವೆಲ್ಲವುಗಳ ಜೊತೆಗೆ ಆ ಮುಖವೂ ಮತ್ತೆ ಮತ್ತೆ ಕಾಡುತ್ತದೆ. ಆ ಅಫಘಾತದ ಮುಂಜಾವಿನಲ್ಲಿ ನಮಗೆ ಮದ್ಯಾಹ್ನದವರೆಗೂ ಸಹಾಯದ ಮಳೆಯನ್ನೇ ಸುರಿಸಿದ ಬೆಂಗಳೂರಿನ ರಜನೀಶ್. ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬರು ಹಾದಿ ಮಧ್ಯೆ ತಮ್ಮ ಕುಟುಂಬ ಸಮೇತರಾಗಿ ನಮಗೆ ನೀಡಿದ ಸಹಾಯದ ಮುಂದೆ ಇಲ್ಲಿ ಅಕ್ಷರಗಳು ಜೀವಕಳೆದುಕೊಳ್ಳುತ್ತದೆ. ರಜನೀಶ್ ಕುಟುಂಬ ಚೆನ್ನಾಗಿರಲಿ. ಗೆಳತಿ ಸುಷ್ಮಾ ಬೇಗ ಚೇತರಿಸಿಕೊಳ್ಳಲಿ...

Tuesday, July 12, 2011

ಕಾಡುವ ನಾಯಿಗಳು...

ಮೊನ್ನೆ ಮೊನ್ನೆ ತೇಜಸ್ವಿ ಅವರ 'ಅಣ್ಣನ ನೆನಪು' ಓದುತ್ತಿದ್ದೆ. ಕಂಟ್ರಿ ನಾಯಿಯ ಬಾಲ ಕತ್ತರಿಸಿ ಜಾತಿ ನಾಯಿ ಮಾಡುವ ಸಾಹಸ ಓದುತ್ತಾ ಹೋದಂತೆ, ಕುಪ್ಪಳ್ಳಿಯಲ್ಲಿ ಒಂದು ದಿನ ನಮ್ಮ ಜೊತೆಗಿದ್ದ ನಾಯಿಮರಿಯ ಚಿತ್ರವೇ ಪದೇ ಪದೇ ಕಣ್ಣ ಮುಂದೆ ತೇಲಿ ಬಂತು...

ಹೌದು. ನಾವು ನೋಡಿದ ಪರಿಸರ, ಅಲ್ಲಿ ನಡೆದ ಘಟನೆಗಳಿಗೂ ಪುಸ್ತಕದಲ್ಲಿ ಓದುವ ಕಥೆಗಳಿಗೂ ನಮಗರಿವಿಲ್ಲದೆ ಸಂಬಂಧ ಕಲ್ಪಿಸಿ ಅವುಗಳೇ ನಮ್ಮ ಮನಃಪಟಲದಲ್ಲಿ ಓದುತ್ತಿದ್ದ ಹಾಗೆ ಸಿನಿಮಾದಂತೆ ಚಿತ್ರಿಸಿಕೊಳ್ಳುವುದು ಎಷ್ಟೋ ಬಾರಿ ನಮಗೆ ರೂಢಿಯಾಗಿಬಿಟ್ಟಿರುತ್ತದೆ. ನಮಗೇ ಅರಿವಿಲ್ಲದ ಹಾಗೆ ನಾವು ಅನುಭವಿಸಿದ/ಕಂಡ ಸನ್ನಿವೇಶಗಳು ಯಾವುದೋ ಕಥೆಗಳ ಪಾತ್ರಧಾರಿಗಳಾಗಿ ಜೀವತಳೆದು ಬಿಡುತ್ತವೆ. ಹಾಗಾಗಿಯೇ ಆ ಪಾತ್ರಗಳು ನಮಗೆ ಮತ್ತೆ ಮತ್ತೆ ಕಾಡುತ್ತವೆ. ಹೀಗೆ, ಅಣ್ಣನ ನೆನಪೂ ಕೂಡಾ ನನಗೆ ಇತ್ತೀಚೆಗೆ ತೀವ್ರವಾಗಿ ಕಾಡಿಸತೊಡಗಿತು. ಕಾರಣ ಆ ಜಾತಿ ನಾಯಿ.

ಎಷ್ಟೋ ಬಾರಿ ನನಗೆ ಅನಿಸುವುದಿದೆ, ನಾಯಿಯಷ್ಟು ತೀವ್ರವಾಗಿ ಪ್ರೀತಿಯ ಭಾವನೆಗಳನ್ನು ಕಣ್ಣಿನಿಂದ ಹಾಗೂ ತನ್ನ ಆಂಗಿಕ ಭಾಷೆಯಿಂದ ವ್ಯಕ್ತಪಡಿಸುವ ಪ್ರಾಣಿ ಬೇರೊಂದಿಲ್ಲ. ಬಾಲವಲ್ಲಾಡಿಸಿ, ಮೂಸಿ, ನೆಕ್ಕಿ, ಕಾಲಿನ ಸುತ್ತ ಸುತ್ತು ಹಾಕಿ, ಕೈಗಳನ್ನು ಎತ್ತಿ, ಕುಸ್ ಕುಸ್ ಕುಂಯ್ ಕುಂಯ್ ಎಂಬ ಸ್ವರ ಹೊರಡಿಸಿ... ಆಹ್... ಈ ಎಲ್ಲವೂ ಮಿಳಿತವಾದ ಆ ಪ್ರೀತಿಯ ಜಗತ್ತು ಮಾತ್ರ ಇನ್ನೊಂದಿಲ್ಲ! ಕುಪ್ಪಳ್ಳಿಗೆ ಹೋಗಿದ್ದಾಗಲೂ ಹೀಗೇ ಆಯಿತು. ಆ ಒಂದು ಪುಟಾಣಿ ನಾಯಿ ಮರಿ ಕುವೆಂಪು ಮನೆಯೆದುರು ಅತ್ತಿಂದಿತ್ತ ಇತ್ತಿಂದತ್ತ ಚುರುಕಾಗಿ ಓಡಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನಮಗೆ ಪ್ರೀತಿ ಬಂತು. ಒಂದೆರಡು ಬಿಸ್ಕತ್ತು ಹಾಕಿದೆವು. ಆಮೇಲೆ, ಮಾರನೇ ದಿನವೂ ಹೋಗುವರೆಗೂ ನಮ್ಮನ್ನು ಬಿಡಲಿಲ್ಲ. ನಮ್ಮ ಎಲ್ಲ ಫೋಟೋಗಳಿಗೂ ಭಾರೀ ಚೆನ್ನಾಗಿ ಪೋಸು ಕೊಟ್ಟ ಆ ನಾಯಿ ನಾವು ಹೊರಡುವ ದಿನ ನಮ್ಮ ಜೊತೆಗೆ ಹಿಂಬಾಲಿಸಿ ಬಲು ದೂರ ಬಂದು ಸೋತು ವಾಪಸ್ಸಾಯಿತು. ಮೊನ್ನೆಯೂ ಅಣ್ಣನ ನೆನಪಿನ ಜೊತೆ ಬಹಳವಾಗಿ ಕಾಡಿದ ಈ ನಾಯಿಯ ಪ್ರೀತಿಯನ್ನು ವಿವರಿಸುವಲ್ಲಿ ಮಾತ್ರ ನಾನು ಸೋಲೊಪ್ಪಿಕೊಳ್ಳುತ್ತೇನೆ.

