Sunday, March 18, 2012
ಫ್ಲ್ಯಾಶ್ ಬ್ಯಾಕ್...
Monday, September 5, 2011
ವೆಂಕಟನ ಗಿರಿಯಲ್ಲಿ...
ಅಂದಹಾಗೆ, ಈ ವೆಂಕಟಗಿರಿ ಪರ್ವತ ತಿರುಪತಿಗೆ ತೀರ ಹತ್ತಿರವಾದದ್ದು. ತಿರುಮಲ ಪರ್ವತಕ್ಕೆ ಸಮಾಂತರವಾಗಿದೆ ಈ ಪರ್ವತ. ಹೀಗಾಗಿ ಎತ್ತ ನೋಡಿದರತ್ತ ಹಸಿರು ಹಸಿರು ಹಸಿರು. ಅಲ್ಲಲ್ಲಿ ಪುಟ್ಟ ತೊರೆಗಳು. ಮುಗಿಯದ ದಂಡಕಾರಣ್ಯದ ಹಾದಿ... ಎರಡು ದಿನಗಳು ಹಾಗೇ ಕಳೆದು ಹೋಗಿದ್ದವು.
ಚೆಂಚು ನಮ್ಮ ತಂಡದ ನಾಯಕ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಆತನ ಊರು ವೆಂಕಟಗಿರಿ. ನನಗೆ ನನ್ನೂರಿನ ಕಳಂಜಿಮಲೆ ಹೇಗೋ ಹಾಗೆಯೇ ಚೆಂಚುಗೆ ವೆಂಕಟಗಿರಿ. ಅದೆಷ್ಟೋ ಬಾರಿ ಆತ ವೆಂಕಟಗಿರಿಯಲ್ಲಿ ಅಲೆದಾಡಿದ್ದನೋ ಲೆಕ್ಕವಿಲ್ಲ. ಹೀಗಾಗಿ ಚೈನ್ನೈ ಟ್ರೆಕ್ಕಿಂಗ್ ಕ್ಲಬ್ಬಿನ ಹೆಸರಿನಲ್ಲಿ ಚೆಂಚು ಜೊತೆಗೆ ನಾವೂ ಸೇರಿದಂತೆ ಚೆನ್ನೈ ತಮಿಳರ ಒಂದು ಪುಟ್ಟ ಗುಂಪು ಸೇರಿತ್ತು. ಚೆನ್ನೈಯಿಂದ ಸುಮಾರು 170 ಕಿಮೀ ದೂರದ ವೆಂಕಟಗಿರಿಯೆಡೆಗೆ ನಮ್ಮ ತಂಡದ ಪ್ರಯಾಣ ಶನಿವಾರ ಮುಂಜಾವಿನಲ್ಲೇ ಹೊರಟಿತ್ತು. ಶನಿವಾರ ಬೆಳಗ್ಗೆ 11 ಗಂಟೆಗೆಲ್ಲಾ ವೆಂಕಟಗಿರಿಯಲ್ಲಿದ್ದೆವು. ಅಲ್ಲಿಂದ ಹೊರಟ ನಮ್ಮ ಚಾರಣ ಸುಮಾರು 4 ಗಂಟೆಗೆ ಮಲ್ಲೇಶ್ವರ ಕೋಣ ಎಂಬಲ್ಲಿಗೆ ಅಂತ್ಯವಾಗಿತ್ತು. ಅಲ್ಲೊಂದು ಪುಟ್ಟ ಶಿವ ದೇಗುಲ. ಶುದ್ಧ ತಮಿಳುನಾಡು ಶೈಲಿಯಲ್ಲಿ ಕೆಂಪು- ಬಿಳಿ ಪಟ್ಟೆ ಬಳಿದ ದೇಗುಲ ನಮ್ಮೂರಿನ ಪುಟ್ಟ ಮದುವೆ ಮಂಟಪದಂತಿತ್ತು. ವರ್ಷದಲ್ಲೊಮ್ಮೆ ಹರಕೆ ತೀರಿಸಲು ಬೆಟ್ಟದ ಸಮೀಪದ ಹಳ್ಳಿ ಜನರು ಈ ದೇಗುಲಕ್ಕೆ ಭೇಟಿ ಕೊಡುತ್ತಾರಂತೆ.
ಗಂಟೆ ಕೇವಲ ನಾಲ್ಕಾಗಿದ್ದರೂ, ದಟ್ಟಕಾನನದ ನಡುವೆ ಕತ್ತಲಾದ ಅನುಭವ. ಬೆವರಿಳಿದರೂ ಸುತ್ತಲಿನ ಸಮೃದ್ಧ ಗಾಢ-ಕಪ್ಪು ಹಸುರು, ದೇಗುಲದ ಹಿಂಬದಿಯಿಂದ ಕೇಳಿಬರುತ್ತಿದ್ದ ಝರಿಯ ನಿನಾದ, ಹರಿವ ತೊರೆಯ ಜುಳುಜುಳು. ಅಲ್ಲೇ ಒಂದರ್ಧ ತಾಸು ನೀರಿನಲ್ಲಿ ಮುಳುಗೆದ್ದು ಆಯಾಸ ಪರಿಹರಿಸಿ ನಮ್ಮ ಸಾಮಾನುಗಳನ್ನೆಲ್ಲಾ ಶಿವ ದೇಗುಲದಲ್ಲಿ ಬಿಟ್ಟು ಮತ್ತೆ ಬೆಟ್ಟ ಹತ್ತಲು ಅಣಿಯಾದೆವು. ಸಂಜೆಯ ವೇಳೆಗೆ ಬೆಟ್ಟದ ತುದಿ ಮುಟ್ಟಿ, ರಾತ್ರಿ 8 ಗಂಟೆಯ ಹೊತ್ತಿಗೆ ಮರಳಿ ದೇಗುಲಕ್ಕೆ ಬಂದೆವು. ಜೀರುಂಡೆಗಳ ಝೇಂಕಾರ, ದೂರದಲ್ಲೆಲ್ಲೋ ಊಳಿಡುತ್ತಿರ ನರಿ, ಎಲ್ಲವುಗಳ ನಡುವೆ ಗಾಢಾಂಧಕಾರದ ಮೌನದಲ್ಲಿ ಕೊರೆವ ಚಳಿಯಲ್ಲಿ ಲೋಕದ ಪರಿವೆಯಿಲ್ಲದೆ ನಿದ್ದೆ ಹೋಗಿದ್ದೆವು. ಮುಂಜಾನೆ ಎದ್ದ ಹಾಗೆ ಮತ್ತೆ ತೊರೆಯ ಬಳಿ ಕಾಲು ಇಳಿ ಬಿಟ್ಟು ಚಳಂಪಳ ಮಾಡುತ್ತಾ ಕೂತಿದ್ದೆವು.
