Tuesday, June 26, 2012

ಆ 7.30ರ ಮುಸ್ಸಂಜೆ...



ಕೈಯಲ್ಲೊಂದು ಹಳದಿ ಬುಲ್ಡೋಜರ್! ಗಂಟೆ ಮುಸ್ಸಂಜೆ 7.30 ದಾಟಿದೆ. ಆ ಪುಟ್ಟ ಹುಡುಗ ತೂಕಡಿಸಿ ತೂಕಡಿಸಿ, ಆಗಷ್ಟೇ ಬಂದು ಆ ಸೀಟಿನಲ್ಲಿ ಕೂತ ನನ್ನ ಮೇಲೆ ಬಿದ್ದ.
ಮೆಲ್ಲನೆ ತಟ್ಟಿ ಎಬ್ಬಿಸಿದೆ. ಹಠಾತ್ತನೆ ಎಚ್ಚೆತ್ತು, ನನ್ನ ಮುಖವನ್ನೊಮ್ಮೆ ದಿಟ್ಟಿಸಿದ, ಆ ಕಡೆ ಕಂಡಕ್ಟರ್ ಬಂದು 'ಟಿಕೆಟ್' ಎಂದ, 'ಮಿಲಾಗ್ರಿಸ್ ಸರ್ಕಲ್ - ಒಂದು' ನಾನು ಟಿಕೆಟ್ ತೆಗೆದುಕೊಂಡೆ.
ಹುಡುಗನಿಗೆ ಟಿಕೆಟ್ ಸಿಗಲಿಲ್ಲ, ಆತ ಕೊಟ್ಟ ಎರಡು ರೂ ನಾಣ್ಯ ಕಿಸೆಗೆ ಹಾಕಿ ಕಂಡಕ್ಟರು ಹಿಂದಿನ ಸೀಟಿಗೆ ಹೋಗಿ ಕೂತ. ಹುಡುಗ ಟಿಕೆಟು ಸಿಗದ ಬೇಸರದಲ್ಲಿ, 'ಇವರು ಹೀಗೆಯೇ, ನಮಗೆ ಟಿಕೆಟ್ಟೇ ಕೊಡುವುದಿಲ್ಲ, ಮೊನ್ನೆಯೂ ಹೀಗೆಯೇ ಮಾಡಿದ್ದರು, ಚೆಕ್ಕಿಂಗಿನವ್ರು ಬಂದ್ರೆ, ನಮಗೆ ಬಯ್ತಾರೆ' ಎಂದ. ನಾನು ನಕ್ಕೆ.
'ಎಷ್ಟನೇ ಕ್ಲಾಸು?' ನಾನು ಕೇಳಿದೆ
'ನಾಲ್ಕನೇ ಕ್ಲಾಸು'
'ಯಾವ ಶಾಲೆ?'
'ಕೆಲಿಂಜ'
'ಹೆಸರು?'
'ಖಾದರ್'
'ಇಷ್ಟೊತ್ತಲ್ಲಿ ಯಾಕೆ ಒಬ್ಬನೇ ಬಸ್ಸಿನಲ್ಲಿ?'
'ಬುಲ್ಡೋಜರ್ ತೆಗೀಲಿಕ್ಕೆ ಪೇಟೆಗೆ ಬಂದಿದ್ದೆ'
'ಮನೇಲಿ ಹೇಳಿದ್ದೀಯಾ?'
'ಇಲ್ಲ'
'ಅವರು ಹುಡುಕಲ್ವಾ? ಅವರಿಗೆ ಭಯ ಆದ್ರೆ?'
'ಇಲ್ಲ, ಅವರಿಗೆ ಭಯ ಆಗಲ್ಲ. ಗಂಡು ಹುಡುಗ ಅಲ್ವಾ ನಾನು'
ಎಲಾ ಇವನಾ! ನಾನು ಅವಾಕ್ಕಾದೆ, ಚೋಟುದ್ದದ ಹುಡುಗನ ಪೌರುಷಕ್ಕೆ!
'ದುಡ್ಡು ಯಾರು ಕೊಟ್ರು?' ನಾನು ತಿರುಗಿ ಪ್ರಶ್ನೆ ಹಾಕಿದೆ.
ತಾಯಿ ಮೊನ್ನೆ ಕೊಟ್ಟಿದ್ರು, ಅದನ್ನು ಎತ್ತಿ ಇಟ್ಟಿದ್ದೆ. ನಮ್ಮ ಶಾಲೆಯಲ್ಲಿ ಎಲ್ಲ ಮಕ್ಕಳ ಹತ್ರನೂ ಬುಲ್ಡೋಜರ್ ಇದೆ'
ನಾನು ಮತ್ತೆ ಪ್ರಶ್ನಿಸಲಿಲ್ಲ. ಅಂಗಡಿಗಳ ಬೆಳಕಿನ ಸಾಲನ್ನು ಆಗಷ್ಟೇ ಮುಗಿಸಿ, ಕತ್ತಲನ್ನು ಸೀಳುತ್ತಾ ಬಸ್ಸು ಸಾಗುತ್ತಿತ್ತು.
'ನೀವು ಯಾವ ಕ್ಲಾಸು?' ಆತನೇ ಕೇಳಿದ.
'ನಾನು ಶಾಲೆಗೆ ಹೋಗಲ್ಲ'
'ಯಾಕೆ?'
'ಶಾಲೆಗೆ ಹೋಗಿ ಮುಗಿದಾಗಿದೆ'
'ಹೌದಾ? ಹಾಗಾದರೆ ಈಗ ಏನು ಮಾಡ್ತಾ ಇದ್ದೀರಿ?'
'ಕೆಲಸ ಮಾಡ್ತಾ ಇದ್ದೀನಿ'
'ಏನು? ಟೀಚರ್ ಕೆಲಸವಾ?'
'ಹೆಂಗಪ್ಪಾ ಹೇಳೋದು ಇವನಿಗೆ?' ಅಂತ ತಲೆಬಿಸಿಯಾಯ್ತು. 'ಟೀಚರ್ ಅಲ್ಲಪ್ಪಾ. ಟಿವಿ ನೋಡ್ತೀಯಾ, ಪೇಪರ್ ಓದ್ತೀಯಾ?' ನಾನು ಮರು ಪ್ರಶ್ನೆ ಹಾಕಿದೆ.
'ಹುಂ, ನೋಡ್ತೀನಿ'
'ನಾನು ಟಿವಿ/ ನ್ಯೂಸ್ ಪೇಪರಿಗೆ ಕೆಲಸ ಮಾಡೋದು'
'ಬಿಜೆಪಿ, ಕಾಂಗ್ರೆಸ್  ಅಂತೆಲ್ಲಾ ಪೇಪರಲ್ಲಿ ದಿನಾ ಬರುತ್ತಲ್ವಾ? ಅದೆಲ್ಲಾ ನೀವೇ ಬರೆಯೋದಾ?'
'...... ಹುಂ, ಹೌದು. ಅದೇ ಕೆಲಸ. ನಿನಗೆ ಇಂಟ್ರೆಸ್ಟ್ ಇದೆಯಾ ರಾಜಕೀಯ ಓದೋದಕ್ಕೆ?', ನಾನು ಕೇಳಿದೆ.
'ಇಲ್ಲ, ನಾನು ಓದಲ್ಲ. ತಂದೆ ಕಾಂಗ್ರೆಸ್ ಬಗ್ಗೆ ಓದ್ತಾರೆ. ನಮ್ಮ ಮನೆಯಲ್ಲಿ ಎಲ್ಲರೂ ಕಾಂಗ್ರೆಸ್'
ನಾನು ನಕ್ಕೆ.
ಅಷ್ಟರಲ್ಲಿ, ಬಸ್ಸು ಮಂಗಲಪದವು ದಾಟಿ ಮುಂದೆ ಸಾಗುತ್ತಿತ್ತು. ನಾನು ಬದಿಯ ಕಿಟಕಿಯಿಂದ, ವಿರುದ್ಧ ದಿಕ್ಕಿಗೆ ಚಲಿಸುತ್ತಿದ್ದ ಕಪ್ಪು ಮರಗಳನ್ನು ನೋಡುವುದನ್ನು ಮುಂದುವರಿಸಿದೆ. ಕತ್ತಲ ಹಿತವಾದ ಗಾಳಿಗೆ ಹಾರುತ್ತಿದ್ದ ಕೂದಲನ್ನು ಕಿವಿಯ ಹಿಂದಕ್ಕೆ ಅನಾಯಾಸವಾಗಿ ತಳ್ಳುತ್ತಲೇ ಇದ್ದೆ.
'ನೀವು ಎಲ್ಲಿ ಹೋಗ್ತಾ ಇದ್ದೀರಿ?' ಆತ ತನ್ನ ಪ್ರಶ್ನಾ ಸರಣಿಯನ್ನು ಮುಂದುವರಿಸಿದ.
'ಚೆನ್ನೈಗೆ'
ಚೈನ್ನೈ ಎಲ್ಲಿರೋದು? ಎಷ್ಟು ದೂರ ಇಲ್ಲಿಂದ?'
ತಮಿಳುನಾಡಲ್ಲಿ. ಇಲ್ಲಿಂದ ರೈಲಲ್ಲಿ ಸುಮಾರು  800 -900 ಕಿಮೀ ಆಗ್ಬಹುದು'
'ಭಯ ಆಗಲ್ವಾ? ರಾತ್ರಿ ಒಬ್ಬರೇ ಹೇಗೆ ಹೋಗ್ತೀರಿ?'
'ಚೋಟುದ್ದ ಇರೋ ನಿಂಗೇ ಭಯ ಆಗಲ್ಲ, ಇನ್ನು ನಂಗ್ಯಾಕಪ್ಪಾ ಭಯ?' ಎಂದೆ. ಇಬ್ಬರೂ ಮನಸಾರೆ ನಕ್ಕೆವು.
ಆಮೇಲೆ  ನಾನೇ, 'ಭಯ ಏನೂ ಇಲ್ಲ. ಮಂಗಳೂರಲ್ಲಿ ಇಳಿದು, ರೈಲು ಹತ್ತಿ ಹೋಗ್ತೀನಿ, ನಾಳೆ ಮಧ್ಯಾಹ್ನ ಚೆನ್ನೈ ತಲುಪುತ್ತೆ'
'ಚೆನ್ನೈ ದೊಡ್ಡ ಸಿಟಿ ಅಲ್ವಾ? ಅಲ್ಲಿ ದೊಡ್ಡ ದೊಡ್ಡ ಸಿನಿಮಾ ಟಾಕೀಸ್  ಇರುತ್ತದೆ ಅಲ್ವಾ?'
'ಹೌದು. ನೀನು ಹೋಗಿದ್ದೀಯಾ?'
'ಚೆನ್ನೈಗೆ ಹೋಗಿಲ್ಲ. ಆದ್ರೆ, ಅಲ್ಲೆಲ್ಲ ಇರುವ ಸಿನಿಮಾ ಟಾಕೀಸ್ ಥರಾನೇ ಮಂಗಳೂರಲ್ಲೂ ಈಗ ಶುರುವಾಗಿದೆ. ಒಮ್ಮೆ ನಾನು- ನನ್ನ ಫ್ರೆಂಡು ಅವತ್ತೊಮ್ಮೆ ಮಂಗಳೂರಿಗೆ ಹೋಗಿ ಪಿಕ್ಚರ್ ನೋಡಿ ಬಂದಿದ್ದೇವೆ'
'ಆಗ್ಲೂ ಮನೆಯಲ್ಲಿ ಹೇಳದೆ ಹೋಗಿದ್ದಾ?' ನಾನು ಕಣ್ಣು ಮಿಟುಕಿಸುತ್ತಾ ಕಾಲೆಳೆದೆ.
'ಹೌದು' ಎಂದು ಆತ ನಕ್ಕ. ಹಿಂದೆಯೇ ಇದ್ದ ಕಂಡಕ್ಟರ್ ಮೀಸೆಯಂಚಿನಲ್ಲೂ ನಗು.
ಅಷ್ಟರಲ್ಲಿ ಕೆಲಿಂಜ ಸ್ಟಾಪು ಬಂತು. ತನ್ನ ಹಳದಿ ಬುಲ್ಡೋಜರಿನ ಜೊತೆ ಎದ್ದ ಹುಡುಗ ಮೆಟ್ಟಲ ಬಳಿ ನಿಂತು ನನ್ನೆಡೆಗೆ ತಿರುಗಿ ನೋಡಿದ.
ನಾನು ಕಂಡಕ್ಟರ್ ಕಡೆಗೆ ತಿರುಗಿ, 'ಇನ್ನೊಮ್ಮೆ ಇವನು ಈ ಬಸ್ಸಿನಲ್ಲಿ ಬಂದ್ರೆ ಅವನಿಗೆ ಟಿಕೇಟು ಕೊಡಿ ಆಯ್ತಾ' ಎಂದು ನಕ್ಕೆ
ಕಂಡಕ್ಟರು ನಗುತ್ತಾ ಸೀಟಿ ಊದಿದರು.
ಖಾದರ್ ನಕ್ಕು ಟಾಟಾ ಮಾಡಿ ಕೆಳಗಿಳಿದ.
ಬಸ್ಸು ಅದೇ ವೇಗದಲ್ಲಿ ಮತ್ತೆ ಹೊರಟಿತು. ನಾನು ಕಿಟಕಿಯೆಡೆಗೆ ತಿರುಗಿದೆ. ಕಪ್ಪು ಮರಗಳು ಅದೇ ರಭಸದಲ್ಲಿ ಹಿಂದಕ್ಕೆ ಸಾಗುತ್ತಲೇ ಇದ್ದವು, ಯಾಕೋ ಬಸ್ಸು ನಿಧಾನ ಅನಿಸಿತು...