ತಿಂಗಳ ಮೊದಲು ಚೆನ್ನೈನಿಂದ ಸುಮಾರು ಐವತ್ತು ಕಿಮೀ ದೂರದ ಮುದಲಿಯಾರ್ ಕುಪ್ಪಂಗೆ ಹೋಗಿದ್ದೆವು. ಉರಿ ಬಿಸಿಲಿನ ಮಧ್ಯಾಹ್ನ, ಹಾಗೆ ಕೂತು ಜ್ಯೂಸು ಹೀರುತ್ತಿದ್ದಾಗ ಪುಟಾಣಿ ನಾಯಿಮರಿ ಕಾಲೆಳೆಯುತ್ತಾ ಬಂತು. ಅದರ ಹಿಂಬದಿಯ ಎರಡೂ ಕಾಲುಗಳು ನಜ್ಜುಗುಜ್ಜಾಗಿದ್ದವು. ಪಾಪ, ಬಹುಶಃ ಯಾವುದೇ ವಾಹನದ ಅಡಿಗೆ ಸಿಕ್ಕಿ ಹಾಗಾಗಿದ್ದಿರಬೇಕು. ಆದರೆ ಗಾಯ ಗುಣವಾಗಿದ್ದರೂ, ಕಾಲು ಜೋಡಿರಲಿಲ್ಲವೆನಿಸುತ್ತದೆ. ನಡೆಯಲು ಅದಕ್ಕೆ ಆಧಾರ ಕೇವಲ ಮುಂಬದಿಯ ಕಾಲುಗಳು. ಭಾರೀ ಆತ್ಮವಿಶ್ವಾಸದ ಆ ಎರಡು ಕಾಲಿನ ನಾಯಿಮರಿ ನಮ್ಮತ್ತ ಬಂತು. ಎಂದಿನಂತೆ ಬಿಸ್ಕತ್ತು ಪ್ಯಾಕೆಟ್ಟುಗಳು ಖಾಲಿಯಾದವು. ತನ್ನ ದೇಹದ ಹಿಂಬದಿಯ ಶಕ್ತಿ ಕಳೆದುಕೊಂಡಿದ್ದ ಅದಕ್ಕೆ ಬಾಲವಾಡಿಸಲೂ ಆಗುತ್ತಿರಲಿಲ್ಲ. ಆದರೇನಂತೆ, ತಿಂದ ಮೇಲೆ ಕೊನೆಗೊಮ್ಮೆ ಪ್ರೀತಿಯಿಂದ ನೋಡಿ ತೃಪ್ತಿಯಿಂದ ಕಾಲೆಳೆಯುತ್ತ ಅಲ್ಲೆಲ್ಲೋ ಮರೆಯಾಯಿತು.

ಅದಿರಲಿ, ಇತ್ತೀಚೆಗೆ ಮೊನ್ನೆ ನಮ್ಮ ಅಪಾರ್ಟ್‌ಮೆಂಟಿಗೆ ಒಂದು ದಿನ ಬೆಳ್ಳಂಬೆಳಗ್ಗೆ ನಾಯಿ ಬಂದಿತ್ತು. ಪಕ್ಕಾ ಕಂಟ್ರಿ ನಾಯಿಯಾದರೇನಂತೆ, ಕೊರಳಲ್ಲಿ ಚೆಂದದ ಬೆಲ್ಟು. ಸ್ನಾನ ಮಾಡಿಸಿ ನುಣುಪಾಗಿದ್ದ ಕೂದಲು. ದಾರಿ ತಪ್ಪಿ ಬಂದಿದ್ದ ಅದು ಯಾರದೋ ಮನೆಯ ಸಿಕ್ಕಾಪಟ್ಟೆ ಮುದ್ದು ಮಾಡಿಸಿಕೊಳ್ಳುತ್ತಿದ್ದ ಸಾಕು ನಾಯಿ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ, ನಮ್ಮ ಅಪಾರ್ಟ್‌ಮೆಂಟಿನ ಮುಂದೆ ಪ್ರತ್ಯಕ್ಷವಾದಾಗಿನಿಂದ ಅದನ್ನು ಯಾವ ಮನೆಯವರೂ ಅವರವರ ಮನೆಯ ಮುಂದೆ ಮಲಗಲು ಅದನ್ನು ಬಿಡುತ್ತಿರಲಿಲ್ಲ. ಎಲ್ಲರೂ ಓಡಿಸುತ್ತಿದ್ದರು. ಸುಸ್ತಾದ ಅದು ಕೊನೆಗೆ ನಮ್ಮ ಮನೆಯ ಮೆಟ್ಟಿಲ ಕೆಳಗೆ ಬಂದು ಮಲಗಿತು. ದಯನೀಯವಾಗಿ ನೋಡುತ್ತಿದ್ದ ಅದಕ್ಕೆ ಬಿಸ್ಕತ್ತು, ಅನ್ನ- ಸಾಂಬಾರು ಹಾಕಿದೆವು, ಮಾರನೇ ದಿನ ಪಕ್ಕದ ಮನೆಯವರಿಂದ 'ಇನ್ನು ಅದು ಇಲ್ಲಿಂದ ಏಳಲ್ಲ ಬಿಡಿ, ಈ ಫ್ಲಾಟಿನಲ್ಲಿದ್ದೋರ ಕಥೆ ಮುಗೀತು' ಎಂಬರ್ಥದ ಕುಹಕದ ಮಾತುಗಳೂ ತೂರಿ ಬಂದವು. ಹಾಗೆ ಇದ್ದ ಅದು, ನಾಲ್ಕೈದು ದಿನ ಇದ್ದು ಚೆನ್ನಾಗಿ ತಿಂದುಂಡು ಒಮ್ಮೆ ಹೊರಟು ಹೋಯಿತು. ಹೇಗೆ, ಅದಕ್ಕೆ ಮತ್ತೆ ತನ್ನ ಮನೆ ಸಿಕ್ಕಿದೆ ಎಂದು ಗೊತ್ತಾಗಲಿಲ್ಲ.ಇರಲಿ, ಅಂತೂ ಅದಕ್ಕೆ ಅದರ ಮನೆಯ ದಾರಿ ಸಿಕ್ಕಿತ್ತು. ಇದಾಗಿ ವಾರದ ನಂತರ ಒಂದು ದಿನ ನಮ್ಮ ಮನೆಯ ಎರಡನೇ ಕ್ರಾಸಿನಲ್ಲಿ ರಾಜಗಾಂಭೀರ್ಯದಲ್ಲಿ ತನ್ನೊಡೆಯನ ಜೊತೆ ವಾಕಿಂಗ್ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು. ಈಗ ದಿನವೂ ಮನೆಯ ಹತ್ತಿರವಿರುವ ಪಾರ್ಕಿಗೆ ತನ್ನೊಡೆಯನ ಜೊತೆ ಬರುತ್ತದೆ. ಕಂಡಾಗ ಪ್ರೀತಿಯಿಂದ ಕಣ್ಣು ಮಿಟುಕಿಸಿ ಬಾಲವಲ್ಲಾಡಿಸುತ್ತದೆ. ಕಾಡುವ ಇವುಗಳ ಪ್ರೀತಿಗಿಂತ ಇನ್ನೇನು ಬೇಕು ಹೇಳಿ???

Monday, June 20, 2011

ಮತ್ತೆ ಮರಳಿ...

ಓಹ್ . . .

ನನ್ನ ಈ ಮಧುಬನದಿ ಸುಳಿಯದೆ 2 ವರುಷಗಳೇ ಕಳೆದವು. ಅದು ಹೇಗೆ ಎರಡು ವರುಷಗಳು ಕಳೆದುಹೋದವೆಂದೇ ಅರಿಯೆನು. ಛೇ, ಬರೆಯಲಾಗುತ್ತಿಲ್ಲವಲ್ಲ ಎಂಬ ಬೇಸರ ಎರಡು ವರ್ಷಗಳಲ್ಲಿ ಅನೇಕ ಬಾರಿ ಆಗಿದ್ದೂ ಇದೆ. ಸಮಯ ಸಿಗಲಿಲ್ಲ ಎಂದರೆ ಹೆಚ್ಚಾದೀತು, ಬರೆಯಲು ಮನಸ್ಸು ಮಾಡಲಿಲ್ಲ ಎಂದರೂ... ಊಹೂಂ ಒಪ್ಪಲು ಮನಸ್ಸಾಗುತ್ತಿಲ್ಲ. ಒಟ್ಟಾರೆ ಮತ್ತೆ ಬರೆಯಬೇಕೆಂದು ತೀರ್ಮಾನಿಸಿದ್ದೇನೆ, ಅಷ್ಟೆ.


ಕಳೆದ ಎರಡು ವರುಷಗಳಿಂದ ದಿನಗಳು ಬಹಳ ಮುದ್ದು ಮುದ್ದಾಗಿ ಕಳೆಯುತ್ತಿವೆ. ಹಾಗೆಯೇ, ನಾನೆಲ್ಲಿ ಕಳೆದು ಹೋದೇನೋ ಎಂಬ ಭಯದಿಂದ ಮತ್ತೆ ಮೈಕೊಡವಿ ಕೂತಿದ್ದೇನೆ. ಈಗ್ಗೆ ನಾಲ್ಕೈದು ತಿಂಗಳಿಂದ ಮತ್ತೊಂದು ಬ್ಲಾಗನ್ನೂ ( http://radhika-mahesh.blogspot.com/ ) ಶುರುವಿಟ್ಟುಕೊಂಡಿದ್ದೇನೆ, ನನ್ನ ಬಾಳಗೆಳೆಯ ಮಹೇಶ್ ಜೊತೆಸೇರಿ. ಆಗೀಗೊಮ್ಮೆ ನಮ್ಮೆದುರು ಪ್ರತ್ಯಕ್ಷವಾಗುವ ಫ್ರೇಮುಗಳಿಗೇ ಬ್ಲಾಗು ರೂಪ ಕೊಡುವ ಪ್ರಯತ್ನವದು.