ಮುಂಜಾನೆ ಮತ್ತೆ ಬೆಟ್ಟ ಹತ್ತಿಳಿದು, ಗಂಜಿ ಉಂಡು ನಿಧಾನಕ್ಕೆ ವೆಂಕಟಗಿರಿ ಪಟ್ಟಣದತ್ತ ಹೆಜ್ಜೆ ಹಾಕತೊಡಗಿದೆವು. ಬರೋಬ್ಬರಿ ಐದಾರು ಗಂಟೆಯ ಬಳಿಕ ಮುಸ್ಸಂಜೆಯ ಹೊತ್ತಿಗೆ ವೆಂಕಟಗಿರಿಗೆ ತಲುಪಿದೆವು. ಹಾದಿಯುದ್ದಕ್ಕೂ ನನಗೆ ಮಾತ್ರ ದಕ್ಕಿದ ಅದೃಷ್ಟವೇ ಬೇರೆ. ಕಂಡಕಂಡ ಪೊದೆಗಳಲ್ಲಿ ಮುಳ್ಳಂಕಾಯಿ, ಚೀರುಮುಳ್ಳು, ಕರಂಡೆ ಕಾಯಿ, ಕೇಪುಳಹಣ್ಣು... ಸಿಕ್ಕಿದ್ದೆಲ್ಲಾ ಬಾಯಿಗೆ ತುರುಕುತ್ತಿದ್ದ ನನ್ನನ್ನು ಕಂಡು ಉಳಿದವರು ವಿಚಿತ್ರವಾಗಿ ನೋಡುತ್ತಿದ್ದರು. ಪುಣ್ಯಕ್ಕೆ ಅವರು ರುಚಿ ನೋಡುವ ಧೈರ್ಯ ಮಾಡಲಿಲ್ಲ. ನಾನೂ ಒತ್ತಾಯಿಸಲಿಲ್ಲ, ನನ್ನ ಅದೃಷ್ಟಕ್ಕೆ ನಾನೇ ವಂದಿಸುತ್ತಾ ಪೂರ್ತಿ ಒಬ್ಬಳೇ ಗುಳುಂ ಮಾಡಿದೆ.
ಆದರೆ.., ಈಗಲೂ ಬೇಸರವಿದೆ. ವೆಂಕಟಗಿರಿ ಪರ್ವತ ಹತ್ತಿದರೂ ದುರ್ಗಂಗೆ ಹತ್ತಲಾಗದಿದ್ದುದು. 'ದುರ್ಗಂ' ಸುಂದರ ಹಾಗೂ ಕಠಿಣ ಚಾರಣ. ವೆಂಕಟಗಿರಿ ಚಾರಣಕ್ಕೆ ಹೊರಟಾಗಲೂ ನನ್ನ ಮನಸ್ಸಿನ ತುಂಬಾ ಈ ದುರ್ಗಂ ತುಂಬಿತ್ತು. ವೆಂಕಟಗಿರಿ ಪರ್ವತದ ತುತ್ತ ತುದಿಯಲ್ಲಿರುವ ಕೋಟೆಯಂಥ ರಚನೆಯೇ ಈ ದುರ್ಗಂ. ಹಿಂದೆ ಕಳ್ಳಕಾಕರು ಲೂಟಿ ಮಾಡಿದ ಒಡವೆಗಳನ್ನು ಇಲ್ಲಿ ಅಡಗಿಸಿಡುತ್ತಿದ್ದರೆಂಬ ರಸವತ್ತಾದ ಕಥೆಗಳು ಈ ಭಾಗದ ಜನರ ದಿನನಿತ್ಯದ ಅಜ್ಜಿಕಥೆಗಳಾಗಿ ಹೋಗಿವೆ. ಅದಕ್ಕೆ ಸಾಕಷ್ಟು ಆಧಾರಗಳೂ ಸಿಕ್ಕಿವೆಯಂತೆ. ಈಗಲೂ ಕೋಟೆಯ ಅಳಿದುಳಿದ ಭಾಗ ಬೆಟ್ಟದ ತುತ್ತ ತುದಿಯಲ್ಲಿದೆ. ಇನ್ನೂ ಚಾರಣಿಗರಿಂದ ಅಷ್ಟಾಗಿ ಪರಿಚಯಿಸಲ್ಪಡದ ಈ ದುರ್ಗಂ ಸೊಬಗು ಈಗಲೂ ನನ್ನನ್ನು ಸೆಳೆಯುತ್ತಿದೆ. ಹೋಗುವೆನೆಂಬ ವಿಶ್ವಾಸವೂ ಇದೆ.
ಅಂದಹಾಗೆ, ವೆಂಕಟಗಿರಿ ಹಾದಿಯಲ್ಲಿ ರಾಶಿರಾಶಿಯಾಗಿ ಸಿಕ್ಕ ಮುಳ್ಳುಹಂದಿಯ ಮುಳ್ಳು ಈಗ ಮನೆಯಲ್ಲಿದೆ. ಅದಕ್ಕೀಗ ಹೀಗೆ ಹೊಸ ರೂಪ ಕೊಟ್ಟಿದ್ದೇನೆ.