Tuesday, April 10, 2012

ಕಾಡಿನ ಕಿಟ್ಟ

ಒಂದು ಕಾಲಲ್ಲಿ ನಾಲ್ಕೇ ಬೆರಳು! ಒಂದನೇ ಕ್ಲಾಸಿನಲ್ಲಿ 'ಕಾಲಲ್ಲಿ ಓಟ್ಟೆಷ್ಟು ಬೆರಳು, ಲೆಕ್ಕ ಹಾಕಿ' ಎಂದು ಟೀಚರ್ ಕೇಳಿದ್ದಾಗ ಒಂಭತ್ತು ಎಂದು ಹೇಳಿ ಹೊಡೆತ ತಿಂದಿದ್ದ ಈತ, ಸಣ್ಣವನಿದ್ದಾಗ ಮೊಣಕಾಲಲ್ಲಿ ಯಾವಾಗ್ಲೂ ಗಾಯದ ಗುರುತು ಮಾಸಲು ಬಿಡುತ್ತಿರಲಿಲ್ಲ. ಅರ್ಥಾತ್ ಅಷ್ಟು ಸಾರಿ ಬೀಳುತ್ತಿದ್ದ, ಬಿದ್ದರೂ, ಏನೂ ಆಗಿಲ್ಲವೆಂಬಂತೆ ಫೀನಿಕ್ಸಿನಂತೆ ಎದ್ದು ಬರುತ್ತಿದ್ದ. ಕಾಡಿನ ಮಧ್ಯದಲ್ಲಿದ್ದ ಜೋಪಡಿಯಲ್ಲಿ ಹಾಯಾಗಿರುತ್ತಿದ್ದ ಈತ ನನ್ನ ಅಂದಿನ ಮುಗ್ಧ ಕಣ್ಣಿನಲ್ಲಿ ಹೀರೋ. ಆಗ ನನ್ನ ಪಾಲಿಗೆ ಈತ ಸಾಕ್ಷಾತ್ 'ಕಾಡಿನ ಕಿಟ್ಟ'.

ತಿಂಗಳಿಗೆರಡು ಬಾರಿ ಬರುವ ಬಾಲಮಂಗಳದಲ್ಲಿ ಕಳೆದು ಹೋಗುತ್ತಿದ್ದ ದಿನಗಳಲ್ಲಿ, ಅದರಲ್ಲಿ ಬರುತ್ತಿದ್ದ 'ಕಾಡಿನ ಕಿಟ್ಟ' ಸರಣಿ ಚಿತ್ರಕಥೆಯಲ್ಲಿ ನನಗೆ ಮಾತ್ರ ಕಾಡಿನ ಕಿಟ್ಟನಾಗಿ ಕಣ್ಮುಂದೆ ಕಟ್ಟುತ್ತಿದ್ದ ಚಿತ್ರಗಳೆಲ್ಲವೂ ಈತನದೇ. ಅವನೇ ನನ್ನ ತಮ್ಮ ವಿಗ್ಗು. ನಮ್ಮಿಬ್ಬರ ವಯಸ್ಸು ಹೆಚ್ಚು ಕಡಿಮೆ ಒಂದೇ. ನನ್ನಿಂದ ಆರೇಳು ತಿಂಗಳು ಚಿಕ್ಕವ. ದೊಡ್ಡಪ್ಪನ ಮಗ. ಹೆಸರು ವಿಘ್ನರಾಜ. ಆದರೆ ಎಲ್ಲರಿಗೂ ವಿಗ್ಗುವೇ.

ಮೊನ್ನೆ ಫೇಸ್ ಬುಕ್ಕಿನಲ್ಲಿ ಹೊಕ್ಕು ಕೂತಿದ್ದೆ. ನನ್ನ ಈ ಕಾಡಿನ ಕಿಟ್ಟ ಹೇಗೆಲ್ಲ ಬದಲಾಗಿ ಬಿಟ್ಟಿದ್ದಾನಲ್ಲ ಅಂತ ಆಶ್ಚರ್ಯಾವಾಗ್ತಾ ಇತ್ತು. ಬೆಂಗಳೂರಿನ ಮಾಯೆಯೇ ಅದು. ಆಗೆಲ್ಲ ಫೋನು ನಮ್ಮನೆಗೆಲ್ಲ ಇನ್ನೂ ಬಾರದ ಕಾಲದಲ್ಲಿ ''ಅಕ್ಕ, ಮರದಲ್ಲಿ ಅಬ್ಳುಕ ಬಿಟ್ಟಿದೆ, ನಾಣಿಲು ಕೂಡಾ ಹಣ್ಣಾಗುತ್ತಿದೆ, ಪುನರ್ಪುಳಿ ಉದುರಲು ಶುರುವಾಗಿದೆ, ಕಾಟು ಮಾವಿನಣ್ಣು ಸಿಕ್ಕಪಟ್ಟೆ ಗಾಳಿಗೆ ಬೀಳುತ್ತಿದೆ, ಆಚೆ ಕಡೆ ಚೋಮುವಿನ ಗಲಾಟೆ ಜೋರಾಗಿದೆ. ನೀನು ಬೇಗನೆ ಬಾ, ಇಲ್ಲದಿದ್ದರೆ ಮಂಗಗಳು ತಿಂದು ಹಾಕುತ್ತವೆ'' ಎಂದು ಚಿಕ್ಕದಾಗಿ ಚೊಕ್ಕವಾಗಿ ಅಂಚೆಕಾರ್ಡೊಂದನ್ನು ಹಾಕುತ್ತಿದ್ದ. ನಾನು ಗಂಟು ಮೂಟೆ ಕಟ್ಟಿ ಅಜಕ್ಕಳವೆಂಬ ಆ ಗೊಂಢಾರಣ್ಯಕ್ಕೆ ಧಾವಿಸುತ್ತಿದ್ದೆ.

ಸಂಜೆಯ ಹೊತ್ತಲ್ಲಿ ಹೊಳೆಗೆ ಹೊರಟರೆ, ಸೀರೆಹೊಳೆಯ ಬೇಲಿಯಲ್ಲಿ ಆಕಾಶದೆತ್ತರಕ್ಕೆ ಬೆಳೆದ ಕಾಟು, ಹೊಳೆಮಾವಿಗೆ ಕಲ್ಲೆಸೆದರೆ, ಒಂದೇ ಏಟಿಗೆ ಹಣ್ಣು, ಕಾಯಿ ಎಲ್ಲವೂ ಪಟ ಪಟನೆ ಉದುರುತ್ತಿದ್ದವು. ನನಗಿದು ಆಗ ಭಾರೀ ಸೋಜಿಗದ ವಿಚಾರ. ನಾನೆಷ್ಟೇ ಪ್ರಯತ್ನಿಸಿದರೂ ನನ್ನ ಕಲ್ಲಿಗೆ ಅಪ್ಪಿ ತಪ್ಪಿ ಮಾವು ಬಿದ್ದರೂ, ಎಲ್ಲೋ ಒಂದೆರಡು. ಇನ್ನು, ಅಲ್ಲೇ ಹೊಳೆಯ ಬದಿ ಇರುವ ನಾಣಿಲು ಮರದ ಚಿಕ್ಕು ಹಣ್ಣಿನಷ್ಟೇ ಪರಿಮಳ ಭರಿತ, ಸಿಹಿಯಿರುವ ಹಣ್ಣುಗಳನ್ನು ತಿಂದು ಕಾಯಿಗಳನ್ನು ಅಕ್ಕಿ ಡಬ್ಬಿಯಲ್ಲಿ ಬೇಗನೆ ಹಣ್ಣಾಗಲು ಇಡುತ್ತಿದ್ದೆವು. ಮಂಗನನ್ನೂ ನಾಚಿಸುವಂತೆ ಚಕಚಕನೆ ಮರ ಹತ್ತುತ್ತಿದ್ದ ವಿಗ್ಗುವಿನ ಕೃಪೆಯಿಂದ ಅಬ್ಳುಕ, ಪುನರ್ಪುಳಿ, ಚಿಕ್ಕು... ಎಲ್ಲವೂ ಧಾರಾಳವಾಗಿ ದಕ್ಕುತ್ತಿತ್ತು. ಒಟ್ಟಾರೆ, ಅವನು ನನ್ನ ಜೊತೆಗಿದ್ದರೆ, ಆಸೆಪಟ್ಟಿದ್ದೆಲ್ಲ ತಕ್ಷಣ ಕೈಗೆ ನಿಲುಕುತ್ತಿದ್ದವು!