. . . ಹಾಗೆಂದು ಎರಡು ವರುಷಗಳಲ್ಲಿ ಬರೆಯಲೇ ಇಲ್ಲ ಎಂದಲ್ಲ, ಕಾರ್ಯನಿಮಿತ್ತ ಬರೆದಿದ್ದೇನೆ, ಬರೆಯುತ್ತಲೂ ಇದ್ದೇನೆ. ಆದರೆ ನನ್ನದೆಂದೇ ಇರುವ ಇಲ್ಲಿ ಬರೆದರೆ ಅದರಿಂದ ಸಿಗುವ ಸಂತೃಪ್ತಿ ಬೇರೆಯೇ ಬಿಡಿ. ಹಾಗಾಗಿ ಮತ್ತೆ ಮರಳಿದ್ದೇನೆ . . .

ರಾಧಿಕಾ

Tuesday, April 14, 2009

ಒಂದು ಬಹಿರಂಗ ಪತ್ರ

ಪ್ರಿಯ...

'ರೇಡಿಯೋ ಸಿಟಿ ೯೧.೧... ಬೆಂಗಳೂರಿನ..' ಅಂತ ಕಿವಿಗಡಚಿಕ್ಕುವ ಸ್ವರ ಹಾಲ್ ನಿಂದ ಬೆಡ್ ರೂಂಗೆ ಬಂದಾಗಲೇ ನಾನು ಹಾಗೆ ಮೆತ್ತಗೆ ಮಗ್ಗುಲು ಬದಲಾಯಿಸುತ್ತಿದ್ದೆ. ಹೋ ಗಂಟೆ ಒಂಬತ್ತಾಯಿತೇ. 10ಕ್ಕೆ ಅಸೈನ್ಮೈಂಟ್ ಇದೆ. ಹೆಚ್ಚೆಂದರೆ ಮನೆಯಿಂದ ಆಫೀಸಿಗೆ ಅರ್ಧ ಗಂಟೆಯಿಲ್ಲದಿದ್ದರೆ ೧೩ ಕಿ.ಮೀ ದೂರಕ್ಕೆ ಜಪ್ಪಯ್ಯ ಅಂದರೂ ಹೋಗಲು ಸಾಧ್ಯವಿಲ್ಲ ಅನ್ನುತ್ತಲೇ, ನಾಳೆಯಿಂದ ಸ್ವಲ್ಪ ಬೇಗ ಏಳಬೇಕು. ಇಲ್ಲವಾದರೆ ಗಡಿಬಿಡಿಯಾಗುತ್ತದೆ. ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ಮುಗೀತು ಅಂತ ನಾನೇ ನನಗೆ ಹೇಳುತ್ತಾ ಹಾಲ್ಗೆ ಬರುತ್ತಿದ್ದೆ. ಆದರೆ, ಪ್ರತಿಸಲವೂ ಬೇಗ ಏಳಬೇಕು ಅನ್ನುತ್ತಲೇ ಇದ್ದರೂ ದಿನಚರಿ ಮಾತ್ರ ಬದಲಾವಣೆ ಕಂಡಿರಲಿಲ್ಲ. ಒಮ್ಮೊಮ್ಮೆ ನೀನು ಫೋನ್ ಮಾಡಿದಾಗ 'ಮಲಗಿದ್ದೀಯಾ' ಅಂತಲೇ ಮಾತು ಆರಂಭಿಸುತ್ತಿದ್ದೆ. ಆದರೇನು ಮಾಡೋಣ, ಮನೆಗೆ ಬರುತ್ತಿದ್ದುದೇ ೧೧, ೧೧.೩೦ ರಾತ್ರಿಗೆ. ಹಾಗಾಗಿ ಇದೆಲ್ಲ ಮಾಮೂಲು ಅಂತ ನಿನಗೂ ಗೊತ್ತು, ನನಗೂ ಗೊತ್ತು.

ಇರಲಿ ಬಿಡು. ಆಗೆಲ್ಲಾ ರಾತ್ರಿ ೧೧ ಗಂಟೆಗೆ ಮನೆಗೆ ಬಂದು ಬಾತ್ರೂಂನಲ್ಲಿ ಬೆಂಗಳೂರಿನ ಚಳಿಗೆ ಬಿಸಿನೀರು ಹೊಯ್ಯುತ್ತಿದ್ದರೆ, ಆಹಾ ಎಂಥಾ ಸುಖ. ಇಡೀ ದಿನದ ಸುಸ್ತೆಲ್ಲ ಬಸಿದುಹೋದ ಅನುಭವ. ಆಮೇಲೆ ಊಟ, ನಂತರ ಯಾವುದೋ ಪುಸ್ತಕವೋ, ಟಿವಿ ನ್ಯೂಸೋ ಆವಾಹನೆಯಾದರೆ ಮುಗೀತು. ರಾತ್ರಿ ಒಂದೋ, ಎರಡೋ ಗಂಟೆ ಗ್ಯಾರೆಂಟಿ. ಹೀಗಾಗಿ ರೇಡಿಯೋಸಿಟಿಗೆ ಬೆಳಗಾದರೂ ನನಗೆ ಬೆಳಗಾಗುತ್ತಿರಲಿಲ್ಲ. ತಮ್ಮ ತಿಂಡಿ ಮುಗಿಸಿ ಆಫೀಸಿಗೆ ಹೊರಡುವ ಸಂದರ್ಭ ಶಿಸ್ತಾಗಿ ಶೂಲೇಸ್ ಕಟ್ಟುವಾಗ ರೇಡಿಯೋ ಸಿಟಿಯ ಗುಂಡಿ ಅಮುಕುತ್ತಿದ್ದ. ಹೀಗಾಗಿ, ಆಗೆಲ್ಲಾ ನನಗೆ ರೇಡಿಯೋ ಸಿಟಿಯೇ ನಿತ್ಯವೂ ಸುಪ್ರಭಾತ ಹಾಡುತ್ತಿತ್ತು. ನಿಧಾನಕ್ಕೆ ಪೇಪರ್ ಮೇಲೆ ಕಣ್ಣಾಡಿಸಿ ನನ್ನ ಪ್ರತಿಸ್ಪರ್ಧಿಗಳ ಬೈಲೈನ್ ಏನಾದರೂ ಇದೆಯೇ, ನನ್ನ ಸ್ಟೋರಿ ಅವರಿಗೆ ಸಿಕ್ಕಿಲ್ಲ ಅಂತ ಖಾತ್ರಿಪಡಿಸಿ ಏನೋ ಘನಾಂದಾರಿ ತೃಪ್ತಿಯಿಂದ ಆಫೀಸಿಗೆ ಹೊರಡುತ್ತಿದ್ದೆ.

ಆದರೆ ಈಗ ಹಾಗಿಲ್ಲ. ಚೆನ್ನೈಯಲ್ಲಿ ಹಾಯಾಗಿದ್ದೇನೆ. 'ಬೆಂಗಳೂರಿನ...' ಅಂತ ರಾಗ ಹಾಡುತ್ತಿದ್ದ ರೇಡಿಯೋ ಸಿಟಿ ಇಲ್ಲಿ ಬೆಳಗಾತ ಎದ್ದು 'ಚೆನ್ನೈಯೋಡ...' ಅಂತ ರಾಗ ಹಾಡುತ್ತದೆ. ವ್ಯತ್ಯಾಸವೇನೂ ಇಲ್ಲ. 'ಅಣ್ಬೇ ಅಣ್ಬೇ ಕೊಲ್ಲಾದೇ..' ಅಂತ ಎಲ್ಲಿಂದಲೋ ತೇಲಿ ಬರುವ ಲಹರಿಯಿಂದ ನಾನು ಎಲ್ಲಿಗೋ ತಪ್ಪಿ ಬಂದಿಳಿದಂತೇನೂ ಅನಿಸುವುದಿಲ್ಲ. ಭಾಷೆ ಯಾವುದಾದರೇನು.. ಕಿವಿ ತಂಪಾದರೆ ಮನಸ್ಸು ಕುಣಿಯುತ್ತದೆ. ಆದರೆ, ವಿಚಿತ್ರವೋ, ವಿಷಾದವೋ ಗೊತ್ತಿಲ್ಲ. ಯಾವ ಚಾನಲ್ ಗುಂಡಿ ಒತ್ತಿದರೂ ಕೇಳುವ ಹಾಡು ನಮ್ಮ ಕನ್ನಡ ನೆಲದ್ದೇ ಅನಿಸುತ್ತದೆ. ಯಾಕೆಂದರೆ, ತಮಿಳಿನ ಪ್ರಸಾದವನ್ನೇ ತಾನೇ ಕನ್ನಡದ ಜನ ಥಿಯೇಟರ್ನಲ್ಲಿ ರಿಮೇಕ್ ಹೆಸರಲ್ಲಿ ನೋಡಿ ಪಾವನರಾಗುತ್ತಿರುವುದು.