Tuesday, July 26, 2011
ಶಿವಮೊಗ್ಗೆಯ ಮಳೆ, ಒಂದು ಆಕ್ಸಿಡೆಂಟ್ ಹಾಗೂ ಆ ಸಜ್ಜನ

ಅಂದು ಮಳೆಯಲ್ಲಿ ಅದೆಷ್ಟು ಒದ್ದೆ ಮುದ್ದೆಯಾಗಿ ಮನಸೋ ಇಚ್ಛೆ ಮಿಂದಿದ್ದೆನೋ... ಹೇಳಲೊಲ್ಲೆ. ಎಷ್ಟೋ ಸಮಯದ ನಂತರ ಮಳೆಯಲ್ಲಿ ಮಳೆಯಾಗುವ ಮುಳುಗೇಳುವ ಭಾಗ್ಯ ಒದಗಿತ್ತು. ಶಿವಮೊಗ್ಗೆ, ಕುಂದಾದ್ರಿಯ ಆ ಉತ್ತುಂಗದಲ್ಲಿ ಕೊಚ್ಚಿಹೋಗುವಂಥ ಗಾಳಿ-ಮಳೆ, ನಮ್ಮನ್ನೇ ಹೊತ್ತೊಯ್ಯುವಂತೆ ಬೀಸುವ ಚಳಿಗಾಳಿ, ಅಡಿಮೇಲಾಗುವ ಕೊಡೆಗಳು, ಮಂಜು ಕವಿದ ಹಾದಿಯಲ್ಲಿ ಒಂಟಿ ಕಾರಿನ ಪಯಣ, ಚೂರೂ ಕಾಣದಂತೆ ಮಂಜಿನಲ್ಲಿ ಇನ್ನಿಲ್ಲದಂತೆ ಮುಚ್ಚಿ ಹೋದ ಜೋಗ, ಮಂಜಿನೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಾ ದಿಡೀರ್ ಪ್ರತ್ಯಕ್ಷವಾಗುವ ರಾಜ- ರಾಣಿ ಧಾರೆಗಳು, ಕೆನ್ನೀರಿನಲ್ಲಿ ಮುಳುಗೆದ್ದ ಹಸಿರುಗದ್ದೆಗಳು, ಕಣ್ತೆರೆದಲ್ಲೆಲ್ಲಾ ಹರಿವ ಝರಿಗಳು... ಅಬ್ಬಬ್ಬಾ, ಒಂದೊಂದು ಚಿತ್ರಗಳೂ ಸಾಲಾಗಿ ಫ್ರೇಮು ಹಾಕಿ ಜೋಡಿಸಿಟ್ಟಂತೆ ಮನಸ್ಸಿನಲ್ಲಿ ದಾಖಲಾಗಿವೆ. ಬೆಂಗಳೂರು/ಚೆನ್ನೈಯ ತುಂತುರು ಮಳೆಗೆ ಕಪ್ಪೆದ್ದು ಹೋಗುವ ರಸ್ತೆಗಳನ್ನು ಕಂಡೂ ಕಂಡೂ ರಾಡಿಯಾಗಿದ್ದ ಮನಸ್ಸು ಕ್ಷಣದಲ್ಲಿ ಪ್ರಫುಲ್ಲವಾಗಿತ್ತು. ಅದೆಷ್ಟು ಬಾರಿ ಶಿವಮೊಗ್ಗ/ಜೋಗ/ಆಗುಂಬೆಯಲ್ಲಿ ಅಲೆದಾಡಿದ್ದರೂ, ಮಳೆಯಲ್ಲಿ ನೋಡುವ ಸೊಬಗೇ ಬೇರೆ. ಅಂತೂ ಸಮಯ ಕೂಡಿ ಬಂದಿತ್ತು. ಮನಸೋ ಇಚ್ಛೆ ಆ ಕ್ಷಣಗಳನ್ನು ಮೊಗೆಮೊಗೆದು ಅನುಭವಿಸಿದ್ದೂ ಆಗಿತ್ತು.
ಆದರೆ,
ಮರಳುವಾಗ..., ಆ ಎರಡು ದಿನಗಳು ಜೀವನದಲ್ಲಿ ಎಂದೂ ಮರೆಯಲಾಗದ ವೈರುಧ್ಯಗಳ ಪ್ರಯಾಣವಾಗಿತ್ತೆಂದು ಮುಂಚಿತವಾಗಿ ಹೇಗೆ ತಿಳಿದೀತು ಹೇಳಿ. ಹಾದಿಯಲ್ಲಿ ನಾವಿದ್ದ ಕಾರು ಬಸ್ಸಿಗೆ ಮುಖಾಮುಖಿ ಢಿಕ್ಕಿಯಾಗಿತ್ತು. ಅದೃಷ್ಟವೆಂದೇ ಹೇಳಬೇಕೇನೋ, ನಾವೆಲ್ಲ ಐದೂ ಮಂದಿ ಹೆಚ್ಚೇನೂ ಆಗದೆ, ಬದುಕುಳಿದಿದ್ದೆವು.
ಇದಾಗಿ, ವಾರ ಕಳೆದಿದೆ. ಈಗ ಮತ್ತೆ ಬಿಸಿಲೂರಿನಲ್ಲಿ ಬಂದು ಕೂತಿದ್ದೇನೆ. ಇಲ್ಲೂ ಆಗಾಗ ಮಳೆ ಸುರಿಯುತ್ತದೆ, ಹಠಾತ್ ಬರುವ ಅತಿಥಿಗಳಂತೆ! ಒಮ್ಮೊಮ್ಮೆ ಖುಷಿ, ಒಮ್ಮೊಮ್ಮೆ ಬೇಸರ. ಆದರೆ.., ಈಗ ಮಳೆ ಬರುವಾಗಲೆಲ್ಲ, ಶಿವಮೊಗ್ಗೆ ನೆನಪಾಗುತ್ತದೆ. ಆ ನೆನಪಿನ ಹಿಂದೆಯೇ ಆ ಬಸ್ಸು- ಕಾರು, ಧಡಾರ್, ಚೀರಾಟಗಳು ಮತ್ತೆ ಮತ್ತೆ ಕೇಳಿಸುತ್ತವೆ. ಕೊನೆಗೆ ಉಳಿಯುವುದು ಒಂದು ನಿಟ್ಟುಸಿರು, ಗಾಢ ಮೌನ.