ಇನ್ನು ಸಂಜೆ ಲಗೋರಿ ಆಡಲು ಹೊರಟರೆ, ಊರಿನಲ್ಲಿದ್ದ ಮಕ್ಕಳೆಲ್ಲ ಒಂದು ತಂಡವಾದರೆ, ಈತನೊಬ್ಬನದೇ ಒಂದು ತಂಡ. ಆದರೆ, ಗೆಲ್ಲುತ್ತಿದ್ದುದೂ ಅವನೇ. ರಾತ್ರಿ ಅಶೋಕಣ್ಣನ ಮನೆಯಿಂದ ಅಪರೂಪಕ್ಕೊಮ್ಮೆ ಅನಂತನಾಗ್-ಲಕ್ಷ್ಮಿ ಅಭಿನಯದ 'ನಾ ನಿನ್ನ ಬಿಡಲಾರೆ' ಚಿತ್ರ ನೋಡಿ ಹೆದರಿ ಗುಡ್ಡ ಹತ್ತಿ ಮನೆಗೆ ಮರಳುತ್ತಿದ್ದಾಗ, ರಾತ್ರಿ ಹತ್ತರ ಗಾಢಾಂಧಕಾರದಲ್ಲಿ ಬರೀ ಚಂದ್ರನ ಬೆಳಕಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದೆವು. ನಾನು ಹಿಂದಿನಿಂದ ಭೂತ-ಗೀತ ಬಂದೀತೋ ಎಂದು ಹೆದರಿ, ನಮ್ಮದೇ ಕಾಲಿನಿಂದ ಹೊರಟ ತರಗೆಲೆ ಶಬ್ದಕ್ಕೂ ನಾನು ಹೆದರುತ್ತಿದ್ದರೆ, ಈ ತಮ್ಮ ಧೈರ್ಯದಿಂದ ಕತ್ತಲಲ್ಲಿ ಹೆಜ್ಜೆ ಹಾಕುತ್ತಿದ್ದ! ಹೀಗಾಗಿಯೇ ಆಗೆಲ್ಲ ನನಗೆ ಈತ ಹೀರೋ ಆಗಿ ಕಂಡಿದ್ದರಲ್ಲಿ ಆಶ್ಚರ್ಯವಿಲ್ಲ.

ಮಳೆಗಾಲದಲ್ಲಿ ಸೀರೆ ಹೊಳೆಯನ್ನು ದೋಣಿಯಲ್ಲಿ ದಾಟಿ ನಾಲ್ಕಾರು ಮೈಲಿ ದೂರದ ಶಾಲೆಗೆ ಹೋಗುತ್ತಿದ್ದ ಈ ವಿಗ್ಗು, ಊಟಕ್ಕೆ ಕೂತರೂ ನನ್ನನ್ನು ಮೀರಿಸುತ್ತಿದ್ದ. ದೊಡ್ಡಮ್ಮ ಒಲೆ ಮುಂದೆ ಕೂತು ಮಾಡುತ್ತಿದ್ದ ಒಂದೊಂದೇ ನೀರುದೋಸೆಯನ್ನು ನಾನು ಎರಡು ತಿನ್ನುವಷ್ಟರಲ್ಲಿ ನಾಲ್ಕು ಮುಗಿಸುತ್ತಿದ್ದ. ಆಗ ಮಾತ್ರ ನನಗೆ ಈತ ಬಾಲಮಂಗಳದ ಶಕ್ತಿಮದ್ದಿನ ಸಾಕ್ಷಾತ್ ಲಂಬೋದರನ ಥರ ಕಾಣುತ್ತಿದ್ದ. ಇನ್ನು ರಾತ್ರಿಯಾದರೆ ಸಾಕು, ದೊಡ್ದಪ್ಪನ 'ನಿಂಗ ಅಟ್ಟಕ್ಕೆ ಕಿಚ್ಚು ಹಿಡುಸುತ್ತಿ ನೋಡಿ' ಎಂಬ ಬೈಗುಳಕ್ಕೂ ಬಗ್ಗದೇ, ಸೀಮೆಎಣ್ಣೆ ದೀಪ ಹಿಡಿದು, ಅಡಿಕೆ ಮರದ ಸಲಾಕೆಯ ಏಣಿ ಹತ್ತಿ ಅಟ್ಟ ಸೇರಿ ಹಳೆಯ ಬಾಲ ಮಂಗಳ, ಚಂಪಕ, ದೊಡ್ಡಮ್ಮನ ಕರ್ಮವೀರ ಎಲ್ಲ ಓದಿ ಮುಗಿಸುತ್ತಿದ್ದೆವು. 

ಆಗೆಲ್ಲಾ ಜೊತೆಯಾಗಿ ಸೇರಿ ಸ್ಪರ್ಧೆಗಿಳಿದಂತೆ, ಡ್ರಾಯಿಂಗು ಪುಸ್ತಕದಲ್ಲಿ ಡಿಂಗನ ಚಿತ್ರಗಳನ್ನು ಬರೆದದ್ದೇ ಬರೆದದ್ದು. ಈಗ ಈ ಡಿಂಗ ಚಿತ್ರಕಲಾ ಪರಿಷತ್ತಿನಲ್ಲಿ ಓದಿ ತನ್ನ ಕನಸನ್ನು ನನಸಾಗಿಸಿದ್ದಾನೆ. ಜೊತೆಗೆ ನನ್ನ ಕನಸನ್ನೂ ಕೂಡಾ!

ಈಗ ಆ ಅಜಕ್ಕಳದ ಜೋಪಡಿ ಇಲ್ಲ. ಕದಿಯಲು ಕಾಟು ಮಾವಿನ ಮರವೂ ಅಲ್ಲಿಂದ ಕಾಣೆಯಾಗಿದೆ. ಹಿನ್ನೆಲೆಯಾಗಿ ಬರುತ್ತಿದ್ದ ಚೋಮುವಿನ ಗದರಿಕೆ ಕೇಳಲು ಚೋಮು ಕೂಡಾ ಇಹಲೋಕದಲ್ಲಿಲ್ಲ. ಆದರೆ, ಸೀರೆ ಹೊಳೆ ಅಲ್ಲೇ ಇದೆ. ಬೇಸಿಗೆಯಲ್ಲಿ ಬರಿದಾಗಿ, ಮಳೆಗಾಲದಲ್ಲಿ ಅಂದಿನ ಹಾಗೆ ತುಂಬಿ ಹರಿಯುತ್ತದೆ. ತೀರದಲ್ಲಿ ನಾಣಿಲು, ಹೊಳೆಮಾವು ಖಂಡಿತ ಈಗಲೂ ಇದೆ. ಕಾಡಿನಲ್ಲಿ ಅಬ್ಳುಕವೂ ನಮ್ಮ ಪುಣ್ಯಕ್ಕೆ ಹುಡುಕಿದರೆ ಸಿಗಬಹುದು. ಒಮ್ಮೆ ಹಾಗೆಯೇ ಮತ್ತೆ ಈ ಎಲ್ಲ ಕೆಲಸದ ಜಂಜಡ ಬಿಟ್ಟು ಅಂದಿನ ಹಾಗೆ ತಿರುಗಾಡುವಾಸೆ. ಹೇ ವಿಗ್ಗು, ನೀ ಮತ್ತೆ ನನ್ನ 'ಕಾಡಿನ ಕಿಟ್ಟ' ಆಗ್ತೀಯಾ…?

(ಫೋಟೋ ಕೃಪೆ- wallcoo.net)

Sunday, March 18, 2012

ಫ್ಲ್ಯಾಶ್ ಬ್ಯಾಕ್...

ಚಿಂವ್ ಚಿಂವ್ ಎಂದು ಕೂಗಿ ಕರೆದಾಗ ಆ ಅಳಿಲು ಕತ್ತೆತ್ತಿ ನೋಡಿತು. ನಾವಿದ್ದಿದ್ದು, ಚೆನ್ನೈಯಿಂದ ಸುಮಾರು 80 ಕಿಮೀ ದೂರದಲ್ಲಿರುವ ವೇಡಂತಂಗಳ್ ಎಂಬ ಸುಂದರ ಪಕ್ಷಿಧಾಮದ 4-5 ಅಡಿ ಎತ್ತರದ ವಾಚ್ ಟವರ್ ಮೇಲೆ. ನಾವು ಕರೆದ ಸದ್ದು ಬಂದ ಕಡೆ ಕತ್ತೆತ್ತಿ ನೋಡಿದ ಅದು ಒಂದರೆ ಕ್ಷಣ ಅವಕ್ಕಾದಂತೆ ದಿಟ್ಟಿಸಿ ಮತ್ತೆ ತನ್ನ ಕೆಲಸದಲ್ಲಿ ನಿರತವಾಯಿತು, ಆದರೆ ಅದರ ತೀಕ್ಷ್ಣ ನೋಟ ಥೇಟ್ ನನ್ನ ಅಳಿಲಿನ ನೋಟದಂತೆಯೇ ಅನಿಸಿ, ಸಿನಿಮಾದಂತೆ ನನ್ನ ನೆನಪಿನ ರೀಲು ಹಿಂದಕ್ಕೋಡಿತು.