ಇದೆಲ್ಲ ನಮ್ಮ ಕನ್ನಡದ ಈಗಿನ ವ್ಯಥೆ, ಹೇಳಿ ಏನು ಪ್ರಯೋಜನ ಅಂತೀಯಾ. ಸರಿ ಬಿಡು. ಆ ವಿಷಯ ಅಲ್ಲಿಗೇ ಬಿಡೋಣ. ಏನೇ ಆದರೂ, ಇಲ್ಲಿ ಎಷ್ಟೇ ಅಡ್ಡಾಡಿದರೂ ನಾನು ದಿನಸಿ ಅಂಗಡಿ ಮುಂದೆ ನಿಂತರೆ ಮಾತ್ರ ಬಾಯಿ ಕಟ್ಟಿದಂತಾಗುತ್ತದೆ. ಅವನಿಗೋ ಇಂಗ್ಲೀಷು, ಹಿಂದಿ ಬರುವುದಿಲ್ಲ. ನನಗೋ ತಮಿಳು ಬರುವುದಿಲ್ಲ. 'ತಮಿಳ್ ತೆರಿಯಾದಾ' ಅಂತ ಆತ ಕೇಳಿದರೆ ಬಾಯಿಯಿಂದ ಪೆಚ್ಚುಮೋರೆಯ ನನ್ನ ಉತ್ತರ ಅವನಿಗೆ ಕಾದಿರುತ್ತದೆ. ಏನೋ ಅಲ್ಪಸ್ವಲ್ಪ ತುಳು ಮಿಕ್ಸ್ ಮಾಡಿ ಕರ್ನಾಟಕದ ಗಡಿಭಾಗದಲ್ಲಿದ್ದುದರಿಂದ ಮಲಯಾಳವನ್ನೂ ಮಿಕ್ಸ್ ಮಾಡಿದರೆ ಮುಗೀತು. ತಮಿಳೇ ಅಲ್ಲದಿದ್ದರೂ, ಅವನಿಗೆ ಅರ್ಥವಾಗುವ ಒಂದು ಭಾಷೆಯಂತೂ ರೆಡಿಯಾಗುತ್ತದೆ.

ಆದರೆ, ಜೇಪಿನಗರ, ಜಯನಗರ, ವಸಂತನಗರ, ಶಿವಾಜಿನಗರ ಅಂತೆಲ್ಲ ಹೊರಳುತ್ತಿದ್ದ ನಾಲಿಗೆ ಮಾತ್ರ ಯಾಕೋ ನನ್ನ ಜತೆ ಇಲ್ಲಿ ಸಹಕರಿಸುತ್ತಿಲ್ಲ ಪ್ರಿಯ. ವಡಪಳನಿ, ಅಂಜಿಗೆರೆ, ಎಗ್ಮೋರ್, ಮಾಂಬಳಂ, ನುಂಗಂಬಾಕಂ, ಪರಶುವಾಕಂ, ಚೂಲೆಮೇಡು, ಕೋಡಂಬಾಕಂ ಅನ್ನುವಾಗ ಹೋಟೆಲ್ಲಿನ ಮೆನು ಲಿಸ್ಟಿನಂತೆ ನನ್ನನ್ನು ಸಿಕ್ಕಾಪಟ್ಟೆ ಕನ್ಫ್ಯೂಸ್ ಮಾಡಿ ಹಾಕುತ್ತದೆ. ಮಾಂಬಳದ ನೆನಪೂ ಎಲ್ಲೋ ಕಾಡಿದಂತಾಗಿ ಬಾಯಲ್ಲೂ ನೀರೂರುತ್ತದೆ. ನುಂಗಂಬಾಕಂ ಅನ್ನಲು ಹೋಗಿ ಗಡಿಬಿಡಿಯಲ್ಲಿ ನುಂಬಂಗಾಪಂ ಅಂದುಬಿಟ್ಟು ನನ್ನ ನಾಲಿಗೆಯೇ ಕಚ್ಚಿಕೊಳ್ಳಬೇಕಾಗುತ್ತದೆ.

ಇನ್ನು ಬೆಳಗ್ಗೆ ಆಫೀಸಿಗೆ ನನ್ನ ಕರ್ನಾಟಕ ನೋಂದಣಿಯ ಗಾಡಿಯಲ್ಲಿ ಹೋಗುವ ಮಜಾವೇ ಬೇರೆ ಪ್ರಿಯ. ಎಲ್ಲ ಟಿಎನ್ ಗಾಡಿಗಳ ಮಧ್ಯೆ ನನ್ನದೊಂದು ಕೆಎ. ಬೆಂಗಳೂರಿನ ತಂಪಿನಲ್ಲಿ ಕಿವಿಯನ್ನೂ ಮುಚ್ಚಿ ಹೆಲ್ಮೆಟ್ ಏರಿಸಿ ಹೋಗುತ್ತಿದ್ದರೆ ಏನೋ ಖುಷಿ. ಇಲ್ಲಿ ಬೆಳ್ಳಂಬೆಳಗ್ಗೆಯೇ ಹಣೆಯಿಂದ ತೊಟ್ಟಿಕ್ಕುವ ಬೆವರ ಜಲಧಾರೆಯ ತಂಪಿನಲ್ಲಿ ಹೆಲ್ಮೆಟ್ ಮುಚ್ಚಿ ಆಫೀಸು ಬಂದಾಗ ತೆಗೆಯುವಾಗ ಆಹಾ ಅನ್ನುವ ಖುಷಿಯ ಉದ್ಗಾರವೇ ಇನ್ನೊಂದು ಖುಷಿ. ಒಂದಕ್ಕೊಂದು ತುಂಬಾ ಸಾಮ್ಯತೆ ಅಂತೀಯಾ.

ಸರಿ ಬಿಡು. ಆದರೂ ಮುರುಗನ್ ಇಡ್ಲಿ ಶಾಪಿನಲ್ಲಿ ಕೂತು ತಿನ್ನುತ್ತಿದ್ದರೆ, ಮಲ್ಲೇಶ್ವರದ ಹಳ್ಳಿಮನೆಯಲ್ಲಿ ಕೂತಂತೇ ಹೊಟ್ಟೆ ತುಂಬುತ್ತದೆ. ನೀಲಾಂಗರೆಯ ಬೀಚಿನಲ್ಲಿ ಬಿಸಿಲ ಮಧ್ಯಾಹ್ನಗಳಲ್ಲಿ ಅಡ್ಡಾಡಿದರೆ, ಥೇಟ್ ಅದೇ ಪಣಂಬೂರು ಮೈತೆರೆದಂತೆ ಅನಿಸುತ್ತದೆ. ಸುತ್ತಲ ಕರಿಮುಖಗಳ ನಡುವಲ್ಲಿ ಮಿಂಚುಗಣ್ಣುಗಳು ನನ್ನ ನಿಟ್ಟಿಸುವಾಗ, ಊರಿನಲ್ಲಿ ಅಕ್ಕಪಕ್ಕದ ಮನೆಮಂದಿ ಬಹಳ ಸಮಯದ ನಂತರ ಕಾಣಸಿಕ್ಕಿದರೆ ಅಡಿಯಿಂದ ಮುಡಿಯವರೆಗೆ ನಿಲುಕಿಸಿದಂತೆ ಆಪ್ತತೆ ಕಾಣುತ್ತದೆ.

ಆದರೂ.. ಯಾಕೋ...