ಇವಿಷ್ಟೇ ಅಲ್ಲ, ಇವೆಲ್ಲವುಗಳ ಜೊತೆಗೆ ಆ ಮುಖವೂ ಮತ್ತೆ ಮತ್ತೆ ಕಾಡುತ್ತದೆ. ಆ ಅಫಘಾತದ ಮುಂಜಾವಿನಲ್ಲಿ ನಮಗೆ ಮದ್ಯಾಹ್ನದವರೆಗೂ ಸಹಾಯದ ಮಳೆಯನ್ನೇ ಸುರಿಸಿದ ಬೆಂಗಳೂರಿನ ರಜನೀಶ್. ಪರಿಚಯವೇ ಇಲ್ಲದ ವ್ಯಕ್ತಿಯೊಬ್ಬರು ಹಾದಿ ಮಧ್ಯೆ ತಮ್ಮ ಕುಟುಂಬ ಸಮೇತರಾಗಿ ನಮಗೆ ನೀಡಿದ ಸಹಾಯದ ಮುಂದೆ ಇಲ್ಲಿ ಅಕ್ಷರಗಳು ಜೀವಕಳೆದುಕೊಳ್ಳುತ್ತದೆ. ರಜನೀಶ್ ಕುಟುಂಬ ಚೆನ್ನಾಗಿರಲಿ. ಗೆಳತಿ ಸುಷ್ಮಾ ಬೇಗ ಚೇತರಿಸಿಕೊಳ್ಳಲಿ...
Tuesday, July 12, 2011
ಕಾಡುವ ನಾಯಿಗಳು...
ತಿಂಗಳ ಮೊದಲು ಚೆನ್ನೈನಿಂದ ಸುಮಾರು ಐವತ್ತು ಕಿಮೀ ದೂರದ ಮುದಲಿಯಾರ್ ಕುಪ್ಪಂಗೆ ಹೋಗಿದ್ದೆವು. ಉರಿ ಬಿಸಿಲಿನ ಮಧ್ಯಾಹ್ನ, ಹಾಗೆ ಕೂತು ಜ್ಯೂಸು ಹೀರುತ್ತಿದ್ದಾಗ ಪುಟಾಣಿ ನಾಯಿಮರಿ ಕಾಲೆಳೆಯುತ್ತಾ ಬಂತು. ಅದರ ಹಿಂಬದಿಯ ಎರಡೂ ಕಾಲುಗಳು ನಜ್ಜುಗುಜ್ಜಾಗಿದ್ದವು. ಪಾಪ, ಬಹುಶಃ ಯಾವುದೇ ವಾಹನದ ಅಡಿಗೆ ಸಿಕ್ಕಿ ಹಾಗಾಗಿದ್ದಿರಬೇಕು. ಆದರೆ ಗಾಯ ಗುಣವಾಗಿದ್ದರೂ, ಕಾಲು ಜೋಡಿರಲಿಲ್ಲವೆನಿಸುತ್ತದೆ. ನಡೆಯಲು ಅದಕ್ಕೆ ಆಧಾರ ಕೇವಲ ಮುಂಬದಿಯ ಕಾಲುಗಳು. ಭಾರೀ ಆತ್ಮವಿಶ್ವಾಸದ ಆ ಎರಡು ಕಾಲಿನ ನಾಯಿಮರಿ ನಮ್ಮತ್ತ ಬಂತು. ಎಂದಿನಂತೆ ಬಿಸ್ಕತ್ತು ಪ್ಯಾಕೆಟ್ಟುಗಳು ಖಾಲಿಯಾದವು. ತನ್ನ ದೇಹದ ಹಿಂಬದಿಯ ಶಕ್ತಿ ಕಳೆದುಕೊಂಡಿದ್ದ ಅದಕ್ಕೆ ಬಾಲವಾಡಿಸಲೂ ಆಗುತ್ತಿರಲಿಲ್ಲ. ಆದರೇನಂತೆ, ತಿಂದ ಮೇಲೆ ಕೊನೆಗೊಮ್ಮೆ ಪ್ರೀತಿಯಿಂದ ನೋಡಿ ತೃಪ್ತಿಯಿಂದ ಕಾಲೆಳೆಯುತ್ತ ಅಲ್ಲೆಲ್ಲೋ ಮರೆಯಾಯಿತು.
Monday, June 20, 2011
ಮತ್ತೆ ಮರಳಿ...

Tuesday, April 14, 2009
ಒಂದು ಬಹಿರಂಗ ಪತ್ರ
'ರೇಡಿಯೋ ಸಿಟಿ ೯೧.೧... ಬೆಂಗಳೂರಿನ..' ಅಂತ ಕಿವಿಗಡಚಿಕ್ಕುವ ಸ್ವರ ಹಾಲ್ ನಿಂದ ಬೆಡ್ ರೂಂಗೆ ಬಂದಾಗಲೇ ನಾನು ಹಾಗೆ ಮೆತ್ತಗೆ ಮಗ್ಗುಲು ಬದಲಾಯಿಸುತ್ತಿದ್ದೆ. ಹೋ ಗಂಟೆ ಒಂಬತ್ತಾಯಿತೇ. 10ಕ್ಕೆ ಅಸೈನ್ಮೈಂಟ್ ಇದೆ. ಹೆಚ್ಚೆಂದರೆ ಮನೆಯಿಂದ ಆಫೀಸಿಗೆ ಅರ್ಧ ಗಂಟೆಯಿಲ್ಲದಿದ್ದರೆ ೧೩ ಕಿ.ಮೀ ದೂರಕ್ಕೆ ಜಪ್ಪಯ್ಯ ಅಂದರೂ ಹೋಗಲು ಸಾಧ್ಯವಿಲ್ಲ ಅನ್ನುತ್ತಲೇ, ನಾಳೆಯಿಂದ ಸ್ವಲ್ಪ ಬೇಗ ಏಳಬೇಕು. ಇಲ್ಲವಾದರೆ ಗಡಿಬಿಡಿಯಾಗುತ್ತದೆ. ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡರಂತೂ ಮುಗೀತು ಅಂತ ನಾನೇ ನನಗೆ ಹೇಳುತ್ತಾ ಹಾಲ್ಗೆ ಬರುತ್ತಿದ್ದೆ. ಆದರೆ, ಪ್ರತಿಸಲವೂ ಬೇಗ ಏಳಬೇಕು ಅನ್ನುತ್ತಲೇ ಇದ್ದರೂ ದಿನಚರಿ ಮಾತ್ರ ಬದಲಾವಣೆ ಕಂಡಿರಲಿಲ್ಲ. ಒಮ್ಮೊಮ್ಮೆ ನೀನು ಫೋನ್ ಮಾಡಿದಾಗ 'ಮಲಗಿದ್ದೀಯಾ' ಅಂತಲೇ ಮಾತು ಆರಂಭಿಸುತ್ತಿದ್ದೆ. ಆದರೇನು ಮಾಡೋಣ, ಮನೆಗೆ ಬರುತ್ತಿದ್ದುದೇ ೧೧, ೧೧.೩೦ ರಾತ್ರಿಗೆ. ಹಾಗಾಗಿ ಇದೆಲ್ಲ ಮಾಮೂಲು ಅಂತ ನಿನಗೂ ಗೊತ್ತು, ನನಗೂ ಗೊತ್ತು.