ನಮ್ಮ ಮನೆಯಲ್ಲಿ ನಾನು ಸಣ್ಣವಳಿದ್ದಾಗಿನಿಂದಲೂ ಅಳಿಲಿನ ಜೊತೆಗೇ ಬೆಳೆದವಳು. ಎರಡನೇ ತರಗತಿಯಲ್ಲಿದ್ದಾಗ ಅಪ್ಪ ತಂದ ಅಳಿಲು, ನಾನು ಪಿಯುಸಿಯಲ್ಲಿರುವರೆಗೂ 8-9 ವರ್ಷ ನಮ್ಮ ಜೊತೆ ಇದ್ದಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಮೂರನೇ ತರಗತಿಯಲ್ಲಿದ್ದಾಗ ಅದೊಂದು ದಿನ ಅಪ್ಪ ರಾತ್ರಿ ಮನೆಗೆ ಬಂದಾಗ ಇನ್ನೂ ಕಣ್ಣು ಬಿಡದಿದ್ದ ಗಾಯಗೊಂಡಿದ್ದ ಅಳಿಲನ್ನು ತಂದಿದ್ದರು. ಅಪ್ಪನ ಕ್ಲಿನಿಕ್ಕಿನಲ್ಲಿ ಬೆಕ್ಕಿನ ಗಲಾಟೆಯಿಂದ ಮಾಡಿನ ಸಂದಿಯಿಂದ ಬಿದ್ದ ಅಳಿಲ ಮರಿಯದು. ಅಪ್ಪನೇ ಮಾಡಿದ ಒಂದು ವಿಶಾಲ ಗೂಡಿನಲ್ಲಿ ಅದನ್ನು ಹಾಕಿ ಹಾಲು ಕುಡಿಸಿ ಅದನ್ನು ಮುದ್ದಿನಿಂದ ಸಾಕಿದ್ದೆವು. ಮೂರ್ನಾಲ್ಕು ತಿಂಗಳು ನಮ್ಮ ಜೊತೆಯಲ್ಲಿ ಬೆಳೆದ ಅಳಿಲನ್ನು ಅಪ್ಪ ಗೂಡಿನಿಂದ ಹರಬಿಡಲು ನಿಶ್ಚಯಿಸಿದ್ದು ನನಗೂ ಅಕ್ಕನಿಗೂ ನುಂಗಲಾರದ ತುತ್ತಾಗಿತ್ತು. ಆದರೆ ಅಪ್ಪ ಅಮ್ಮ ನಿಶ್ಚಯಿಸಿಬಿಟ್ಟಿದ್ದರು. ಮರದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರುವ ಅಳಿಲನ್ನು ಮನೆಯಲ್ಲಿ ಗೂಡಿನಲ್ಲಿ ಸಾಕೋದು ಅಪ್ಪನಿಗೆ ಇಷ್ಟವಿರಲಿಲ್ಲ. ಒಂದು ದಿನ ಬೆಳಗ್ಗೆ ಹೀಗೆ ಸ್ವತಂತ್ರಗೊಂಡ ಮರಿ ಎಲ್ಲಿಗೆ ಓಡುವುದೆಂದು ತೋಚದೆ ಕೊನೆಗೂ ಓಡಿ ಹೋಯಿತು. ಬೇಸರದಲ್ಲಿ ಆ ದಿನವಿಡೀ ಕಳೆದಿದ್ದು ನನಗಿನ್ನೂ ನೆನಪಿದೆ. ಆದರೆ ಮರುದಿನ ನಮಗೊಂದು ಆಶ್ಚರ್ಯ ಕಾದಿತ್ತು. ನಾವು ಏಳುವ ಹೊತ್ತಿಗಾಗಲೇ ಅಳಿಲು ನಮ್ಮ ಮನೆಯ ಹೊರಗಿನ ಕಂಬದ ಮೇಲೆ ಹಾಜರ್!

ವಿಚಿತ್ರವೆಂದರೆ, ಗೂಡಿನಲ್ಲಿದ್ದಾಗ ನಮ್ಮಂತೆ 7 ಗಂಟೆಗೆ ಪುಟ್ಟ ಬಟ್ಟಲಲ್ಲಿ ಟೀ ಕುಡಿಯೋದನ್ನು ಅಭ್ಯಾಸ ಮಾಡಿಕೊಂಡಿದ್ದ ಈ ಅಳಿಲು ಕರೆಕ್ಟಾಗಿ 7ಕ್ಕೇ ನಮ್ಮ ಮನೆಯ ಕಂಬದಲ್ಲಿ ಕುಳಿತಿತ್ತು. ಟೀ ಕುಡಿದ ಮೇಲೆ ಮರದೆಡೆಯಲ್ಲಿ ಮರೆಯಾಗುವ ಅದು ಮತ್ತೆ 9.30-10ರ ಸುಮಾರಿಗೆ ಅನ್ನ-ಹಾಲು ತಿನ್ನಲು ಬರುತ್ತಿತ್ತು, ಆಮೇಲೆ ಮಧ್ಯಾಹ್ನ 2ಕ್ಕೆ, ಸಂಜೆ ಆರರ ಮೊದಲು ಬಂದು ಅನ್ನ ಹಾಲು ತಿಂದು ಹೋಗುತ್ತಿತ್ತು. ನೀವು ನಂಬುತ್ತೀರೋ ಇಲ್ಲವೋ, ಈ ನಂಟು ಹಾಗೆಯೇ ಒಂದು ವರ್ಷ ನಿರಂತರವಾಗಿ ಸಾಗಿತು.

ಆದರೆ ನಾಲ್ಕೂ ಮಂದಿಗೆ ವಿಚಿತ್ರ ಸಂಕಟವಾಗಿದ್ದು ನಾವು ಆ ಮನೆ ಖಾಲಿ ಮಾಡಬೇಕಾಗಿ ಬಂದಾಗ! ನೆಲ್ಲಿಗುಡ್ಡೆ ಎಂಬ ಹಳ್ಳಿಯ ಆ ಒಂಟಿ ಮನೆಯನ್ನು ಖಾಲಿ ಮಾಡಿ ಅಪ್ಪ ಆಗ ತಾನೇ ಖರೀದಿಸಿದ್ದ ವಿಟ್ಲದ ಹೊಸ ಮನೆಗೆ ಹೋಗುವ ಖುಷಿ ಒಂದೆಡೆಯಾದರೆ, ಈ ಅಳಿಲಿಗೆ ಏನು ಮಾಡೋಣ ಎಂಬ ಚಿಂತೆ ಮತ್ತೊಂದೆಡೆ. ನಮ್ಮ ಸಾಮಾನು ಸರಂಜಾಮುಗಳನ್ನು ಲಾರಿಗೆ ಏರಿಸುವ ಮುನ್ನಾ ದಿನವೇ ಅಳಿಲನ್ನೂ ಗೂಡಿನಲ್ಲಿ ಕೂಡಿ ಹಾಕಿದ್ದೆವು. ತನ್ನನ್ನು ಯಾಕೆ ಕೂಡಿ ಹಾಕಿದ್ದೆಂದು ಮೂಕವಾಗಿ ನೋಡುತ್ತಾ, ಬೋನಿಗೆ ಬಿದ್ದ ಇಲಿಯಂತೆ ವಿಚಿತ್ರ ಸಂಕಟ ಅನುಭವಿಸುತಿತ್ತು. ಅಂತೂ ಹೊಸ ಮನೆಗೆ ಬಂದೆವು. ನನಗೆ, ಅಕ್ಕನಿಗೆ ಹೊಸ ಶಾಲೆಯಂತೆ, ಅದಕ್ಕೂ ಹೊಸ ಪರಿಸರ. ಗೂಡಿನಿಂದ ಹೊರ ಬಿಟ್ಟರೆ, ಹೊಸ ಪರಿಸರದಲ್ಲಿ ಎಲ್ಲಿ ಕಳೆದುಹೋಗುವುದೋ ಎಂಬ ಚಿಂತೆ ಅಪ್ಪ ಅಮ್ಮನಿಗೆ. ಹತ್ತಾರು ದಿನ ಗೂಡಿನಲ್ಲೇ ಕಳೆದ ನಂತರ ಅದನ್ನು ಹೊರ ಬಿಟ್ಟವು. ದಿಕ್ಕು ತಪ್ಪಿದಂತೆ ಒಮ್ಮೆ ಅತ್ತಿತ್ತ ಓಡಾಡಿ ಆಮೇಲೆ ಮರದೆಡೆಯಲ್ಲಿ ಮರೆಯಾಯಿತು ನಮ್ಮ ಅಳಿಲು.

ತಿಂಗಳೊಂದಾಯಿತು, ಎರಡಾಯಿತು... ಅಳಿಲಿನ ಪತ್ತೆಯೇ ಇಲ್ಲ. ಬಹುಶಃ ಅದಕ್ಕೆ ದಾರಿ ತಪ್ಪಿದೆ, ಅಪ್ಪ ಅಂದರು. ಏನು ಮಾಡೋಣ, ನಮ್ಮ ತೆಂಗಿನ ತೋಟದ ನಡುವಿನ ಗೇರು ಮರದಲ್ಲೆಲ್ಲಾ ಕಂಡ ಕಂಡ ಅಳಿಲನ್ನೆಲ್ಲಾ ನಮ್ಮದಿರಬಹುದೇ ಎಂದು  ಚಿಂವ್ ಚಿಂವ್ ಎಂದು ಕೂಗುತ್ತಾ ಕರೆಯುತ್ತಿದ್ದೆವು, ಆದರೆ ಆ ಬೇರೆ ಅಳಿಲುಗಳೆಲ್ಲವೂ ನಮ್ಮ ಸ್ವರಕ್ಕೆ ಏನೂ ಪ್ರತಿಕ್ರಿಯಿಸದೆ ಓಡಿ ಮರೆಯಾಗುತ್ತಿದ್ದವು. ಆದರೆ ಅದೊಂದು ದಿನ ಸಂಜೆ ಅಮ್ಮನ ದನಿಗೆ ಓಡೋಡಿ ಮರದಿಂದಿಳಿದು ಬಂದ ನಮ್ಮ ಅಳಿಲು ಅಮ್ಮನ ಹಿಂದೆಯೇ ಮನೆಯವರೆಗೂ ಬಂತು. ಅನ್ನ- ಹಾಲು ಕುಡಿದು ಮರೆಯಾಯಿತು. ಆಮೇಲೆ ಆರಂಭವಾಯಿತು, ನಿತ್ಯದ ಭೇಟಿ, ಬರೋಬ್ಬರಿ 8-9 ವರ್ಷ!

ಬಟ್ಟೆ ತೊಳೆಯುವ ಕಲ್ಲಿನಲ್ಲಿ ಬಂದು ಕೂತು ಹಾಲಲ್ಲಿ ಮುಳುಗಿರುವ ಅನ್ನದ ಅಗುಳನ್ನು ಎರಡೂ ಕೈಯಲ್ಲಿ ಎತ್ತಿ ತಿನ್ನುವ ಅದರ ಶೈಲಿ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಅದರ ಮೂರ್ನಾಲ್ಕು ಮರಿಗಳನ್ನು ದೂರದಲ್ಲಿ ನಿಲ್ಲಿಸಿ ಒಂದೊಂದೇ ಅಗುಳನ್ನು ತೆಗೆದುಕೊಂಡು ಹೋಗಿ ತಿನ್ನಿಸುವ ಪರಿ ಹೇಗೆ ಮರೆತೀತು. ವಿಚಿತ್ರವೆಂದರೆ, ನಮ್ಮ ತೊಡೆಯ ಮೇಲೆ ಕೂತು, ಮೈಮೇಲೆ ಹರಿದಾಡಿ ನಮ್ಮ ಕೈಯಿಂದ ಅನ್ನ ತಿನ್ನುತ್ತಿದ್ದ ಅದು, ಮರಿಗಳನ್ನು ದೂರದಲ್ಲೇ ನಿಲ್ಲಿಸುತ್ತಿತ್ತು. ಮರಿಗಳು ಬಂದರೂ ನಾವು ಹತ್ತಿರ ಹೋದರೆ ತಟ್ಟೆ ಬಿಟ್ಟು ಓಡಿ ಹೋಗುತ್ತಿದ್ದವು. ನಾನು ಪ್ರಥಮ ಪಿಯುಸಿವರೆಗೂ ದಿನವೂ ಬರುತ್ತಿದ್ದ ಅದು ಆಮೇಲೆ ಬರಲಿಲ್ಲ. ಸತ್ತು ಹೋಯಿತೆಂದು ನಾವು ನಂಬಿದೆವು. ಯಾಕೆಂದರೆ, ಆಗಲೇ ಅದಕ್ಕೆ 9 ವರ್ಷವಾಗಿತ್ತು.