...ಮಳೆಯ ಹನಿಯಲ್ಲೇ ನೆನೆಯುತ್ತಾ ಆಫೀಸಿನ ಬ್ಯುಸಿಯಲ್ಲೇ ಪುರುಸೊತ್ತು ಮಾಡಿ ಹೋಟೆಲ್ ಕ್ಯಾಪಿಟಲ್ ಪಕ್ಕದಿಂದಾಗಿ ರಾಜಭವನವನ್ನು ಬಳಸಿ ನಾವು ಹೋಗುತ್ತಿದ್ದ ಸಂಜೆಯ ಪುಟ್ಟ ವಾಕ್, ಕೆಲಸ ಮುಗಿಸಿ ಮನೆಗೆ ಹೊರಡುವ ಅಪರಾತ್ರಿಯಲ್ಲೂ ಒಂದರ್ಧ ಗಂಟೆ ಕೂತು ಹರಟುತ್ತಿದ್ದ ಆಪ್ತಘಳಿಗೆ, ವಿಧಾನಸೌಧದ ಎದುರಲ್ಲೇ ಮೆಲ್ಲುತ್ತಿದ್ದ ಮಸಾಲೆಪುರಿ, ಚಳಿಮಳೆಯಲ್ಲೂ ತಡರಾತ್ರಿಯಲ್ಲಿ ನಡುಗುತ್ತಾ ಒದ್ದೆಯಾಗಿ ಮನೆಗೆ ಹೋಗುವ ರಾತ್ರಿಗಳು... ಇವೆಲ್ಲಾ ಮಾತ್ರ ಯಾಕೋ ತುಂಬ ಕಾಡುತ್ತವೆ. ನೆನಪಾಗುತ್ತದೆ.

ಸರಿ, ಹೊತ್ತಾಯಿತು. ಇನ್ನೊಮ್ಮೆ ಬರುತ್ತೇನೆ ಪತ್ರದಲ್ಲಿ.
ರಾಧಿಕಾ

Thursday, January 29, 2009

ಸುಮ್ಮನೆ, ಒಂದು ಕ್ಷಣದ ಮೌನ...

ಊರಿಗೆ ಬಂದು ಭರ್ತಿ ಮೂರು ದಿನಗಳಾಗಿದ್ದವು. ಅಮ್ಮನ ಜತೆ ಹಾಳುಮೂಳು ಹರಟೆ, ಲೊಟ್ಟೆ ಪಟ್ಟಾಂಗ ಹೊಡೆಯದೆ ಬಹಳ ದಿನಗಳಾಗಿದ್ದವು. ಇನ್ನೂ ಬಹಳ ಇದೆ ಮಾತಾಡೋದಿಕ್ಕೆ ಅಂದುಕೊಳ್ಳುತ್ತಿರುವಾಗಲೇ ಹೊರಡುವ ದಿನ ಬಂದುಬಿಟ್ಟಿತ್ತು. ಹೊರಡುವಾಗ ಯಾಕೋ ಮನಸ್ಸು ಖಾಲಿ ಖಾಲಿ. ಅಮ್ಮನ ಚಕ್ಕುಲಿ, ಉಂಡ್ಲಕಾಳು, ನೇಂದ್ರ ಬಾಳೆಕಾಯಿ ಚಿಪ್ಸು... ಇನ್ನೂ ಏನೇನೋ, ಜತೆಗೆ ಒಂದಿಷ್ಟು ಅಮ್ಮನ ಪ್ರೀತಿ, ಅಪ್ಪನ ನೇವರಿಕೆಗಳೆಲ್ಲವೂ ಸೇರಿ ಇದ್ದ ನಾಲ್ಕು ಬ್ಯಾಗುಗಳೂ ಮಣಭಾರವಾಗಿಬಿಟ್ಟಿದ್ದವು. ವಿಟ್ಲ ಬಸ್‌ಸ್ಟಾಂಡಿನಲ್ಲಿ ಆಟೋದಿಂದ ಇಳಿಸುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ದೂರದ ಚೆನ್ನೈಗೆ ಇದನ್ನು ಸಾಗಿಸುವಷ್ಟರಲ್ಲಿ.. ಅಂತ ನನ್ನ ಹೈರಾಣುತನದ ಕಲ್ಪನೆಯಲ್ಲೇ ನಿಂತಿದ್ದೆ. ಅಪ್ಪ ಅದೇನೋ ಕೆಲಸಕ್ಕೆಂದು ಆಚೆ ಹೋಗಿದ್ದರು. ಇಷ್ಟಾದಾಗ ಅದೆಲ್ಲಿಂದಲೋ ಆ ಸಣಕಲು ಪೇಪರ್‌ ಮನುಷ್ಯ ನನಗೆ ತಗುಲಿ ಹಾಕಿಕೊಂಡು ಬಿಟ್ಟ.
‘ಪೇಪರ್‌ ಬೇಕಾ? ಉದಯವಾಣಿ, ವಿಜಯ ಕರ್ನಾಟಕ, ಡೆಕ್ಕನ್‌ ಹೆರಾಲ್ಡ್‌..’ ಎಮ್ಮೆ ಉಚ್ಚೆ ಹೊಯ್ದಂತೆ ತನ್ನ ರಾಗ ದಾಟಿಸಿದ ನನ್ನತ್ತ. ಬೇಡ ಅಂದೆ. ನನ್ನ ಕಣ್ಣೋ ಪಕ್ಕದಲ್ಲಿ ನಾನಿಟ್ಟಿದ್ದ ನಾಲ್ಕು ಬ್ಯಾಗುಗಳನ್ನು ಬಿಟ್ಟು ಕದಲುತ್ತಿರಲಿಲ್ಲ. ಮುಖದ ಮೇಲೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತಿತ್ತು. ಇದನ್ನೇ ಗಮನಿಸಿದಂತೆ, ಪೇಪರ್ ಮನುಷ್ಯ, ‘ಆ ಕಡೆ ನೆರಳಿನಲ್ಲಿ ನಿಲ್ಲಿ’ ಅಂದ. ನಾನು ಮಾತನಾಡಲಿಲ್ಲ. ‘ಬ್ಯಾಗು ಇದೆ ಅಂತ ತಲೆ ಬಿಸಿ ಮಾಡಬೇಡಿ. ನಾನಿದ್ದೇನೆ. ಬ್ಯಾಗು ಇಲ್ಲಿ ಏನೂ ಆಗುವುದಿಲ್ಲ’ ಅಂದ. ನನಗೆ ಸಿಟ್ಟು ಬರಲು ಶುರುವಾಗಿತ್ತು. ‘ಅರೆ, ನಾನು ನನ್ನ ಪಾಡಿಗೆ ನನ್ನ ಬ್ಯಾಗಿನ ಜತೆ ನಿಂತರೆ ಇವನ್ಯಾರು ತಲೆಹರಟೆ? ಸಿಟಿ ರೋಗ ಇಲ್ಲಿಗೂ ತಗುಲಿರ್‍ಬೇಕು. ಇಲ್ಲದಿದ್ದರೆ, ನಾನು ಬಿಸಿಲಿನಲ್ಲಿ ಒಣಗಿಹೋದರೆ ಇವನಿಗೇನು ತಲೆಬಿಸಿ. ಸುಮ್ಮನೆ ಕೊನೆಗೆ ದುಡ್ಡು ಕೇಳುವ ವರಸೆಯನ್ನು ಇಲ್ಲಿಂದಲೇ ಆರಂಭಿಸುತ್ತಿದ್ದಾನೆ...’ ಅಂದುಕೊಂಡೆ. ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಪ್ಪ ಬರುತ್ತಿರುವುದು ಕಾಣಿಸಿತು. ಅಷ್ಟಾಗಲೇ ಮಂಗಳೂರು ಬಸ್ಸೂ ಸರಿಯಾಗಿ ಹಾಜರಿತ್ತು. ಈಗ ನಾಲ್ಕು ಮಣಭಾರದ ಬ್ಯಾಗನ್ನು ಮಂಗಳೂರು ಬಸ್ಸಿನ ಮಡಿಲಿಗೆ ಹಾಕುವ ನೇತೃತ್ವ ಅಪ್ಪ ವಹಿಸುವ ಮೊದಲೇ.. ಪೇಪರ್‌ ಮನುಷ್ಯ, ‘ ಓ ಈರೆನ ಮಗಳಾ.. ’ ಅನ್ನುತ್ತಾ ತಾನೇ ಆ ಕಾರ್ಯಕ್ರಮದ ನೇತೃತ್ವ ವಹಿಸಿದ. ಓಹೋ ನಾನು ಊಹಿಸಿದಂತೆಯೇ ಈತ ದುಡ್ಡು ಮಾಡಲು ಇಷ್ಟೆಲ್ಲ ಹೆಲ್ಪ್‌ ಮಾಡ್ತಾ ಇದ್ದಾನೆ ಅಂತ ನಾನು ಮೊದಲು ಊಹಿಸಿದ್ದು ಸರಿಯಾಗೇ ಇದೆ ಇದೆ ಅಂದುಕೊಂಡೆ. ಎಷ್ಟು ಬೇಗ ಸಿಟಿ ಸಂಸ್ಕೃತಿಯನ್ನು ಊರಲ್ಲೂ ಕಲಿತುಬಿಟ್ಟರು ಅಂದುಕೊಳ್ಳುತ್ತಲೇ ಬಸ್ಸೇರಿದೆ.
ಪೇಪರ್‌ ಮನುಷ್ಯ ನಗುತ್ತಾ ಅಪ್ಪನ ಜತೆ ಮಾತನಾಡುತ್ತಾ ನಿಂತಿದ್ದ. ನಾನು ೨೦ರ ನೋಟೊಂದನ್ನು ಪರ್ಸಿನಿಂದ ತೆಗೆದು ಅಪ್ಪನ ಕೈಗೆ ದಾಟಿಸಿದೆ. ಪ್ರಶ್ನಾರ್ಥಕವಾಗಿ ಅಪ್ಪ ನನ್ನನ್ನೇ ನೋಡುತ್ತಾ, ‘ನಿನ್ನ ಬೆಂಗ್ಳೂರು ಬುದ್ಧಿ ಇಲ್ಲಿ ತೋರಿಸಬೇಡ’ ಅಂದರು. ಅಪ್ಪನಿಗೆ ಈ ಪೇಪರ್‌ ಮನುಷ್ಯ ಇಷ್ಟು ಸಹಾಯ ಮಾಡಿದ್ದು ಯಾಕೆ ಅಂತ ಅರ್ಥವೇ ಆಗಿಲ್ಲ ಅಂದುಕೊಳ್ಳುತ್ತಲೇ ಆ ೨೦ರ ನೋಟನ್ನು ನಾನೇ ಪೇಪರ್‌ ಮನುಷ್ಯನ ಕೈಗೆ ದಾಟಿಸಿದೆ. ನನ್ನ ಕೈಯ ೨೦ರ ನೋಟು ಅವನ ಕಣ್ಣಿಗೆ ಬೀಳುತ್ತಲೇ ಸರಕ್ಕನೆ ಹಿಂದೆ ಸರಿದ. ಆತನ ಮುಖದಲ್ಲಾದ ಬದಲಾವಣೆ ನನಗೆ ಮುಜುಗರ ತರಿಸಿತ್ತು. ‘ಅಯ್ಯೋ, ಯಾನ್‌ ಇಂದೆಕ್ಕ್ ಅತ್ತ್‌ ಬ್ಯಾಗ್‌ ಬಸ್ಸ್‌ಗ್‌ ಪಾಡ್ದ್‌ನ. ಇಂಚಿನ ಬೇಲೆ ಮಾತ ಎಂಕ್ಲ್‌ ಮನ್‌ಪುಜ್ಯ (ಅಯ್ಯೋ, ನಾನು ಇದಕ್ಕಲ್ಲ ಬ್ಯಾಗ್‌ ಬಸ್ಸಿಗೆ ತಂದು ಹೆಲ್ಪ್‌ ಮಾಡಿದ್ದು. ಇಂಥ ಕೆಲಸ ಎಲ್ಲ ನಾನು ಮಾಡೋದಿಲ್ಲ.)’ ಅಂದು ಬಿಟ್ಟ. ನನಗೆ ನಾಚಿಕೆಯಾಗಿತ್ತು ಅನ್ನೋದಕ್ಕಿಂತಲೂ ನನ್ನ ಅಪ್ಪನ ಮುಖ ನನಗೆ ನೋಡೋದಕ್ಕೆ ಕಷ್ಟವಾಯಿತು. ‘ನಾನು ಮೊದಲೇ ಹೇಳಲಿಲ್ಲವಾ’ ಅಂದರು ಅಪ್ಪ. ನನಗೆ ಮಾತನಾಡಲು ಏನೂ ಉಳಿದಿರಲಿಲ್ಲ.
‘....ಛೇ. ಹೇಗಾಗಿಬಿಟ್ಟೆನಲ್ಲ’ ಅಂತನಿಸಿತು. ಆದರೂ, ಇಂಥ ಮುಗ್ಥ ಜಗತ್ತಿನಲ್ಲಿ ೨೦ ವರ್ಷ ಇದ್ದುದಕ್ಕೆ ಖುಷಿ ಪಡುತ್ತಾ, ನಗರ ನಾಲ್ಕು ಗೋಡೆಗಳ ವ್ಯಾವಹಾರಿಕ ಜಗತ್ತಿನೊಳಗೆ ಹುಟ್ಟುವ ಮುಗ್ಧ ಹಸುಳೆಗಳನ್ನು ನೆನೆಯುತ್ತಾ ಸುಮ್ಮನಾದೆ. ಸುಮ್ಮನೆ ಹೀಗೆ ಒಂದು ಕ್ಷಣ ನಮ್ಮ ಮೂವರೊಳಗೆ ದಾಟಿದ್ದು ಗೊತ್ತೇ ಆಗಲಿಲ್ಲ.
ಬಸ್ಸು ಹೊರಟಿತು. ಪೇಪರ್‌ ಮನುಷ್ಯನೆಡೆಗೆ ಒಂದು ಕೃತಜ್ಞತೆಗೆ ನಗು ದಾಟಿಸುವ ಧೈರ್ಯ ನನ್ನಲ್ಲಿರಲಿಲ್ಲ. ಆತ ಸುಮ್ಮನೆ ಬಸ್ಸಿಳಿದು ಹೋದ.