ಇರಲಿ ಬಿಡು. ಆಗೆಲ್ಲಾ ರಾತ್ರಿ ೧೧ ಗಂಟೆಗೆ ಮನೆಗೆ ಬಂದು ಬಾತ್ರೂಂನಲ್ಲಿ ಬೆಂಗಳೂರಿನ ಚಳಿಗೆ ಬಿಸಿನೀರು ಹೊಯ್ಯುತ್ತಿದ್ದರೆ, ಆಹಾ ಎಂಥಾ ಸುಖ. ಇಡೀ ದಿನದ ಸುಸ್ತೆಲ್ಲ ಬಸಿದುಹೋದ ಅನುಭವ. ಆಮೇಲೆ ಊಟ, ನಂತರ ಯಾವುದೋ ಪುಸ್ತಕವೋ, ಟಿವಿ ನ್ಯೂಸೋ ಆವಾಹನೆಯಾದರೆ ಮುಗೀತು. ರಾತ್ರಿ ಒಂದೋ, ಎರಡೋ ಗಂಟೆ ಗ್ಯಾರೆಂಟಿ. ಹೀಗಾಗಿ ರೇಡಿಯೋಸಿಟಿಗೆ ಬೆಳಗಾದರೂ ನನಗೆ ಬೆಳಗಾಗುತ್ತಿರಲಿಲ್ಲ. ತಮ್ಮ ತಿಂಡಿ ಮುಗಿಸಿ ಆಫೀಸಿಗೆ ಹೊರಡುವ ಸಂದರ್ಭ ಶಿಸ್ತಾಗಿ ಶೂಲೇಸ್ ಕಟ್ಟುವಾಗ ರೇಡಿಯೋ ಸಿಟಿಯ ಗುಂಡಿ ಅಮುಕುತ್ತಿದ್ದ. ಹೀಗಾಗಿ, ಆಗೆಲ್ಲಾ ನನಗೆ ರೇಡಿಯೋ ಸಿಟಿಯೇ ನಿತ್ಯವೂ ಸುಪ್ರಭಾತ ಹಾಡುತ್ತಿತ್ತು. ನಿಧಾನಕ್ಕೆ ಪೇಪರ್ ಮೇಲೆ ಕಣ್ಣಾಡಿಸಿ ನನ್ನ ಪ್ರತಿಸ್ಪರ್ಧಿಗಳ ಬೈಲೈನ್ ಏನಾದರೂ ಇದೆಯೇ, ನನ್ನ ಸ್ಟೋರಿ ಅವರಿಗೆ ಸಿಕ್ಕಿಲ್ಲ ಅಂತ ಖಾತ್ರಿಪಡಿಸಿ ಏನೋ ಘನಾಂದಾರಿ ತೃಪ್ತಿಯಿಂದ ಆಫೀಸಿಗೆ ಹೊರಡುತ್ತಿದ್ದೆ.
ಆದರೆ ಈಗ ಹಾಗಿಲ್ಲ. ಚೆನ್ನೈಯಲ್ಲಿ ಹಾಯಾಗಿದ್ದೇನೆ. 'ಬೆಂಗಳೂರಿನ...' ಅಂತ ರಾಗ ಹಾಡುತ್ತಿದ್ದ ರೇಡಿಯೋ ಸಿಟಿ ಇಲ್ಲಿ ಬೆಳಗಾತ ಎದ್ದು 'ಚೆನ್ನೈಯೋಡ...' ಅಂತ ರಾಗ ಹಾಡುತ್ತದೆ. ವ್ಯತ್ಯಾಸವೇನೂ ಇಲ್ಲ. 'ಅಣ್ಬೇ ಅಣ್ಬೇ ಕೊಲ್ಲಾದೇ..' ಅಂತ ಎಲ್ಲಿಂದಲೋ ತೇಲಿ ಬರುವ ಲಹರಿಯಿಂದ ನಾನು ಎಲ್ಲಿಗೋ ತಪ್ಪಿ ಬಂದಿಳಿದಂತೇನೂ ಅನಿಸುವುದಿಲ್ಲ. ಭಾಷೆ ಯಾವುದಾದರೇನು.. ಕಿವಿ ತಂಪಾದರೆ ಮನಸ್ಸು ಕುಣಿಯುತ್ತದೆ. ಆದರೆ, ವಿಚಿತ್ರವೋ, ವಿಷಾದವೋ ಗೊತ್ತಿಲ್ಲ. ಯಾವ ಚಾನಲ್ ಗುಂಡಿ ಒತ್ತಿದರೂ ಕೇಳುವ ಹಾಡು ನಮ್ಮ ಕನ್ನಡ ನೆಲದ್ದೇ ಅನಿಸುತ್ತದೆ. ಯಾಕೆಂದರೆ, ತಮಿಳಿನ ಪ್ರಸಾದವನ್ನೇ ತಾನೇ ಕನ್ನಡದ ಜನ ಥಿಯೇಟರ್ನಲ್ಲಿ ರಿಮೇಕ್ ಹೆಸರಲ್ಲಿ ನೋಡಿ ಪಾವನರಾಗುತ್ತಿರುವುದು.