ಬೆಂಗಳೂರಿನಲ್ಲಿ ಪ್ರೆಸ್ ಕ್ಲಬ್ಬಿನ ಮೂಲೆಗಳಲ್ಲಿ ಕಡ್ಲೆಪುರಿಯ ಕಡಲೇಕಾಳನ್ನು ತಿನ್ನಲು ಬರುತ್ತಿದ್ದ ಅಳಿಲುಗಳು, ಈಗ ನಮ್ಮ ಚೆನ್ನೈ ಮನೆಯ ಕಿಟಕಿ ಸಂದಿಯಲ್ಲಿ ನಾವು ಆಗಾಗ ಹಾಕುವ ಅಕ್ಕಿ ಕಾಳನ್ನು ನಾವಿಲ್ಲದಾಗ ಸಂತೃಪ್ತಿಯಿಂದ ತಿನ್ನುವ ಅಳಿಲನ್ನು ಮರೆಯಿಂದ ನೋಡುವಾಗ ಅಂದು ನಮ್ಮ ತೊಡೆಯ ಮೇಲೆ ಆರಾಮವಾಗಿ ಯಾವ ಭಯವೂ ಇಲ್ಲದೆ ಕುಳಿತು ತಿನ್ನುತ್ತಿದ್ದ ಅಳಿಲಿನ ನೆನಪಾಗುತ್ತದೆ. ಜೊತೆಜೊತೆಗೇ ಈ ಅಳಿಲನ್ನು ನಮ್ಮ ಜೊಂತೆ ಕಂಡು ಹೊಟ್ತೆಉರಿ ಪಟ್ಟು ಕುಂಯ್ ಕುಂಯ್ ರಾಗವೆಳೆಯುತ್ತಿದ್ದ ನಮ್ಮ ರೂಬಿ ನಾಯಿಯೂ ನೆನಪಾಗುತ್ತಾನೆ. ಆದರೆ, ಈಗ ಆ ಅದ್ಭುತ ಕ್ಷಣಗಳ ಒಂದು ಫೋಟೋವೂ ಇಲ್ಲದಿರುವುದು ನೆನೆಸಿ ಒಮ್ಮೊಂಮ್ಮೆ ಬೇಸರವೂ ಆಗುತ್ತದೆ. ಹಾಗಾಗಿ ಆ ಹಳೆಯ ನೆನಪಿಗೊಂದು ಈ ಹೊಸ ಫೋಟೋ-ಬರಹದ ಚೌಕಟ್ಟು.

Monday, September 5, 2011

ವೆಂಕಟನ ಗಿರಿಯಲ್ಲಿ...

ನಮ್ಮ ತಂಡದಲ್ಲಿದ್ದ ಧರ್ಮೇಂದ್ರ ಆ ಪುಟಾಣಿ ತೊರೆಯನ್ನು ನಾಲ್ಕಾರು ಬಾರಿ ಅತ್ತಿಂದಿತ್ತ ಇತ್ತಿಂದತ್ತ ದಾಟುತ್ತಾ ಬಂಡೆಯಲ್ಲಿ ಕವುಚಿ ಮಲಗಿ ಪ್ರಾಣಿಗಳಂತೆ ನಾಲಗೆಯ ಮೂಲಕ ಬಗ್ಗಿ ನೆಕ್ಕಿ ನೆಕ್ಕಿ ನೀರು ಕುಡಿಯುತ್ತಿದ್ದ. ನಾನು, ಮಹೇಶ್ ಹಾಗೂ ಇನ್ನೂ ಒಂದಿಬ್ಬರು ಆ ಭಾನುವಾರ ಬೆಳಗಾತ ಎದ್ದು ನೀರಿನಲ್ಲಿ ಕಾಲು ಅದ್ದಿ ಮೀನುಗಳು ಕಾಲಿಗೆ ಮುತ್ತಿಕ್ಕುವ ಕಚಕುಳಿ ಅನುಭವಿಸುತ್ತಾ ಕೂತಿದ್ದೆವು. ಧರ್ಮೇಂದ್ರನ ಅವತಾರವೇ ವಿಚಿತ್ರವೆನಿಸಿತು ನನಗೆ. ಹಾಗೇ ನೋಡುತ್ತಾ ಇದ್ದೆ. ಯಾಕೋ ಕುತೂಹಲ ಮೂಡಿತು. ಆತನ ಹಾವಭಾವದಲ್ಲಿ ಕೊಂಚವೂ ನಾಟಕೀಯತೆ ಇರಲಿಲ್ಲ. ಬಹಳ ಹೊತ್ತು ತನ್ಮಯನಾಗಿ ಹಾಗೇ ನೀರು ಕುಡಿಯಲು ಕಷ್ಟಪಟ್ಟು ಕೊನೆಗೂ ಯಶಸ್ವಿಯಾದ. 'ಅಬ್ಬಾ' ಎಂದೆವು ಎಲ್ಲರೂ ಒಟ್ಟಾಗಿ. ಅಷ್ಟರಲ್ಲಿ ಚೆಂಚು ಓಡಿ ಬಂದ. ಬನ್ನಿ ಬನ್ನಿ ಹೋಗೋಣ, ಸಾಕು ಸಾಕು ಎಂದ. ಎಲ್ಲರೂ ಗಂಟು ಮೂಟೆ ಕಟ್ಟಿ ಹೊರಡಲು ಸನ್ನದ್ಧರಾದೆವು.

ಚೆನ್ನೈಗೆ ಬಂದ ಹೊಸತರಲ್ಲಿ ನನಗೆ ಜೀವ ಚೈತನ್ಯ ನೀಡಿದ್ದು ಈ ವೆಂಕಟಗಿರಿ. ಬೆಂಗಳೂರಿನ ಚುಮುಚುಮು ಚಳಿ ಬಿಟ್ಟು ಬಿಸಿಲೂರಿಗೆ ಬಂದಿದ್ದೆ. ಅದೇ ಸಮಯಕ್ಕೆ ಮಹೇಶ್ ಈ ವೆಂಕಟಗಿರಿ ಚಾರಣದ ಬಗ್ಗೆ ವಿಷಯ ಅರಹಿದ. ಮರುಭೂಮಿಯ ನಟ್ಟ ನಡುವೆ ಜೀವಜಲ ಕಂಡ ಹಾಗಿತ್ತು ನನ್ನ ಪರಿಸ್ಥಿತಿ. ಛಕ್ಕನೆ ಹೋಗೋಣ ಎಂದು ಹೊರಟಿದ್ದೂ ಆಗಿತ್ತು ಇಬ್ಬರೂ.

ಅಂದಹಾಗೆ, ಈ ವೆಂಕಟಗಿರಿ ಪರ್ವತ ತಿರುಪತಿಗೆ ತೀರ ಹತ್ತಿರವಾದದ್ದು. ತಿರುಮಲ ಪರ್ವತಕ್ಕೆ ಸಮಾಂತರವಾಗಿದೆ ಈ ಪರ್ವತ. ಹೀಗಾಗಿ ಎತ್ತ ನೋಡಿದರತ್ತ ಹಸಿರು ಹಸಿರು ಹಸಿರು. ಅಲ್ಲಲ್ಲಿ ಪುಟ್ಟ ತೊರೆಗಳು. ಮುಗಿಯದ ದಂಡಕಾರಣ್ಯದ ಹಾದಿ... ಎರಡು ದಿನಗಳು ಹಾಗೇ ಕಳೆದು ಹೋಗಿದ್ದವು.

ಚೆಂಚು ನಮ್ಮ ತಂಡದ ನಾಯಕ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆತನ ಊರು ವೆಂಕಟಗಿರಿ. ನನಗೆ ನನ್ನೂರಿನ ಕಳಂಜಿಮಲೆ ಹೇಗೋ ಹಾಗೆಯೇ ಚೆಂಚುಗೆ ವೆಂಕಟಗಿರಿ. ಅದೆಷ್ಟೋ ಬಾರಿ ಆತ ವೆಂಕಟಗಿರಿಯಲ್ಲಿ ಅಲೆದಾಡಿದ್ದನೋ ಲೆಕ್ಕವಿಲ್ಲ. ಹೀಗಾಗಿ ಚೈನ್ನೈ ಟ್ರೆಕ್ಕಿಂಗ್ ಕ್ಲಬ್ಬಿನ ಹೆಸರಿನಲ್ಲಿ ಚೆಂಚು ಜೊತೆಗೆ ನಾವೂ ಸೇರಿದಂತೆ ಚೆನ್ನೈ ತಮಿಳರ ಒಂದು ಪುಟ್ಟ ಗುಂಪು ಸೇರಿತ್ತು. ಚೆನ್ನೈಯಿಂದ ಸುಮಾರು 170 ಕಿಮೀ ದೂರದ ವೆಂಕಟಗಿರಿಯೆಡೆಗೆ ನಮ್ಮ ತಂಡದ ಪ್ರಯಾಣ ಶನಿವಾರ ಮುಂಜಾವಿನಲ್ಲೇ ಹೊರಟಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆಲ್ಲಾ ವೆಂಕಟಗಿರಿಯಲ್ಲಿದ್ದೆವು. ಅಲ್ಲಿಂದ ಹೊರಟ ನಮ್ಮ ಚಾರಣ ಸುಮಾರು 4 ಗಂಟೆಗೆ ಮಲ್ಲೇಶ್ವರ ಕೋಣ ಎಂಬಲ್ಲಿಗೆ ಅಂತ್ಯವಾಗಿತ್ತು. ಅಲ್ಲೊಂದು ಪುಟ್ಟ ಶಿವ ದೇಗುಲ. ಶುದ್ಧ ತಮಿಳುನಾಡು ಶೈಲಿಯಲ್ಲಿ ಕೆಂಪು- ಬಿಳಿ ಪಟ್ಟೆ ಬಳಿದ ದೇಗುಲ ನಮ್ಮೂರಿನ ಪುಟ್ಟ ಮದುವೆ ಮಂಟಪದಂತಿತ್ತು. ವರ್ಷದಲ್ಲೊಮ್ಮೆ ಹರಕೆ ತೀರಿಸಲು ಬೆಟ್ಟದ ಸಮೀಪದ ಹಳ್ಳಿ ಜನರು ಈ ದೇಗುಲಕ್ಕೆ ಭೇಟಿ ಕೊಡುತ್ತಾರಂತೆ.