Friday, January 2, 2009

ಆ ಹೆಬ್ಬಂಡೆ...

ಆ ಗುಡ್ಡದ ತುದಿಯಲ್ಲಿ ರಾಜನಂತೆ ಕಂಗೊಳಿಸುತಿತ್ತು ಆ ಕಲ್ಲುಬಂಡೆ. ಅದರದೇ ಆದ ಹೊಳೆವ ಮೈಬಣ್ಣ; ಬೃಹದಾಕಾರ ತಾಳಿ ಅದೆಷ್ಟೋ ದೂರದಿಂದ ತನ್ನ ಅಸ್ತಿತ್ವ ಪ್ರತಿನಿಧಿಸುತಿತ್ತು. ಸುತ್ತಲ ಪರಿಸರವೂ ಹಾಗೆಯೇ.. ಬಂಡೆಯ ಅಸ್ತಿತ್ವಕ್ಕೆ ಪೂರಕ ವಾತಾವರಣವನ್ನೂ ನಿರ್ಮಾಣ ಮಾಡಿತ್ತು. ಬೆಳಗಿನ ಹಿತವಾದ ಮುಂಜಾವಿಗೆ ಮೈಯೊಡ್ಡಿ, ಮಂಜಿನ ಹನಿಗಳು ಮುತ್ತಿನಂತೆ ತನ್ನ ಮೇಲೆ ಉರುಳುವುದನ್ನು ತಾಯ ಮಮತೆಯಿಂದ ಕಣ್ತುಂಬಿಕೊಂಡು ನೋಡುತಿತ್ತು. ಬಿಸಿಲಿಗೆ ಕಾದು ಕೆಂಪಾದರೂ ಬಳಲಿ ಬೆಂಡಾಗದ ಆ ಧೀಮಂತ ಸ್ವರೂಪ ಲಕಲಕನೆ ಹೊಳೆಯುತ್ತಿತ್ತು. ಎಷ್ಟೋ ಜೀವಗಳ ಪುಟಾಣಿ ಕನಸುಗಳಿಗೆ ಚಿಗುರು ನೀಡುವ ನವಿರು ಸಮಯದಲ್ಲಿ ಮಂಜಿನಂತೆ ಕರಗುವ ತಾಕತ್ತೂ ಆ ಬಂಡೆಗಿತ್ತು. ಕೆಂಪು ಸಂಜೆಯಲ್ಲಿ ಪಶ್ಚಿಮ ದಿಗಂತದಲ್ಲಿ ಸೂರ್ಯ ದಿಗಂತಕ್ಕೆ ಚುಂಬಿಸುವ ರಸ ಸಮಯದಲ್ಲೂ ಬೆಂದು ಬಂದ ಬಾಡಿದ ಮನಗಳಿಗೆ ಆಸರೆ ನೀಡುವ ಹೃದಯ ವೈಶಾಲ್ಯತೆಯನ್ನೂ ಹೊಂದಿತ್ತು...
............... ................... ................
...... ಹೌದು. ಶಾಸ್ತ್ರಿಗಳು ಹಾಗೆಯೇ.. ಅವರದೇ ಆದ ಘನತೆ.. ಗಾಂಭೀರ್ಯ.. ಕಾಠಿಣ್ಯ. ವಯಸ್ಸು ೬೦ ದಾಟಿದರೂ ತುಂಬು ಸಂಸಾರ ನಡೆಸುವ ಮರ್ಜಿ ಇನ್ನೂ ಇಳಿದಿರಲಿಲ್ಲ. ಚಿಣ್ಣರ ಗುಸು ಗುಸು.. ಕಿಲ ಕಿಲ... ಪಿಸಿ ಪಿಸಿ ಶಬ್ದಗಳಿಂದ ಮನೆಯ ಗಲಗಲ ಸೌಂದರ್ಯ ಆ ಊರಿನಲ್ಲಿ ಎಲ್ಲರ ಹೊಟ್ಟೆ ಉರಿದುಹೋಗುವಂತೆ ಇತ್ತು. ಆದರೆ ನಿಧಾನವಾಗಿ ಆ ದೃಢತೆ.. ವಾತ್ಸಲ್ಯ... ಕಾಠಿಣ್ಯದ ಪ್ರತಿರೂಪಕ್ಕೂ ಸವಾಲಿನ ದಿನಗಳು ಬಂದೀತೆಂದು ಯಾರೂ ಭಾವಿಸಿರಲಿಲ್ಲ. ಹಾಗೇ ಒಂದು ದಿನ ಎಲ್ಲರ ಎಣಿಕೆ ತಪ್ಪಾಗಿ ಹೋಗಿತ್ತು...
................... ..................... ..................
ಅದೊಂದು ದಿನ ಎಲ್ಲಿಂದಲೋ ಒಂದು ದಂಡು ಬಂದಿತ್ತು; ಆ ಹೆಬ್ಬಂಡೆಯ ಬಳಿಗೆ. ಏನೋ ಮಾತುಕತೆಗಳು ನಡೆದವು. ವಿನಿಮಯಗಳೂ ಆದವು. ಇದಾಗಿ ಕೆಲದಿನಗಳ ನಂತರ ಕೆಲಸವೂ ಶುರುವಾಯ್ತು. ದೊಡ್ಡ ದೊಡ್ಡ ಲಾರಿ ಟ್ರಕ್ಕುಗಳು ತಮ್ಮ ರಕ್ಕಸಗಾಲನ್ನು ಇಟ್ಟವು. ಇದ್ದಕ್ಕಿದ್ದಂತೆ ತನ್ನ ಪಾಡಿಗೆ ಹಾಯಾಗಿದ್ದ ಶಾಂತ ಪರಿಸರ ಒಮ್ಮೆಲೇ ಬುಸುಗುಟ್ಟಿತು. ಆ ದಿನಗಳಲ್ಲಿ ಹೆಣೆದಿದ್ದ ಕನಸುಗಳು.. ಬರೆದಿದ್ದ ಬಯಕೆಗಳು.. ಎಲ್ಲವೂ ನಿಮಿಷದಲ್ಲಿ ಚೂರುಚೂರಾದವು. ಹೆಬ್ಬಂಡೆಗೆ ಒರಗಿ ದುಗುಡ.. ಬೇಸರ ಕಳೆಯುತ್ತಿದ್ದ ಜೀವಗಳ ಬಯಕೆಗಳೂ ಹಾಗೆಯೇ ಬಿರಿದು ಬರಡಾದವು. ಜತೆಗೆ ಕಿರಿಯ ಜೀವಗಳ ಪುಟ್ಟ ಪುಟ್ಟ ಕನಸುಗಳೂ...
....... ಕೊನೆಗೆ ಇವೆಲ್ಲವೂ ಇತಿಹಾಸವಾಗಿ ಹೋಯಿತು.

................... .................... ...................
ಇನ್ನು......., ನಮ್ಮೂರಿನಲ್ಲಿ ಈಗ ಕನಸುಗಳೇ ಇರುವುದಿಲ್ಲ. ಕಾರಣ, ಕನಸು ಕಾಣಲು ಕೂರಲು ಬಂಡೆಯೇ ಇಲ್ಲವಲ್ಲ?..

Thursday, October 30, 2008

ಕೆಂಪುದೀಪದ ಆ ಸರದಾರರು..