ಇದೆಲ್ಲ ನಮ್ಮ ಕನ್ನಡದ ಈಗಿನ ವ್ಯಥೆ, ಹೇಳಿ ಏನು ಪ್ರಯೋಜನ ಅಂತೀಯಾ. ಸರಿ ಬಿಡು. ಆ ವಿಷಯ ಅಲ್ಲಿಗೇ ಬಿಡೋಣ. ಏನೇ ಆದರೂ, ಇಲ್ಲಿ ಎಷ್ಟೇ ಅಡ್ಡಾಡಿದರೂ ನಾನು ದಿನಸಿ ಅಂಗಡಿ ಮುಂದೆ ನಿಂತರೆ ಮಾತ್ರ ಬಾಯಿ ಕಟ್ಟಿದಂತಾಗುತ್ತದೆ. ಅವನಿಗೋ ಇಂಗ್ಲೀಷು, ಹಿಂದಿ ಬರುವುದಿಲ್ಲ. ನನಗೋ ತಮಿಳು ಬರುವುದಿಲ್ಲ. 'ತಮಿಳ್ ತೆರಿಯಾದಾ' ಅಂತ ಆತ ಕೇಳಿದರೆ ಬಾಯಿಯಿಂದ ಪೆಚ್ಚುಮೋರೆಯ ನನ್ನ ಉತ್ತರ ಅವನಿಗೆ ಕಾದಿರುತ್ತದೆ. ಏನೋ ಅಲ್ಪಸ್ವಲ್ಪ ತುಳು ಮಿಕ್ಸ್ ಮಾಡಿ ಕರ್ನಾಟಕದ ಗಡಿಭಾಗದಲ್ಲಿದ್ದುದರಿಂದ ಮಲಯಾಳವನ್ನೂ ಮಿಕ್ಸ್ ಮಾಡಿದರೆ ಮುಗೀತು. ತಮಿಳೇ ಅಲ್ಲದಿದ್ದರೂ, ಅವನಿಗೆ ಅರ್ಥವಾಗುವ ಒಂದು ಭಾಷೆಯಂತೂ ರೆಡಿಯಾಗುತ್ತದೆ.
ಆದರೆ, ಜೇಪಿನಗರ, ಜಯನಗರ, ವಸಂತನಗರ, ಶಿವಾಜಿನಗರ ಅಂತೆಲ್ಲ ಹೊರಳುತ್ತಿದ್ದ ನಾಲಿಗೆ ಮಾತ್ರ ಯಾಕೋ ನನ್ನ ಜತೆ ಇಲ್ಲಿ ಸಹಕರಿಸುತ್ತಿಲ್ಲ ಪ್ರಿಯ. ವಡಪಳನಿ, ಅಂಜಿಗೆರೆ, ಎಗ್ಮೋರ್, ಮಾಂಬಳಂ, ನುಂಗಂಬಾಕಂ, ಪರಶುವಾಕಂ, ಚೂಲೆಮೇಡು, ಕೋಡಂಬಾಕಂ ಅನ್ನುವಾಗ ಹೋಟೆಲ್ಲಿನ ಮೆನು ಲಿಸ್ಟಿನಂತೆ ನನ್ನನ್ನು ಸಿಕ್ಕಾಪಟ್ಟೆ ಕನ್ಫ್ಯೂಸ್ ಮಾಡಿ ಹಾಕುತ್ತದೆ. ಮಾಂಬಳದ ನೆನಪೂ ಎಲ್ಲೋ ಕಾಡಿದಂತಾಗಿ ಬಾಯಲ್ಲೂ ನೀರೂರುತ್ತದೆ. ನುಂಗಂಬಾಕಂ ಅನ್ನಲು ಹೋಗಿ ಗಡಿಬಿಡಿಯಲ್ಲಿ ನುಂಬಂಗಾಪಂ ಅಂದುಬಿಟ್ಟು ನನ್ನ ನಾಲಿಗೆಯೇ ಕಚ್ಚಿಕೊಳ್ಳಬೇಕಾಗುತ್ತದೆ.
ಇನ್ನು ಬೆಳಗ್ಗೆ ಆಫೀಸಿಗೆ ನನ್ನ ಕರ್ನಾಟಕ ನೋಂದಣಿಯ ಗಾಡಿಯಲ್ಲಿ ಹೋಗುವ ಮಜಾವೇ ಬೇರೆ ಪ್ರಿಯ. ಎಲ್ಲ ಟಿಎನ್ ಗಾಡಿಗಳ ಮಧ್ಯೆ ನನ್ನದೊಂದು ಕೆಎ. ಬೆಂಗಳೂರಿನ ತಂಪಿನಲ್ಲಿ ಕಿವಿಯನ್ನೂ ಮುಚ್ಚಿ ಹೆಲ್ಮೆಟ್ ಏರಿಸಿ ಹೋಗುತ್ತಿದ್ದರೆ ಏನೋ ಖುಷಿ. ಇಲ್ಲಿ ಬೆಳ್ಳಂಬೆಳಗ್ಗೆಯೇ ಹಣೆಯಿಂದ ತೊಟ್ಟಿಕ್ಕುವ ಬೆವರ ಜಲಧಾರೆಯ ತಂಪಿನಲ್ಲಿ ಹೆಲ್ಮೆಟ್ ಮುಚ್ಚಿ ಆಫೀಸು ಬಂದಾಗ ತೆಗೆಯುವಾಗ ಆಹಾ ಅನ್ನುವ ಖುಷಿಯ ಉದ್ಗಾರವೇ ಇನ್ನೊಂದು ಖುಷಿ. ಒಂದಕ್ಕೊಂದು ತುಂಬಾ ಸಾಮ್ಯತೆ ಅಂತೀಯಾ.
ಸರಿ ಬಿಡು. ಆದರೂ ಮುರುಗನ್ ಇಡ್ಲಿ ಶಾಪಿನಲ್ಲಿ ಕೂತು ತಿನ್ನುತ್ತಿದ್ದರೆ, ಮಲ್ಲೇಶ್ವರದ ಹಳ್ಳಿಮನೆಯಲ್ಲಿ ಕೂತಂತೇ ಹೊಟ್ಟೆ ತುಂಬುತ್ತದೆ. ನೀಲಾಂಗರೆಯ ಬೀಚಿನಲ್ಲಿ ಬಿಸಿಲ ಮಧ್ಯಾಹ್ನಗಳಲ್ಲಿ ಅಡ್ಡಾಡಿದರೆ, ಥೇಟ್ ಅದೇ ಪಣಂಬೂರು ಮೈತೆರೆದಂತೆ ಅನಿಸುತ್ತದೆ. ಸುತ್ತಲ ಕರಿಮುಖಗಳ ನಡುವಲ್ಲಿ ಮಿಂಚುಗಣ್ಣುಗಳು ನನ್ನ ನಿಟ್ಟಿಸುವಾಗ, ಊರಿನಲ್ಲಿ ಅಕ್ಕಪಕ್ಕದ ಮನೆಮಂದಿ ಬಹಳ ಸಮಯದ ನಂತರ ಕಾಣಸಿಕ್ಕಿದರೆ ಅಡಿಯಿಂದ ಮುಡಿಯವರೆಗೆ ನಿಲುಕಿಸಿದಂತೆ ಆಪ್ತತೆ ಕಾಣುತ್ತದೆ.