ಗಂಟೆ ಕೇವಲ ನಾಲ್ಕಾಗಿದ್ದರೂ, ದಟ್ಟಕಾನನದ ನಡುವೆ ಕತ್ತಲಾದ ಅನುಭವ. ಬೆವರಿಳಿದರೂ ಸುತ್ತಲಿನ ಸಮೃದ್ಧ ಗಾಢ-ಕಪ್ಪು ಹಸುರು, ದೇಗುಲದ ಹಿಂಬದಿಯಿಂದ ಕೇಳಿಬರುತ್ತಿದ್ದ ಝರಿಯ ನಿನಾದ, ಹರಿವ ತೊರೆಯ ಜುಳುಜುಳು. ಅಲ್ಲೇ ಒಂದರ್ಧ ತಾಸು ನೀರಿನಲ್ಲಿ ಮುಳುಗೆದ್ದು ಆಯಾಸ ಪರಿಹರಿಸಿ ನಮ್ಮ ಸಾಮಾನುಗಳನ್ನೆಲ್ಲಾ ಶಿವ ದೇಗುಲದಲ್ಲಿ ಬಿಟ್ಟು ಮತ್ತೆ ಬೆಟ್ಟ ಹತ್ತಲು ಅಣಿಯಾದೆವು. ಸಂಜೆಯ ವೇಳೆಗೆ ಬೆಟ್ಟದ ತುದಿ ಮುಟ್ಟಿ, ರಾತ್ರಿ 8 ಗಂಟೆಯ ಹೊತ್ತಿಗೆ ಮರಳಿ ದೇಗುಲಕ್ಕೆ ಬಂದೆವು. ಜೀರುಂಡೆಗಳ ಝೇಂಕಾರ, ದೂರದಲ್ಲೆಲ್ಲೋ ಊಳಿಡುತ್ತಿರ ನರಿ, ಎಲ್ಲವುಗಳ ನಡುವೆ ಗಾಢಾಂಧಕಾರದ ಮೌನದಲ್ಲಿ ಕೊರೆವ ಚಳಿಯಲ್ಲಿ ಲೋಕದ ಪರಿವೆಯಿಲ್ಲದೆ ನಿದ್ದೆ ಹೋಗಿದ್ದೆವು. ಮುಂಜಾನೆ ಎದ್ದ ಹಾಗೆ ಮತ್ತೆ ತೊರೆಯ ಬಳಿ ಕಾಲು ಇಳಿ ಬಿಟ್ಟು ಚಳಂಪಳ ಮಾಡುತ್ತಾ ಕೂತಿದ್ದೆವು.

ಮುಂಜಾನೆ ಮತ್ತೆ ಬೆಟ್ಟ ಹತ್ತಿಳಿದು, ಗಂಜಿ ಉಂಡು ನಿಧಾನಕ್ಕೆ ವೆಂಕಟಗಿರಿ ಪಟ್ಟಣದತ್ತ ಹೆಜ್ಜೆ ಹಾಕತೊಡಗಿದೆವು. ಬರೋಬ್ಬರಿ ಐದಾರು ಗಂಟೆಯ ಬಳಿಕ ಮುಸ್ಸಂಜೆಯ ಹೊತ್ತಿಗೆ ವೆಂಕಟಗಿರಿಗೆ ತಲುಪಿದೆವು. ಹಾದಿಯುದ್ದಕ್ಕೂ ನನಗೆ ಮಾತ್ರ ದಕ್ಕಿದ ಅದೃಷ್ಟವೇ ಬೇರೆ. ಕಂಡಕಂಡ ಪೊದೆಗಳಲ್ಲಿ ಮುಳ್ಳಂಕಾಯಿ, ಚೀರುಮುಳ್ಳು, ಕರಂಡೆ ಕಾಯಿ, ಕೇಪುಳಹಣ್ಣು... ಸಿಕ್ಕಿದ್ದೆಲ್ಲಾ ಬಾಯಿಗೆ ತುರುಕುತ್ತಿದ್ದ ನನ್ನನ್ನು ಕಂಡು ಉಳಿದವರು ವಿಚಿತ್ರವಾಗಿ ನೋಡುತ್ತಿದ್ದರು. ಪುಣ್ಯಕ್ಕೆ ಅವರು ರುಚಿ ನೋಡುವ ಧೈರ್ಯ ಮಾಡಲಿಲ್ಲ. ನಾನೂ ಒತ್ತಾಯಿಸಲಿಲ್ಲ, ನನ್ನ ಅದೃಷ್ಟಕ್ಕೆ ನಾನೇ ವಂದಿಸುತ್ತಾ ಪೂರ್ತಿ ಒಬ್ಬಳೇ ಗುಳುಂ ಮಾಡಿದೆ.

ಆದರೆ.., ಈಗಲೂ ಬೇಸರವಿದೆ. ವೆಂಕಟಗಿರಿ ಪರ್ವತ ಹತ್ತಿದರೂ ದುರ್ಗಂಗೆ ಹತ್ತಲಾಗದಿದ್ದುದು. 'ದುರ್ಗಂ' ಸುಂದರ ಹಾಗೂ ಕಠಿಣ ಚಾರಣ. ವೆಂಕಟಗಿರಿ ಚಾರಣಕ್ಕೆ ಹೊರಟಾಗಲೂ ನನ್ನ ಮನಸ್ಸಿನ ತುಂಬಾ ಈ ದುರ್ಗಂ ತುಂಬಿತ್ತು. ವೆಂಕಟಗಿರಿ ಪರ್ವತದ ತುತ್ತ ತುದಿಯಲ್ಲಿರುವ ಕೋಟೆಯಂಥ ರಚನೆಯೇ ಈ ದುರ್ಗಂ. ಹಿಂದೆ ಕಳ್ಳಕಾಕರು ಲೂಟಿ ಮಾಡಿದ ಒಡವೆಗಳನ್ನು ಇಲ್ಲಿ ಅಡಗಿಸಿಡುತ್ತಿದ್ದರೆಂಬ ರಸವತ್ತಾದ ಕಥೆಗಳು ಈ ಭಾಗದ ಜನರ ದಿನನಿತ್ಯದ ಅಜ್ಜಿಕಥೆಗಳಾಗಿ ಹೋಗಿವೆ. ಅದಕ್ಕೆ ಸಾಕಷ್ಟು ಆಧಾರಗಳೂ ಸಿಕ್ಕಿವೆಯಂತೆ. ಈಗಲೂ ಕೋಟೆಯ ಅಳಿದುಳಿದ ಭಾಗ ಬೆಟ್ಟದ ತುತ್ತ ತುದಿಯಲ್ಲಿದೆ. ಇನ್ನೂ ಚಾರಣಿಗರಿಂದ ಅಷ್ಟಾಗಿ ಪರಿಚಯಿಸಲ್ಪಡದ ಈ ದುರ್ಗಂ ಸೊಬಗು ಈಗಲೂ ನನ್ನನ್ನು ಸೆಳೆಯುತ್ತಿದೆ. ಹೋಗುವೆನೆಂಬ ವಿಶ್ವಾಸವೂ ಇದೆ.

ಅಂದಹಾಗೆ, ವೆಂಕಟಗಿರಿ ಹಾದಿಯಲ್ಲಿ ರಾಶಿರಾಶಿಯಾಗಿ ಸಿಕ್ಕ ಮುಳ್ಳುಹಂದಿಯ ಮುಳ್ಳು ಈಗ ಮನೆಯಲ್ಲಿದೆ. ಅದಕ್ಕೀಗ ಹೀಗೆ ಹೊಸ ರೂಪ ಕೊಟ್ಟಿದ್ದೇನೆ.

Tuesday, July 26, 2011

ಶಿವಮೊಗ್ಗೆಯ ಮಳೆ, ಒಂದು ಆಕ್ಸಿಡೆಂಟ್ ಹಾಗೂ ಆ ಸಜ್ಜನ


ಅಂದು ಮಳೆಯಲ್ಲಿ ಅದೆಷ್ಟು ಒದ್ದೆ ಮುದ್ದೆಯಾಗಿ ಮನಸೋ ಇಚ್ಛೆ ಮಿಂದಿದ್ದೆನೋ... ಹೇಳಲೊಲ್ಲೆ. ಎಷ್ಟೋ ಸಮಯದ ನಂತರ ಮಳೆಯಲ್ಲಿ ಮಳೆಯಾಗುವ ಮುಳುಗೇಳುವ ಭಾಗ್ಯ ಒದಗಿತ್ತು. ಶಿವಮೊಗ್ಗೆ, ಕುಂದಾದ್ರಿಯ ಆ ಉತ್ತುಂಗದಲ್ಲಿ ಕೊಚ್ಚಿಹೋಗುವಂಥ ಗಾಳಿ-ಮಳೆ, ನಮ್ಮನ್ನೇ ಹೊತ್ತೊಯ್ಯುವಂತೆ ಬೀಸುವ ಚಳಿಗಾಳಿ, ಅಡಿಮೇಲಾಗುವ ಕೊಡೆಗಳು, ಮಂಜು ಕವಿದ ಹಾದಿಯಲ್ಲಿ ಒಂಟಿ ಕಾರಿನ ಪಯಣ, ಚೂರೂ ಕಾಣದಂತೆ ಮಂಜಿನಲ್ಲಿ ಇನ್ನಿಲ್ಲದಂತೆ ಮುಚ್ಚಿ ಹೋದ ಜೋಗ, ಮಂಜಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಾ ದಿಡೀರ್ ಪ್ರತ್ಯಕ್ಷವಾಗುವ ರಾಜ- ರಾಣಿ ಧಾರೆಗಳು, ಕೆನ್ನೀರಿನಲ್ಲಿ ಮುಳುಗೆದ್ದ ಹಸಿರುಗದ್ದೆಗಳು, ಕಣ್ತೆರೆದಲ್ಲೆಲ್ಲಾ ಹರಿವ ಝರಿಗಳು... ಅಬ್ಬಬ್ಬಾ, ಒಂದೊಂದು ಚಿತ್ರಗಳೂ ಸಾಲಾಗಿ ಫ್ರೇಮು ಹಾಕಿ ಜೋಡಿಸಿಟ್ಟಂತೆ ಮನಸ್ಸಿನಲ್ಲಿ ದಾಖಲಾಗಿವೆ. ಬೆಂಗಳೂರು/ಚೆನ್ನೈಯ ತುಂತುರು ಮಳೆಗೆ ಕಪ್ಪೆದ್ದು ಹೋಗುವ ರಸ್ತೆಗಳನ್ನು ಕಂಡೂ ಕಂಡೂ ರಾಡಿಯಾಗಿದ್ದ ಮನಸ್ಸು ಕ್ಷಣದಲ್ಲಿ ಪ್ರಫುಲ್ಲವಾಗಿತ್ತು. ಅದೆಷ್ಟು ಬಾರಿ ಶಿವಮೊಗ್ಗ/ಜೋಗ/ಆಗುಂಬೆಯಲ್ಲಿ ಅಲೆದಾಡಿದ್ದರೂ, ಮಳೆಯಲ್ಲಿ ನೋಡುವ ಸೊಬಗೇ ಬೇರೆ. ಅಂತೂ ಸಮಯ ಕೂಡಿ ಬಂದಿತ್ತು. ಮನಸೋ ಇಚ್ಛೆ ಆ ಕ್ಷಣಗಳನ್ನು ಮೊಗೆಮೊಗೆದು ಅನುಭವಿಸಿದ್ದೂ ಆಗಿತ್ತು.