ಇನ್ನೂ ೧೨೦ ಸೆಕೆಂಡುಗಳಿವೆ. ಉಫ್‌.. ಕೀಲಿಯನ್ನು ಎಡಕ್ಕೆ ತಿರುಗಿಸಿ ಆಫ್‌ ಮಾಡಿದೆ. ಅತ್ತಿತ್ತ ಕಣ್ಣು ತಿರುಗಿಸಿದರೆ ಎಲ್ಲರೂ ನನ್ನಂತೆ ಹೊರಟವರು. ವಾಚು ನೋಡಿದೆ. ಇನ್ನು ೧೫ ನಿಮಿಷ ಮಾತ್ರ ಇದೆ. ವಿಧಾನಸೌಧದವರೆಗಿನ ಸಿಗ್ನಲ್‌ ದಾಟಲು ೧೫ ನಿಮಿಷ ಸಾಕು. ಅಲ್ಲಿಂದ ಆಫೀಸಿಗೆ ಒಂದೇ ಸಿಗ್ನಲ್‌ ಇದ್ದರೂ ದಾಟಲು ಮಾತ್ರ ಈ ಹೊತ್ತಿನಲ್ಲಿ ಅಬ್ಬಬ್ಬಾ ಅಂದರೂ ೧೦ ನಿಮಿಷವಾದ್ರೂ ಬೇಕು. ಛೇ.. ಅಂತ ಮನಸ್ಸಲ್ಲೇ ಲೆಕ್ಕ ಹಾಕುತ್ತಾ ಕಣ್ಣುಮುಚ್ಚಿದೆ. ತೆರೆದಾಗ ಚಾಚಿದ ಕೈಯೊಂದು ನನ್ನ ಮುಂದೆ ದಯನೀಯ ದೃಷ್ಠಿ ನೇಯುತ್ತಿತ್ತು. ತಿದ್ದದೆ ತೀಡದೆ ಇದ್ದರೂ ಸ್ಟ್ರೈಟನಿಂಗ್‌ ಮಾಡಿಸಿಟ್ಟಂತಹ ನೇರ ಕೆಂಚು ಕೂದಲ ಆ ಹುಡುಗಿ ಅಳುಕಿಲ್ಲದೆ ಕೈಯನ್ನು ಮುಂದಕ್ಕೆ ಚಾಚಿದ್ದಳು. ಪಾಪ.. ಅಂತ ಒಂದು ಕ್ಷಣ ಅನಿಸಿದರೂ ಅಷ್ಟಾಗಲೇ ಕೆಂಪುದೀಪ ಮಾಯವಾಗಿತ್ತು. ಹಸಿರುದಾರಿ ಮುಂದಿತ್ತು. ಛೂ ಬಿಟ್ಟ ನಾಯಿಯಂತೆ ಒಂದೇ ಉಸಿರಿಗೆ ಓಡಿದ ವಾಹನಗಳಂತೆ ನಾನೂ ಅನಾಯಾಸವಾಗಿ ಮುಂದೆ ಚಲಿಸಿದೆ. ನೇರ ಕೆಂಚು ಕೂದಲ ಆ ಹುಡುಗಿ ಮನದಿಂದ ಮರೆಯಾದಳು.
............ ................ ............
ರಾತ್ರಿ ಗಂಟೆ ಹನ್ನೊಂದು ದಾಟಿರಬೇಕು. ಪುಟ್ಟ ಪುಟ್ಟ ಆಡುವ ಕೈಗಳಲ್ಲಿ ಬಣ್ಣಬಣ್ಣದ ಬಲೂನುಗಳು. ಆದರೆ, ಆಡಲಿಕ್ಕಲ್ಲ. ನಿಮಿಷಕ್ಕೊಂದು ಬಾರಿ ಹರಿದುಹೋಗುವ ವಾಹನಗಳು ಆ ಕೆಂಪು ದೀಪವನ್ನು ನೋಡಿ ನಿಂತುಬಿಡುತ್ತವಲ್ಲ.. ಆಗ ಮಾರಲಿಕ್ಕೆ. ನನ್ನಂತೆ ಕಚೇರಿಯ ಕೆಲಸ ಮುಗಿಸಿಯೋ.. ಅಥವಾ ಷಾಪಿಂಗು ಮುಗಿಸಿಯೋ.. ಇಲ್ಲವೇ, ಇನ್ನಾವುದೋ ಪಾರ್ಟಿಯಲ್ಲಿ ಮಿಂಚಿ ತಿಂದು ತೇಗಿಯೋ ಬರುತ್ತಿರುವ ಸಾವಿರಾರು ಮಂದಿಯೆದುರು ಬಲೂನು ಹಿಡಿದರೆ ಎರಡೋ, ನಾಲ್ಕೋ ಮಾರಾಟವಾಗುತ್ತವೆ. ಹೊಟ್ಟೆಯ ಬಲೂನೂ ತುಂಬುತ್ತದೆ. ಆಡುವ ಬಲೂನು ಹೊಟ್ಟೆಗೆ ಮಾತ್ರ ಹಿಟ್ಟು! ಆದರೆ... ಒಮ್ಮೊಮ್ಮೆ, ಅದೇ ಕೆಂಪುದೀಪ ದಾಟಿಯೇ ಹೋಗುವ ನನಗೆ ಆಡುವ ಕೈಗಳು ಮಾತ್ರವಲ್ಲ. ದಿನಗಳುರುಳಿ ತಿಂಗಳಾದರೂ ‘ಮಾಸದ ಗಾಯದ’ ಚಾಚುವ ಕೈಗಳೂ ಎದುರಾಗುತ್ತವೆ. ಹಣೆಗೊಂದು ಬಿಳಿಯ ಪಟ್ಟಿ. ಆ ಬಿಳಿ ಪಟ್ಟಿಯ ಮಧ್ಯದಲ್ಲೊಂದು ಕೆಂಪು ರಕ್ತದ ಕಲೆ. ಕೈಯಲ್ಲೊಂದು ಚೀಲ. ದಣಿದು ಎರಡು ದಿನಗಳಿಂದ ಹೊಟ್ಟೆಗೆ ಹಿಟ್ಟಿಲ್ಲದ ಮುಖಭಾವ. ಇವಿಷ್ಟಿದ್ದರೆ ಸಾಕು. ಆ ಕೆಂಪುದೀಪ ಆಶ್ರಯ ನೀಡುತ್ತದೆ. ವಿಚಿತ್ರವೆಂದರೆ.. ಆ ಕೆಂಪು ರಕ್ತದ ಕಲೆಯ ಬಿಳಿಪಟ್ಟಿ ವಾರಗಳೇ ಕಳೆದರೂ ಮಾಸುವುದಿಲ್ಲ. ಗಾಯವೂ ಗುಣವಾಗುವುದಿಲ್ಲ! ಪಾಪ...
............... ................. ...........
ಅದೊಂದು ದಿನ, ಸಮಾಜ ಕಲ್ಯಾಣ ಇಲಾಖೆ ಈ ಕೆಂಪುದೀಪದ ಸರದಾರರ ಬೇಟೆಗೆ ಹೊರಟಿತ್ತು. ಆ ದಿನ ಬೆಳ್ಳಂಬೆಳಗ್ಗೆಯೇ ಪತ್ರಕರ್ತರಾದ ನಮಗೂ ಆ ದೆಸೆ. ಇಲಾಖೆಯ ಜೀಪಿನಲ್ಲಿ ಹೊರಟೆವು. ನಗರವಿಡೀ ಸುತ್ತಿ ಹತ್ತಿಪ್ಪತ್ತು ಮಂದಿಯನ್ನು ಒಳಗೆ ಹಾಕಿದ್ದೂ ಆಯಿತು. ನಡು ಮಧ್ಯಾಹ್ನವಾಗುವ ಹೊತ್ತಿಗೆ ಕಮರ್ಶಿಯಲ್‌ ರಸ್ತೆಯ ಆ ಸಂದಿಗೆ ತಲುಪಿದೆವು. ಆ ಕೆಂಪುದೀಪದಡಿಯಲ್ಲಿ ಆಕೆಯ ಕಂಕುಳಲ್ಲಿ ತಿಂಗಳ ಮಗು ಒರಗಿತ್ತು. ಇಲಾಖೆಯ ಜೀಪಿ ಕಂಡಿದ್ದೇ ತಡ ತಿಂಗಳ ಮಗುವೂ ಆಕೆಗೆ ಬೇಡವಾಗಿತ್ತು. ರಸ್ತೆಗೆಸೆದು ಓಡಿಹೋದ ಆಕೆಯೇನೋ ಇಲಾಖೆಯ ಸಿಬ್ಬಂದಿ ಕೈಯಿಂದ ತಪ್ಪಿಸಿಕೊಂಡಳು. ಮಗು ಟಾರುರಸ್ತೆಗೆ ಬಿದ್ದ ರಭಸಕ್ಕೆ ರಕ್ತ ಒಸರುತ್ತಿತ್ತು. ಎಲ್ಲರ ಜತೆಗೆ ಈ ಮಗುವೂ ಇಲಾಖೆ ಪಾಲಾಯಿತು. ಅಷ್ಟರಲ್ಲಿ ಪಕ್ಕದ ಪೋಲೀಸ್‌ಠಾಣೆಗೆ ಕಣ್ಣೀರು ಸುರಿಸುತ್ತಾ ಮತ್ತೊಬ್ಬ ಪ್ರತ್ಯಕ್ಷ. ‘ಸಾರ್‌, ನನ್ನ ಮಗು ಎತ್ತಿಕೊಂಡು ಹೋದ್ರು ಸಾರ್‌’ ಅಂತ ಗೋಳಿಟ್ಟ. ಪಕ್ಕದಲ್ಲಿ ಆತನ ಹೆಂಡತಿಯಂತೆ. ಜೋರಾಗಿ ಅಳುತ್ತಿದ್ದಳು. ಇಲಾಖೆಯವರಿಗೆ ಫಚೀತಿ. ಮಗೂನ ಆ ರೀತಿ ರಸ್ತೆಗೆಸೆದು ಹೋದೋರು ಬೇರೇನೇ. ಈಗ ನನ್ನ ಮಗುವೆಂದು ಹೇಳುತ್ತಾ ಬಂದಿರುವ ಇಬ್ಬರು ಬೇರೇನೇ. ಪೋಲೀಸರು, ‘ಆ ಮಗು ನಿಮ್ಮದೆಂದು ಹೇಳಲು ನಿಮ್ಮಲ್ಲಿ ಯಾವ ದಾಖಲೆಯಿದೆ?’ ಅಂದರು. ‘ದಾಖಲೆ ಸಮೇತ ಇಲಾಖೆಯ ನಿರಾಶ್ರಿತರ ಪುನರ್ವಸತಿ ಕೇಂದ್ರಕ್ಕೆ ಹೋಗಿ. ನಿಮ್ಮ ಮಗು ನಿಮಗೇ ಕೊಡುತ್ತಾರೆ’ ಅಂದರು. ಅಳುತ್ತಾ ಆ ದಂಪತಿಗಳೆಂದು ಹೇಳಿಕೊಂಡವರು (ದಂಪತಿಗಳಂತೆ ಕಾಣಲಿಲ್ಲ ಬಿಡಿ) ಹೋದರು. ಅವರಿಗೆ ಬೆಂಬಲ ನೀಡಿ ಗಲಾಟೆ ಮಾಡಿದ ಹತ್ತಾರು ಮಂದಿಯೂ ಹಿಂದೆ ಸರಿದರು. ಹಸಿದ ಮಗುವಿಗೆ ಪ್ರೆಸ್‌ಕ್ಲಬ್‌ನಲ್ಲಿ ನಾನು, ರಶ್ಮಿ ಬಿಸ್ಕೆಟ್‌ ತಿನ್ನಿಸಿ ಹಾಲು ಕುಡಿಸಿದೆವು. ಆ ಮಗುವಿನತ್ತ ಎನ್‌ಜಿಒ ಬಾಸ್ಕೋದ ಮಂದಿ ತೋರಿದ ತಾಯಿಯ ಮಮತೆ ಮಾತ್ರ ಇನ್ನೂ ಕಣ್ಣಿಂದ ಮಾಯವಾಗೋದಿಲ್ಲ. ಅದೇನೇ ಇರಲಿ, ಆಮೇಲೆ ಯಾರೂ ಆ ನಿರಾಶ್ರಿತರ ಪುನರ್ವಸತಿ ತಾಣಕ್ಕೆ ಅದು ನನ್ನ ಮಗುವೆಂದು ಹೇಳಿಕೊಂಡು ಬರಲಿಲ್ಲವಂತೆ!
.......... ........... .........
ಆಮೇಲೆ.....ಯಾಕೋ..
... ಎರಡು ರುಪಾಯಿಯೇನು ಮಹಾ.. ಅಂತ ದಯನೀಯ ಕೈಗೆ ಹಾಕುತ್ತಿದ್ದ ನನ್ನ ಕೈಯೂ ಈಗ ಬರಿದಾಗಿವೆ.