ಆದರೂ.. ಯಾಕೋ...
...ಮಳೆಯ ಹನಿಯಲ್ಲೇ ನೆನೆಯುತ್ತಾ ಆಫೀಸಿನ ಬ್ಯುಸಿಯಲ್ಲೇ ಪುರುಸೊತ್ತು ಮಾಡಿ ಹೋಟೆಲ್ ಕ್ಯಾಪಿಟಲ್ ಪಕ್ಕದಿಂದಾಗಿ ರಾಜಭವನವನ್ನು ಬಳಸಿ ನಾವು ಹೋಗುತ್ತಿದ್ದ ಸಂಜೆಯ ಪುಟ್ಟ ವಾಕ್, ಕೆಲಸ ಮುಗಿಸಿ ಮನೆಗೆ ಹೊರಡುವ ಅಪರಾತ್ರಿಯಲ್ಲೂ ಒಂದರ್ಧ ಗಂಟೆ ಕೂತು ಹರಟುತ್ತಿದ್ದ ಆಪ್ತಘಳಿಗೆ, ವಿಧಾನಸೌಧದ ಎದುರಲ್ಲೇ ಮೆಲ್ಲುತ್ತಿದ್ದ ಮಸಾಲೆಪುರಿ, ಚಳಿಮಳೆಯಲ್ಲೂ ತಡರಾತ್ರಿಯಲ್ಲಿ ನಡುಗುತ್ತಾ ಒದ್ದೆಯಾಗಿ ಮನೆಗೆ ಹೋಗುವ ರಾತ್ರಿಗಳು... ಇವೆಲ್ಲಾ ಮಾತ್ರ ಯಾಕೋ ತುಂಬ ಕಾಡುತ್ತವೆ. ನೆನಪಾಗುತ್ತದೆ.
ಸರಿ, ಹೊತ್ತಾಯಿತು. ಇನ್ನೊಮ್ಮೆ ಬರುತ್ತೇನೆ ಪತ್ರದಲ್ಲಿ.
ರಾಧಿಕಾ
Thursday, January 29, 2009
ಸುಮ್ಮನೆ, ಒಂದು ಕ್ಷಣದ ಮೌನ...
‘ಪೇಪರ್ ಬೇಕಾ? ಉದಯವಾಣಿ, ವಿಜಯ ಕರ್ನಾಟಕ, ಡೆಕ್ಕನ್ ಹೆರಾಲ್ಡ್..’ ಎಮ್ಮೆ ಉಚ್ಚೆ ಹೊಯ್ದಂತೆ ತನ್ನ ರಾಗ ದಾಟಿಸಿದ ನನ್ನತ್ತ. ಬೇಡ ಅಂದೆ. ನನ್ನ ಕಣ್ಣೋ ಪಕ್ಕದಲ್ಲಿ ನಾನಿಟ್ಟಿದ್ದ ನಾಲ್ಕು ಬ್ಯಾಗುಗಳನ್ನು ಬಿಟ್ಟು ಕದಲುತ್ತಿರಲಿಲ್ಲ. ಮುಖದ ಮೇಲೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತಿತ್ತು. ಇದನ್ನೇ ಗಮನಿಸಿದಂತೆ, ಪೇಪರ್ ಮನುಷ್ಯ, ‘ಆ ಕಡೆ ನೆರಳಿನಲ್ಲಿ ನಿಲ್ಲಿ’ ಅಂದ. ನಾನು ಮಾತನಾಡಲಿಲ್ಲ. ‘ಬ್ಯಾಗು ಇದೆ ಅಂತ ತಲೆ ಬಿಸಿ ಮಾಡಬೇಡಿ. ನಾನಿದ್ದೇನೆ. ಬ್ಯಾಗು ಇಲ್ಲಿ ಏನೂ ಆಗುವುದಿಲ್ಲ’ ಅಂದ. ನನಗೆ ಸಿಟ್ಟು ಬರಲು ಶುರುವಾಗಿತ್ತು. ‘ಅರೆ, ನಾನು ನನ್ನ ಪಾಡಿಗೆ ನನ್ನ ಬ್ಯಾಗಿನ ಜತೆ ನಿಂತರೆ ಇವನ್ಯಾರು ತಲೆಹರಟೆ? ಸಿಟಿ ರೋಗ ಇಲ್ಲಿಗೂ ತಗುಲಿರ್ಬೇಕು. ಇಲ್ಲದಿದ್ದರೆ, ನಾನು ಬಿಸಿಲಿನಲ್ಲಿ ಒಣಗಿಹೋದರೆ ಇವನಿಗೇನು ತಲೆಬಿಸಿ. ಸುಮ್ಮನೆ ಕೊನೆಗೆ ದುಡ್ಡು ಕೇಳುವ ವರಸೆಯನ್ನು ಇಲ್ಲಿಂದಲೇ ಆರಂಭಿಸುತ್ತಿದ್ದಾನೆ...’ ಅಂದುಕೊಂಡೆ. ಹೀಗೆ ಅಂದುಕೊಳ್ಳುತ್ತಿರುವಾಗಲೇ ಅಪ್ಪ ಬರುತ್ತಿರುವುದು ಕಾಣಿಸಿತು. ಅಷ್ಟಾಗಲೇ ಮಂಗಳೂರು ಬಸ್ಸೂ ಸರಿಯಾಗಿ ಹಾಜರಿತ್ತು. ಈಗ ನಾಲ್ಕು ಮಣಭಾರದ ಬ್ಯಾಗನ್ನು ಮಂಗಳೂರು ಬಸ್ಸಿನ ಮಡಿಲಿಗೆ ಹಾಕುವ ನೇತೃತ್ವ ಅಪ್ಪ ವಹಿಸುವ ಮೊದಲೇ.. ಪೇಪರ್ ಮನುಷ್ಯ, ‘ ಓ ಈರೆನ ಮಗಳಾ.. ’ ಅನ್ನುತ್ತಾ ತಾನೇ ಆ ಕಾರ್ಯಕ್ರಮದ ನೇತೃತ್ವ ವಹಿಸಿದ. ಓಹೋ ನಾನು ಊಹಿಸಿದಂತೆಯೇ ಈತ ದುಡ್ಡು ಮಾಡಲು ಇಷ್ಟೆಲ್ಲ ಹೆಲ್ಪ್ ಮಾಡ್ತಾ ಇದ್ದಾನೆ ಅಂತ ನಾನು ಮೊದಲು ಊಹಿಸಿದ್ದು ಸರಿಯಾಗೇ ಇದೆ ಇದೆ ಅಂದುಕೊಂಡೆ. ಎಷ್ಟು ಬೇಗ ಸಿಟಿ ಸಂಸ್ಕೃತಿಯನ್ನು ಊರಲ್ಲೂ ಕಲಿತುಬಿಟ್ಟರು ಅಂದುಕೊಳ್ಳುತ್ತಲೇ ಬಸ್ಸೇರಿದೆ.