ಆದರೆ,

ಮರಳುವಾಗ..., ಆ ಎರಡು ದಿನಗಳು ಜೀವನದಲ್ಲಿ ಎಂದೂ ಮರೆಯಲಾಗದ ವೈರುಧ್ಯಗಳ ಪ್ರಯಾಣವಾಗಿತ್ತೆಂದು ಮುಂಚಿತವಾಗಿ ಹೇಗೆ ತಿಳಿದೀತು ಹೇಳಿ. ಹಾದಿಯಲ್ಲಿ ನಾವಿದ್ದ ಕಾರು ಬಸ್ಸಿಗೆ ಮುಖಾಮುಖಿ ಢಿಕ್ಕಿಯಾಗಿತ್ತು. ಅದೃಷ್ಟವೆಂದೇ ಹೇಳಬೇಕೇನೋ, ನಾವೆಲ್ಲ ಐದೂ ಮಂದಿ ಹೆಚ್ಚೇನೂ ಆಗದೆ, ಬದುಕುಳಿದಿದ್ದೆವು.

ಇದಾಗಿ, ವಾರ ಕಳೆದಿದೆ. ಈಗ ಮತ್ತೆ ಬಿಸಿಲೂರಿನಲ್ಲಿ ಬಂದು ಕೂತಿದ್ದೇನೆ. ಇಲ್ಲೂ ಆಗಾಗ ಮಳೆ ಸುರಿಯುತ್ತದೆ, ಹಠಾತ್ ಬರುವ ಅತಿಥಿಗಳಂತೆ! ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ಬೇಸರ. ಆದರೆ.., ಈಗ ಮಳೆ ಬರುವಾಗಲೆಲ್ಲ, ಶಿವಮೊಗ್ಗೆ ನೆನಪಾಗುತ್ತದೆ. ಆ ನೆನಪಿನ ಹಿಂದೆಯೇ ಆ ಬಸ್ಸು- ಕಾರು, ಧಡಾರ್, ಚೀರಾಟಗಳು ಮತ್ತೆ ಮತ್ತೆ ಕೇಳಿಸುತ್ತವೆ. ಕೊನೆಗೆ ಉಳಿಯುವುದು ಒಂದು ನಿಟ್ಟುಸಿರು, ಗಾಢ ಮೌನ.

ಇವಿಷ್ಟೇ ಅಲ್ಲ, ಇವೆಲ್ಲವುಗಳ ಜೊತೆಗೆ ಆ ಮುಖವೂ ಮತ್ತೆ ಮತ್ತೆ ಕಾಡುತ್ತದೆ. ಆ ಅಫಘಾತದ ಮುಂಜಾವಿನಲ್ಲಿ ನಮಗೆ ಮದ್ಯಾಹ್ನದವರೆಗೂ ಸಹಾಯದ ಮಳೆಯನ್ನೇ ಸುರಿಸಿದ ಬೆಂಗಳೂರಿನ ರಜನೀಶ್. ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬರು ಹಾದಿ ಮಧ್ಯೆ ತಮ್ಮ ಕುಟುಂಬ ಸಮೇತರಾಗಿ ನಮಗೆ ನೀಡಿದ ಸಹಾಯದ ಮುಂದೆ ಇಲ್ಲಿ ಅಕ್ಷರಗಳು ಜೀವಕಳೆದುಕೊಳ್ಳುತ್ತದೆ. ರಜನೀಶ್ ಕುಟುಂಬ ಚೆನ್ನಾಗಿರಲಿ. ಗೆಳತಿ ಸುಷ್ಮಾ ಬೇಗ ಚೇತರಿಸಿಕೊಳ್ಳಲಿ...

Tuesday, July 12, 2011

ಕಾಡುವ ನಾಯಿಗಳು...

ಮೊನ್ನೆ ಮೊನ್ನೆ ತೇಜಸ್ವಿ ಅವರ 'ಅಣ್ಣನ ನೆನಪು' ಓದುತ್ತಿದ್ದೆ. ಕಂಟ್ರಿ ನಾಯಿಯ ಬಾಲ ಕತ್ತರಿಸಿ ಜಾತಿ ನಾಯಿ ಮಾಡುವ ಸಾಹಸ ಓದುತ್ತಾ ಹೋದಂತೆ, ಕುಪ್ಪಳ್ಳಿಯಲ್ಲಿ ಒಂದು ದಿನ ನಮ್ಮ ಜೊತೆಗಿದ್ದ ನಾಯಿಮರಿಯ ಚಿತ್ರವೇ ಪದೇ ಪದೇ ಕಣ್ಣ ಮುಂದೆ ತೇಲಿ ಬಂತು...

ಹೌದು. ನಾವು ನೋಡಿದ ಪರಿಸರ, ಅಲ್ಲಿ ನಡೆದ ಘಟನೆಗಳಿಗೂ ಪುಸ್ತಕದಲ್ಲಿ ಓದುವ ಕಥೆಗಳಿಗೂ ನಮಗರಿವಿಲ್ಲದೆ ಸಂಬಂಧ ಕಲ್ಪಿಸಿ ಅವುಗಳೇ ನಮ್ಮ ಮನಃಪಟಲದಲ್ಲಿ ಓದುತ್ತಿದ್ದ ಹಾಗೆ ಸಿನಿಮಾದಂತೆ ಚಿತ್ರಿಸಿಕೊಳ್ಳುವುದು ಎಷ್ಟೋ ಬಾರಿ ನಮಗೆ ರೂಢಿಯಾಗಿಬಿಟ್ಟಿರುತ್ತದೆ. ನಮಗೇ ಅರಿವಿಲ್ಲದ ಹಾಗೆ ನಾವು ಅನುಭವಿಸಿದ/ಕಂಡ ಸನ್ನಿವೇಶಗಳು ಯಾವುದೋ ಕಥೆಗಳ ಪಾತ್ರಧಾರಿಗಳಾಗಿ ಜೀವತಳೆದು ಬಿಡುತ್ತವೆ. ಹಾಗಾಗಿಯೇ ಆ ಪಾತ್ರಗಳು ನಮಗೆ ಮತ್ತೆ ಮತ್ತೆ ಕಾಡುತ್ತವೆ. ಹೀಗೆ, ಅಣ್ಣನ ನೆನಪೂ ಕೂಡಾ ನನಗೆ ಇತ್ತೀಚೆಗೆ ತೀವ್ರವಾಗಿ ಕಾಡಿಸತೊಡಗಿತು. ಕಾರಣ ಆ ಜಾತಿ ನಾಯಿ.

ಎಷ್ಟೋ ಬಾರಿ ನನಗೆ ಅನಿಸುವುದಿದೆ, ನಾಯಿಯಷ್ಟು ತೀವ್ರವಾಗಿ ಪ್ರೀತಿಯ ಭಾವನೆಗಳನ್ನು ಕಣ್ಣಿನಿಂದ ಹಾಗೂ ತನ್ನ ಆಂಗಿಕ ಭಾಷೆಯಿಂದ ವ್ಯಕ್ತಪಡಿಸುವ ಪ್ರಾಣಿ ಬೇರೊಂದಿಲ್ಲ. ಬಾಲವಲ್ಲಾಡಿಸಿ, ಮೂಸಿ, ನೆಕ್ಕಿ, ಕಾಲಿನ ಸುತ್ತ ಸುತ್ತು ಹಾಕಿ, ಕೈಗಳನ್ನು ಎತ್ತಿ, ಕುಸ್ ಕುಸ್ ಕುಂಯ್ ಕುಂಯ್ ಎಂಬ ಸ್ವರ ಹೊರಡಿಸಿ... ಆಹ್... ಈ ಎಲ್ಲವೂ ಮಿಳಿತವಾದ ಆ ಪ್ರೀತಿಯ ಜಗತ್ತು ಮಾತ್ರ ಇನ್ನೊಂದಿಲ್ಲ! ಕುಪ್ಪಳ್ಳಿಗೆ ಹೋಗಿದ್ದಾಗಲೂ ಹೀಗೇ ಆಯಿತು. ಆ ಒಂದು ಪುಟಾಣಿ ನಾಯಿ ಮರಿ ಕುವೆಂಪು ಮನೆಯೆದುರು ಅತ್ತಿಂದಿತ್ತ ಇತ್ತಿಂದತ್ತ ಚುರುಕಾಗಿ ಓಡಾಡುತ್ತಿತ್ತು. ಅದನ್ನು ನೋಡಿದಾಕ್ಷಣ ನಮಗೆ ಪ್ರೀತಿ ಬಂತು. ಒಂದೆರಡು ಬಿಸ್ಕತ್ತು ಹಾಕಿದೆವು. ಆಮೇಲೆ, ಮಾರನೇ ದಿನವೂ ಹೋಗುವರೆಗೂ ನಮ್ಮನ್ನು ಬಿಡಲಿಲ್ಲ. ನಮ್ಮ ಎಲ್ಲ ಫೋಟೋಗಳಿಗೂ ಭಾರೀ ಚೆನ್ನಾಗಿ ಪೋಸು ಕೊಟ್ಟ ಆ ನಾಯಿ ನಾವು ಹೊರಡುವ ದಿನ ನಮ್ಮ ಜೊತೆಗೆ ಹಿಂಬಾಲಿಸಿ ಬಲು ದೂರ ಬಂದು ಸೋತು ವಾಪಸ್ಸಾಯಿತು. ಮೊನ್ನೆಯೂ ಅಣ್ಣನ ನೆನಪಿನ ಜೊತೆ ಬಹಳವಾಗಿ ಕಾಡಿದ ಈ ನಾಯಿಯ ಪ್ರೀತಿಯನ್ನು ವಿವರಿಸುವಲ್ಲಿ ಮಾತ್ರ ನಾನು ಸೋಲೊಪ್ಪಿಕೊಳ್ಳುತ್ತೇನೆ.