ಪೇಪರ್ ಮನುಷ್ಯ ನಗುತ್ತಾ ಅಪ್ಪನ ಜತೆ ಮಾತನಾಡುತ್ತಾ ನಿಂತಿದ್ದ. ನಾನು ೨೦ರ ನೋಟೊಂದನ್ನು ಪರ್ಸಿನಿಂದ ತೆಗೆದು ಅಪ್ಪನ ಕೈಗೆ ದಾಟಿಸಿದೆ. ಪ್ರಶ್ನಾರ್ಥಕವಾಗಿ ಅಪ್ಪ ನನ್ನನ್ನೇ ನೋಡುತ್ತಾ, ‘ನಿನ್ನ ಬೆಂಗ್ಳೂರು ಬುದ್ಧಿ ಇಲ್ಲಿ ತೋರಿಸಬೇಡ’ ಅಂದರು. ಅಪ್ಪನಿಗೆ ಈ ಪೇಪರ್ ಮನುಷ್ಯ ಇಷ್ಟು ಸಹಾಯ ಮಾಡಿದ್ದು ಯಾಕೆ ಅಂತ ಅರ್ಥವೇ ಆಗಿಲ್ಲ ಅಂದುಕೊಳ್ಳುತ್ತಲೇ ಆ ೨೦ರ ನೋಟನ್ನು ನಾನೇ ಪೇಪರ್ ಮನುಷ್ಯನ ಕೈಗೆ ದಾಟಿಸಿದೆ. ನನ್ನ ಕೈಯ ೨೦ರ ನೋಟು ಅವನ ಕಣ್ಣಿಗೆ ಬೀಳುತ್ತಲೇ ಸರಕ್ಕನೆ ಹಿಂದೆ ಸರಿದ. ಆತನ ಮುಖದಲ್ಲಾದ ಬದಲಾವಣೆ ನನಗೆ ಮುಜುಗರ ತರಿಸಿತ್ತು. ‘ಅಯ್ಯೋ, ಯಾನ್ ಇಂದೆಕ್ಕ್ ಅತ್ತ್ ಬ್ಯಾಗ್ ಬಸ್ಸ್ಗ್ ಪಾಡ್ದ್ನ. ಇಂಚಿನ ಬೇಲೆ ಮಾತ ಎಂಕ್ಲ್ ಮನ್ಪುಜ್ಯ (ಅಯ್ಯೋ, ನಾನು ಇದಕ್ಕಲ್ಲ ಬ್ಯಾಗ್ ಬಸ್ಸಿಗೆ ತಂದು ಹೆಲ್ಪ್ ಮಾಡಿದ್ದು. ಇಂಥ ಕೆಲಸ ಎಲ್ಲ ನಾನು ಮಾಡೋದಿಲ್ಲ.)’ ಅಂದು ಬಿಟ್ಟ. ನನಗೆ ನಾಚಿಕೆಯಾಗಿತ್ತು ಅನ್ನೋದಕ್ಕಿಂತಲೂ ನನ್ನ ಅಪ್ಪನ ಮುಖ ನನಗೆ ನೋಡೋದಕ್ಕೆ ಕಷ್ಟವಾಯಿತು. ‘ನಾನು ಮೊದಲೇ ಹೇಳಲಿಲ್ಲವಾ’ ಅಂದರು ಅಪ್ಪ. ನನಗೆ ಮಾತನಾಡಲು ಏನೂ ಉಳಿದಿರಲಿಲ್ಲ.
‘....ಛೇ. ಹೇಗಾಗಿಬಿಟ್ಟೆನಲ್ಲ’ ಅಂತನಿಸಿತು. ಆದರೂ, ಇಂಥ ಮುಗ್ಥ ಜಗತ್ತಿನಲ್ಲಿ ೨೦ ವರ್ಷ ಇದ್ದುದಕ್ಕೆ ಖುಷಿ ಪಡುತ್ತಾ, ನಗರ ನಾಲ್ಕು ಗೋಡೆಗಳ ವ್ಯಾವಹಾರಿಕ ಜಗತ್ತಿನೊಳಗೆ ಹುಟ್ಟುವ ಮುಗ್ಧ ಹಸುಳೆಗಳನ್ನು ನೆನೆಯುತ್ತಾ ಸುಮ್ಮನಾದೆ. ಸುಮ್ಮನೆ ಹೀಗೆ ಒಂದು ಕ್ಷಣ ನಮ್ಮ ಮೂವರೊಳಗೆ ದಾಟಿದ್ದು ಗೊತ್ತೇ ಆಗಲಿಲ್ಲ.
ಬಸ್ಸು ಹೊರಟಿತು. ಪೇಪರ್ ಮನುಷ್ಯನೆಡೆಗೆ ಒಂದು ಕೃತಜ್ಞತೆಗೆ ನಗು ದಾಟಿಸುವ ಧೈರ್ಯ ನನ್ನಲ್ಲಿರಲಿಲ್ಲ. ಆತ ಸುಮ್ಮನೆ ಬಸ್ಸಿಳಿದು ಹೋದ.