ತಿಂಗಳ ಮೊದಲು ಚೆನ್ನೈನಿಂದ ಸುಮಾರು ಐವತ್ತು ಕಿಮೀ ದೂರದ ಮುದಲಿಯಾರ್ ಕುಪ್ಪಂಗೆ ಹೋಗಿದ್ದೆವು. ಉರಿ ಬಿಸಿಲಿನ ಮಧ್ಯಾಹ್ನ, ಹಾಗೆ ಕೂತು ಜ್ಯೂಸು ಹೀರುತ್ತಿದ್ದಾಗ ಪುಟಾಣಿ ನಾಯಿಮರಿ ಕಾಲೆಳೆಯುತ್ತಾ ಬಂತು. ಅದರ ಹಿಂಬದಿಯ ಎರಡೂ ಕಾಲುಗಳು ನಜ್ಜುಗುಜ್ಜಾಗಿದ್ದವು. ಪಾಪ, ಬಹುಶಃ ಯಾವುದೇ ವಾಹನದ ಅಡಿಗೆ ಸಿಕ್ಕಿ ಹಾಗಾಗಿದ್ದಿರಬೇಕು. ಆದರೆ ಗಾಯ ಗುಣವಾಗಿದ್ದರೂ, ಕಾಲು ಜೋಡಿರಲಿಲ್ಲವೆನಿಸುತ್ತದೆ. ನಡೆಯಲು ಅದಕ್ಕೆ ಆಧಾರ ಕೇವಲ ಮುಂಬದಿಯ ಕಾಲುಗಳು. ಭಾರೀ ಆತ್ಮವಿಶ್ವಾಸದ ಆ ಎರಡು ಕಾಲಿನ ನಾಯಿಮರಿ ನಮ್ಮತ್ತ ಬಂತು. ಎಂದಿನಂತೆ ಬಿಸ್ಕತ್ತು ಪ್ಯಾಕೆಟ್ಟುಗಳು ಖಾಲಿಯಾದವು. ತನ್ನ ದೇಹದ ಹಿಂಬದಿಯ ಶಕ್ತಿ ಕಳೆದುಕೊಂಡಿದ್ದ ಅದಕ್ಕೆ ಬಾಲವಾಡಿಸಲೂ ಆಗುತ್ತಿರಲಿಲ್ಲ. ಆದರೇನಂತೆ, ತಿಂದ ಮೇಲೆ ಕೊನೆಗೊಮ್ಮೆ ಪ್ರೀತಿಯಿಂದ ನೋಡಿ ತೃಪ್ತಿಯಿಂದ ಕಾಲೆಳೆಯುತ್ತ ಅಲ್ಲೆಲ್ಲೋ ಮರೆಯಾಯಿತು.

ಅದಿರಲಿ, ಇತ್ತೀಚೆಗೆ ಮೊನ್ನೆ ನಮ್ಮ ಅಪಾರ್ಟ್‌ಮೆಂಟಿಗೆ ಒಂದು ದಿನ ಬೆಳ್ಳಂಬೆಳಗ್ಗೆ ನಾಯಿ ಬಂದಿತ್ತು. ಪಕ್ಕಾ ಕಂಟ್ರಿ ನಾಯಿಯಾದರೇನಂತೆ, ಕೊರಳಲ್ಲಿ ಚೆಂದದ ಬೆಲ್ಟು. ಸ್ನಾನ ಮಾಡಿಸಿ ನುಣುಪಾಗಿದ್ದ ಕೂದಲು. ದಾರಿ ತಪ್ಪಿ ಬಂದಿದ್ದ ಅದು ಯಾರದೋ ಮನೆಯ ಸಿಕ್ಕಾಪಟ್ಟೆ ಮುದ್ದು ಮಾಡಿಸಿಕೊಳ್ಳುತ್ತಿದ್ದ ಸಾಕು ನಾಯಿ ಎಂದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಆದರೆ, ನಮ್ಮ ಅಪಾರ್ಟ್‌ಮೆಂಟಿನ ಮುಂದೆ ಪ್ರತ್ಯಕ್ಷವಾದಾಗಿನಿಂದ ಅದನ್ನು ಯಾವ ಮನೆಯವರೂ ಅವರವರ ಮನೆಯ ಮುಂದೆ ಮಲಗಲು ಅದನ್ನು ಬಿಡುತ್ತಿರಲಿಲ್ಲ. ಎಲ್ಲರೂ ಓಡಿಸುತ್ತಿದ್ದರು. ಸುಸ್ತಾದ ಅದು ಕೊನೆಗೆ ನಮ್ಮ ಮನೆಯ ಮೆಟ್ಟಿಲ ಕೆಳಗೆ ಬಂದು ಮಲಗಿತು. ದಯನೀಯವಾಗಿ ನೋಡುತ್ತಿದ್ದ ಅದಕ್ಕೆ ಬಿಸ್ಕತ್ತು, ಅನ್ನ- ಸಾಂಬಾರು ಹಾಕಿದೆವು, ಮಾರನೇ ದಿನ ಪಕ್ಕದ ಮನೆಯವರಿಂದ 'ಇನ್ನು ಅದು ಇಲ್ಲಿಂದ ಏಳಲ್ಲ ಬಿಡಿ, ಈ ಫ್ಲಾಟಿನಲ್ಲಿದ್ದೋರ ಕಥೆ ಮುಗೀತು' ಎಂಬರ್ಥದ ಕುಹಕದ ಮಾತುಗಳೂ ತೂರಿ ಬಂದವು. ಹಾಗೆ ಇದ್ದ ಅದು, ನಾಲ್ಕೈದು ದಿನ ಇದ್ದು ಚೆನ್ನಾಗಿ ತಿಂದುಂಡು ಒಮ್ಮೆ ಹೊರಟು ಹೋಯಿತು. ಹೇಗೆ, ಅದಕ್ಕೆ ಮತ್ತೆ ತನ್ನ ಮನೆ ಸಿಕ್ಕಿದೆ ಎಂದು ಗೊತ್ತಾಗಲಿಲ್ಲ.ಇರಲಿ, ಅಂತೂ ಅದಕ್ಕೆ ಅದರ ಮನೆಯ ದಾರಿ ಸಿಕ್ಕಿತ್ತು. ಇದಾಗಿ ವಾರದ ನಂತರ ಒಂದು ದಿನ ನಮ್ಮ ಮನೆಯ ಎರಡನೇ ಕ್ರಾಸಿನಲ್ಲಿ ರಾಜಗಾಂಭೀರ್ಯದಲ್ಲಿ ತನ್ನೊಡೆಯನ ಜೊತೆ ವಾಕಿಂಗ್ ಮಾಡುತ್ತಿದ್ದುದು ಕಣ್ಣಿಗೆ ಬಿತ್ತು. ಈಗ ದಿನವೂ ಮನೆಯ ಹತ್ತಿರವಿರುವ ಪಾರ್ಕಿಗೆ ತನ್ನೊಡೆಯನ ಜೊತೆ ಬರುತ್ತದೆ. ಕಂಡಾಗ ಪ್ರೀತಿಯಿಂದ ಕಣ್ಣು ಮಿಟುಕಿಸಿ ಬಾಲವಲ್ಲಾಡಿಸುತ್ತದೆ. ಕಾಡುವ ಇವುಗಳ ಪ್ರೀತಿಗಿಂತ ಇನ್ನೇನು ಬೇಕು ಹೇಳಿ???

Monday, June 20, 2011

ಮತ್ತೆ ಮರಳಿ...

ಓಹ್ . . .

ನನ್ನ ಈ ಮಧುಬನದಿ ಸುಳಿಯದೆ 2 ವರುಷಗಳೇ ಕಳೆದವು. ಅದು ಹೇಗೆ ಎರಡು ವರುಷಗಳು ಕಳೆದುಹೋದವೆಂದೇ ಅರಿಯೆನು. ಛೇ, ಬರೆಯಲಾಗುತ್ತಿಲ್ಲವಲ್ಲ ಎಂಬ ಬೇಸರ ಎರಡು ವರ್ಷಗಳಲ್ಲಿ ಅನೇಕ ಬಾರಿ ಆಗಿದ್ದೂ ಇದೆ. ಸಮಯ ಸಿಗಲಿಲ್ಲ ಎಂದರೆ ಹೆಚ್ಚಾದೀತು, ಬರೆಯಲು ಮನಸ್ಸು ಮಾಡಲಿಲ್ಲ ಎಂದರೂ... ಊಹೂಂ ಒಪ್ಪಲು ಮನಸ್ಸಾಗುತ್ತಿಲ್ಲ. ಒಟ್ಟಾರೆ ಮತ್ತೆ ಬರೆಯಬೇಕೆಂದು ತೀರ್ಮಾನಿಸಿದ್ದೇನೆ, ಅಷ್ಟೆ.


ಕಳೆದ ಎರಡು ವರುಷಗಳಿಂದ ದಿನಗಳು ಬಹಳ ಮುದ್ದು ಮುದ್ದಾಗಿ ಕಳೆಯುತ್ತಿವೆ. ಹಾಗೆಯೇ, ನಾನೆಲ್ಲಿ ಕಳೆದು ಹೋದೇನೋ ಎಂಬ ಭಯದಿಂದ ಮತ್ತೆ ಮೈಕೊಡವಿ ಕೂತಿದ್ದೇನೆ. ಈಗ್ಗೆ ನಾಲ್ಕೈದು ತಿಂಗಳಿಂದ ಮತ್ತೊಂದು ಬ್ಲಾಗನ್ನೂ ( http://radhika-mahesh.blogspot.com/ ) ಶುರುವಿಟ್ಟುಕೊಂಡಿದ್ದೇನೆ, ನನ್ನ ಬಾಳಗೆಳೆಯ ಮಹೇಶ್ ಜೊತೆಸೇರಿ. ಆಗೀಗೊಮ್ಮೆ ನಮ್ಮೆದುರು ಪ್ರತ್ಯಕ್ಷವಾಗುವ ಫ್ರೇಮುಗಳಿಗೇ ಬ್ಲಾಗು ರೂಪ ಕೊಡುವ ಪ್ರಯತ್ನವದು.

. . . ಹಾಗೆಂದು ಎರಡು ವರುಷಗಳಲ್ಲಿ ಬರೆಯಲೇ ಇಲ್ಲ ಎಂದಲ್ಲ, ಕಾರ್ಯನಿಮಿತ್ತ ಬರೆದಿದ್ದೇನೆ, ಬರೆಯುತ್ತಲೂ ಇದ್ದೇನೆ. ಆದರೆ ನನ್ನದೆಂದೇ ಇರುವ ಇಲ್ಲಿ ಬರೆದರೆ ಅದರಿಂದ ಸಿಗುವ ಸಂತೃಪ್ತಿ ಬೇರೆಯೇ ಬಿಡಿ. ಹಾಗಾಗಿ ಮತ್ತೆ ಮರಳಿದ್ದೇನೆ . . .

ರಾಧಿಕಾ